ಕೊಡಗು: ಗುಂಡು ಹಾರಿಸಿಕೊಂಡು ಶಿಕ್ಷಕಿ ಆತ್ಮಹತ್ಯೆ; ಜನಗಣತಿ ಒತ್ತಡಕ್ಕೊಳಗಾಗಿ ಹೀಗೆ ಮಾಡಿಕೊಂಡ್ರಾ?

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ಶಿಕ್ಷಕಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ನಡೆದಿದೆ. ಕೆಲವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನುತ್ತಿದ್ದರೆ, ಜನಗಣತಿ ಕರ್ತವ್ಯದ ಒತ್ತಡದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸದ್ಯ ಮಡಿಕೇರಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಗು: ಗುಂಡು ಹಾರಿಸಿಕೊಂಡು ಶಿಕ್ಷಕಿ ಆತ್ಮಹತ್ಯೆ; ಜನಗಣತಿ ಒತ್ತಡಕ್ಕೊಳಗಾಗಿ ಹೀಗೆ ಮಾಡಿಕೊಂಡ್ರಾ?
ಶಿಕ್ಷಕಿ ಎ.ರೋಹಿಣಿ
Image Credit source: tv9 kannada
Edited By:

Updated on: Apr 26, 2026 | 9:57 PM

ಕೊಡಗು, ಏಪ್ರಿಲ್​26: ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದ ಶಿಕ್ಷಕಿಯೊಬ್ಬರ (Teacher)  ದುಡುಕಿನ ನಿರ್ಧಾರ ಸದ್ಯ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಗುಂಡು ಹಾರಿಸಿಕೊಂಡು ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ನಡೆದಿದೆ. ಚೇರಂಬಾಣೆ ಸರ್ಕಾರಿ ಪ್ರಾಥಮಿಕ ಶಾಲೆಯ ಎ.ರೋಹಿಣಿ(51) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದಿದ್ದೇನು?

ಎ.ರೋಹಿಣಿ ಅವರು ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕಿ ಆಗಿದ್ದರು. 25 ವರ್ಷ ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ಮಕ್ಕಳಿಗೆ ದಾರಿದೀಪವಾಗಿದ್ದರು.‌ ಆದರೆ ಏನಾಯಿತೋ ಏನೋ, ಒಂಟಿ‌ ನಳಿಗೆ ಕೋವಿಯಿಂದ ತಮ್ಮ ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿದ್ದಾರೆ. ನಿನ್ನೆ ರಾತ್ರಿ 12 ಗಂಟೆಯವರೆಗೆ ಕೆಲಸ ಮಾಡಿ ಮಲಗಿದ್ದ ಅವರು ಮುಂಜಾನೆ 5 ಗಂಟೆ ವೇಳೆಗೆ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಜನಗಣತಿ ಕಾರ್ಯಕ್ಕೆ ಅಡ್ಡಿ: ಮಹಿಳಾ ಸಿಬ್ಬಂದಿಗೆ ಅವಮಾನ; ನಿವಾಸಿ ವಿರುದ್ಧ ಎಫ್​ಐಆರ್​ ದಾಖಲು

ಗುಂಡು ಸಿಡಿದ ಶಬ್ಧ ಕೇಳುತ್ತಿದ್ದಂತೆ ಪಕ್ಕದ ಕೊಠಡಿಯಲ್ಲಿ ಮಲಗಿದ್ದ ಅವರ ಪತಿ ಕರುಂಬಯ್ಯ ಹಾಗೂ ಮಗಳು ಎದ್ದು ಹೋಗಿ ನೋಡಿದಾಗ ರೋಹಿಣಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಭಾಗಮಂಡಲ ಠಾಣೆ ಪೊಲೀಸರು ಮೃತದೇಹವನ್ನು ಕೊಡಗು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಜನಗಣತಿ ಕೆಸಲ ಒತ್ತಡ: ಪತಿ ಹೇಳಿದ್ದೇನು? 

ಇನ್ನು ಈ ಬಗ್ಗೆ ಮೃತ ರೋಹಿಣಿ ಪತಿ ಕರುಂಬಯ್ಯ ಮಾತನಾಡಿದ್ದು, ಯಾವಗಲೂ ಟೆನ್ಷನ್ ಎಂದು ಹೇಳುತ್ತಿದ್ದರು. ಜನಗಣತಿ ಆರಂಭವಾದ ಬಳಿಕ ಎಲ್ಲಾ ಕೆಲಸ ಮುಗಿಸಿ ಮಲಗುವುದು ರಾತ್ರಿ 12 ಗಂಟೆಯಾಗುತ್ತಿತ್ತು. ಇವರಿಗೆ 250ಕ್ಕೂ ಹೆಚ್ಚು ಮನೆಗಳ ಜನಗಣತಿ ಮಾಡಲು ಕೊಟ್ಟಿದ್ದರು. ಅದು ಸಾಧ್ಯವಾಗದೆ ಮತ್ತೊಬ್ಬ ಸಹಾಯಕರನ್ನು ಕೊಡುವಂತೆ ತಹಶೀಲ್ದಾರ್​​ಗೆ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಈ ಒತ್ತಡದಿಂದ ಅವರು ಸಾವನ್ನಪ್ಪಿರಬಹುದು ಎಂದಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವಂತಹ ಒತ್ತಡವಿರಲಿಲ್ಲ: ಮೋಹನ್ ಪೆರಾಜೆ

ಇನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಮೋಹನ್ ಪೆರಾಜೆ ಮಾತನಾಡಿದ್ದು, ಇಲಾಖೆ ಎಂದ ಮೇಲೆ ಒತ್ತಡಗಳು ಇರುತ್ತವೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಒತ್ತಡಗಳು ಇರಲಿಲ್ಲ. ರೋಹಿಣಿ ಅವರು ತುಂಬಾ ಧೈರ್ಯವಂತೆಯಾಗಿದ್ದವರು. ಎಂತಹದ್ದೇ ಕೆಲಸಗಳನ್ನು ವಹಿಸಿದ್ದರೂ ಕೆಲಸದಿಂದ ಹಿಂದೆ ಸರಿಯುತ್ತಿರಲಿಲ್ಲ. ಹೀಗಾಗಿ ಜನಗಣತಿ ಕಾರ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಸದ್ಯ ಶಿಕ್ಷಕಿ ರೋಹಿಣಿ ಅವರ ಪತಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:52 pm, Sun, 26 April 26

Follow Us