KSRTC ಸೇರಿ ನಾಲ್ಕು ಸಾರಿಗೆ ನಿಗಮಗಳಿಗೆ ಶಕ್ತಿ ತುಂಬಲಿವೆ 5000 ಹೊಸ ಬಸ್!
ಶಕ್ತಿ ಯೋಜನೆಯಿಂದ ಹೆಚ್ಚಾದ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಕರ್ನಾಟಕ ಸರ್ಕಾರ 5,000 ಹೊಸ ಬಸ್ಗಳ ಖರೀದಿಗೆ ಮುಂದಾಗಿದೆ. ಈ ಬಗ್ಗೆ, ಸಾರಿಗೆ ಸಚಿವ ಭೈರತಿ ಸೋಮವಾರ ಮಾಹಿತಿ ನೀಡಿದ್ದಾರೆ. ಮಹಿಳೆಯರಿಗೆ ಉಚಿತ ಶಕ್ತಿ ಸ್ಮಾರ್ಟ್ ಕಾರ್ಡ್ ಹಾಗೂ ಪುರುಷರಿಗೆ ರೀಚಾರ್ಜ್ ಮಾಡಬಹುದಾದ ಸ್ಮಾರ್ಟ್ ಕಾರ್ಡ್ ನೀಡಲು ನಿರ್ಧರಿಸಲಾಗಿದೆ.

ಬೆಂಗಳೂರು, ಜೂನ್ 9: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ (Shakti scheme) ಜಾರಿಯಾದ ಬಳಿಕ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಉಂಟಾಗುತ್ತಿರುವ ಭಾರಿ ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಬಲಪಡಿಸಲು ಕರ್ನಾಟಕ ಸರ್ಕಾರ ಬೃಹತ್ ಯೋಜನೆಯೊಂದನ್ನು ರೂಪಿಸಿದೆ. ರಾಜ್ಯಾದ್ಯಂತ ನಾಲ್ಕೂ ಸಾರಿಗೆ ನಿಗಮಗಳಿಗೆ ಹಂತ-ಹಂತವಾಗಿ ಒಟ್ಟು 5,000 ಹೊಸ ಬಸ್ಗಳನ್ನು ಖರೀದಿಸಿ ಸೇರ್ಪಡೆಗೊಳಿಸಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸೋಮವಾರ ಘೋಷಿಸಿದ್ದಾರೆ.
ಮುಖ್ಯಾಂಶಗಳು
- ಸಾರಿಗೆ ನಿಗಮಗಳಿಗೆ ಸೇರ್ಪಡೆಯಾಗಲಿವೆ 5 ಸಾವಿರ ಹೊಸ ಬಸ್.
- ಮಹಿಳೆಯರಿಗೆ ಉಚಿತ ಶಕ್ತಿ ಸ್ಮಾರ್ಟ್ ಕಾರ್ಡ್.
- ಪುರುಷರಿಗೂ ಮೆಟ್ರೋ ಮಾದರಿ ರೀಚಾರ್ಜ್ ಕಾರ್ಡ್.
4,000 ಎಲೆಕ್ಟ್ರಿಕ್ ಮತ್ತು 1,000 ಸಾಮಾನ್ಯ ಬಸ್ಗಳ ಖರೀದಿ
ಕೆಎಸ್ಆರ್ಟಿಸಿ, ಬಿಎಂಟಿಸಿ, ಕೆಕೆಆರ್ಟಿಸಿ ಮತ್ತು ವಾಯವ್ಯ ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಸಚಿವರು, ಬಸ್ಗಳ ಹಂಚಿಕೆಯ ವಿವರ ನೀಡಿದರು. ಒಟ್ಟು 5,000 ಹೊಸ ಬಸ್ಗಳನ್ನು ಖರೀದಿಸಲಾಗುವುದು. ಈ ಪೈಕಿ 1,000 ಬಸ್ಗಳನ್ನು ರಾಜ್ಯ ಸರ್ಕಾರದ ನಿಧಿಯ ಮೂಲಕ ನೇರವಾಗಿ ಖರೀದಿಸಲಾಗುವುದು. ಇನ್ನುಳಿದ 4,000 ಅತ್ಯಾಧುನಿಕ ಎಲೆಕ್ಟ್ರಿಕ್ (Electric Buses) ಬಸ್ಗಳನ್ನು ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಪಡೆದುಕೊಳ್ಳಲಾಗುವುದು. ಈ ಎಲ್ಲಾ ಬಸ್ಗಳನ್ನು ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುವುದು ಎಂದರು.
