ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಯುಟಿ ಖಾದರ್ ಫುಲ್ ಆಕ್ಟಿವ್: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲ್ಯಾನ್
ನೂತನ ಆರೋಗ್ಯ ಸಚಿವ ಯು.ಟಿ. ಖಾದರ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆರೋಗ್ಯ ಇಲಾಖೆಯಲ್ಲಿ ಸುಧಾರಣೆ ತರಲು ಮುಂದಾಗಿದ್ದಾರೆ. ವೈದ್ಯರ ಕೊರತೆ ನೀಗಿಸಲು ಪ್ಲ್ಯಾನ್ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ಮಾಡಿ ಖಡಕ್ ಸೂಚನೆಗಳನ್ನು ನೀಡಿದ್ದಾರೆ. ಡಿಹೆಚ್ಓಗಳಿಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.

ಬೆಂಗಳೂರು, ಜೂನ್ 06: ರಾಜ್ಯದಲ್ಲಿ ಇತ್ತೀಚೆಗಷ್ಟೇ ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ನೂತನ ಸಂಪುಟದಲ್ಲಿ ಖಾತೆಗಳ ಹಂಚಿಕೆಯಾಗಿದ್ದು, ನೂತನ ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಯು.ಟಿ. ಖಾದರ್ (UT Khader) ಫುಲ್ ಆಕ್ಟಿವ್ ಆಗಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ಮುಂದಾಗಿರುವ ಅವರು, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ವಿಶೇಷ ತಂತ್ರಕ್ಕೆ ಕೈಹಾಕಿದ್ದಾರೆ.
ಮುಖ್ಯಾಂಶಗಳು
- ಆರೋಗ್ಯ ಇಲಾಖೆಯಲ್ಲಿ ಮಹತ್ವದ ಸುಧಾರಣೆಗೆ ಮುಂದಾದ ಸಚಿವ ಯುಟಿ ಖಾದರ್
- ಡಿಹೆಚ್ಓಗಳಿಗೆ ಖಡಕ್ ಎಚ್ಚರಿಕೆ
- ವೈದ್ಯರ ಕೊರತೆ ನೀಗಿಸಲು ನೇರ ನೇಮಕಾತಿ ಪ್ರಕ್ರಿಯೆ
ಈ ಹಿಂದೆ ಸಚಿವರಾಗಿದ್ದಾಗಲೂ ಇದೇ ಇಲಾಖೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಯು.ಟಿ. ಖಾದರ್ಗೆ ಬರೋಬ್ಬರಿ 13 ವರ್ಷಗಳ ಬಳಿಕ ಮತ್ತೆ ಆರೋಗ್ಯ ಖಾತೆಯೇ ಸಿಕ್ಕಿದೆ. ಹೀಗಾಗಿ ಬದಲಾಗಿರುವ ಇಂದಿನ ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ಮೊದಲ ದಿನವೇ ಅಧಿಕಾರಿಗಳ ಮಹತ್ವದ ಸಭೆ ನಡೆಸಿ, ಇಲಾಖೆಯ ಸಮಸ್ಯೆಗಳನ್ನು ಆಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಾತಾವರಣದಲ್ಲಿ ಬದಲಾವಣೆ: ಮಕ್ಕಳಲ್ಲಿ ಹೆಚ್ಚಿದ ಸಾಂಕ್ರಾಮಿಕ ರೋಗಗಳ ಭೀತಿ
ಮುಖ್ಯವಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳು (DHO) ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಸಚಿವರು ಅವರಿಗೆ ಕಠಿಣ ಟಾಸ್ಕ್ ನೀಡುವ ಮೂಲಕ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಾಡುತ್ತಿರುವ ವೈದ್ಯರ ಕೊರತೆಯನ್ನು ನೀಗಿಸಲು ಎಂಬಿಬಿಎಸ್ ಪದವೀಧರರಿಗೆ ಮುಕ್ತ ಆಫರ್ ನೀಡಿರುವ ಸಚಿವರು, ನೇರ ನೇಮಕಾತಿಗೆ ಪ್ಲ್ಯಾನ್ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಇರುವ ವೈದ್ಯರು ನೇರವಾಗಿ ತಮ್ಮ ಅರ್ಜಿಯನ್ನು ಆಯಾ ಜಿಲ್ಲೆಯ ಡಿಹೆಚ್ಓಗಳಿಗೆ ಸಲ್ಲಿಸಬಹುದಾಗಿದೆ.
ಕಠಿಣ ಶಿಸ್ತು ಕ್ರಮ: ಖಡಕ್ ಎಚ್ಚರಿಕೆ ನೀಡಿದ ಸಚಿವ
ಅರ್ಜಿ ಬಂದ ಕೇವಲ ಒಂದು ವಾರದ ಒಳಗಾಗಿ ಡಿಹೆಚ್ಓಗಳು ಆ ವೈದ್ಯರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಒಂದು ವೇಳೆ ಅರ್ಜಿಯನ್ನು ಪುರಸ್ಕರಿಸಿ ನೇಮಕಾತಿ ಮಾಡಿಕೊಳ್ಳದಿದ್ದರೆ ಸಂಬಂಧಪಟ್ಟ ಡಿಹೆಚ್ಓಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಡಿಹೆಚ್ಓಗಳಿಗೆ ನೂತನ ಸಚಿವ ಯು.ಟಿ.ಖಾದರ್ ಮಾಸ್ಟರ್ ಸ್ಟ್ರೋಕ್ ನೀಡಲು ಮುಂದಾಗಿದ್ದು, ವೈದ್ಯರ ಕೊರತೆ ನೀಗುತ್ತಾ ಹಾಗೂ ಡಿಹೆಚ್ಓಗಳು ತ್ವರಿತಗತಿಯಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆಯೇ ಅಂತ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




