
ಮಡಿಕೇರಿ, ಮಾರ್ಚ್ 30: ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಮುಸ್ಲಿಂ ಯುವಕನೋರ್ವನ ವಿವಾಹದ ಹಿಂದಿನ ದಿನ ಮದುಮಗನಿಗೆ ಎಲೆಗಳನ್ನ ಸುತ್ತಿ, ಮುಖಕ್ಕೆ ಬಣ್ಣ ಬಳಿದು ಹಾಡುತ್ತಾ ಎಂಜಾಯ್ ಮಾಡಿರೋದೀಗ ಹೊಸ ವಿವಾದ ಹುಟ್ಟುಹಾಕಿದೆ. ಇದು ದೈವ ನರ್ತನವನ್ನು ಹೋಲುತ್ತಿದ್ದು, ತುಳುನಾಡು ಮತ್ತು ಕೊಡಗಿನ ದೈವ ಸಂಸ್ಕೃತಿಗೆ ಅವಮಾನ ಮಾಡಲಾಗಿದೆ ಎಂಬ ಗಂಭೀರ ಆರೋಪವೀಗ ಕೇಳಿಬಂದಿದೆ. ಮೈ ತುಂಬಾ ಸೊಪ್ಪು, ಬಾಳೆಕೊನೆ, ಮುಖದ ತುಂಬ ಬಣ್ಣ ಮತ್ತು ಕೈಯಲ್ಲಿ ದೊಣ್ಣೆ ಹಿಡಿದಿರೋ ಯುವಕನ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಆಕ್ರೋಶ ಭುಗಿಲೆದ್ದಿದೆ.
ಈ ವಿಚಾರವೀಗ ಶಾಂತವಾಗಿದ್ದ ಕೊಡಗು ಜಿಲ್ಲೆಯಲ್ಲಿ ವಿವಾದದ ಕಿಡಿ ಹೊತ್ತಿಸಿದ್ದು, ಯುವಕರ ಹುಚ್ಚಾಟದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ದೈವ ನರ್ತನವನ್ನ ಅವಮಾನ ಮಾಡಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದ್ದು, ಕೊಡಗು ಜಿಲ್ಲಾ ದೈವ ನರ್ತಕರ ಮತ್ತು ದೈವ ಆರಾಧಕರ ಸಂಘ ಈ ಸಂಬಂಧ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಲಿಖಿತ ದೂರು ನೀಡಿದೆ. ಕೊರಗಜ್ಜ, ಪಂಜುರ್ಲಿ, ಪಾಶಣಮೂರ್ತಿ ಸೇರಿದಂತೆ ಹತ್ತಾರು ಬಗೆಯ ದೈವ ನರ್ತನ ಮತ್ತು ದೈವಾರಾಧನೆ ಜಿಲ್ಲೆಯಲ್ಲಿ ಆಚರಣೆಯಲ್ಲಿದೆ. ದೈವಗಳನ್ನ ನಂಬುವ ಭಕ್ತರ ಮನಸ್ಸಿಗೆ ಘಟನೆಯಿಂದ ಘಾಸಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ: ಮಡಿಕೇರಿ ಡಬಲ್ ಮರ್ಡರ್ ಕೇಸಿಗೆ ಬಿಗ್ ಟ್ವಿಸ್ಟ್; ಹೆಂಡ್ತಿ ಇದ್ರೂ ತಂಗಿ ಸಂಗ ಬೆಳೆಸಿದ್ದ ಅಣ್ಣ
ನಾಪೊಕ್ಲು ಎಮ್ಮೆಮಾಡುವಿನಲ್ಲಿ ಮುಸ್ಲಿಂ ಸಮುದಾಯದ ಮದುವೆ ಸಮಾರಂಭದಲ್ಲಿ ದೈವವನ್ನೇ ಹೋಲುವ ರೀತಿಯಲ್ಲಿ ಮದುಮಗನು ವೇಷ ಹಾಕಿ ಅತಿರೇಕದ ವರ್ತನೆ ತೋರಿರುವುದವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ದೈವಕೊಲದ ಮಾದರಿ ಮುಖಕ್ಕೆ ಬಣ್ಣ ಬಳಿದು ದೈವವನ್ನೇ ಅಣಕಿಸುವ ರೀತಿಯಲ್ಲಿ ವಿಕೃತವಾಗಿ ವರ್ತಿಸಲಾಗಿದ್ದು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದನ್ನು ದೈವ ಆರಾಧಕರು ಮತ್ತು ದೈವ ನರ್ತಕರ ಸಂಘ ತೀವ್ರವಾಗಿ ಖಂಡಿಸುತ್ತದೆ. ದೈವ ಆರಾಧನೆ ನಮ್ಮ ಹಿರಿಯರು ಹಾಕಿಕೊಟ್ಟಿರುವ ಮೂಲನಂಬಿಕೆ, ಮೂಲ ಪದ್ಧತಿ, ಆಧಾರವಾಗಿದ್ದು ದೈವ ಆರಾಧನೆ ಪ್ರದರ್ಶನದ ಹಾಗೂ ಜಾನಪದ ಕಲೆಯು ಅಲ್ಲ. ಈ ರೀತಿಯಲ್ಲಿ ದೈವವನ್ನೇ ಹೊಲುವ ರೀತಿ ವೇಷಭೂಷಣ ಹಾಕಿರುವುದು ದೈವಕ್ಕೆ ಮಾಡುದ ಅಪಮಾನ, ಅಪಹಾಸ್ಯ ಮಾತ್ರವಲ್ಲ. ದೈವಾರಾಧನೆ ಮಾಡುವ ಸಮುದಾಯಕ್ಕೆ ಮಾಡಿರುವ ನಿಂದನೆಯೂ ಹೌದು ಎಂದು ದೂರಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:36 pm, Mon, 30 March 26