AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾತೆಗಳ ಸ್ಥಗಿತಕ್ಕೆ ಬೆಚ್ಚಿದ ಎಸ್‌ಬಿಐ, ಪಂಜಾಬ್‌ ಬ್ಯಾಂಕ್‌: ಸಿಎಂ ಜತೆಗಿನ ಸಂಧಾನ ಸಭೆ ಯಶಸ್ವಿ

ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿನ ಖಾತೆಗಳನ್ನ ಸ್ಥಗಿತಗೊಳಿಸುವ ಆದೇಶವನ್ನು ಸರ್ಕಾರ ತಾತ್ಕಾಲಿಕ ತಡೆ ಹಿಡಿದಿದೆ. ಬ್ಯಾಂಕ್ ಅಧಿಕಾರಿಗಳ ಮನವಿ ಮಾಡಿದ ಬೆನ್ನಲ್ಲೇ ಸರ್ಕಾರ ತನ್ನ‌ ನಿರ್ಧಾರಕ್ಕೆ‌ ತಾತ್ಕಾಲಿಕ ತಡೆ ನೀಡಿದೆ.

ಖಾತೆಗಳ ಸ್ಥಗಿತಕ್ಕೆ ಬೆಚ್ಚಿದ ಎಸ್‌ಬಿಐ, ಪಂಜಾಬ್‌ ಬ್ಯಾಂಕ್‌: ಸಿಎಂ ಜತೆಗಿನ ಸಂಧಾನ ಸಭೆ ಯಶಸ್ವಿ
ಸಿದ್ದರಾಮಯ್ಯ
ರಮೇಶ್ ಬಿ. ಜವಳಗೇರಾ
|

Updated on: Aug 16, 2024 | 9:21 PM

Share

ಬೆಂಗಳೂರು, (ಆಗಸ್ಟ್ 16): ಕರ್ನಾಟಕ ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆ, ಸಂಸ್ಥೆಗಳು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಹಾಗೂ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ)ನ ಖಾತೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎನ್ನುವ ಆದೇಶಕ್ಕೆ ರಾಜ್ಯ ಸರ್ಕಾರ ತಾತ್ಕಾಲಿಕ ತಡೆ ಹಿಡಿದಿದೆ. ಎಲ್ಲಾ ಇಲಾಖೆ, ಸಂಸ್ಥೆಗಳು ಎಸ್‌ಬಿಐ, ಪಿಎನ್‌ಬಿಯ ಖಾತೆಗಳನ್ನು ಸ್ಥಗಿತಗೊಳಿಸಬೇಕು ಎಂದು ಆದೇಶ ಹೊರಡಿಸಿದ ಬೆನ್ನಲ್ಲೇ ಎರಡೂ ಬ್ಯಾಂಕ್ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ  ಕೆಐಎಡಿಬಿ ಸಂಸ್ಥೆಯ ನಿಶ್ಚಿತ ಠೇವಣಿಯನ್ನು ಮರುಪಾವತಿಸುವ ಕುರಿತು ಸಮಯಾವಕಾಶವನ್ನು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಆದೇಶವನ್ನು ತಡೆ ಹಿಡಿದಿದೆ.

ಈ ಹಿಂದೆ ಮಾಡಿದ್ದ ಎರಡು ಪ್ರತ್ಯೇಕ ನಿಶ್ಚಿತ ಠೇವಣಿಗಳನ್ನು ಹಿಂದಿರುಗಿಸದಿರುವ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಹಾಗೂ ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್ ಬಿ)ಗಳಲ್ಲಿ ಇರಿಸಿರುವ ಎಲ್ಲ ಠೇವಣಿಗಳನ್ನು ಹಿಂಪಡೆಯಲು ರಾಜ್ಯ ಸರಕಾರ ನಿರ್ಧರಿಸಿತ್ತು. ಅಲ್ಲದೇ ಭವಿಷ್ಯದಲ್ಲಿ ಈ ಎರಡು ಬ್ಯಾಂಕ್ ಗಳಲ್ಲಿ ಯಾವುದೇ ರೀತಿಯ ಠೇವಣಿ ಇಡದಂತೆ, ಹೂಡಿಕೆ ಮಾಡದಂತೆ ಹಣಕಾಸು ಇಲಾಖೆಯ ಮೂಲಕ ಎಲ್ಲ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಲಾಗಿತ್ತು.

