ಕಳಪೆ ಔಷಧ ತಯಾರಕ ಕಂಪನಿಗಳಿಗೆ ಶಾಕ್: ಕಡಿಮೆ ಗುಣಮಟ್ಟದ ಔಷಧಗಳಿಗೆ ಕೋಕ್, ಬರಲಿದೆ ಹೊಸ ನಿಯಮ
ಬಳ್ಳಾರಿಯಲ್ಲಿನ ಬಾಣಂತಿಯರ ಸಾವಿನ ಪ್ರಕರಣದ ಬೆನ್ನಲ್ಲೇ ಇದೀಗ, ರಾಜ್ಯದಲ್ಲಿ ಸರಬರಾಜು ಆಗುತ್ತಿರುವ ಕಳಪೆ ಗುಣಮಟ್ಟದ ಔಷಧಗಳ ವಿರುದ್ಧ ಸಮರ ಸಾರಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಬೆನ್ನಲ್ಲೇ ಕಳಪೆ ಗುಣಮಟ್ಟದ ಔಷಧ ನೀಡುತ್ತಿದ್ದ ಕಂಪನಿಗಳಿಗೆ ಶಾಕ್ ಕೊಡಲು ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ. ಇದಕ್ಕಾಗಿಯೇ ಕಠಿಣ ಕಾನೂನು ರೂಪಿಸಲು ಮುಂದಾಗಿದೆ. ಹೊಸ ಕಾನೂನು ಹೇಗಿರಲಿದೆ? ಇಲ್ಲಿದೆ ಮಾಹಿತಿ.

ಬೆಂಗಳೂರು, ಫೆಬ್ರವರಿ 26: ಕೆಲ ದಿನಗಳ ಹಿಂದೆಯಷ್ಟೇ ಆರೋಗ್ಯ ಇಲಾಖೆ 9 ಔಷಧಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಇದಕ್ಕೆ ಮೂಲ ಕಾರಣ, ಕಳಪೆ ಗುಣಮಟ್ಟ ಎನ್ನುವ ವರದಿ. ಈ ಹಿನ್ನೆಲೆ ಆರೋಗ್ಯ ಸಚಿವರು ಈ 9 ಇಂಜೆಕ್ಷನ್ಗಳನ್ನು ನಿಷಧೇಧಿಸಿ ಆದೇಶ ಹೊರಡಿಸಿದ್ದರು. ಅಲ್ಲದೆ ಕೇಂದ್ರ ಸರ್ಕಾರ, ‘ಸೆಂಟ್ರಲ್ ಡ್ರಗ್ಸ್ ಸ್ಯ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್’ ಪ್ರಯೋಗಾಲಯದಲ್ಲಿ 9 ಔಷಧ ಕಂಪನಿಗಳು ಉತ್ಪಾದಿಸುವ ಡ್ರಗ್ಗಳನ್ನು ಟೆಸ್ಟ್ ಮಾಡಿಸಿ ವರದಿ ಪಡೆಯಬೇಕು. ಅಲ್ಲಿಯವರೆಗೆ ದೇಶಾದ್ಯಂತ ಆ ಔಷಧ ಮಾರಾಟ ನಿರ್ಬಂಧಿಸಬೇಕು ಎಂದು ಪತ್ರ ಬರೆದು ಮನವಿ ಮಾಡಿದ್ದರು.
ನಿಷೇಧಿತ ಇಂಜೆಕ್ಷನ್ಗಳು ಯಾವವು?
