ನಿಲ್ಲದ ಮಾನವ-ಆನೆ ಸಂಘರ್ಷ: ಕಾಡಾನೆ ದಾಳಿಗೆ ಪಿಯು ವಿದ್ಯಾರ್ಥಿನಿ ಬಲಿ, ಭುಗಿಲೆದ್ದ ಆಕ್ರೋಶ

ಕಾಡಾನೆ ದಾಳಿಗೆ ಪಿಯು ವಿದ್ಯಾರ್ಥಿನಿ ದಾರುಣ‌ವಾಗಿ ಸಾವನ್ನಪ್ಪಿರುವಂತಹ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ನಿನ್ನೆ ನಡೆದಿದೆ. ತಂದೆ-ತಾಯಿ‌ ಜತೆ ಬೈಕ್‌ನಲ್ಲಿ ಬರುವಾಗ ಆನೆ ದಾಳಿ ಮಾಡಿದ್ದು, ಈ ವೇಳೆ 19 ವರ್ಷದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಈ ಘಟನೆ ಜನರ ಆಕ್ರೋಶ ಕಾರಣವಾಗಿದೆ.

ನಿಲ್ಲದ ಮಾನವ-ಆನೆ ಸಂಘರ್ಷ: ಕಾಡಾನೆ ದಾಳಿಗೆ ಪಿಯು ವಿದ್ಯಾರ್ಥಿನಿ ಬಲಿ, ಭುಗಿಲೆದ್ದ ಆಕ್ರೋಶ
ಮೃತ ವಿದ್ಯಾರ್ಥಿ
Image Credit source: tv9 kannada
Edited By:

Updated on: Mar 01, 2026 | 6:02 PM

ಕೊಡಗು, ಮಾರ್ಚ್​​ 01: ಆ ವಿದ್ಯಾರ್ಥಿನಿ ಈಗಷ್ಟೇ ಪಿಯುಸಿ ಪರೀಕ್ಷೆ ಬರೆದಿದ್ದಳು. ಇನ್ನೆರಡು ತಿಂಗಳು ರಜೆಯನ್ನ ಆರಾಮವಾಗಿ ಕಳೆಯುವ ಆಸೆಯಲ್ಲಿದ್ದಳು. ನಿನ್ನೆ ಕೂಡ ಅಪ್ಪ-ಅಮ್ಮನ ಜೊತೆಗೆ ಬೇಗ ಮನೆ ಸೇರುವ ಆಸೆಯಲ್ಲಿದ್ದಳು. ಆದರೆ ಕಾಡಾನೆ (Elephant) ರೂಪದಲ್ಲಿ ಬಂದ ಯಮರಾಯ ಆ ಮುಗ್ಧ ಯುವತಿಯನ್ನ ಬಲಿ (death) ಪಡೆದಿದೆ. ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ಘಟನೆ ನಡೆದಿದೆ.

ಕ್ಷಣಾರ್ಧದಲ್ಲಿ ವಿದ್ಯಾರ್ಥಿನಿಯ ಜೀವ ತೆಗೆದ ಕಾಡಾನೆ

ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ತಾರಕಕ್ಕೇರಿದೆ. ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ದಾರುಣ ಬಲಿಯಾಗಿದ್ದಾಳೆ. ಮಡಿಕೇರಿ ತಾಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ನಿನ್ನೆ ಸಂಜೆ ನಡೆದ ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಪೂಜ್ಯ ಸಾವನ್ನಪ್ಪಿದ್ದಾಳೆ. ಸಂಜೆ ತನ್ನ ತಂದೆ-ತಾಯಿ ಜೊತೆ ಬೈಕ್​ನಲ್ಲಿ ಬಂದ ಪೂಜ್ಯ, ಬೈಕ್​ನಿಂದ ಇಳಿದಿದ್ದೇ ತಡ ಅಷ್ಟರಲ್ಲಿ ಕತ್ತಲಿನಲ್ಲಿ ಹಿಂಬಂದಿಯಿಂದ ದಾಳಿ ನಡೆಸಿದ ಕಾಡಾನೆ, ಪೂಜ್ಯಳ ದೇಹವನ್ನ ತುಳಿದು ಸ್ಥಳದಲ್ಲೇ ಸಾಯಿಸಿದೆ. ಮಗಳ ಕಿರುಚಾಟ ಕಂಡು ತಾಯಿ ಎಷ್ಟೇ ಬೊಬ್ಬೆ ಹೊಡೆದರೂ ಪ್ರಯೋಜನವಾಗಿಲ್ಲ, ಕ್ಷಣಾರ್ಧದಲ್ಲಿ ಕಾಡಾನೆ ವಿದ್ಯಾರ್ಥಿನಿಯ ಜೀವ ತೆಗೆದಿದೆ.

