
ಮಡಿಕೇರಿ, ಮೇ 19: ಕುಶಾಲನಗರದ ದುಬಾರೆ ಕ್ಯಾಂಪ್ನಲ್ಲಿ ಕಾದಾಟದ ವೇಳೆ ಆನೆ ಕಂಜನ್ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಆನೆ ಮಾರ್ತಾಂಡ ಚಿಕಿತ್ಸೆ ಫಲಿಸದೆ ಇಂದು (ಮೇ 19 ಮೃತಪಟ್ಟಿದೆ. ಮೂರು ವರ್ಷಗಳ ಹಿಂದೆ ಮೇ 19ರಂದೇ ಮಾರ್ತಾಂಡನನ್ನು ಸೆರೆಹಿಡಿಯಲಾಗಿತ್ತು. ಕಾಕತಾಳೀಯ ಎಂಬಂತೆ ಅದೇ ತಾರೀಕಿನಂದು ಆನೆಯೀಗ ಮೃತಪಟ್ಟಿದೆ. 2023ರಲ್ಲಿ ಸೆರೆಯಾಗಿ ಪಳಗಿದ ಬಳಿಕ ಮಾರ್ತಾಂಡ ಶಾಂತ ಸ್ವಭಾವದಿಂದ ಇರುತ್ತಿತ್ತು ಎನ್ನಲಾಗಿದೆ. ಡಾ. ಚಿಟ್ಟಿಯಪ್ಪ ನೇತೃತ್ವದಲ್ಲಿ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ದುಬಾರೆ ಅರಣ್ಯದಲ್ಲಿಯೇ ಅಂತ್ಯ ಸಂಸ್ಕಾರಕ್ಕೆ ನಿರ್ಧರಿಸಲಾಗಿದೆ.
2022ರ ಜೂನ್ 29ರಂದು ಸಕಲೇಶಪುರ ತಾಲೂಕಿನ ಕರೆಗರ್ಜೆ ಬಳಿ ಮಾರ್ತಾಂಡ ಆನೆಯನ್ನು ಮೊದಲ ಬಾರಿ ಅರಣ್ಯ ಇಲಾಖೆ ಸೆರೆ ಹಿಡಿತ್ತು. ಆ ಬಳಿಕ ರೇಡಿಯೊ ಕಾಲರ್ ಅಳವಡಿಸಿ ಬಂಡಿಪುರಕ್ಕೆ ಬಿಡಲಾಗಿತ್ತು. ಒಂದೇ ತಿಂಗಳಲ್ಲಿ ನೂರಾರು ಕಿಲೋ ಮೀಟರ್ ಸಾಗಿ ಮರಳಿ ಹಾಸನಕ್ಕೆ ಮರಳಿದ್ದ ಮಾರ್ತಾಂಡ, ಕೆಲ ತಿಂಗಳು ಸೈಲೆಂಟ್ ಆಗಿ ಮರೆಯಾಗಿತ್ತು. ಆ ಬಳಿಕ ಭತ್ತ ಅರಸಿ ಊರೂರು ಅಲೆಯಲು ಶುರುಮಾಡಿದ್ದು, ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಮುರಿದು ಭತ್ತ ತಿನ್ನಲು ಶುರು ಮಾಡಿತ್ತು. ಹೀಗಾಗಿ ಎರಡನೇ ಬಾರಿಗೆ 2023ರ ಮೇ 19ರಂದು ಮಾರ್ತಾಂಡ ಆನೆಯನ್ನು ಸಕಲೇಶಪುರ ತಾಲೂಕಿನ ಒಸ್ಸೂರು ಬಳಿಯ ಕಾಫಿತೋಟದಲ್ಲಿ ಸೆರೆ ಹಿಡಿಯಲಾಗಿತ್ತು.
ಇದನ್ನೂ ಓದಿ: ಕಾದಾಟದ ವೇಳೆ ಗಂಭೀರ ಗಾಯಗೊಂಡಿದ್ದ ಆನೆ ಮಾರ್ತಾಂಡ ಚಿಕಿತ್ಸೆ ಫಲಿಸದೆ ಸಾವು
ದುಬಾರೆ ಆನೆ ಶಿಬಿರದಲ್ಲಿ ಮಾರ್ತಾಂಡ ಆನೆ ಮೃತಪಟ್ಟಿರುವ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅನಿರೀಕ್ಷಿತವಾದ ಮತ್ತು ಊಹಿಸಲೂ ಆಗದ ದುರ್ಘಟನೆಯಲ್ಲಿ ಒಬ್ಬ ಪ್ರವಾಸಿ ಮಹಿಳೆ ಮತ್ತು ಒಂದು ಆನೆ ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ . ಹಾಸನ ಜಿಲ್ಲೆಯಲ್ಲಿ ಸೆರೆ ಹಿಡಿಯಲಾಗಿದ್ದ ಮಾರ್ತಾಂಡ ಆನೆ 4,500 ಕೆ.ಜಿ. ತೂಕವಿತ್ತು ಎಂದು ತಿಳಿಸಿದ್ದಾರೆ. ಅಲ್ಲದೆ ಹಾಸನ ಜಿಲ್ಲೆ ಯಸಳೂರಿನ ಬಳಿ 2014ರಲ್ಲಿ ಸೆರೆ ಹಿಡಿಯಲಾಗಿದ್ದ 26 ವರ್ಷದ ಕಂಜನ್ ಆನೆ 3 ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿತ್ತು. ಆದರೆ ಇನ್ನು ಮುಂದೆ ದಸರಾಗೆ ಈ ಆನೆಯನ್ನು ಬಳಸದಂತೆ ಸೂಚಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.
ಇನ್ನು ದುಬಾರೆಯಲ್ಲಿ ಪ್ರವಾಸಿ ಮಹಿಳೆ ಮತ್ತು ಸಾಕಾನೆ ಸಾವು ವಿಚಾರ ಸಂಬಂಧ ಮಾರ್ಗಸೂಚಿ ಕಡ್ಡಾಯ ಪಾಲನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಸೂಚಿಸಿದ್ದಾರೆ. ಘಟನೆ ಕುರಿತು ಜಿಲ್ಲಾಡಳಿತದ ಜೊತೆ ಸಚಿವರು ಚರ್ಚಿಸಿದ್ದು, ಪ್ರವಾಸಿ ಮಾರ್ಗಸೂಚಿಯಲ್ಲಿ ಲೋಪವಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರವಾಸಿಗರು ಅರಣ್ಯ ಇಲಾಖೆಯ ನಿಯಮಗಳನ್ನು ಕಡ್ಡಾಯ ಪಾಲಿಸಬೇಕು. ಕಾಡು ಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳಬೇಕು. ಪ್ರವಾಸಿಗರ ಸುರಕ್ಷತೆ ಬಗ್ಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.