
ಬೆಂಗಳೂರು, ಮಾರ್ಚ್ 19: ಯುಗಾದಿ (Ugadi) ಹಬ್ಬದ ಸಮಯದಲ್ಲೇ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಆಗಿರುವ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತಕ್ಕೂ (KMF) ಸಂಕಷ್ಟ ಎದುರಾಗಿದೆ. ಇರಾನ್-ಇಸ್ರೇಲ್ ಸೇನಾ ಸಂಘರ್ಷದ ಪರಿಣಾಮವಾಗಿ ದೇಶಾದ್ಯಂತ ಉಂಟಾಗಿರುವ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಕೊರತೆಯ ಪರಿಣಾಮ ಇದೀಗ ನಂದಿನಿ ಉತ್ಪನ್ನಗಳ (Nandini Products) ಮೇಲೂ ತಟ್ಟತೊಡಗಿದೆ. ಕಳೆದ ಕೆಲ ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ಸರಬರಾಜು ವ್ಯತ್ಯಯಗೊಂಡಿರುವುದರಿಂದ ಕೆಎಂಎಫ್ ಉತ್ಪಾದನಾ ಘಟಕಗಳು ಒತ್ತಡಕ್ಕೆ ಸಿಲುಕಿವೆ.
ಉತ್ಪನ್ನಗಳ ತಯಾರಿಗೆ ಕೆಎಂಎಫ್ ಸಾಮಾನ್ಯವಾಗಿ ಪ್ರತಿ ತಿಂಗಳು ಸುಮಾರು 450 ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳನ್ನು ಬಳಸುತ್ತದೆ. ಇತ್ತೀಚೆಗೆ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್ಗಳು ಲಭ್ಯವಾಗುತ್ತಿಲ್ಲ.
ಸದ್ಯ ಲಭ್ಯವಿರುವ ಗ್ಯಾಸ್ ಸಂಗ್ರಹವು ಇನ್ನೆರಡು ದಿನಗಳಿಗೆ ಮಾತ್ರ ಸಾಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 20ರ ಒಳಗೆ ಕಮರ್ಷಿಯಲ್ ಎಲ್ಪಿಜಿ ಪೂರೈಕೆ ಆಗದಿದ್ದರೆ, ನಂದಿನಿ ಬ್ರ್ಯಾಂಡ್ನ ಸಿಹಿ, ಖಾರದ ತಿಂಡಿ ಸೇರಿದಂತೆ ಹಲವು ಉತ್ಪನ್ನಗಳ ತಯಾರಿಕೆ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ, ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ತುರ್ತು ಕ್ರಮ ಕೈಗೊಳ್ಳುವಂತೆ ಕೆಎಂಎಫ್ ಮನವಿ ಮಾಡಿದೆ. ಅಗತ್ಯ ಗ್ಯಾಸ್ ಪೂರೈಕೆ ಆಗದಿದ್ದರೆ, ಮುಂದಿನ ದಿನಗಳಲ್ಲಿ ನಂದಿನಿ ಉತ್ಪನ್ನಗಳನ್ನು ಸೀಮಿತ ಪ್ರಮಾಣದಲ್ಲೇ ಉತ್ಪಾದಿಸುವ ಅನಿವಾರ್ಯತೆ ಎದುರಾಗಬಹುದು ಎಂದು ತಿಳಿಸಲಾಗಿದೆ.
ಕೆಎಂಎಫ್ ದೇಶದ ಎರಡನೇ ಅತಿದೊಡ್ಡ ಹಾಲು ಸಹಕಾರ ಒಕ್ಕೂಟವಾಗಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ಕೆಎಂಎಫ್ನ ವಾರ್ಷಿಕ ವಹಿವಾಟು ಸುಮಾರು 25,000 ಕೋಟಿ ರೂಪಾಯಿಗಳಿಂದ 30,000 ಕೋಟಿ ರೂಪಾಯಿಗಳವರೆಗಿದೆ. ದಿನವೊಂದಕ್ಕೆ ಸರಾಸರಿ 85 ಲಕ್ಷದಿಂದ 90 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಅದರಲ್ಲಿ ಸುಮಾರು 40 ಲಕ್ಷ ಲೀಟರ್ಗಿಂತಲೂ ಅಧಿಕ ಹಾಲು ಪ್ರತಿದಿನ ಮಾರಾಟವಾಗುತ್ತಿದೆ. ಉಳಿದ ಹಾಲನ್ನು ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆ ಮತ್ತು ನಂದಿನಿ ಸ್ವೀಟ್ಸ್ಗಳಂತಹ ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತದೆ. ಕರ್ನಾಟಕವಷ್ಟೇ ಅಲ್ಲದೆ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಗೋವಾ ರಾಜ್ಯಗಳಲ್ಲೂ ಕೆಎಂಎಫ್ ಬಲವಾದ ಮಾರುಕಟ್ಟೆ ಹೊಂದಿದೆ.
ಇದನ್ನೂ ಓದಿ: ಈರುಳ್ಳಿ ಬೆಲೆ ಕುಸಿತ: ರೈತರು ಈರುಳ್ಳಿಯ ಜತೆಗೆ ಚೀಲವನ್ನೂ ಉಚಿತವಾಗಿ ಕೊಟ್ಟು ಹೋಗಬೇಕಾದ ದುಸ್ಥಿತಿ
ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಕೇವಲ ಹಾಲು ಮಾತ್ರವಲ್ಲದೆ ಸುಮಾರು 140ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಪ್ರತಿದಿನ ಲಕ್ಷಾಂತರ ಗ್ರಾಹಕರು ನಂದಿನಿ ಹಾಲಿನ ಕೇಂದ್ರಗಳ ಮೂಲಕ ವಹಿವಾಟು ನಡೆಸುತ್ತಾರೆ. ಕೇವಲ ದೇಶೀಯ ಮಾರುಕಟ್ಟೆಯಲ್ಲದೆ, ನಂದಿನಿ ಉತ್ಪನ್ನಗಳು ಅರಬ್ ರಾಷ್ಟ್ರಗಳು, ಸಿಂಗಾಪುರ ಮತ್ತು ಅಮೆರಿಕದಂತಹ ದೇಶಗಳಿಗೂ ರಫ್ತಾಗುತ್ತಿವೆ. ಯುಗಾದಿ, ದೀಪಾವಳಿಯಂತಹ ಹಬ್ಬದ ಸಮಯದಲ್ಲಿ ಸಿಹಿ ತಿಂಡಿಗಳ ಮಾರಾಟವು ಗಣನೀಯವಾಗಿ ಏರಿಕೆಯಾಗಿ, ದಿನದ ವಹಿವಾಟು ಕೋಟ್ಯಂತರ ರೂಪಾಯಿಗಳಷ್ಟು ಹೆಚ್ಚಾಗುತ್ತದೆ. ಪ್ರಸ್ತುತ ಎದುರಾಗಿರುವ ಗ್ಯಾಸ್ ಅಭಾವವು ಇಂತಹ ಬೃಹತ್ ವಹಿವಾಟಿನ ಮೇಲೆ ನೇರ ಪರಿಣಾಮ ಬೀರುವ ಆತಂಕ ಎದುರಾಗಿದೆ.
Published On - 9:37 am, Thu, 19 March 26