
ಬೆಂಗಳೂರು, ಮಾರ್ಚ್ 17: ರಾಜ್ಯದಲ್ಲಿ ಗ್ಯಾಸ್ಗಾಗಿ ದೊಡ್ಡ ಸಂಕಷ್ಟವೇ ಎದುರಾಗಿದ್ದರೆ, ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಗೃಹಬಳಕೆ ಗ್ಯಾಸ್ ಸಿಲಿಂಡರ್ಗಳನ್ನ (Gas cylinder) ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯದ ಹಲವೆಡೆ ಕಳ್ಳಾಟ ಆಡುತ್ತಿದ್ದವರಿಗೆ ಇದೀಗ ಪೊಲೀರು ಬಿಸಿಮುಟ್ಟಿಸಿದ್ದು ಜೊತೆಗೆ ನೂರಾರು ಗ್ಯಾಸ್ ಸಿಲಿಂಡರ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇರಾನ್-ಇಸ್ರೇಲ್, ಅಮೆರಿಕ ಯುದ್ಧದಿಂದ ಭಾರತದಲ್ಲಿ ಅಡುಗೆ ಅನಿಲ ಸಮಸ್ಯೆ ತಲೆದೋರಿದ್ದು, ಕರುನಾಡಿನಲ್ಲೂ ಸಂಕಷ್ಟ ಇದೆ. ಇಂಥಾ ಹೊತ್ತಲ್ಲೇ ಬೀದರ್ನಲ್ಲಿ ಅಕ್ರಮವಾಗಿ ಗ್ಯಾಸ್ ದಂಧೆ ನಡೆದಿತ್ತು. ಬೀದರ್ ತಾಲೂಕಿನ ಜನವಾಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗ್ಯಾಸ್ ದಂಧೆ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿದ ಪೊಲೀಸರು 23 ತುಂಬಿದ ಹಾಗೂ 82 ಖಾಲಿ ಸಿಲಿಂಡರ್ ಸೇರಿದಂತೆ 105 ಗೃಹಬಳಕೆ ಸಿಲಿಂಡರ್ ಸೀಜ್ ಮಾಡಿದ್ದಾರೆ.
ಇದನ್ನೂ ಓದಿ: ಕೋಲಾರ: ಹೋಟೆಲ್, ಬೇಕರಿಗಳಲ್ಲಿ ಅಕ್ರಮವಾಗಿ ಬಳಕೆ ಮಾಡುತ್ತಿದ್ದ 21 ಗೃಹಬಳಕೆ ಸಿಲಿಂಡರ್ ವಶಕ್ಕೆ
ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಂಗ್ರಹಿಸಿಟ್ಟದ್ದ ದಂಧೆಕೋರರು, ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು. ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಂಗ್ರಹಿಸಿಡಲಾಗಿತ್ತು. ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 20 ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇದೇ ರೀತಿಯಾಗಿ ಯಾದಗಿರಿ ಜಿಲ್ಲೆಯ ಶಹಾಪುರದ ಹೊಟೇಲ್ ಹಾಗೂ ರೆಸ್ಟೋರೆಂಟ್ ಗೃಹಬಳಕೆ ಸಿಲಿಂಡರ್ಗಳು ಪತ್ತೆ ಆಗಿವೆ. ಶಹಾಪುರ ಹಾಗೂ ಭೀಮರಾಯನಗುಡಿಯಲ್ಲಿ 19 ಗೃಹಬಳಕೆ ಸಿಲಿಂಡರ್ ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್: ರಿಟ್ ಅರ್ಜಿ ಸಲ್ಲಿಕೆ
ಹೋಟೆಲ್ಗಳಲ್ಲಿ ಗೃಹಬಳಕೆ ಸಿಲಿಂಡರ್ ಬಳಕೆ ಹಿನ್ನೆಲೆ ಕೆಜಿಎಫ್ ತಹಶೀಲ್ದಾರ್ ಭರತ್ ನೇತೃತ್ವದಲ್ಲಿ ಕೋಲಾರ ಜಿಲ್ಲೆಯ ರಾಬರ್ಟ್ಸನ್ಪೇಟೆ, ಆ್ಯಂಡರ್ಸನ್ಪೇಟೆಯಲ್ಲಿ ದಾಳಿ ಮಾಡಿದ್ದು, 3 ಗೃಹಬಳಕೆ ಸಿಲಿಂಡರ್ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ವೇಳೆ ನಗರಸಭೆ ಆಹಾರ ನಿರೀಕ್ಷಕರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಗದಗ ಜಿಲ್ಲೆಯ ನರಗುಂದದಲ್ಲಿರುವ ಇಂಡಿಯನ್ ಗ್ಯಾಸ್ ಏಜೆನ್ಸಿ ನೋ ಸ್ಟಾಕ್ ಬೋರ್ಡ್ ಹಾಕಿದೆ. ಗ್ರಾಮೀಣ ಭಾಗದಿಂದ ಖಾಲಿ ಸಿಲಿಂಡರ್ ಹೊತ್ತು ಬಂದಿದ್ದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಪ್ಪಳದಲ್ಲೂ ಸಿಲಿಂಡರ್ ಸಿಗದಿದ್ದಕ್ಕೆ ಏಜೆನ್ಸಿ ವಿರುದ್ಧ ಗ್ರಾಹಕರು ಆಕ್ರೋಶ ಹೊರಹಾಕಿದ್ದಾರೆ. ಕೊಪ್ಪಳದ ಗುರುಪ್ರಸಾದ್ ಗ್ಯಾಸ್ ಏಜೆನ್ಸಿ ಮುಂದೆ ವಾಗ್ವಾದ ನಡೆಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.