ಮಕ್ಕಳ ಬಾಳಲ್ಲಿ ಶಾಲಾ ಆಡಳಿತ ಮಂಡಳಿ ಚೆಲ್ಲಾಟ: ಪರೀಕ್ಷೆಯಿಂದ ವಂಚಿತರಾದ SSLC ವಿದ್ಯಾರ್ಥಿಗಳು

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿಯ ಉದಯ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಶಾಲೆಯ ಎಡವಟ್ಟಿನಿಂದ ಕಣ್ಣೀರಿಡುವಂತಾಗಿದೆ. ಈ ಶಾಲೆಯ 17 ಮಕ್ಕಳು ಇಂದು ಪರೀಕ್ಷೆ ಬರೆಯಬೇಕಿತ್ತು. ಅದ್ರಂತೆ ನಿನ್ನೆ ಎಲ್ಲರಿಗೂ ಹಾಲ್ ಟಿಕೆಟ್ ಬಂದಿತ್ತು. ಆದರೆ ಇಬ್ಬರಿಗೆ ಮಾತ್ರ ಬಂದಿರಲಿಲ್ಲ. ಹೀಗಾಗಿ ಪರೀಕ್ಷೆ ಹಾಜರಾಗಲು ಸಾಧ್ಯವಾಗದಕ್ಕೆ ಬಾಲಕರು ಮತ್ತು ಪೋಷಕರು ಕಣ್ಣೀರಿಟ್ಟಿದ್ದಾರೆ.

ಮಕ್ಕಳ ಬಾಳಲ್ಲಿ ಶಾಲಾ ಆಡಳಿತ ಮಂಡಳಿ ಚೆಲ್ಲಾಟ: ಪರೀಕ್ಷೆಯಿಂದ ವಂಚಿತರಾದ SSLC ವಿದ್ಯಾರ್ಥಿಗಳು
ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳು
Image Credit source: tv9 kannada
Edited By:

Updated on: Mar 18, 2026 | 6:23 PM

ಕೊಡಗು, ಮಾರ್ಚ್​​ 18: ಇಬ್ಬರು ಬಾಲಕರು ಒಂದು ವರ್ಷ ಕಷ್ಟಪಟ್ಟು ಎಸ್​ಎಸ್​ಎಲ್​ಸಿ ಪರೀಕ್ಷೆಗೆ (SSLC Exam) ತಯಾರಾಗಿದ್ದರು. ಇನ್ನೇನು ಇಂದು ಬೆಳಗ್ಗೆ ನಾವು ಪರೀಕ್ಷೆ ಬರೆಯುತ್ತೇವೆ ಅಂತ ಖುಷಿಯಾಗಿದ್ದರು. ಆದರೆ ಪರೀಕ್ಷೆಗೆ ಕೆಲವೇ ಗಂಟೆಗಳ ಮೊದಲು ಬಂದ ಅದೊಂದು ಸುದ್ದಿ ಅವರಿಬ್ಬರನ್ನ ಪರೀಕ್ಷೆಗೆ ಕೂರದೇ ಇರುವ ಹಾಗೆ ಮಾಡಿದೆ. ಯಾರದ್ದೋ ಎಡವಟ್ಟಿಗೆ ಇಬ್ಬರು ಬಾಲಕರು ಮತ್ತು ಪೋಷಕರು ಕಣ್ಣೀರಿಟ್ಟ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮದ ಉದಯ ಪ್ರೌಢಶಾಲೆ ಆವರಣದಲ್ಲಿ ನಡೆದಿದೆ.

ಹಾಲ್ ಟಿಕೆಟ್​ ಇಲ್ಲದೆ ವಿದ್ಯಾರ್ಥಿಗಳು ಪರದಾಟ

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಬೆಟ್ಟಗೇರಿ ಗ್ರಾಮದ ಉದಯ ಪಬ್ಲಿಕ್ ಶಾಲೆಯಲ್ಲಿ 17 ಮಕ್ಕಳು ಇಂದು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಬೇಕಿತ್ತು. ಆದರೆ ನಿನ್ನೆ ಸಂಜೆ ಎಲ್ಲರಿಗೂ ಹಾಲ್ ಟಿಕೆಟ್ ಬಂದಿದ್ದು, ಇಬ್ಬರು ಬಾಲಕರಿಗೆ ಮಾತ್ರ ಬಂದಿಲ್ಲ. ತಮೀಮ್ ಮತ್ತು ಪ್ರಥಮ್ ಪೋಷಕರಿಗೆ ಸಂಜೆ ಕರೆಮಾಡಿದ ಶಾಲಾ ಪ್ರಾಂಶುಲಾರು, ಏನೋ ತಾಂತ್ರಿಕ ಸಮಸ್ಯೆಯಿಂದ ಇಬ್ಬರಿಗೆ ಹಾಲ್ ಟಿಕೆಟ್ ಬಂದಿಲ್ಲ ಅಂತ ಹೇಳಿದ್ದಾರೆ. ಈ ಸುದ್ದಿ ಕೇಳಿ ಪೋಷಕರು ಮತ್ತು ಮಕ್ಕಳಿ ಶಾಕ್ ಆಗಿದೆ. ಆದರೂ ಇಂದು ಬೆಳಗ್ಗೆ ಶಾಲೆಯ ಬಳಿ ಬಂದು ಹಾಲ್ ಟಿಕೆಟ್ ಕೊಡುವಂತೆ ದುಂಬಾಲು ಬಿದ್ದಿದ್ದಾರೆ.

