ಕಾಡಾನೆ ನಿಯಂತ್ರಣಕ್ಕೆ ಸ್ಮಾರ್ಟ್​ ಫೆನ್ಸಿಂಗ್​ ಮೊರೆ ಹೋದ ಅರಣ್ಯ ಇಲಾಖೆ; ಏನಿದು?

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 30, 2024 | 8:07 PM

ಆ ಗಡಿ ಭಾಗದ ಜನರಿಗೆ ಹಾಗೂ ರೈತರಿಗೆ ಕನಸಲ್ಲೂ ಕಾಡುತ್ತಿರುವ ಏಕೈಕ ಪ್ರಾಣಿ ಅದು ಕಾಡಾನೆ, ಹೀಗಿರುವಾಗ ಅದರ ನಿಯಂತ್ರಣ ಸಾದ್ಯವಾಗದ ಅರಣ್ಯ ಇಲಾಖೆ ಸೋಲಾರ್​ ಪೆನ್ಸಿಂಗ್​ ಮೊರೆ ಹೋಗಿತ್ತು. ಆದರೀಗ ಸದ್ಯ ಸೋಲಾರ್​ ಫೆನ್ಸಿಂಗ್​ ಸರಿಯಾದ ನಿರ್ವಹಣೆಗಾಗಿ ಈಗ ಅರಣ್ಯ ಇಲಾಖೆ ಸ್ಮಾರ್ಟ್​ ಫೆನ್ಸಿಂಗ್​ ಮೊರೆ ಹೋಗಿದೆ.

ಕಾಡಾನೆ ನಿಯಂತ್ರಣಕ್ಕೆ ಸ್ಮಾರ್ಟ್​ ಫೆನ್ಸಿಂಗ್​ ಮೊರೆ ಹೋದ ಅರಣ್ಯ ಇಲಾಖೆ; ಏನಿದು?
ಕಾಡಾನೆ ನಿಯಂತ್ರಣಕ್ಕೆ ಸ್ಮಾರ್ಟ್​ ಫೆನ್ಸಿಂಗ್​ ಮೊರೆ
Follow us on
ಕೋಲಾರ, ಜೂ.30: ಆಂಧ್ರ ಹಾಗೂ ತಮಿಳುನಾಡಿನೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕೋಲಾರ(Kolar)ದ ಗಡಿಯಲ್ಲಿ ಸಾವಿರಾರು ಎಕರೆ ಅರಣ್ಯ ಪ್ರದೇಶವಿದ್ದು, ಈ ಅರಣ್ಯದಲ್ಲಿ ಸುಮಾರು 50ಕ್ಕೂಹೆಚ್ಚು ಆನೆಗಳು ವಾಸವಾಗಿವೆ. ಆದರೆ, ಈ ಆನೆ(Wild Elephant)ಗಳು ಗಡಿಯಲ್ಲಿನ ಗ್ರಾಮಗಳಿಗೆ ದಾಳಿ ಇಟ್ಟು ಇಲ್ಲಿನ ಜನರ ಪ್ರಾಣ ಹಾನಿ ಮಾಡುವ ಜೊತೆಗೆ ರೈತರು ಬೆಳೆದ ಬೆಳೆಗಳನ್ನು ಹಾಳು ಮಾಡುತ್ತಿವೆ. ಇನ್ನು ಕಳೆದ ಹತ್ತು ವರ್ಷಗಳಲ್ಲಿ ಕಾಡಾನೆಗಳ ದಾಳಿಯಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕಷ್ಟ ಪಟ್ಟು ಬೆಳೆದ ಕೋಟ್ಯಾಂತರ ರೂಪಾಯಿ ಬೆಳೆಗಳು ಹಾಳಾಗಿವೆ. ಆದರೆ, ಅರಣ್ಯ ಇಲಾಖೆ ಮಾತ್ರ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು  ಗಡಿ ಗ್ರಾಮಗಳ ಜನರು ಆರೋಪಿಸಿದ್ದಾರೆ.
ಇನ್ನು ಕಾಡಾನೆಗಳ ದಾಳಿಯಿಂದ ಪ್ರಾಣ ಕಳೆದುಕೊಳ್ಳುವ ರೈತರ ಕುಟುಂಬಕ್ಕೆ ಅರಣ್ಯ ಇಲಾಖೆ ಪರಿಹಾರ ನೀಡಿ ಕೈತೊಳೆದು ಕೊಳ್ಳುತ್ತದೆ. ಆದರೆ, ಇಷ್ಟು ಮಾಡಿದ್ರೆ ಏನೂ ಸಾಕಾಗೋದಿಲ್ಲ. ನಮಗೆ ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಗಡಿ ಗ್ರಾಮಗಳ ಜನರು ಹೇಳುತ್ತಿದ್ದಾರೆ. ಹಾಗಾಗಿ ಅರಣ್ಯ ಇಲಾಖೆ ಬಂಡೀಪುರ, ನಾಗರಹೊಳೆ, ಕೂರ್ಗ್​, ಸಕಲೇಶಪುರ ಪ್ರದೇಶಗಳಲ್ಲಿ ಮಾಡಿದ ರೀತಿಯಲ್ಲಿ ರೈಲ್ವೇ ಬ್ಯಾರಿಕೇಟ್​ ಮಾಡಲು ಚಿಂತನೆ ನಡೆಸಿ ಸರ್ಕಾರಕ್ಕೆ ವರದಿ ಕಳಿಸಿತ್ತು. ಆದರೆ, ಸರ್ಕಾರದಿಂದ ಸದ್ಯಕ್ಕೆ ಶ್ರೀಲಂಕಾದಲ್ಲಿ ಮಾಡಿದ ರೀತಿಯಲ್ಲಿ ವರ್ಟಿಕಲ್​ ಹಾಗೂ ಹ್ಯಾಂಗಿಂಗ್​ ಸೋಲಾರ್​ ಫೆನ್ಸ್​ ಮಾಡಲಾಗಿತ್ತು.
ಇದನ್ನೂ ಓದಿ:ಬೆಳ್ಳಂಬೆಳಗ್ಗೆಯೇ ಮದ್ದೂರಿನಲ್ಲಿ ಪ್ರತ್ಯಕ್ಷವಾದ ಕಾಡಾನೆ ಹಿಂಡು: ವಿಡಿಯೋ ನೋಡಿ
ದೋಣಿಮಡಗು ಹಾಗೂ ಗುಲ್ಲಹಳ್ಳಿ ವ್ಯಾಪ್ತಿಯಲ್ಲಿ ಸುಮಾರು 57 ಕಿಲೋಮೀಟರ್​ ಹಾಗೂ ಈ ವರ್ಷ ಬಲಮಂದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಏಳು ಕಿಲೋಮೀಟರ್ ವ್ಯಾಪ್ತಿಯಲ್ಲಿ ಆನೆ ನಿಯಂತ್ರಣಕ್ಕೆ ಸೋಲಾರ್​ ಬೇಲಿ ಅಳವಡಿಲಾಗಿತ್ತು. ಆದರೆ, ಅದರಲ್ಲಿ ಹಾಕಲಾಗಿದ್ದ ಗ್ರೌಂಡಿಗ್​ ಕೇಬಲ್​ಗಳನ್ನು ಕಳ್ಳತನ ಮಾಡಲಾಗುತ್ತಿತ್ತು. ಇದರಿಂದ ಸೋಲಾರ್ ಪೆನ್ಸಿಂಗ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಜೊತೆಗೆ ಆನೆಗಳ ನಿಯಂತ್ರಣ ಮಾಡಲು ಅದೆಷ್ಟು ಪರಿಣಾಮಕಾರಿ ಅನ್ನೋದು ಸಹ ತಿಳಿಯಲಿಲ್ಲ. ಹಾಗಾಗಿ ಕಳ್ಳತನವಾಗಿದ್ದ ಗ್ರೌಂಡಿಂಗ್​ ಕೇಬಲ್​ ಅಳವಡಿಕೆ ಮಾಡಿ ಸೋಲಾರ್​ ಪೆನ್ಸಿಂಗ್​ ಮಾನಿಟರ್ ಮಾಡಲು ಅರಣ್ಯ ಇಲಾಖೆ ಸ್ಮಾರ್ಟ್​ ಪೆನ್ಸಿಂಗ್​ ಅಳವಡಿಸಿದೆ.

