ದೇಗುಲದ ಹಣ ಬೇರೆ ಇಲಾಖೆಗಳಿಗೆ ವರ್ಗಾಯಿಸುವುದಿಲ್ಲ: ಸರ್ಕಾರಿಂದ ಗ್ಯಾರಂಟಿ ಬೋರ್ಡ್

ಕರ್ನಾಟಕದಲ್ಲಿ ಹಿಂದೂ ದೇವಾಲಯಗಳಿಂದ ಬರುವ ಆದಾಯವನ್ನು ಮಸೀದಿ, ಚರ್ಚ್'ಗಳಿಗೂ ಬಳಸಲಾಗುತ್ತಿದೆ ಎಂಬ ಮಾಹಿತಿಗಳು ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡಿದ್ದು, ಈ ಬಗ್ಗೆ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್​ ಸರ್ಕಾರದ ವಿರುದ್ಧ ಮುಗಿಬಿದ್ದು ಪ್ರತಿಭಟನೆ ನಡೆಸಿದ್ದು ಆಯ್ತು. ದೇವಸ್ಥಾನಗಳ ಹಣದ ವಿಚಾರವಾಗಿ ಕೇಳಿ ಬರುತ್ತಿರುವ ಆರೋಪಗಳಿಗೆ ಇದೀಗ ಸರ್ಕಾರ ಫಲಕದೊಂದಿಗೆ ಸ್ಪಷ್ಟನೆ ನೀಡಲು ಮುಂದಾಗಿದೆ.

ದೇಗುಲದ ಹಣ ಬೇರೆ ಇಲಾಖೆಗಳಿಗೆ ವರ್ಗಾಯಿಸುವುದಿಲ್ಲ: ಸರ್ಕಾರಿಂದ ಗ್ಯಾರಂಟಿ ಬೋರ್ಡ್
Edited By:

Updated on: Nov 11, 2024 | 7:56 PM

ಬೆಂಗಳೂರು, (ನವೆಂಬರ್ 11): ಕರ್ನಾಟಕದ ಮುಜರಾಯಿ ಇಲಾಖೆಯ 36 ಸಾವಿರ ದೇಗುಲಗಳಲ್ಲಿ ಫಲಕ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ದೇವಾಲಯಗಳಿಂದ ಸಂಗ್ರಹವಾದದ ಹಣವನ್ನು ಮಸೀದಿ, ಚರ್ಚ್ ಹಾಗೂ ಇತರೆ ಇಲಾಖೆಗಳಿಗೆ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಲೇ ಇವೆ. ಹೀಗಾಗಿ ದೇವಸ್ಥಾನದ ಹುಂಡಿ ಹಣ ದೇಗುಲದ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಲಾಗುತ್ತೆ. ದೇಗುಲದ ಹಣ ಬೇರೆ ಇಲಾಖೆಗಳಿಗೆ ವರ್ಗಾಯಿಸುವುದಿಲ್ಲ ಎಂದು ಎಲ್ಲಾ ದೇವಸ್ಥಾನಗಳಲ್ಲಿ ಫಲಕ ಹಾಕಲು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ. ಈ ಮೂಲಕ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಸ್ಪಷ್ಟನೆ ನೀಡಲು ಮುಂದಾಗಿದೆ.

ದೇಗುಲದ ಹಣ ಮಸೀದಿ, ಚರ್ಚ್​ಗಳಿಗೆ ಬಳಕೆ ಆಗುತ್ತಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಮುಜರಾಯಿ ಇಲಾಖೆ, ದೇವಸ್ಥಾನದ ಹುಂಡಿ ಹಣ ದೇಗುಲದ ಅಭಿವೃದ್ಧಿಗೆ ಮಾತ್ರ ಬಳಕೆ. ಬೇರೆ ಇಲಾಖೆಗಳಿಗೆ ವರ್ಗಾಯಿಸುವುದಿಲ್ಲ ಎಂದು ರಾಜ್ಯದ 36,000 ದೇವಸ್ಥಾನಗಳಲ್ಲೂ ಫಲಕ ಹಾಕಲು ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.

ಇದನ್ನೂ ಓದಿ: ಮುಜರಾಯಿ ಇಲಾಖೆಯ ದೇವಸ್ಥಾನದ ಹುಂಡಿ ಹಣ ಆ ದೇಗುಲಕ್ಕೇ ಬಳಕೆಯಾಗಬೇಕು: ರಾಮಲಿಂಗಾ ರೆಡ್ಡಿ ಮಹತ್ವದ ಘೋಷಣೆ

ಕರ್ನಾಟಕದಲ್ಲಿ ಒಟ್ಟು ಮುಜರಾಯಿ ಇಲಾಖೆ ಅಡಿಯಲ್ಲಿ 36 ಸಾವಿರ ದೇವಸ್ಥಾನಗಳು ಇದ್ದು, ಇವುಗಳಿಗೆ ಕಾಣಿಕೆ ಹರಿದುಬರುತ್ತಿದೆ. ಹಾಸನಾಂಬೆ, ಕೊಪ್ಪಳದ ಹುಲಿಗೆಮ್ಮ, ಸವದತ್ತಿ ಯಲ್ಲಮ್ಮ, ಹೀಗೆ ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಲಕ್ಷಾಂತರ ರೂಪಾಯಿ ಕಾಣಿಕೆ ಸಂಗ್ರಹವಾಗುತ್ತೆ. ಅದರಲ್ಲೂ ಮುಖ್ಯವಾಗಿ ಈ ಬಾರಿ ಹಾಸನಾಂಬೆಗೆ 12.63 ಕೋಟಿ ಆದಾಯ ಬಂದಿದೆ.

ಇನ್ನು ದೇವಸ್ಥಾನದಿಂದ ಬಂದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಉಪಯೋಗ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ಹಿಂದೂ ದೇಗುಲದ ಹಣವನ್ನು ಮಸೀದಿ, ಚರ್ಚ್​​ಗಳ ಅಭಿವೃದ್ಧಿ ನೀಡಲಾಗುತ್ತಿದೆ. ಹೀಗಾಗಿ ಹಿಂದೂ ದೇಗುಲಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದರಿಂದ  ದೇಗುಲದ ಹಣ ಬೇರೆ ಇಲಾಖೆಗೆ ವರ್ಗಾವಣೆ ಮಾಡಲ್ಲ ಎಂದು ಗ್ಯಾರಂಟಿ ಬೋರ್ಡ್​ ಮೂಲಕ ಭಕ್ತರಿಗೆ ತಿಳಿಸಲು ಮುಜುರಾಯಿ ಇಲಾಖೆ ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