ನುಡಿದಂತೆ ನಡೆದು, ಸವಾಲುಗಳ ಮಧ್ಯೆಯೇ 1 ವರ್ಷ ಪೂರೈಸಿದ ಸಿದ್ದರಾಮಯ್ಯ ಸರ್ಕಾರ

|

Updated on: May 20, 2024 | 11:03 AM

ಕಾಂಗ್ರೆಸ್​​ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಇಂದಿಗೆ (ಮೇ 20) ಒಂದು ವರ್ಷ ಪೂರ್ಣವಾಗಿದೆ. ಈ ಒಂದು ವರ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಹಲವು ಸವಾಲುಗಳನ್ನು ಎದುರಿಸಿತು. ಹಾಗೆ ಚುನಾವಣೆ ಪೂರ್ವದಲ್ಲಿ ತಾನು ಘೋಷಿಸಿದ್ದ ಹಲವು ಗ್ಯಾರೆಂಟಿಗಳನ್ನು ಜಾರಿ ಮಾಡಿದೆ. ಒಂದು ವರ್ಷ ಪೂರೈಸಿದ ಸಂತಸದಲ್ಲಿರುವ ಸರ್ಕಾರ ಎದುರಿಸಿದ ಸವಾಲುಗಳೇನು? ಮಾಡಿದ ಸಾಧನೆಗಳೇನು? ಇಲ್ಲಿದೆ ಮಾಹಿತಿ

ನುಡಿದಂತೆ ನಡೆದು, ಸವಾಲುಗಳ ಮಧ್ಯೆಯೇ 1 ವರ್ಷ ಪೂರೈಸಿದ ಸಿದ್ದರಾಮಯ್ಯ ಸರ್ಕಾರ
ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಮೇ 20: ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ (Congress) 136 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಭರ್ಜರಿ ಬಹುಮ ಪಡೆಯಿತು. ಅಭೂತಪೂರ್ವವಾದ ಗೆಲುವಿನ ಸಂತಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ 2023 ಮೇ 20 ರಂದು ರಚನೆಯಾಯಿತು. ಕಾಂಗ್ರೆಸ್​​ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಇಂದಿಗೆ (ಮೇ 20) ಒಂದು ವರ್ಷ ಪೂರ್ಣವಾಗಿದೆ. ಈ ಒಂದು ವರ್ಷದಲ್ಲಿ ರಾಜ್ಯ ಸರ್ಕಾರ (Karnataka Government) ಹಲವು ಸವಾಲುಗಳನ್ನು ಎದುರಿಸಿತು. ಹಾಗೆ ಚುನಾವಣೆ ಪೂರ್ವದಲ್ಲಿ ತಾನು ಘೋಷಿಸಿದ್ದ ಹಲವು ಗ್ಯಾರೆಂಟಿಗಳನ್ನು ಜಾರಿ ಮಾಡಿದೆ. ಒಂದು ವರ್ಷ ಪೂರೈಸಿದ ಸಂತಸದಲ್ಲಿರುವ ಸರ್ಕಾರ ಎದುರಿಸಿದ ಸವಾಲುಗಳೇನು? ಮಾಡಿದ ಸಾಧನೆಗಳೇನು? ಪ್ರತಿಪಕ್ಷಗಳಿಗೆ ಕೊಟ್ಟ ಚಾಟಿ ಏಟಿನ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಒಂದು ವರ್ಷದ ಅವಧಿಯಲ್ಲಿ ಹಲವು ಸವಾಲುವಳನ್ನು ಎದರಿಸಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಐದು ಗ್ಯಾರಂಟಿ ಯೋಜನೆಗಳೇ ಮೂಲಬೇರು. ಗ್ಯಾರಂಟಿ ಭರವಸೆಗಳನ್ನು ನೀಡಿಯೇ ಕಾಂಗ್ರೆಸ್​ ಅಧಿಕಾರಿಕ್ಕೆ ಬಂತು. ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಕ್ಯಾಬಿನೆಟ್​ನಲ್ಲಿಯೇ ಐದು ಗ್ಯಾರಂಟಿಗಳಿಗೆ ಅನುಮೋದನೆ ನೀಡಿತು.