ಏನಿದು ಸ್ಮಾರ್ಟ್​ ಪೆನ್ಸಿಂಗ್?

ಇದು ಸೋಲಾರ್ ಪೆನ್ಸಿಂಗ್​ನಲ್ಲಿ ಏನೇ ಏರುಪೇರಾದರೂ ಕೂಡ ಅದು ನಮಗೆ ಮೊಬೈಲ್​ ಮೂಲಕ ಮಾಹಿತಿ ರವಾನೆ ಮಾಡುವ ಕೆಲಸ ಮಾಡುತ್ತದೆ. ಸೋಲಾರ್​ ಪೆನ್ಸಿಂಗ್​ನಲ್ಲಿ ಯಾವುದೇ ಭಾಗದಲ್ಲಿ ವಿದ್ಯುತ್ ಹರಿಯುತ್ತಿಲ್ಲ ಅಂದಾಗ ತಕ್ಷಣ ಎಲ್ಲಿ ವಿದ್ಯುತ್​ ಸಮಸ್ಯೆ ಇದೆ ಅನ್ನೋದನ್ನ ಸಹ ಇದು ತಿಳಿಸುತ್ತದೆ. ಹಾಗಾಗಿ ಇನ್ನು ಮುಂದೆ ಆನೆಗಳ ಹಾವಳಿಗೆ ಕಡಿವಾಣ ಹಾಕಬಹುದು ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಒಟ್ಟಾರೆ ಹತ್ತಾರು ವರ್ಷಗಳಿಂದ ಕಾಡಾನೆಗಳ ಹಾವಳಿಯಿಂದ ಬೇಸತ್ತು ಹೋಗಿರುವ ಗಡಿ ಗ್ರಾಮಗಳ ಜನರಿಗೆ ಈ ಸೋಲಾರ್​ ಬೇಲಿ ಕೂಡ ಸಮಾಧಾನ ತಂದಿಲ್ಲ. ಆದರೆ, ಈಗ ಸೋಲಾರ್​ ಬೇಲಿ ನಿರ್ವಹಣೆಗೆ ಸ್ಮಾರ್ಟ್​​ ಪೆನ್ಸಿಂಗ್​ ಉಪಕರಣ ಅಳವಡಿಸಿದ್ದು, ಕಾಡಾನೆ ಕಟ್ಟಿಹಾಕುವಲ್ಲಿ ಸಹಕಾರಿಯಾಗುತ್ತಾ ಎನ್ನುವುದನ್ನ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