- ಫಾರ್ಮಾ ಇಂಪೆಕ್ಸ್ ಕಂಪನಿಯ ಮೆಟ್ರೊನಿಡಜೋಲ್ ಇಂಜೆಕ್ಷನ್
- ಐಪಿ-100 ಎಂಎಲ್, ಎಲ್ಪಾ ಲ್ಯಾಬೊರೇಟರಿಸ್ನ ಡೈಕ್ಲೊಫೆನ್ಯಾಕ್ ಸೋಡಿಯಂ ಇಂಜೆಕ್ಷನ್
- ಐಪಿ, ರುಸೊಮಾ ಲ್ಯಾಬೊರೇಟರಿಸ್ನ ಡೆಕ್ಸ್ಟ್ರೋಸ್ 25% ಡಬ್ಲ್ಯೂ/ವಿ ಡಿ25 ಇಂಜೆಕ್ಷನ್
- ಐ.ಪಿ. ಐಎಚ್ಎಲ್ ಲೈಫ್ಸೈನ್ಸಸ್ನ ಮೆಟ್ರೊನಿಡಜೋಲ್ ಇಂಜೆಕ್ಷನ್
- ಐಪಿ 100 ಎಂಎಲ್, ಪಾಕ್ಸನ್ಸ್ ಫಾರ್ಮಾಸಿಟಿಕಲ್ಸ್ನ ಫ್ರುಸ್ಮೈಡ್ ಇಂಜೆಕ್ಷನ್ ಫ್ರ್ಯೂಕ್ಸ್ 10ಎಂಜಿ
- ಮಾಡರ್ನ್ ಲ್ಯಾಬೊರೇಟರಿಸ್ನ ಪೈಪರಾಸಿಲಿನ್ ಮತ್ತು ಟಾಜೊಬ್ಯಾಕ್ಟಮ್, ರಿಗೈನ್ ಲ್ಯಾಬೊರೇಟರಿಸ್ನ ಕ್ಯಾಲ್ಸಿಯಂ ಗ್ಲುಕೊನೇಟ್ ಇಂಜೆಕ್ಷನ್
- ಒಂಡನ್ಸೆಟ್ರೋನ್ ಇಂಜೆಕ್ಷನ್
- ಮಾರ್ಟಿನ್ ಮತ್ತು ಬ್ರೌನ್ ಬಯೋ ಸೈನ್ಸ್ನ ಅಟ್ರೋಪೈನ್ ಸಲ್ಫೇಟ್ ಇಂಜೆಕ್ಷನ್ ಐಪಿ1 ಎಂಎಲ್
ಈ ಬೆನ್ನಲ್ಲೇ ರಾಜ್ಯ ಸರ್ಕಾರಿ ಪ್ರಯೋಗಾಲಯದ ಪರೀಕ್ಷೆಯಲ್ಲಿ ಅಸುರಕ್ಷಿತ ಎಂದು ಸಾಬೀತಾದ ಹಾಗೂ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿರುವ ವಿವಿಧ ಕಂಪೆನಿಗಳ 9 ಔಷಧಗಳ ಮಾರಾಟವನ್ನು ದೇಶಾದ್ಯಂತ ನಿರ್ಬಂಧಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾಗೆ ಪತ್ರ ಬರೆದಿದ್ದಾರೆ. ಇದರ ಮುಂದುವರೆದ ಭಾಗವಾಗಿ, ರಾಜ್ಯದಿಂದಲೇ ಜನರಿಗೆ ಉತ್ತಮ ಗುಣಮಟ್ಟದ ಔಷಧಿಗಳನ್ನು ನೀಡಲು ಹೊಸ ನಿಯಮಗಳನ್ನು ರೂಪಿಸಲಾಗುತ್ತಿದೆ.
ಹೊಸ ನಿಯಮ ಹೇಗಿರಲಿದೆ?