ಶಾಸಕರ ಅಸಮಾಧಾನ

ಶಕ್ತಿ ಯೋಜನೆ, ಅನ್ನ ಭಾಗ್ಯದ ಹೆಚ್ಚುವರಿ ಹಣ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ ಮೂಲಕ ಮಹಿಳೆಯರ ಮತ್ತು ಯುವಕರ ಮನಗೆದ್ದ ಸರ್ಕಾರ ಈ ಗ್ಯಾರಂಟಿ ಜಾರಿಗೆ ಹಣ ಸರಿದೂಗಿಸಲು ಹಲವು ಕಸರತ್ತು ಮಾಡಿತು. ಗ್ಯಾರಂಟಿ ಯೋಜನೆಯಿಂದ ಹಲವು ಕ್ಷೇತ್ರಗಳಿಗೆ ಅನುದಾನ ಕಡಿತವಾಗಿದೆ ಎಂದು ಕೆಲ ಸ್ವಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಈ ಅಸಮಾಧಾನ ನಡುವೆಯೂ ಸರ್ಕಾರ ಗ್ಯಾರಂಟಿ ಅನುಷ್ಟಾನ ಕೈ ಬಿಡದೇ ಜಾರಿ ಮಾಡಿಯೇ ಬಿಟ್ಟಿತು. ನುಡಿದಂತೆ ನಡೆದಿದ್ದೇವೆ ಎಲ್ಲ ಗ್ಯಾರಂಟಿ ಜಾರಿ ಮಾಡಿದ್ದೇವೆ ಅನ್ನೋದು ಸರ್ಕಾರದ ಹೆಗ್ಗಳಿಕೆಯಾಗಿದೆ. ಲೋಕಸಭೆ ಚುನಾವಣೆಯಲ್ಲೂ ಸಹ ಇದೇ ಗ್ಯಾರಂಟಿ ಕೈ ಹಿಡಿದಿದೆ ಎಂಬ ವಿಶ್ವಾಸ ಕಾಂಗ್ರೆಸ್​ ಸರ್ಕಾರಕ್ಕೆ ಇದೆ.

ಹೆಚ್ಚುವರಿ ಅಕ್ಕಿಗಾಗಿ ಪರದಾಟ

ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್​ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರದ ಉಗ್ರಾಣದಲ್ಲಿ ಹೆಚ್ಚುವರಿ ಅಕ್ಕಿ ಇರಲಿಲ್ಲ. (ಐದು ಕೆಜಿ ಅಕ್ಕಿ ಮೊದಲೆ ನೀಡಲಾಗುತ್ತಿದ್ದು, ಐದು ಕೆಜಿ ಹೆಚ್ಚುವರಿ ನೀಡುವುದು) ಇದರಿಂದ ಹೆಚ್ಚುವರಿ ಅಕ್ಕಿ ಹೊಂದಿಸಲು ಕಷ್ಟವಾಯಿತು. ಹೀಗಾಗಿ ರಾಜ್ಯ ಸರ್ಕಾರ ಅಕ್ಕಿಗಾಗಿ ಕೇಂದ್ರ ಸರ್ಕಾರದ ಮೊರೆ ಹೋಯಿತು. ಆದರೆ ಕೇಂದ್ರ ಸರ್ಕಾರ ನೀಡಲು ನಿರಾಕರಿಸಿತು. ಬಳಿಕ ವಿವಿಧ ರಾಜ್ಯದ ಸಿಎಂಗಳೊಂದಿಗೆ ಮಾತನಾಡಿದರೂ, ಏನು ಪ್ರಯೋಜನವಾಗಲಿಲ್ಲ. ಬಳಿಕ ಐದು ಕೆಜಿ ಅಕ್ಕಿ ಬದಲಾಗಿ, ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಲು ಆರಂಭಿಸಿದೆ.

ಬರಗಾಲ

ಕಾಂಗ್ರೆಸ್​ ಅಧಿಕಾರದ ಚುಕ್ಕಾಣಿ ಹಿಡಿದು ಮೂರೇ ತಿಂಗಳಲ್ಲಿ ರಾಜ್ಯದಲ್ಲಿ ಬರಗಾಲ ಆವರಿಸಿತು. ಸಮರ್ಪಕವಾಗಿ ಮಳೆಯಾಗದೆ ಕುಡಿಯಲು ಸಹಿತ ನೀರಿಲ್ಲದಂತ ಪರಿಸ್ಥಿತಿ ಎದುರಾಯಿತು. ರಾಜಧಾನಿ ಬೆಂಗಳೂರಿನಲ್ಲೇ ಕುಡಿಯುವ ನೀರಿಗಾಗಿ ಪರದಾಡುವಂತಾಯಿತು. ಮಳೆ ಇಲ್ಲದೆ ಜಲಾಶಯಗಳು ಬತ್ತಲು ಆರಂಭಿಸಿದವು. ನೀರಿಲ್ಲದೆ ಸಂಕಷ್ಟ ಪಡುತ್ತಿರುವ ಮಧ್ಯೆಯೇ ಕೆಆರ್​ಎಸ್​ನಿಂದ ತಮಿಳುನಾಡಿಗೆ ನೀರು ಬಿಡಬೇಕೆಂಬ ಆದೇಶ ಸಹಜವಾಗಿ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಳ್ಳುವಂತೆ ಮಾಡಿತು.

