‘ಸಾಂತ್ವನ ಯೋಜನೆ’: ಅಲ್ಪಸಂಖ್ಯಾತರ ಮನೆ, ಅಂಗಡಿ ಹಾನಿಯಾದರೆ 5 ಲಕ್ಷವರೆಗೆ ಆರ್ಥಿಕ ನೆರವು

ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ಪ್ರಕೃತಿ ವಿಕೋಪ ಅಥವಾ ಕೋಮು ಹಿಂಸಾಚಾರದಿಂದ ಸಂಕಷ್ಟಕ್ಕೆ ಈಡಾದ ಕುಟುಂಬಗಳಿಗೆ ‘ಸಾಂತ್ವನ ಯೋಜನೆ’ ಮೂಲಕ ಆಸರೆಯಾಗಲಿದೆ. ಯೋಜನೆಯ ಪ್ರಯೋಜನ ಪಡೆಯಲು ಬೇಕಿರುವ ಅರ್ಹತೆ ಮತ್ತು ದಾಖಲೆಗಳ ಕುರಿತ ಮಾಹಿತಿ ಇಲ್ಲಿದೆ.

‘ಸಾಂತ್ವನ ಯೋಜನೆ’: ಅಲ್ಪಸಂಖ್ಯಾತರ ಮನೆ, ಅಂಗಡಿ ಹಾನಿಯಾದರೆ 5 ಲಕ್ಷವರೆಗೆ ಆರ್ಥಿಕ ನೆರವು
ಸಾಂದರ್ಭಿಕ ಚಿತ್ರ
Image Credit source: PTI

Updated on: Aug 06, 2026 | 7:09 PM

ಬೆಂಗಳೂರು, ಆಗಸ್ಟ್​​ 06: ಪ್ರಕೃತಿ ವಿಕೋಪ ಅಥವಾ ಕೋಮು ಹಿಂಸಾಚಾರದಿಂದ ಮನೆ ಅಥವಾ ಅಂಗಡಿಗೆ ಹಾನಿಯಾದ ಅಲ್ಪಸಂಖ್ಯಾತ ಸಮುದಾಯದ ಕುಟುಂಬಗಳು ಕರ್ನಾಟಕ ಸರ್ಕಾರ ‘ಸಾಂತ್ವನ ಯೋಜನೆ’ಯಡಿ ಆರ್ಥಿಕ ನೆರವು ಪಡೆಯಬಹುದಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(KMDC)ದಿಂದ, ಸಾಲ ಹಾಗೂ ಸಹಾಯಧನ (ಸಬ್ಸಿಡಿ) ರೂಪದಲ್ಲಿ ನೆರವು ನೀಡಲಾಗುತ್ತದೆ.

ಯೋಜನೆಯಡಿ ದೊರೆಯುವ ಸೌಲಭ್ಯ

ಪ್ರತಿ ಫಲಾನುಭವಿಗೆ ಗರಿಷ್ಠ 5 ಲಕ್ಷವರೆಗೆ ಆರ್ಥಿಕ ನೆರವು ಸಿಗಲಿದ್ದು, ಮಂಜೂರಾಗುವ ಮೊತ್ತದಲ್ಲಿ ಶೇ.50 ಸಹಾಯಧನ (ಸಬ್ಸಿಡಿ) ಆಗಿರುತ್ತದೆ. ಉಳಿದ ಶೇ.50 ಮರುಪಾವತಿಸಬೇಕಾದ ಸಾಲ ರೂಪದಲ್ಲಿ ನೀಡಲಾಗುತ್ತದೆ. ಈ ಮೂಲಕ ಹಾನಿಗೊಳಗಾದ ಮನೆ ಅಥವಾ ಅಂಗಡಿಯನ್ನು ಮರುನಿರ್ಮಿಸಲು ಅಥವಾ ದುರಸ್ತಿ ಮಾಡಲು ಆರ್ಥಿಕ ನೆರವು ದೊರೆಯಲಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಈಜೀ ಮಾಡ್ಯುಲರ್ ಸಾರ್ವಜನಿಕ ಶೌಚಾಲಯಗಳು: ಏನೆಲ್ಲ ಆಧುನಿಕ ವ್ಯವಸ್ಥೆ?

ಅರ್ಹತಾ ಮಾನದಂಡಗಳು

  • ಕರ್ನಾಟಕದ ಮಾನ್ಯತೆ ಪಡೆದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು
  • ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
  • ವಯಸ್ಸು 18 ರಿಂದ 55 ವರ್ಷಗಳೊಳಗೆ ಇರಬೇಕು
  • ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ಮೀರಿರಬಾರದು
  • ಅರ್ಜಿದಾರರು ಅಥವಾ ಕುಟುಂಬದ ಯಾವುದೇ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರಾಗಿರಬಾರದು
  • ಕಳೆದ 5 ವರ್ಷಗಳಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಯಾವುದೇ ಸಾಲ ಪಡೆದಿರಬಾರದು. (ಆದರೆ ಅರಿವು ಶಿಕ್ಷಣ ಸಾಲ ಯೋಜನೆ ಪಡೆದಿದ್ದರೆ ವಿನಾಯಿತಿ ಇದೆ.)

ಅಗತ್ಯ ದಾಖಲೆಗಳು

  • ಇತ್ತೀಚಿನ ಭಾವಚಿತ್ರ
  • ಜಾತಿ/ಅಲ್ಪಸಂಖ್ಯಾತರ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ
  • ಆಧಾರ್ ಕಾರ್ಡ್ ಪ್ರತಿ
  • ಬ್ಯಾಂಕ್ ಪಾಸ್‌ಬುಕ್ ಪ್ರತಿ
  • ಜಾಮೀನುದಾರರ ಸ್ವಯಂ ಘೋಷಣಾ ಪತ್ರ
  • ಅರ್ಜಿದಾರರ ಸ್ವಯಂ ಘೋಷಣಾ ಪತ್ರ
  • ಮನೆ ಅಥವಾ ಅಂಗಡಿಗೆ ಹಾನಿಯಾಗಿರುವ ಕುರಿತು ಸಂಬಂಧಪಟ್ಟ ಅಧಿಕಾರಿಯಿಂದ ನೀಡಲಾದ ಪ್ರಮಾಣೀಕರಣ ವರದಿ

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ‘Apply Online’ ಆಯ್ಕೆಯನ್ನು ಕ್ಲಿಕ್ ಮಾಡಿ. ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಆಧಾರ್ ಸಂಖ್ಯೆ ದಾಖಲಿಸಿ, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್‌ಗೆ ಬರುವ OTP ಮೂಲಕ ದೃಢೀಕರಣ ಪೂರ್ಣಗೊಳಿಸಬೇಕು. ವೈಯಕ್ತಿಕ ಮಾಹಿತಿ, ವಿಳಾಸ ಹಾಗೂ ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿದ ಬಳಿಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಅರ್ಜಿಯನ್ನು ಸಲ್ಲಿಸಿದ ಬಳಿಕ ಸೃಷ್ಟಿಯಾಗುವ Application ID ಅನ್ನು ಮುಂದಿನ ಉಲ್ಲೇಖಕ್ಕಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ಟೈಮ್ಸ್​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us