ರಾಜ್ಯಕ್ಕೆ ಬರುವ ಎಲ್ಲಾ ಔಷಧಗಳ ಗುಣಮಟ್ಟವನ್ನು ಪರೀಕ್ಷೆ ಮಾಡಲು ಮುಂದಗಲಾಗಿದೆ. ಎಲ್ಲಾ ಬಗೆಯ ಬ್ಯಾಚ್ಗಳ ಮಾತ್ರೆ, ಇಂಜೆಕ್ಷನ್, ಸಿರಪ್, ಫ್ಲೂಯಿಡ್ಗಳನ್ನು ಕೇಂದ್ರದ ಲ್ಯಾಬ್ನಲ್ಲಿ ಪರೀಕ್ಷೆ ಮಾಡಲಾಗಿದ್ದರೂ ರಾಜ್ಯದ ಸರ್ಕಾರಿ ಪ್ರಯೋಗಾಲಯದ ಪರೀಕ್ಷೆ ಮಾಡಿಸಲಾಗುವುದು. ಈ ಪರೀಕ್ಷೆಯಲ್ಲಿ ಔಷಧ ಅಸುರಕ್ಷಿತ ಎಂದು ಸಾಬೀತಾದರೆ ಹಾಗೂ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದರೆ ಇತಂಹ ಕಳಪೆ ಗುಣಮಟ್ಟದ ಔಷಧಿಗಳ ಕಂಪನಿಗಳನ್ನು ಶಾಶ್ವತವಾಗಿ ಕಪ್ಪು ಪಟ್ಟಿ ಸೇರಿಸಲು ಇಲಾಖೆ ಮುಂದಾಗಿದೆ.
ಯಾವುದೇ ರಾಜ್ಯದಲ್ಲಿ ಪರೀಕ್ಷೆ ನಡೆದಾಗ ಗುಣಮಟ್ಟದಲ್ಲಿ ದೋಷ ಇದೆ ಎಂದು ಗೊತ್ತಾದರೆ ಆ ಔಷಧಗಳ ಬಗ್ಗೆ ಬೇರೆ ರಾಜ್ಯಗಳೂ ಅಲರ್ಟ್ ಸಂದೇಶ ಕಳುಹಿಸುವುದು ಸೇರಿದಂತೆ ಹಲವು ಅಂಶಗಳುಳ್ಳ ಪ್ರತ್ಯೇಕ ಕಾನೂನು ರಚನೆಗೆ ಸರ್ಕಾರ ಪ್ಲಾನ್ ಮಾಡಿದೆ. ಯಾಕೆಂದರೆ, ಈ ಹಿಂದೆ ಬಳ್ಳಾರಿ ಪ್ರಕರಣದಲ್ಲೂ ಫ್ಲೂಯಿಡ್ ಕೇಂದ್ರದ ಲ್ಯಾಬ್ನಲ್ಲಿ ಗುಣಮಟ್ಟ ಪರೀಕ್ಷೆಯಲ್ಲಿ ಪಾಸ್ ಆಗಿತ್ತು. ಆದರೆ, ನಮ್ಮ ರಾಜ್ಯದ ಲ್ಯಾಬ್ನಲ್ಲಿ ಫೇಲ್ ಆಗಿತ್ತು. ಹೀಗಾಗಿ ರಾಜ್ಯಕ್ಕೆ ಬರುವ ಔಷಧಗಳ ಮರುಪರೀಕ್ಷೆ ಮಾಡಿ, ಅವುಗಳ ಗುಣಮಟ್ಟ ಕಳಪೆಯಾದರೆ ಕಂಪನಿಯನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಕ್ಕಳಲ್ಲಿ ಮಧುಮೇಹ ಬರದಂತೆ ತಡೆಯಲು ಈ ಸಲಹೆಗಳನ್ನು ಪಾಲಿಸಿ
ಒಟ್ಟಿನಲ್ಲಿ ರಾಜ್ಯದಲ್ಲಿ ಸರಬರಾಜು ಆಗುತ್ತಿರುವ ಕಳಪೆ ಗುಣಮಟ್ಟದ ಔಷಧಗಳ ವಿರುದ್ಧ ಇಲಾಖೆ ಸಮರ ಸಾರಿದ್ದು, ಆದಷ್ಟು ಬೇಗ ಈ ಹೊಸ ನಿಯಮವನ್ನು ಜಾರಿಗೆ ತರಲು ಉದ್ದೇಶಿಸಿದೆ. ಈ ಸಂಬಂಧ ಸಚಿವ ದಿನೇಶ್ ಗುಂಡೂರಾವ್ ಖುದ್ದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾರನ್ನು ಭೇಟಿಯಾಗಲು ದೆಹಲಿಗೆ ತೆರಳುತ್ತಿದ್ದಾರೆ.