
ಕೊಡಗು, ಏಪ್ರಿಲ್ 13: ಒಂದು ಕಾಲದಲ್ಲಿ ಸಾವಿರಾರು ಎಕರೆ ಕಾಫಿ ತೋಟದ (Coffee Estates) ಒಡೆಯರಾಗಿ, ಕಾರು-ಬಂಗಲೆಗಳೊಂದಿಗೆ ರಾಜವೈಭೋಗದ ಜೀವನ ನಡೆಸುತ್ತಿದ್ದ ಕೊಡಗಿನ ಬೆಳೆಗಾರರು ಇಂದು ಅಕ್ಷರಶಃ ಬೀದಿಗೆ ಬೀಳುವ ಆತಂಕ ಎದುರಿಸುತ್ತಿದ್ದಾರೆ. ಸರಿಸುಮಾರು 3000 ಎಕರೆಗೂ ಅಧಿಕ ವಿಸ್ತೀರ್ಣದ ಕಾಫಿ ಎಸ್ಟೇಟ್ಗಳು ಮಾಲೀಕರ ಕೈತಪ್ಪಿ ಹೋಗುವ ಹಂತಕ್ಕೆ ತಲುಪಿವೆ. ಕಮರ್ಷಿಯಲ್ ಬ್ಯಾಂಕ್ಗಳಲ್ಲಿ ತೋಟವನ್ನು ಅಡವಿಟ್ಟು ಪಡೆದ ಸಾಲ (Debt) ಇದೀಗ ಬೆಳೆಗಾರರ ಪಾಲಿಗೆ ಉರುಳಾಗಿ ಪರಿಣಮಿಸಿದೆ.
ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಯ ಸುಮಾರು 6000 ಕಾಫಿ ಬೆಳೆಗಾರರು ಕಳೆದ 10-15 ವರ್ಷಗಳಲ್ಲಿ ವಿವಿಧ ಬ್ಯಾಂಕ್ಗಳಿಂದ ಲಕ್ಷಾಂತರ ರೂ ಸಾಲ ಪಡೆದಿದ್ದಾರೆ. 10 ವರ್ಷಗಳ ಹಿಂದೆ ಕಾಫಿ ತೋಟದ ನಿರ್ವಹಣೆ ಅಸಾಧ್ಯವಾಗಿತ್ತು. ಕಾಫಿ ಬೆಲೆ ಪಾತಾಳಕ್ಕೆ ಕುಸಿದಿತ್ತು. ತೋಟವನ್ನು ನಿರ್ವಹಣೆ ಮಾಡಲೇಬೇಕಿತ್ತು. ಹಾಗಾಗಿ ಮೂರು ಜಿಲ್ಲೆಯ ಸಾವಿರಾರು ರೈತರು ವಿವಿಧ ಬ್ಯಾಂಕ್ಗಳಿಂದ ಸುಮಾರು 500 ಕೋಟಿ ರೂ ಸಾಲ ಪಡೆದಿದ್ದಾರೆ.
ಇದನ್ನೂ ಓದಿ: ಎಂಎಲ್ಸಿ ಮನೆಯಲ್ಲೇ ಕಾಫಿ ಕದಿಯುತ್ತಿದ್ದಿವನು ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿದ ನೋಡಿ!
ಕೆಲವರು ಬಡ್ಡಿ ಸಮೇತ ಅಸಲು ಕಟ್ಟಿದ್ದರೆ, ಬಹುತೇಕ ಮಂದಿ ಸಾಲ ಮರು ಪಾವತಿ ಮಾಡಲೇ ಇಲ್ಲ. ಇದು ಕಳೆದ ಐದು-ಆರು ವರ್ಷಗಳಿಂದ ವಿವಿಧ ಹಂತಗಳಲ್ಲಿ ಕಾನೂನು ಹೋರಾಟ ನಡೆದು 2021ರಲ್ಲಿ ಕರ್ನಾಟಕ ಹೈಕೋರ್ಟ್ ಕಾಫಿ, ವಾಣಿಜ್ಯ ಬೆಳೆ ಆದ್ದರಿಂದ ಅದು ಸರ್ಫೇಸಿ ಕಾಯ್ದೆಯಡಿ ಬರುತ್ತದೆ ಎಂದು ತೀರ್ಪು ನೀಡಿತ್ತು. ಹಾಗಾಗಿ ಈ ಕಾಯ್ದೆ ಅನುಷ್ಠಾನಕ್ಕೆ ಬ್ಯಾಂಕ್ಗಳು ಮುಂದಾಗಿದ್ದವು. ಈ ಸಂದರ್ಭ 2023ರಲ್ಲಿ ಕಾಫಿ ಬೆಳೆಗಾರರ ನಿಯೋಗ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನ ಭೇಟಿ ಮಾಡಿ ಪರಿಹಾರ ಕೋರಿತ್ತು.