ಇದನ್ನೂ ಓದಿ: ಆಂಬ್ಯುಲೆನ್ಸ್‌ನಲ್ಲೇ ಬಂದು ಸ್ಟ್ರೆಚರ್ ಮೇಲೆ ಮಲಗಿಕೊಂಡೇ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ: ವಿಡಿಯೋ ನೋಡಿ

ತಮ್ಮ ಮಗನಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಪೋಷಕರು ಮತ್ತು ಗ್ರಾಮಸ್ಥರು ಶಾಲೆ ಬಳಿ ಪ್ರತಿಭಟನೆ ನಡೆಸಿದರು. ಶಾಲೆಯ ಪ್ರಾಂಶುಪಾಲ ಹೇಮಂತ್​​ರನ್ನ ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಶಾಲಾ ಆಡಳಿತ ಮಂಡಳಿಯನ್ನ ಕೇಳಿದರೆ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳತ್ತ ಬೊಟ್ಟು ಮಾಡುತ್ತಿದ್ದಾರೆ. ಬಿಇಒ ರಿಜೆಕ್ಟ್ ಮಾಡಿರೋದ್ರಿಂದ ಈ ರೀತಿ ಆಗಿದೆ ಎನ್ನುತ್ತಾರೆ. ಆದರೆ ಇದನ್ನ ಬಿಇಒ ಮಹೇಶ್ ತಳ್ಳಿ ಹಾಕಿದ್ದಾರೆ.

ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುವುದೇನು?

ಶಾಲಾ ಸಿಬ್ಬಂದಿ ಸರಿಯಾಗಿ ಲಾಗಿನ್ ಆಗಿ ವಿದ್ಯಾರ್ಥಿಗಳ ವಿವರವನ್ನು ಭರ್ತಿ ಮಾಡದ್ದರಿಂದಲೇ ಈ ಎಡವಟ್ಟು ಆಗಿದೆ ಎನ್ನೋದು ಶಿಕ್ಷಣ ಇಲಾಖೆ ಅಧಿಕಾರಿಗಳ ವಾದ. ಬಾಲಕ ತಮೀಮ್​ಗೆ ಈಗಾಗಲೇ ಶಾಲೆಯಿಂದ ವರ್ಗಾವಣೆ ಪತ್ರ ಕೊಟ್ಟು ಕಳುಹಿಸಲಾಗಿದೆ ಎಂಬಂತೆ ಶಿಕ್ಷಣ ಇಲಾಖೆಯ ವೆಬ್​ ಪೇಜ್​ನಲ್ಲಿ ಮಾಹಿತಿ ದಾಖಲಾಗಿದೆಯಂತೆ. ಹಾಗಾಗಿ ಆತನಿಗೆ ಹಾಲ್ ಟಿಕೆಟ್ ಬಂದಿಲ್ಲ ಎಂಬುದು ಅಧಿಕಾರಿಗಳ ವಾದ. ಆದರೆ ಇತ್ತ ತಮೀಮ್​ 10ನೇ ತರಗತಿಯ ಸಂಪೂರ್ಣ ಶುಲ್ಕ ಪಾವತಿಸಿ ಇಡೀ ಒಂದು ವರ್ಷ ಓದಿದ್ದಾನೆ.

ಅಷ್ಟೇ ಅಲ್ಲದೆ ಈ ಶಾಲೆಗೆ ಕೇವಲ 8ನೇ ತರಗತಿವರಗೆಗೆ ಮಾತ್ರ ಅನುಮತಿ ಇದ್ದು ಇಲ್ಲಿ 9 ಮತ್ತು 10ನೇ ತರಗತಿಯನ್ನ ಅನಧಿಕೃತವಾಗಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಪೋಷಕರಿಗೆ ತಿಳಿ ಹೇಳಿದ್ದರೂ ಅವರಿಗೆ ಅದು ಅರ್ಥ ಆಗಿಲ್ಲ ಅನ್ನೋದು ಅವರ ವಾದ. ಇಷ್ಟೆಲ್ಲಾ ಆದರೂ ಶಾಲಾ ಆಡಳಿತ ಮಂಡಳಿಯ ಒಬ್ಬನೇ ಒಬ್ಬ ಸದಸ್ಯ ಶಾಲೆಯತ್ತ ಸುಳಿಯಲಿಲ್ಲ. ಪ್ರಾಂಶುಪಾಲರನ್ನ ಮುಂದೆ ಬಿಟ್ಟು ಅವರು ನಾಪತ್ತೆಯಾಗಿದ್ದರು. ಇದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: SSLC ಪರೀಕ್ಷೆ ಬರೆಯುವ ಮಕ್ಕಳಿಗೆ ಮಿಡಿದ ಕಂಡಕ್ಟರ್​​ ಮನ, ವಿಡಿಯೋ ವೈರಲ್

ಯಾರದ್ದೋ ಎಡವಟ್ಟಿಗೆ ಇಬ್ಬರು ಬಾಲಕರ ಒಂದು ವರ್ಷದ ಶಿಕ್ಷಣ ಬಲಿಯಾಗಿದೆ. ಈ ವರ್ಷ ನಡೆಯುವ ಎರಡನೇ ಮತ್ತು ಮೂರನೇ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಅವಕಾಶ ದೊರೆಯುವ ಸಾಧ್ಯತೆಯೂ ಕಡಿಮೆ ಇದೆ. ಹಾಗಾಗಿ ಅಮಾಯಕ ಮಕ್ಕಳ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ವ್ಯಕ್ತಿಗಳನ್ನ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us