AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲಿ ಧರ್ಮಾಧಿಕಾರಿಯ ಹೊಟ್ಟೆ ಬಗೆದ ದುಷ್ಕರ್ಮಿಗಳು: ಕೊಲೆಗೆ ಕಾರಣವಾಯ್ತಾ ಮಾಟ, ಮಂತ್ರ?

ಹುಬ್ಬಳ್ಳಿಯಲ್ಲಿ ನಿನ್ನೆ ಸಂಜೆ ಮತ್ತೆ ನೆತ್ತರು ಹರದಿದೆ. ನವನಗರದ ಈಶ್ವರ ನಗರದಲ್ಲಿರುವ ದಕ್ಷಿಣ ವೈಷ್ಣೋದೇವಿ ಮಂದಿರದ 63 ವರ್ಷದ ಧರ್ಮಾಧಿಕಾರಿ ದೇವೇಂದ್ರಪ್ಪಜ್ಜರನ್ನು ಚಾಕುವಿನಿಂದ ಹೊಟ್ಟೆ ಭಾಗಕ್ಕೆ ಇರಿದು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ‌. ಸದ್ಯ ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಧರ್ಮಾಧಿಕಾರಿಯ ಹೊಟ್ಟೆ ಬಗೆದ ದುಷ್ಕರ್ಮಿಗಳು: ಕೊಲೆಗೆ ಕಾರಣವಾಯ್ತಾ ಮಾಟ, ಮಂತ್ರ?
ಹುಬ್ಬಳ್ಳಿಯಲ್ಲಿ ಧರ್ಮಾಧಿಕಾರಿಯ ಹೊಟ್ಟೆ ಬಗೆದ ದುಷ್ಕರ್ಮಿಗಳು: ಕೊಲೆಗೆ ಕಾರಣವಾಯ್ತಾ ಮಾಟ, ಮಂತ್ರ?
Follow us
ಶಿವಕುಮಾರ್ ಪತ್ತಾರ್
| Updated By: ಗಂಗಾಧರ​ ಬ. ಸಾಬೋಜಿ

Updated on:Jul 22, 2024 | 6:51 PM

ಹುಬ್ಬಳ್ಳಿ, ಜುಲೈ 22: ಕಳೆದ ಕೆಲ ದಿನಗಳಿಂದ ಶಾಂತವಾಗಿದ್ದ ವಾಣಿಜ್ಯ ನಗರಿಯಲ್ಲಿ (Hubballi) ಮತ್ತೆ ನೆತ್ತರು ಹರಿದಿದೆ. ದೇವಸ್ಥಾನವೊಂದರ ಧರ್ಮಾಧಿಕಾರಿಯನ್ನು ದೇವಸ್ಥಾನದ ಹಿಂದಿನ ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ (murder) ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಹತ್ಯೆಗೆ ಸಾಕಷ್ಟು ಅಂತೆ-ಕಂತೆಗಳು ಹುಟ್ಟಿಕೊಳ್ಳುತ್ತಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಕಸರತ್ತು ನಡೆಸುತ್ತಿದ್ದಾರೆ. ನೇಹಾ ,‌ ಅಂಜಲಿ ಹತ್ಯೆ ಬಳಿಕ ಸುಧಾರಿಸಿಕೊಳ್ಳುತ್ತಿದ್ದ ಹುಬ್ಬಳ್ಳಿ ಮಂದಿ, ಧರ್ಮಾಧಿಕಾರಿ ಹತ್ಯೆಯಿಂದ ಮತ್ತಷ್ಟು ಆತಂಕದಲ್ಲಿದ್ದಾರೆ.

ನವನಗರದ ಈಶ್ವರ ನಗರದಲ್ಲಿರುವ ದಕ್ಷಿಣ ವೈಷ್ಣೋದೇವಿ ಮಂದಿರದ 63 ವರ್ಷದ ಧರ್ಮಾಧಿಕಾರಿ ದೇವೇಂದ್ರಪ್ಪಜ್ಜರನ್ನು ಕೊಲೆ ಆದ ವ್ಯಕ್ತಿ. ಮೂಲತಃ ಕುಸುಗಲ್ಲ ಗ್ರಾಮದ ನಿವಾಸಿಯಾಗಿರುವ ದೇವೇಂದ್ರಪ್ಪ, ಈಶ್ವರಿನಗರದಲ್ಲಿ ವೈಷ್ಣದೇವಿ ದೇವಸ್ಥಾನ ಕಟ್ಟಿ ಬೆಳೆಸಿದ್ದರು. ಹೀಗಾಗಿ ಸದ್ಯ ವಿದ್ಯಾನಗರದಲ್ಲಿ ವಾಸವಿದ್ದರು.

ಕೊಲೆಗೆ ಕಾರಣವಾಯ್ತಾ ಮಾಟ, ಮಂತ್ರ? 

