ಬೆಂಗಳೂರು ಸೇರಿ 8 ಜಿಲ್ಲೆಗಳಲ್ಲಿ ಮುಂದಿನ 3 ದಿನ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ!
ಭಾರತೀಯ ಹವಾಮಾನ ಇಲಾಖೆ (IMD) ವರದಿಯಂತೆ, ಏಪ್ರಿಲ್ ಅಂತ್ಯ ಹಾಗೂ ಮೇ ಮೊದಲ ವಾರದಲ್ಲಿ ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 30 ಮತ್ತು ಮೇ 1 ರಂದು ಅತಿ ಹೆಚ್ಚು ಮಳೆ ನಿರೀಕ್ಷಿಸಲಾಗಿದ್ದು, ಬೆಂಗಳೂರು ಸೇರಿ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಳೆಯಿಂದಾಗಿ ತಾಪಮಾನ ಇಳಿಕೆಯಾಗಿ, ಸೆಖೆಯಿಂದ ಮುಕ್ತಿ ಸಿಗಲಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಬೆಂಗಳೂರು, ಏ.28: ರಾಜ್ಯದ ಅನೇಕ ಕಡೆ ಇಂದು (ಏ.28) ಹಲವು ಕಡೆ ಮಳೆಯಾಗಿದೆ. ಕೆಲವೊಂದು ಕಡೆ ಆಲಿಕಲ್ಲು ಮಳೆಯಾಗಿದೆ. ಇನ್ನು ಕೆಲವು ಭಾಗದಲ್ಲಿ ಬಿಸಿಲಿನ ಬಿಸಿ ಇತ್ತು. ಇದೀಗ ಈ ಬಿಸಿಲಿನ ಬಿಸಿಲಿನ ಬೇಗೆಯಿಂದ ಮುಕ್ತಿ ಸಿಗುವ ಮುನ್ಸೂಚನೆ ಸಿಕ್ಕಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ವರದಿಯ ಪ್ರಕಾರ, ಏಪ್ರಿಲ್ ಅಂತ್ಯ ಹಾಗೂ ಮೇ ತಿಂಗಳ ಆರಂಭದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಏಪ್ರಿಲ್ 30 ಮತ್ತು ಮೇ 1 ರಂದು ಮಳೆ ಅಬ್ಬರ ಹೆಚ್ಚಿರಲಿದೆ. ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಸುಮಾರು 64.5mm ನಿಂದ 115.5mm ವರೆಗೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯು ಈ ಭಾಗಗಳಿಗೆ #ಎಲ್ಲೋಅಲರ್ಟ್ (Yellow Alert) ನೀಡಿದೆ.
ಯಾವ ಜಿಲ್ಲೆಗಳಿಗೆ ಮಳೆ ಸಾಧ್ಯತೆ?
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಮತ್ತು ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 29 ರಂದು ಕೆಲವು ಕಡೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಏಪ್ರಿಲ್ 29 ರವರೆಗೆ ಬಿಸಿಲಿನ ತಾಪ ಹೆಚ್ಚಿದ್ದರೂ, ಏಪ್ರಿಲ್ 30 ರಿಂದ ಮಳೆಯ ಕಾರಣ ತಾಪಮಾನದಲ್ಲಿ ಗಣನೀಯ ಇಳಿಕೆಯಾಗಲಿದೆ. ಮೇ 1 ರ ವೇಳೆಗೆ ವಾತಾವರಣ ಸಾಕಷ್ಟು ತಂಪಾಗಲಿದೆ. ಮಳೆಯ ಮುನ್ಸೂಚನೆ ಇರುವುದರಿಂದ ಗಾಳಿಯಲ್ಲಿ ತೇವಾಂಶ ಹೆಚ್ಚಿರಲಿದೆ. ಇದರಿಂದ ಮಳೆಗೆ ಮುನ್ನ ಸೆಖೆ ಮತ್ತು ಮಳೆಯ ನಂತರ ತಂಪು ಅನುಭವವಾಗಲಿದೆ. ಗುಡುಗು ಸಹಿತ ಮಳೆಯಾಗುವ ಸಂದರ್ಭದಲ್ಲಿ ಗಾಳಿಯ ವೇಗ ಹೆಚ್ಚಿರಲಿದ್ದು, ಗಂಟೆಗೆ 30 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಇದು ರಾಷ್ಟ್ರೀಯ ಹೆದ್ದಾರಿಯೋ ಅಥವಾ ಕೆಸರು ಗದ್ದೆಯೋ? ಶಿರಸಿ-ಹಾವೇರಿ ರಸ್ತೆಯಲ್ಲಿ ನರಕಯಾತನೆ
ಇನ್ನು ಈ ವೇಳೆ ಸಾರ್ವಜನಿಕರಿಗೆ ಕೆಲವೊಂದು ಎಚ್ಚರಿಕೆ ಕ್ರಮಗಳನ್ನು ವಹಿಸಿಕೊಳ್ಳುವಂತೆ ಸಲಹೆಯನ್ನು ನೀಡಲಾಗಿದೆ. ಗುಡುಗು-ಮಿಂಚಿನ ಸಮಯದಲ್ಲಿ ಟಿವಿ, ಫ್ರಿಡ್ಜ್ ಅಂತಹ ವಿದ್ಯುತ್ ಉಪಕರಣಗಳ ಪ್ಲಗ್ ತೆಗೆಯಿರಿ. ಏಪ್ರಿಲ್ 30 ಮತ್ತು ಮೇ 1 ರಂದು ಭಾರಿ ಮಳೆಯಿಂದಾಗಿ ನಗರ ಪ್ರದೇಶಗಳಲ್ಲಿ (ವಿಶೇಷವಾಗಿ ಬೆಂಗಳೂರಿನಲ್ಲಿ) ರಸ್ತೆಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ, ಸಂಚಾರದ ವೇಳೆ ಜಾಗರೂಕರಾಗಿರಿ. ರೈತರು ಕೊಯ್ಲು ಮಾಡಿದ ಬೆಳೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಳ್ಳಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ.