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ಪೂರೈಸಿದ್ದು ವರುಷ, ಸಾಧಿಸಿದ್ದು ಶೂನ್ಯ: ವಿಜಯೇಂದ್ರ ಟೀಕೆ

ಬರಗಾಲದ ಹಿನ್ನೆಲೆಯಲ್ಲಿ ಕೇಂದ್ರದ ಜೊತೆಗಿನ ಸಂಘರ್ಷ ಮತ್ತೆ ಶುರುವಾಯಿತು. ಬರ ಪರಿಹಾರ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಸಂಘರ್ಷಕ್ಕೆ ಇಳಿಯಿತು. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಅಂತ ರಾಜ್ಯ ಸರ್ಕಾರ ಹೊರಟ ನಡೆಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಇಡೀ ಸಂಪುಟವನ್ನೇ ದೆಹಲಿ ತನಕ ಕರೆದುಕೊಂಡು ಹೋಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಯಿತು. ಸುಪ್ರಿಂ ಕೋರ್ಟ್​ನಲ್ಲಿ ಸಮರ್ಥ ವಾದ ಮಂಡಿಸಿ ಚುನಾವಣೆ ನಡುವೆಯೂ ಪರಿಹಾರದ ಹಣ ಪಡೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಯಿತು.

ಪಾಕ್​ ಪರ ಘೋಷಣೆ

ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಡಾ. ಸೈಯದ್​ ನಾಸಿರ್​ ಹುಸೇನ್​ ಗೆಲುವಿನ ಸಂಭ್ರಮಾಚರಣೆ ವೇಳೆ ವಿಧಾನಸೌದದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿತ್ತು. ಇದು ಸಹಜವಾಗಿ ವಿಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಪಾಕಿಸ್ತಾನ ಪರ ಘೋಷಣೆ ಕೂಗಿಯೇ ಇಲ್ಲ ಎಂದು ಕಾಂಗ್ರೆಸ್​ ನಾಯಕರು ಬೇಳಿಕೆ ನೀಡಿದರು. ಇದಾದ ಬೆನ್ನಲ್ಲೇ ತನಿಖೆ ವರದಿ ಬಂದಿದ್ದು, ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಸತ್ಯ ಅಂತ ಬಯಲಾಯಿತು. ಇದು ಸಹಜವಾಗಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತು.

ರಾಮೇಶ್ವರಂ ಕೆಫೆ ಬ್ಲಾಸ್ಟ್​

ಪಾಕ್​ ಪರ ಘೋಷಣೆ ಮಾಸುವ ಮುನ್ನವೇ ಬೆಂಗಳೂರಿನ ವೈಟ್​ಫೀಲ್ಡ್​​ನಲ್ಲಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಸ್ಫೋಟವಾಯಿತು. ಇದು ವ್ಯಾಪಾರ ಪೈಪೋಟಿಗಾಗಿ ನಡೆದ ಬ್ಲಾಸ್ಟ್​​ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಹೇಳಿಕೆ ನೀಡಿದರು. ಈ ಪ್ರಕರಣ ಎನ್​ಐಗೆ ಹಸ್ತಾಂತರ ಆಗುತ್ತಿದ್ದಂತೆ ಈ ಕೃತ್ಯದಲ್ಲಿ ಉಗ್ರರ ಕೈವಾಡ ಇರುವುದು ತಿಳಿಯುತ್ತಿದ್ದಂತೆ ರಾಜ್ಯ ಸರ್ಕಾರ ಮತ್ತೊಮ್ಮೆ ಮುಜುಗರ ಪಡುವಂತಾಯಿತು.

ಕಾನೂನು ಸುವ್ಯವಸ್ಥೆ

ಬೆಳಗಾವಿಯ ವಂಟಮೂರಿಯಲ್ಲಿ ನಡೆದ ಮಹಿಳೆಯ ಬೆತ್ತಲೆ ಮೆರವಣಿಗೆ, ಹಾವೇರಿಯಲ್ಲಿ ಸಾಮೂಹಿಕ ಅತ್ಯಾಚರ, ಹುಬ್ಬಳ್ಳಿಯ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಮತ್ತು ಕೊಡಗಿನ ಎಸ್​ಎಸ್​ಎಲ್​​ಸಿ ವಿದ್ಯಾರ್ಥಿನಿ ಮೀನಾ ಕೊಲೆಗಳು ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿದೆ. ಈ ಒಂದು ವರ್ಷದ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ದೊಡ್ಡ ಮಟ್ಟದಲ್ಲಿ ಆರೋಪಿಸುತ್ತಿದೆ. ಈಗ ವಿವಿಧ ಜಿಲ್ಲೆಗಳಲ್ಲಿ ಆಗುತ್ತಿರುವ ಪ್ರಕರಣಗಳನ್ನು ಹತೋಟಿಗೆ ತರುವ ದೊಡ್ಡ ಸವಾಲು ಸರ್ಕಾರದ ಮುಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

Published On - 10:57 am, Mon, 20 May 24