ಕೊಡಗಿನಲ್ಲಿ ಮಳೆ ಅಬ್ಬರಕ್ಕೆ ಶಾಲೆ ಹಿಂಬದಿ ಗುಡ್ಡ ಕುಸಿತ: ರಜೆ ಇದ್ದಿದ್ದರಿಂದ ತಪ್ಪಿದ ಭಾರೀ ಅನಾಹುತ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 27, 2024 | 4:45 PM

ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಮಡಿಕೇರಿ ತಾಲ್ಲೂಕಿನ ಕೊಯನಾಡು ಗ್ರಾಮದಲ್ಲಿ ಶಾಲೆಯ ಹಿಂಬದಿ ಗುಡ್ಡ ಕುಸಿತ ಉಂಟಾಗಿದೆ. ಪರಿಣಾಮ ಕಟ್ಟಡದ ಗೋಡೆ ಮತ್ತು ಕಿಟಕಿಗಳು ಹಾನಿಯಾಗಿವೆ. ಶಾಲೆಗೆ ರಜೆ ಇದ್ದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಪ್ರಸಿದ್ಧ ದುಬಾರೆ ಪ್ರವಾಸಿ ತಾಣಕ್ಕೆ ಎಂಟ್ರಿ ನಿಷೇಧಿಸಲಾಗಿದೆ.

ಕೊಡಗಿನಲ್ಲಿ ಮಳೆ ಅಬ್ಬರಕ್ಕೆ ಶಾಲೆ ಹಿಂಬದಿ ಗುಡ್ಡ ಕುಸಿತ: ರಜೆ ಇದ್ದಿದ್ದರಿಂದ ತಪ್ಪಿದ ಭಾರೀ ಅನಾಹುತ
ಕೊಡಗಿನಲ್ಲಿ ಮಳೆ ಅಬ್ಬರಕ್ಕೆ ಶಾಲೆ ಮೇಲೆ ಗುಡ್ಡ ಕುಸಿತ: ರಜೆ ಇದ್ದಿದ್ದರಿಂದ ತಪ್ಪಿದ ಭಾರೀ ಅನಾಹುತ
Follow us on

ಕೊಡಗು, ಜೂನ್​ 27: ಕೊಡಗಿನಲ್ಲಿ ಆರ್ದ್ರಾ ಮಳೆ ಆರ್ಭಟ ಜೋರಾಗಿದೆ. ಪ್ರವಾಹ, ಗುಡ್ಡ ಕುಸಿತ, ಮರ, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಪ್ರವಾಸಿತಾಣಗಳಿಗೂ ನಿರ್ಬಂಧ ವಿಧಿಸಲಾಗಿದೆ. ಜಿಲ್ಲೆಯಲ್ಲಿ ಮಳೆಯ (Rain) ಅಬ್ಬರ ಮುಂದುವರೆದಿದ್ದು, ಭಾರಿ ಮಳೆಯಿಂದ ಸರ್ಕಾರಿ ಶಾಲಾ ಕೊಠಡಿ ಮೇಲೆ ಗುಡ್ಡ ಕುಸಿತ (Hill collapse) ಉಂಟಾಗಿದೆ. ಮಡಿಕೇರಿ ತಾಲೂಕಿನ ಕೊಯನಾಡು ಗ್ರಾಮದಲ್ಲಿ ಘಟನೆ ನಡೆದಿದೆ. ಕಟ್ಟಡದ ಗೋಡೆ ಮತ್ತು ಕಿಟಕಿಗೆ ಹಾನಿಯಾಗಿದೆ. ಇಂದು ಶಾಲೆಗೆ ರಜೆ ಇದ್ದಿದ್ದರಿಂದ ಭಾರೀ ಅನಾಹುತ ತಪ್ಪಿದೆ.