ಮೃತ ದೇವೇಂದ್ರಪ್ಪ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಸಂಬಂಧಿ ಕೂಡ ಹೌದು. ದೇವೆಂದ್ರಪ್ಪಜ್ಜ ಹೆಚ್ಚು ಕಡಿಮೆ 40 ವರ್ಷಗಳಿಂದ ಧರ್ಮಾಧಿಕಾರಿಯಾಗಿ, ಅರ್ಚಕನಾಗಿ ಕೆಲಸ ಮಾಡ್ತಿದ್ರು. ಮಠಕ್ಕೆ ಬಂದ ಭಕ್ತರ ಕಷ್ಟ ಪರಿಹರಿಸಲು ಹೇಳಿಕೆಗಳನ್ನು ಹೇಳ್ತಿದ್ದರು. ಜೊತೆಗೆ ಅಮವಾಸ್ಯೆ, ಹುಣ್ಣಿಮೆಗೆ ಮಾಟ, ಮಂತ್ರ ಸೇರಿದಂತೆ ಶುದ್ರ ಪೂಜೆ ಸಹ ಮಾಡುತ್ತಿದ್ದರು ಎನ್ನಲಾಗಿದೆ. ಇದರ ಜೊತೆಗೆ ರಿಯಲ್ ಎಸ್ಟೇಟ್ ಸಹ ನಡೆಸುತ್ತಿದ್ದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ದುಷ್ಕರ್ಮಿಗಳಿಂದ ಚಾಕುವಿನಿಂದ ಇರಿದು ಪೂಜಾರಿಯ ಬರ್ಬರ ಕೊಲೆ

ಕುಸುಗಲ್ಲ ಗ್ರಾಮದ ಜಮೀನು ವಿಚಾರದಲ್ಲಿ ಕೆಲವು ವರ್ಷಗಳ ಹಿಂದೆ ಗಲಾಟೆ ಮಾಡಿಕೊಂಡಿದ್ದರು. ಇದಾದ ಮೇಲೆ ನ್ಯಾಯಾಲಯದಲ್ಲಿ ಕೇಸ್ ಸಹ ಗೆದ್ದಿದ್ದರು. ಇದರ ನಡುವೆ 2022 ರಲ್ಲಿ ವಿದ್ಯಾನಗರದ ಮನೆ ಮುಂದೆಯೇ ದೇವೇಂದ್ರಪ್ಪ ಕೊಲೆ ಯತ್ನ ನಡೆದಿತ್ತು. ಆದರೆ ದೇವೇಂದ್ರಪ್ಪ ಎಲ್ಲರ ಜೊತೆಗೆ ಚೆನ್ನಾಗಿದ್ದರು, ಯಾರು ಶತ್ರುಗಳು ಇರಲಿಲ್ಲ. ಆದರೆ ಯಾಕೆ ಕೊಲೆಯಾಗಿದೆ ಎಂದು ಗೊತ್ತಿಲ್ಲ ಎನ್ನುವುದು ಕುಟುಂಬಸ್ಥರ ಮಾತಾಗಿದೆ.

ಆರೋಪಿ ಪತ್ತೆಗಾಗಿ 8 ತಂಡ ರಚನೆ

ಮೃತ ದೇವೇಂದ್ರಪ್ಪ ಪುತ್ರ ವಿದೇಶದಲ್ಲಿ ಇರುವ ಹಿನ್ನೆಲೆ ಇಂದು ಸಂಜೆ ವೇಳೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ನಾಳೆ ಕುಸುಗಲ್ಲ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಬೇಕೆಂದು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಇದರ ನಡುವೆ ಪರಾರಿಯಾಗಿರುವ ಆರೋಪಿ ಪತ್ತೆಗಾಗಿ ಪೊಲೀಸ್ ಇಲಾಖೆ ಫುಲ್ ಆಕ್ಟಿವ್ ಆಗಿದೆ. ಕೊಲೆಗಾರ ಮತ್ತು ಹಿಂದಿನ ರಹಸ್ಯ ಬೇಧಿಸಲು ಸ್ವತಃ ಕಮಿಷನರ್ ಎನ್ ಶಶಿಕುಮಾರ್ ಫೀಲ್ಡ್ಗಿಳಿದ್ದಾರೆ.‌ ಜೊತೆಗೆ ಏಂಟು ತಂಡಗಳನ್ನು ರಚನೆ ಮಾಡಲಾಗಿದೆ.

ಇದನ್ನೂ ಓದಿ: ರಾಮನಗರ: ಗೀಸರ್‌ನಿಂದ ವಿಷಾನಿಲ ಸೋರಿಕೆ, ಉಸಿರುಗಟ್ಟಿ ತಾಯಿ, ಮಗ ಸಾವು

ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಕಮಿಷನರ್ ಕುಟುಂಬಸ್ಥರ ಹೇಳಿಕೆ ಪಡೆದ್ದಾರೆ. ಮತ್ತೊಂದು ಕಡೆ ವೈಷ್ಣವಿ ದೇವಸ್ಥಾನ ಬಳಿ ಪೊಲೀಸ್ ಭದ್ರತೆ ಹಾಕಲಾಗಿದೆ. ಇದಲ್ಲದೆ ಕಳೆದ ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಯ‌ ಗೋಕುಲ ರಸ್ತೆಯಲ್ಲಿ ಮಠ ಕಟ್ಟೋ ವಿಚಾರಕ್ಕೆ ಗಲಾಟೆಯಾಗಿದೆಯಾ ಅನ್ನೋ ಮಾಹಿತಿಯೂ ಇದೆ. ಆ ವಿಚಾರದಲ್ಲೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದುವರೆಗೂ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಧರ್ಮದರ್ಶಿ ದೇವೇಂದ್ರಪ್ಪ ಹತ್ಯೆ ಹಲವಾರು ಆಯಾಮಗಳನ್ನು ಪಡೆದುಕೊಂಡಿದೆ. ಪರಾರಿಯಾಗಿರುವ ಆರೋಪಿ ಪೊಲೀಸರ‌ ನಿದ್ದೆಗೆಡಿಸಿದ್ರೆ, ಮತ್ತೊಂದು ಕಡೆ ನಿಲ್ಲದ ಕೊಲೆ ಪ್ರಕರಣಗಳು ಹುಬ್ಬಳ್ಳಿ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:51 pm, Mon, 22 July 24