ಇದನ್ನೂ ಓದಿ: SBI, PNB ಬ್ಯಾಂಕ್‌ ಖಾತೆಗಳನ್ನ ಮುಚ್ಚಲು ರಾಜ್ಯ ಸರ್ಕಾರ ನಿರ್ಧಾರ ಅನುಮಾನಾಸ್ಪದವಾಗಿದೆ- ಲಹರ್ ಸಿಂಗ್

ಇದರ ಬೆನ್ನಲ್ಲೇ  ಎಸ್​ಬಿಐ ಬ್ಯಾಂಕಿನ ಮುಖ್ಯ ಪ್ರಧಾನ ವ್ಯವಸ್ಥಾಪಕ ವಿನೋದ್ ಜೈಸ್ವಾಲ್ ಅವರು ಸಿಎಂ ಭೇಟಿ ಮಾಡಿ 15 ದಿನ‌ ಸಮಯ ನೀಡುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಆದೇಶವನ್ನು ತಡೆ ಹಿಡಿದಿದೆ.

ಖಾತೆ ಸ್ಥಗಿತಕ್ಕೆ ಆದೇಶಿಸಿದ್ದ ಸರ್ಕಾರ

ರಾಜ್ಯ ಸರ್ಕಾರದ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು ವಿಶ್ವವಿದ್ಯಾಲಯಗಳು, ಮತ್ತಿತರ ಸಂಸ್ಥೆಗಳು ಮಾಡಿರುವ ಎಲ್ಲಾ ರೀತಿಯ ಠೇವಣಿಗಳನ್ನು/ಹೂಡಿಕೆಗಳನ್ನು ತಕ್ಷಣದಿಂದ ಹಿಂಪಡೆಯುವಂತೆ ಹಾಗೂ ಇನ್ನು ಮುಂದೆ ಈ ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಠೇವಣಿಗಳನ್ನು/ ಹೂಡಿಕೆಗಳನ್ನು ಮಾಡಬಾರದು ಎಂದು ಸುತ್ತೋಲೆಯಲ್ಲಿ ಆದೇಶಿಸಲಾಗಿತ್ತು.

ತಮ್ಮ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕಚೇರಿಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಮತ್ತಿತರ ಸಂಸ್ಥೆಗಳು ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಶನಲ್ ಬ್ಯಾಂಕ್​ಗಳ ಎಲ್ಲಾ ಶಾಖೆಗಳಲ್ಲಿ ಹೂಡಿರುವ ಠೇವಣಿಗಳನ್ನು ಮತ್ತು ಇತರ ಎಲ್ಲಾ ಖಾತೆಗಳನ್ನು ಮುಕ್ತಾಯಗೊಳಿಸಿ ದೃಢೀಕರಣವನ್ನು ಮತ್ತು ಠೇವಣಿಗಳ ಹಾಗೂ ಖಾತೆಗಳ ವಿವರಗಳನ್ನು ಲಗತ್ತಿಸಿದ ನಮೂನೆಯಲ್ಲಿ ಸೆಪ್ಟಂಬರ್ 20 ಒಳಗಾಗಿ ಸರಕಾರದ ಉಪ ಕಾರ್ಯದರ್ಶಿ, ಆಯವ್ಯಯ ಮತ್ತು ಸಂಪನ್ಮೂಲ ಶಾಖೆ, ಆರ್ಥಿಕ ಇಲಾಖೆಗೆ ಸಲ್ಲಿಸುವಂತೆ ಹಣಕಾಸು ಇಲಾಖೆಯನ್ನೂ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರಿಂದ ಅನುಮೋದಿಸಲ್ಪಟ್ಟ ಈ ಆದೇಶವನ್ನು ಆ.12ರಂದು ಹಣಕಾಸು ಇಲಾಖೆಯ (ಆಯವ್ಯಯ ಮತ್ತು ಸಂಪನ್ಮೂಲ) ಕಾರ್ಯದರ್ಶಿ ಡಾ.ಪಿ.ಸಿ. ಜಾಫರ್ ಹೊರಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