ಇದನ್ನೂ ಓದಿ: ವಿರಾಜಪೇಟೆ: ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!

ಪತ್ನಿ ಮತ್ತು ಮಗಳನ್ನ ಬೈಕ್​ನಿಂದ ಇಳಿಸಿ ಬೈಕ್​ ನಿಲ್ಲಿಸಲು ಸ್ವಲ್ಪ ದೂರು ಹೋಗಿದ್ದ ತಂದೆ ಚಂಗಪ್ಪ ಅವರಿಗೆ ಪತ್ನಿ ಮತ್ತು ಮಗಳ ಕಿರುಚಾಟ ಕೇಳಿ ಓಡಿ ಬಂದಿದ್ದಾರೆ. ಅಷ್ಟರಲ್ಲಾಗಲೇ ಅನಾಹುತ ನಡೆದು ಹೋಗಿತ್ತು. ಮಗಳ ರಕ್ತಸಿಕ್ತ ದೇಹವನ್ನ ಅಪ್ಪಿಕೊಂಡು ಪತ್ನಿ ದೇವಕಿ ರೋಧಿಸುತ್ತಿದ್ದರು. ಈ ಭಾಗದಲ್ಲಿ ಈ ಒಂಟಿ ಆನೆ ನಿರಂತರವಾಗಿ ಓಡಾಡುತ್ತಿದೆ. ಜನರು ಕಾಡಾನೆಯಿಂದ ಈ ಹಿಂದೆಯೂ ಬಹಳಷ್ಟು ಬಾರಿ ತಪ್ಪಿಸಿಕೊಂಡಿದ್ದರು. ಆದರೆ ಇಂದು ಪೂಜ್ಯಳ ಅದೃಷ್ಟ ಸರಿ ಇರಲಿಲ್ಲ.

ಸರ್ಕಾರದಿಂದ 20 ಲಕ್ಷ ರೂ ಪರಿಹಾರ 

ಮಡಿಕೇರಿ ಡಿಎಫ್​ಒ ಅಭಿಷೇಕ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಕಾಡಾನೆಯನ್ನ ಸೆರೆ ಹಿಡಿಯಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮೃತಳ ಕುಟುಂಬಕ್ಕೆ ಸರ್ಕಾರದಿಂದ 20 ಲಕ್ಷ ರೂ ಪರಿಹಾರ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಅತಿ ಹೆಚ್ಚು ಜನ ಸಾಯುವುದೇ ಕಾಡು ಪ್ರಾಣಿ ದಾಳಿಯಿಂದ!

ಕಾಡಾನೆಗಳು ಮಾನವರು ವಾಸಿಸುವ ಪ್ರದೇಶಗಳತ್ತ ಬಾರದಂತೆ ತಡೆಯಲು ವೈಜ್ಞಾನಿಕ ಕ್ರಮ ಅನಿವಾರ್ಯವಾಗಿದೆ. ಇಲ್ಲದಿದ್ದರೆ ಇಂತಹ ಅನ್ಯಾಯದ ಸಾವುಗಳು ಮುಂದುವರಿಯುತ್ತವೆ. ಒಟ್ಟಾರೆ ಕಾಡು ನಾಡು ಸಂಘರ್ಷದಲ್ಲಿ ಅಮಾಯಕ ವಿದ್ಯಾರ್ಥಿನಿ ಬಲಿಯಾಗಿದ್ದು ಮಾತ್ರ ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us