
ಬೆಂಗಳೂರು, ಜೂನ್ 22: ಸರ್ಕಾರಿ ಆಸ್ಪತ್ರೆಗಳಿಗೆ (Government Hospitals) ಚಿಕಿತ್ಸೆಗಾಗಿ ಬರುವ ಬಡ ಮತ್ತು ಸಾಮಾನ್ಯ ರೋಗಿಗಳಿಗೆ ಸ್ಪಂದಿಸಲು ಆರೋಗ್ಯ ಇಲಾಖೆಯು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಗೊಂದಲಗಳು ಹಾಗೂ ಸಿಬ್ಬಂದಿಗಳ ನಡೆಗಳ ಕುರಿತಾದ ದೂರುಗಳನ್ನು ಆಲಿಸಲು ಆರೋಗ್ಯ ಸಚಿವರ ಕಚೇರಿಯಿಂದಲೇ ನೇರವಾಗಿ ನಿಯಂತ್ರಿಸಲ್ಪಡುವ 24×7 ಹೆಲ್ಪ್ಲೈನ್ (ಸಹಾಯವಾಣಿ) ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯುಟಿ ಖಾದರ್ (UT Kader) ತಿಳಿಸಿದ್ದಾರೆ.
ಆಸ್ಪತ್ರೆಗಳಿಗೆ ಭೇಟಿ ನೀಡುವ ರೋಗಿಗಳಿಗೆ ಅನೇಕ ಅನುಮಾನಗಳಿರುತ್ತವೆ. ಆದರೆ ಹಲವು ಸಂದರ್ಭಗಳಲ್ಲಿ ಆಸ್ಪತ್ರೆಯ ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ ಎಂಬ ದೂರುಗಳಿವೆ. ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೊಸದಾಗಿ ಆರಂಭಿಸಲಾಗುವ ಸಹಾಯವಾಣಿ ಸಂಖ್ಯೆಯನ್ನು ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲೂ ಕಡ್ಡಾಯವಾಗಿ ಪ್ರದರ್ಶಿಸಲಾಗುವುದು ಎಂದು ಆರೋಗ್ಯ ಸಚಿವ ಯುಟಿ ಖಾದರ್, ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಣಿ ವಿಳಂಬ ಮಾಡುವುದು ಅಥವಾ ರೋಗಿಗಳಿಂದ ಹೆಚ್ಚುವರಿ ಹಣಕ್ಕಾಗಿ ಬೇಡಿಕೆ ಇಡುವ ಆಸ್ಪತ್ರೆಗಳ ವಿರುದ್ಧ ಈ ಹೆಲ್ಪ್ಲೈನ್ ಮುಖಾಂತರ ಸಾರ್ವಜನಿಕರು ನೇರವಾಗಿ ದೂರು ನೀಡಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಫಲಾನುಭವಿಗಳಿಂದ ಯಾವುದೇ ಕಾರಣಕ್ಕೂ ಹಣ ವಸೂಲಿ ಮಾಡಬಾರದು ಮತ್ತು ಆಸ್ಪತ್ರೆಗಳೊಂದಿಗಿನ ವಿವಾದಗಳನ್ನು ಬಗೆಹರಿಸಲು ‘ಆರೋಗ್ಯ ಮಿತ್ರ’ ಸಿಬ್ಬಂದಿಯೇ ಜವಾಬ್ದಾರರಾಗಿರುತ್ತಾರೆ. ಉಚಿತ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗಳಲ್ಲಿ ಜಾಹೀರಾತು ಫಲಕಗಳನ್ನು ಪ್ರದರ್ಶಿಸಲು ಸೂಚಿಸಲಾಗಿದ್ದು, ಮುಂಬರುವ ವಾರಗಳಲ್ಲೇ ಈ ಹೊಸ ವ್ಯವಸ್ಥೆ ರಾಜ್ಯಾದ್ಯಂತ ಅನುಷ್ಠಾನಕ್ಕೆ ಬರಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಯುಟಿ ಖಾದರ್ ಫುಲ್ ಆಕ್ಟಿವ್: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲ್ಯಾನ್
ಹೃದಯ ಶಸ್ತ್ರಚಿಕಿತ್ಸೆಯ ವೆಚ್ಚದ ಮೇಲೆ ಮಿತಿ ಹೇರುವ ಕುರಿತಾದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಸಚಿವರು, ಆಯುಷ್ಮಾನ್ ಯೋಜನೆಯು ಶುಲ್ಕಗಳ ಮೇಲೆ ಮಿತಿಯನ್ನು ಹೊಂದಿದ್ದು, ಆಸ್ಪತ್ರೆಗಳು ಅವುಗಳನ್ನು ಮೀರಬಾರದು. ಅಲ್ಲದೆ, ಸಂಜೀವಿನಿ-ಪುನೀತ್ ರಾಜ್ಕುಮಾರ್ ಯೋಜನೆಯಂತಹ ಇತರ ಯೋಜನೆಗಳಿವೆ, ಇದರ ಅಡಿಯಲ್ಲಿ ಇಸಿಜಿಗಳು, ಚುಚ್ಚುಮದ್ದುಗಳು, ಆಂಜಿಯೋಗ್ರಾಮ್ಗಳು ಮತ್ತು ಆಂಜಿಯೋಪ್ಲ್ಯಾಸ್ಟಿಯನ್ನು ಅನೇಕ ಸಂದರ್ಭಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ. ಉಚಿತ ಆಂಜಿಯೋಗ್ರಾಮ್ ಸೌಲಭ್ಯಗಳನ್ನು ವಿಸ್ತರಿಸಲು ಮತ್ತು ಆರೋಗ್ಯ ವಿತರಣೆಯನ್ನು ಸುಧಾರಿಸಲು ಸರ್ಕಾರವು ಇತರ ಮಾರ್ಗಗಳನ್ನು ಪರಿಶೀಲಿಸುತ್ತಿದೆ. ಹೆಚ್ಚು ಪರಿಣಾಮಕಾರಿ ಕಾರ್ಯಕ್ರಮಗಳಿಗಾಗಿ ಕೆಲವು ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಏಕೀಕರಿಸುವ ಯೋಚನೆ ಇದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:44 am, Mon, 22 June 26