ಈ ಹಿನ್ನೆಲೆಯಲ್ಲಿ ಸೀತಾರಾಮನ್ 2025ರ ಜೂನ್ 30ರ ಒಳಗೆ ಸಾಲದ ಕನಿಷ್ಟ ಬಡ್ಡಿ ಪಾವತಿಸುವಂತೆ ಒನ್ ಟೈಮ್ ಸೆಟಲ್ಮೆಂಟ್ ಸೂಚಿಸಿದ್ದರು. ಅದರಂತೆ ಒಂದಷ್ಟು ಬೆಳೆಗಾರರು ಕನಿಷ್ಟ ಬಡ್ಡಿ ಪಾವತಿಸಿ ಸಂಕಷ್ಟದಿಂದ ತಾತ್ಕಾಳಿಕವಾಗಿ ಪಾರಾಗಿದ್ದರು. ಆದರೆ ಈ ತಾತ್ಕಾಲಿಕ ಪರಿಹಾರವನ್ನ ಸದ್ಬಳಕೆ ಮಾಡಿಕೊಳ್ಳದ ಬಹುತೇಕ ಸಾಲಗಾರರು ಇನ್ನೂ ಅಸಲು, ಬಡ್ಡಿ ಎಲ್ಲಾ ಉಳಿಸಿಕೊಂಡಿದ್ದಾರೆ. ಇದೀಗ ಡೆಡ್ ಲೈನ್ ಮುಗಿದಿರುವುದರಿಂದ ಬ್ಯಾಂಕ್ಗಳು ಕಾಫಿ ತೋಟಗಳನ್ನ ವಶಪಡಿಸಿಕೊಂಡು ಹರಾಜು ಹಾಕಲು ಸಿದ್ಧತೆ ನಡೆಸಿವೆ. ಆನ್ಲೈನ್ನಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಿದೆ.
ಇದನ್ನೂ ಓದಿ: ಕರ್ನಾಟಕ ವಾಯು ಗುಣಮಟ್ಟ: ಮಲೆನಾಡಿನಲ್ಲಿ ಶುದ್ಧ ಗಾಳಿ! ನಿಮ್ಮ ನಗರದ AQI ಎಷ್ಟಿದೆ?
ಸದ್ಯ ಕಾಫಿ ಬೆಳೆಗಾರರಿಗೆ ತಮ್ಮ ಎಸ್ಟೇಟ್ ಉಳಿಸಿಕೊಳ್ಳುವ ಎಲ್ಲಾ ಮಾರ್ಗಗಳು ಮುಚ್ಚಿಹೋಗಿವೆ. ಮುಂದೇನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ. ಲಕ್ಷಗಳ ಸಾಲಕ್ಕೆ ಬ್ಯಾಂಕ್ಗಳು ಕೋಟ್ಯಂತರ ರೂ ಬೆಲೆ ಬಾಳುವ ಇಡೀ ಎಸ್ಟೇಟ್ ಅನ್ನೇ ಹರಾಜು ಹಾಕುವ ಮಟ್ಟಕ್ಕೆ ಹೋಗುತ್ತಿವೆ ಎಂದು ಬೆಳೆಗಾರರು ಆರೋಪಿಸಿದ್ದಾರೆ. ಹಾಗಾಗಿ ಸಂತ್ರಸ್ತ ಬೆಳೆಗಾರರು ತಕ್ಷಣವೇ ಕಾಫಿ ಬೆಳೆಗಾರರ ವಿವಿಧ ಸಂಘಟನೆಗಳನ್ನ ಸಂಪರ್ಕಿಸಿ ಸರ್ಕಾರದ ಮಟ್ಟದಲ್ಲಿ ಪರಿಹಾರ ಪಡೆಯಲು ಪ್ರಯತ್ನಿಸುವಂತೆ ಸಲಹೆ ನೀಡಲಾಗಿದೆ.
ನೆರೆರಾಜ್ಯ ಕೇರಳದಲ್ಲಿ ಕಾಫಿಯನ್ನ ಕೃಷಿ ಬೆಳೆ ಎಂದು ಪರಿಗಣಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಕಾಫಿಯನ್ನ ವಾಣಿಜ್ಯ ಬೆಳೆ ಎಂದು ಪರಿಗಣಿಸಲಾಗಿದೆ. ಹಾಗಾಗಿ ಈ ಸಮಸ್ಯೆ ಎದುರಾಗಿದೆ ಎನ್ನುತ್ತಾರೆ ಕೃಷಿಕರು. ರಾಜ್ಯ ಸರ್ಕಾರ ಕಂದಾಯ ಕಾನೂನಿಗೆ ತಿದ್ದುಪಡಿ ಮಾಡಿ ಕಾಫಿಯನ್ನ ಕೃಷಿಯಾಧಾರಿತ ಬೆಳೆ ಎಂದು ಪರಿವರ್ತಿಸುವಂತೆ ಮನವಿ ಮಾಡಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಈ ಸಮಸ್ಯೆ ಪರಿಹಾರಕ್ಕೆ ಹಲವು ಪ್ರಯತ್ನ ನಡೆಸಿದ್ದಾರೆ. ಆದರೆ ಸದ್ಯ ಕಾನೂನು ತಿದ್ದುಪಡಿಯೊಂದೇ ಈ ಕಾಫಿ ತೋಟಗಳನ್ನ ಉಳಿಸಬಹುದು ಎನ್ನುತ್ತಾರೆ ತಜ್ಞರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.