ಮಹಿಳೆಯರಿಗೆ ಉಚಿತ ಸ್ಮಾರ್ಟ್ ಕಾರ್ಡ್
ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ರಾಜ್ಯದಲ್ಲಿ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 40 ರಷ್ಟು ಹೆಚ್ಚಳ ದಾಖಲಾಗಿದೆ. ಈ ಯೋಜನೆಯನ್ನು ಮತ್ತಷ್ಟು ವ್ಯವಸ್ಥಿತವಾಗಿ ಜಾರಿಗೊಳಿಸಲು ಮತ್ತು ಪ್ರಯಾಣಿಕರ ನಿಖರ ಟ್ರ್ಯಾಕಿಂಗ್ಗಾಗಿ ಮೂರು ಕೋಟಿಗೂ ಅಧಿಕ ಮಹಿಳಾ ಫಲಾನುಭವಿಗಳಿಗೆ ಸಂಪೂರ್ಣ ಉಚಿತವಾಗಿ ‘ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಿಸಲು ಸರ್ಕಾರ ನಿರ್ಧರಿಸಿದೆ. ಈ ಕಾರ್ಡ್ಗಳ ತಯಾರಿಕೆಗಾಗಿ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಮತ್ತು ರಾಜ್ಯಾದ್ಯಂತ ಜಾರಿಗೊಳಿಸುವ ಮುನ್ನ ಪ್ರಾಯೋಗಿಕ ಯೋಜನೆ (Pilot Project) ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಪುರುಷರಿಗೆ ಮೆಟ್ರೋ ಮಾದರಿ ರಿಚಾರ್ಜ್ ಕಾರ್ಡ್
ಪುರುಷ ಪ್ರಯಾಣಿಕರಿಗೂ ಸಹ ನಮ್ಮ ಮೆಟ್ರೋ ಮಾದರಿಯಲ್ಲಿಯೇ ನಿಗದಿತ ಶುಲ್ಕ ಪಾವತಿಸಿ ರೀಚಾರ್ಜ್ ಮಾಡಿಕೊಳ್ಳಬಹುದಾದ ಸ್ಮಾರ್ಟ್ ಕಾರ್ಡ್ಗಳನ್ನು ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಮುಜರಾಯಿ ದೇಗುಲಗಳ ಆದಾಯಕ್ಕೆ ಬೂಸ್ಟ್ ಕೊಟ್ಟ ಶಕ್ತಿ ಯೋಜನೆ: ಭಕ್ತರ ಜೊತೆ ಕಾಣಿಕೆ ಸಂಗ್ರಹವೂ ಹೆಚ್ಚಳ
ಪ್ರಯಾಣಿಕರ, ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆಗೆ ಸರ್ಕಾರ ಮೊದಲ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಟ್ಯಾಕ್ಸಿಗಳು ಸೇರಿದಂತೆ ಎಲ್ಲಾ ವಾಣಿಜ್ಯ ಪ್ರಯಾಣಿಕರ ವಾಹನಗಳಲ್ಲಿ ‘ವೆಹಿಕಲ್ ಲೊಕೇಷನ್ ಟ್ರಾಕಿಂಗ್ ಸಿಸ್ಟಂ (VLTS)’ ಅಳವಡಿಕೆಯನ್ನು ಚುರುಕುಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ವಾಹನಗಳಿಗೆ ಈ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇನ್ನುಳಿದ 4 ರಿಂದ 5 ಲಕ್ಷ ವಾಹನಗಳಿಗೆ ಮುಂದಿನ 3-4 ತಿಂಗಳ ಒಳಗಾಗಿ ವಿಎಲ್ಟಿಎಸ್ ಅಳವಡಿಕೆಯನ್ನು ಪೂರ್ಣಗೊಳಿಸಲಾಗುವುದು ಎಂದು ಬೈರತಿ ಸುರೇಶ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