ಬೆಂಗಳೂರು ನಗರದ ಹಲವೆಡೆ ಮಳೆ
ಪೀಣ್ಯ, ರಾಜಗೋಪಾಲನಗರ, ಮಾಗಡಿ ರಸ್ತೆಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬಿರು ಬಿಸಿಲಿನಿಂದ ಬಳಲಿದ್ದ ಬೆಂಗಳೂರು ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಪೀಣ್ಯಾ, ರಾಜಗೋಪಾಲನಗರ, ಮಾಗಡಿ ರೋಡ್ ಬಳಿ ಆಲಿಕಲ್ಲು ಸಹಿತ ಮಳೆಯಾಗಿದೆ.
ಬೆಂಗಳೂರು ಗ್ರಾಮಾಂತರ: ಸಿಡಿಲು ಬಡಿದು ಲಕ್ಷಾಂತರ ಮೌಲ್ಯದ ಹಸು ಸಾವು
ಸಿಡಿಲಿನ ಆರ್ಭಟಕ್ಕೆ ಮೂಕಪ್ರಾಣಿಗಳು ಬಲಿಯಾಗುತ್ತಿವೆ. ಸೋಂಪುರ ಹೋಬಳಿಯ ಮರಳಕುಂಟೆ ಗ್ರಾಮದಲ್ಲಿ ಮರಕ್ಕೆ ಕಟ್ಟಿದ್ದ ಹಸುವಿನ ಮೇಲೆ ಸಿಡಿಲು ಬಡಿದು, ಸ್ಥಳದಲ್ಲೇ ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಮರಳಕುಂಟೆ ಗ್ರಾಮದ ನಿವಾಸಿ, ರೈತ ವೀರಣ್ಣ ಅವರಿಗೆ ಸೇರಿದ ಹಸು ಇದಾಗಿದೆ. ವೀರಣ್ಣ ಅವರು ಎಂದಿನಂತೆ ತಮ್ಮ ಮನೆಯ ಮುಂದಿನ ಹಲಸಿನ ಮರದ ಕೆಳಗೆ ಹಸುವನ್ನು ಕಟ್ಟಿದ್ದರು. ಈ ವೇಳೆ ನಗರದಾದ್ಯಂತ ಗುಡುಗು ಸಹಿತ ಭಾರಿ ಮಳೆ ಸುರಿಯುತ್ತಿತ್ತು. ತೀವ್ರವಾಗಿ ಸಂಭವಿಸಿದ ಸಿಡಿಲಿನ ಹೊಡೆತಕ್ಕೆ ಹಲಸಿನ ಮರದ ಕೆಳಗೆ ಆಶ್ರಯ ಪಡೆದಿದ್ದ ಹಸು ಬಲಿಯಾಗಿದೆ. ಮೃತಪಟ್ಟ ಹಸುವಿನ ಮೌಲ್ಯ ಸುಮಾರು 80 ಸಾವಿರದಿಂದ 1 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ತನ್ನ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಹಸುವನ್ನು ಕಳೆದುಕೊಂಡ ರೈತ ವೀರಣ್ಣ ಇದೀಗ ಆತಂಕ ಮತ್ತು ಆಘಾತಕ್ಕೆ ಒಳಗಾಗಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಮರಳಕುಂಟೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಹಸುವನ್ನು ಪಶುವೈದ್ಯರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬಂದ ನಂತರ ರೈತರಿಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರದ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




