ಅಂತರ್ಜಲ ವೃದ್ದಿಸುವ ಕೆಸಿ ವ್ಯಾಲಿ ಯೋಜನೆಯಿಂದ 84 ಕೆರೆಗಳು ಭರ್ತಿ; ನೀರಿನ ಮಟ್ಟ ಹೆಚ್ಚಾಗಲು ಮಳೆರಾಯನ ಸಾಥ್

ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಅಂತರ್ಜಲ ವೃದ್ಧಿಸುವ ಕೆಸಿ ವ್ಯಾಲಿ ಯೋಜನೆಯಿಂದ ಈಗಾಗಲೇ ಜಿಲ್ಲೆಯಲ್ಲಿ 84 ಕೆರೆಗಳು ತುಂಬಿವೆ. ಸದ್ಯ ಕೆಸಿ ವ್ಯಾಲಿ ಯೋಜನೆ ನೀರಿನಿಂದ ಅರ್ಧಂಬರ್ದ ತುಂಬಿದ್ದ ಕೆರೆಗಳು ಕೂಡಾ ತುಂಬಿ ಕೋಡಿ ಹರಿಯುತ್ತಿರುವುದು ಜಿಲ್ಲೆಯ ಮಟ್ಟಿಗೆ ದೊಡ್ಡ ವಿಚಾರ.

ಅಂತರ್ಜಲ ವೃದ್ದಿಸುವ ಕೆಸಿ ವ್ಯಾಲಿ ಯೋಜನೆಯಿಂದ 84 ಕೆರೆಗಳು ಭರ್ತಿ; ನೀರಿನ ಮಟ್ಟ ಹೆಚ್ಚಾಗಲು ಮಳೆರಾಯನ ಸಾಥ್
ಅಗ್ರಹಾರ ಕೆರೆ
Edited By:

Updated on: Aug 30, 2021 | 11:59 AM

ಕೋಲಾರ: ನದಿ ನಾಲೆಗಳಿಲ್ಲದ ಬರೀ ಕೆರೆಗಳ ಜಿಲ್ಲೆಯಾಗಿದ್ದ ಕೋಲಾರದಲ್ಲಿ ಕಳೆದೊಂದು ತಿಂಗಳಿಂದ ಮಳೆರಾಯ ತೋರಿದ ಕೃಪೆಯಿಂದ  ಅದ್ಭುತ ಸೃಷ್ಟಿಯಾಗಿದೆ, ನೀರಾವರಿ ಯೋಜನೆಯಿಂದ ಸ್ವಲ್ಪಮಟ್ಟಿಗೆ ನೀರು ತುಂಬಿದ್ದ ಕೆರೆಗಳಲ್ಲಾ ಈಗ ಮೈತುಂಬಿ ಹರಿಯುತ್ತಿದ್ದು, ಹಳ್ಳಿಗಳ ಕೆರೆಗಳು ಈಗ ಜನರ ಪ್ರಮುಖ ಕೇಂದ್ರವಾಗಿ ಪರಿಣಮಿಸಿದೆ.

ನದಿ ನಾಲೆಗಳಿಲ್ಲದ ಕೋಲಾರ ಜಿಲ್ಲೆಗೆ ಇಂಥ ಬೃಹತ್ ಕೆರೆಗಳೇ ಜೀವಾಳ. ಹೀಗಿರುವಾಗ ಕಳೆದ ಹಲವು ವರ್ಷಗಳಿಂದ ಸರಿಯಾದ ಮಳೆ ಇಲ್ಲದೆ ಒಣಗಿ ಹೋಗಿದ್ದ ಎಸ್.ಅಗ್ರಹಾರ ಸೇರಿದಂತೆ ಹಲವು ಕೆರೆಗಳಿಗೆ ಕೆಸಿ ವ್ಯಾಲಿ ಯೋಜನೆಯ ಮೂಲಕ ನೀರು ಹರಿಸಲಾಗುತ್ತಿತ್ತು, ಇದರ ಜೊತೆಗೆ ಇತ್ತೀಚೆಗೆ ಜಿಲ್ಲೆಯಲ್ಲಿ ಒಳ್ಳೆಯ ಮಳೆಯಾದ ಪರಿಣಾಮ ಸುಮಾರು 1200 ಎರಕೆಯಷ್ಟು ವಿಸ್ತೀರ್ಣ ಹೊಂದಿರುವ ಅಗ್ರಹಾರ ಕೆರೆ ತುಂಬಿ ಕೋಡಿ ಹರಿಯುತ್ತಿದೆ.