ಜಿಲ್ಲೆಯಾದ್ಯಂತ ಇಂದು ಅಂಗನವಾಡಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ರಜೆ ಘೋಷಿಸಲಾಗಿದೆ. ನಾಳೆ ಮತ್ತು ನಾಡಿದ್ದು ಜಿಲ್ಲೆಯಲ್ಲಿ ಆರೇಂಜ್ ಅಲರ್ಟ್​ ಘೋಷಿಸಲಾಗಿದ್ದು ಗುಡ್ಡ ಪ್ರದೇಶದ ಹಾಗೂ ನದಿ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ದುಬಾರೆ ಪ್ರವಾಸಿ ತಾಣಕ್ಕೆ ಎಂಟ್ರಿ ಬಂದ್

ಮಳೆಯ ಆರ್ಭಟಕ್ಕೆ ಕಾವೇರಿ ನದಿ ತುಂಬಿದೆ. ಹೀಗಾಗಿ ಪ್ರವಾಹ ಹಿನ್ನೆಲೆ ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಬಳಿ ಇರುವ ದುಬಾರೆ ಆನೆ ಶಿಬಿರಕ್ಕೆ ಅರಣ್ಯ ಇಲಾಖೆ ನಿಷೇಧ ಹೇರಿದೆ. ಸುರಕ್ಷತೆ ದೃಷ್ಟಿಯಿಂದ ದುಬಾರೆ ಪ್ರವಾಸಿ ತಾಣಕ್ಕೆ ಪ್ರವೇಶ ನಿಷೇಧಿಸಲಾಗಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಮುಂದುವರಿದ ವರುಣಾರ್ಭಟ; ದುಬಾರೆ ಪ್ರವಾಸಿ ತಾಣಕ್ಕೆ ಎಂಟ್ರಿ ಬಂದ್

ಮಳೆ ಅವಾಂತರಕ್ಕೆ ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಪವಿತ್ರ ಸ್ನಾನ ಘಟ್ಟ ಜಲಾವೃತವಾಗಿ ಭಕ್ತರು ಪರದಾಡುವಂತಾಗಿದೆ. ಸ್ನಾನಘಟ್ಟದ ಮುಖ್ಯ ದ್ವಾರದವೆರಗೂ
ನೀರಿನ ಮಟ್ಟ ಏರಿಕೆಯಾಗಿದ್ದು ದ್ವಾರದಲ್ಲೇ ಪಿಂಡ ಪ್ರಧಾನ ಮಾಡುವ ಸಂದರ್ಭ ಒದಗಿ ಬಂದಿದೆ. ಇನ್ನು ಭಾಗಮಂಡಲ ನಾಪೋಕ್ಲು ರಸ್ತೆಯ ಮೇಲೆ ಪ್ರವಾಹ ಬಂದಿದೆ. ಭಾಗಮಂಡಲದಲ್ಲಿ ಪ್ರವಾಹ ಬಂದರೂ
ಸದ್ಯ ನೂತನ ಫ್ಲೈ ಓವರ್ ನಿರ್ಮಾಣವಾಗಿರೋದ್ರಿಂದ ವಾಹನಗಳ ಓಡಾಟಕ್ಕೆ ಯಾವುದೇ ಸಮಸ್ಯೆ ಆಗಿಲ್ಲ.

ಇದನ್ನೂ ಓದಿ: ಕೊಡಗಿನಲ್ಲಿ ಮುಂಗಾರು ಮಳೆ ಆರ್ಭಟ; ಅಪಾಯಕಾರಿ ರಸ್ತೆಯಲ್ಲೇ ವಾಹನಗಳ ಓಡಾಟ

ಮಡಿಕೇರಿ ನಗರದ ತ್ಯಾಗರಾಜ ಕಾಲೋನಿಯಲ್ಲಿ ಮನೆಯ ತಡೆಗೋಡೆ ಕುಸಿದು ಮೂರು ಮನೆಗಳಿಗೆ ಹಾನಿಯಾಗಿದೆ. ಕಳೆದ ರಾತ್ರಿ ಭಾರೀ ಮಳೆಯಿಂದಾಗಿ ಈ ಘಟನೆ ಸಂಭವಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:44 pm, Thu, 27 June 24