ಈ ವಿಷಯ ತಿಳಿದ ಜಿಲ್ಲೆಯ ಜನರು, ಬರದ ಭೂಮಿಯಲ್ಲಿ ಇಂಥಾದೊಂದು ನಯನ ಮನೋಹರ ದೃಶ್ಯಗಳನ್ನು ಸವಿಯಲು ಸಾವಿರಾರು ಸಂಖ್ಯೆಯಲ್ಲಿ ತಂಡೋಪ ತಂಡವಾಗಿ ಅಗ್ರಹಾರ ಕೆರೆಯತ್ತ ಬರುತ್ತಿದ್ದಾರೆ. ಅಷ್ಟೇ ಅಲ್ಲದೆ ಬರದ ನಾಡಲ್ಲಿ ಸುಂದರ ಜಲಧಾರೆಯನ್ನು ಮನಸಾರೆ ಅನುಭವಿಸುತ್ತಿದ್ದಾರೆ. ಇಂಥ ದೃಶ್ಯಗಳನ್ನು ನೋಡಲು ಬೇರೆಡೆ ಹೋಗುತ್ತಿದ್ದೆವು ಈಗ ನಮ್ಮ ಜಿಲ್ಲೆಯಲ್ಲೇ ಇಂಥ ದೃಶ್ಯಗಳು ನಮಗೆ ಸಿಕ್ಕಿದ್ದು ಖುಷಿ ತಂದಿದೆ ಎಂದು ಪ್ರವಾಸಿಗರಾದ ಶೃತಿ ತಿಳಿಸಿದ್ದಾರೆ.

ಕೆಸಿ ವ್ಯಾಲಿ ಯೋಜನೆ
ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಅಂತರ್ಜಲ ವೃದ್ಧಿಸುವ ಕೆಸಿ ವ್ಯಾಲಿ ಯೋಜನೆಯಿಂದ ಈಗಾಗಲೇ ಜಿಲ್ಲೆಯಲ್ಲಿ 84 ಕೆರೆಗಳು ತುಂಬಿವೆ. ಸದ್ಯ ಕೆಸಿ ವ್ಯಾಲಿ ಯೋಜನೆ ನೀರಿನಿಂದ ಅರ್ಧಂಬರ್ದ ತುಂಬಿದ್ದ ಕೆರೆಗಳು ಕೂಡಾ ತುಂಬಿ ಕೋಡಿ ಹರಿಯುತ್ತಿರುವುದು ಜಿಲ್ಲೆಯ ಮಟ್ಟಿಗೆ ದೊಡ್ಡ ವಿಚಾರ. ಅದರಲ್ಲೂ ಜಿಲ್ಲೆಯ ಅತಿ ದೊಡ್ಡ ಕೆರೆ ಎಸ್.ಅಗ್ರಹಾರ ಕೆರೆಯು ಎರಡನೇ ಬಾರಿಗೆ ತುಂಬಿದೆ. ಹಾಗಾಗಿ ಕಳೆದೊಂದು ತಿಂಗಳಿಂದ ನಿರಂತರ ಮಳೆ ಹಾಗೂ ತುಂಬಿದ ಕೆರೆಗಳನ್ನು ನೋಡಿದ ಜನರಿಗೆ ಮಲೆನಾಡಿನ ಅನುಭವಸಿಗುತ್ತಿದೆ.

ಒಟ್ಟಾರೆ ಬರದ ನಾಡು ಕೋಲಾರದಲ್ಲಿ ಕೆಸಿ.ವ್ಯಾಲಿ ಯೋಜನೆಯ ಜೊತೆಗೆ ಸದ್ಯ ಮಳೆರಾಯನು ಕೈಜೋಡಿಸಿದ್ದಾನೆ. ಪರಿಣಾಮ ಜಿಲ್ಲೆಯ ಚಿತ್ರಣವೇ ಬದಲಾಗುತ್ತಿದ್ದು, ಜನರು ಕೂಡಾ ಬದಲಾವಣೆಯನ್ನು ಸಂತೋಷವಾಗಿ ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಬೆಳೆವಣಿಗೆ ಮುಂದುವರಿದರೆ ಬರಗಾಲದ ಜಿಲ್ಲೆ ಎನ್ನುವ ಕೋಲಾರದ ಹಣೆಪಟ್ಟಿ ಅಳಿಸಿ ಹೋಗುವುದರಲ್ಲಿ ಅನುಮಾನವಿಲ್ಲ.

ವರದಿ: ರಾಜೇಂದ್ರಸಿಂಹ

ಇದನ್ನೂ ಓದಿ:
ಅಪಾಯದ ಅಂಚಿನಲ್ಲಿ ಪಾರಂಪರಿಕ ವಾಟರ್ ಕರೆಜ್; ಅರ್ಧಕ್ಕೆ ನಿಂತ ಭೂ ಕಾಲುವೆ ಕಾಮಗಾರಿ ಆರಂಭಿಸುವಂತೆ ಜನರ ಮನವಿ

ಅರಸನ ಕೆರೆಗೆ ಸೇರುತ್ತಿದೆ ಕೊಳಚೆ ನೀರು; ಜಲಮೂಲಗಳು ಕಲುಷಿತವಾಗದಂತೆ ತಡೆಯಲು ಜನರಿಂದ ಆಗ್ರಹ

 

Web contact

TV9 Kannada

Read More
Follow Us