ರೈತರ ಮೇಲೆ ಕಾಳಜಿ ಇದ್ದರೆ ನಂದಿನಿ ಹಾಲಿನ ದರ ಹೆಚ್ಚಳವಲ್ಲ, ಬಾಕಿ ಇರುವ ಪ್ರೋತ್ಸಾಹ ಧನ ಬಿಡುಗಡೆ ಮಾಡಲಿ: ಹಾಲು ಉತ್ಪಾದಕರ ಆಗ್ರಹ

| Updated By: ಗಣಪತಿ ಶರ್ಮ

Updated on: Sep 18, 2024 | 10:50 AM

ರೈತರ ಹೆಸರು ಹೇಳಿಕೊಂಡು ನಂದಿನಿ ಹಾಲಿನ ದರ ಏರಿಕೆ ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಆದರೆ, ಸರ್ಕಾರಕ್ಕೆ ನಿಜಕ್ಕೂ ರೈತರ ಮೇಲೆ ಕಾಳಜಿ ಇದ್ದರೆ ರೈತರಿಗೆ ಬಾರಿ ಇರುವ ಕೋಟ್ಯಂತರ ರೂಪಾಯಿ ಪ್ರೋತ್ಸಾಹಧನ ಬಿಡುಗಡೆ ಮಾಡಲಿ ಎಂದು ಚಿಕ್ಕಬಳ್ಳಾಪುರ ಹಾಗೂ ಕೋಲಾರದ ರೈತರು, ಹಾಲು ಉತ್ಪಾದಕರು ಆಗ್ರಹಿಸಿದ್ದಾರೆ.

ರೈತರ ಮೇಲೆ ಕಾಳಜಿ ಇದ್ದರೆ ನಂದಿನಿ ಹಾಲಿನ ದರ ಹೆಚ್ಚಳವಲ್ಲ, ಬಾಕಿ ಇರುವ ಪ್ರೋತ್ಸಾಹ ಧನ ಬಿಡುಗಡೆ ಮಾಡಲಿ: ಹಾಲು ಉತ್ಪಾದಕರ ಆಗ್ರಹ
ಕೋಲಾರ ಹಾಲು ಉತ್ಪಾದಕರ ಒಕ್ಕೂಟ
Follow us on

ಕೋಲಾರ, ಸೆಪ್ಟೆಂಬರ್ 18: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಹೈನೋದ್ಯಮದಲ್ಲಿ ಕರ್ನಾಟಕದಲ್ಲೇ ಎರಡನೇ ಸ್ಥಾನ ಪಡೆದುಕೊಂಡಿವೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೈನೋದ್ಯಮ ನಂಬಿ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಲಕ್ಷಾಂತರ ಜನ ಹಾಲು ಉತ್ಪಾದಕರಿದ್ದಾರೆ. ಬಯಲು ಸೀಮೆಯ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳು ಕಳೆದ ಎರಡು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿವೆ. ಹೀಗಿರುವಾಗ ರಾಜ್ಯದಲ್ಲಿ ರೈತರು ಹಾಗೂ ಹಾಲು ಉತ್ಪಾದಕರ ನೆರವಿಗೆ ನಿಲ್ಲಬೇಕಿದ್ದ ರಾಜ್ಯ ಸರ್ಕಾರ ರೈತ ವಿರೋಧಿ ದೋರಣೆ ಅನುಸರಿಸುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಹಾಲು ಉತ್ಪಾದಕರ ನೆರವಿಗೆ ನಿಲ್ಲುವ ಉದ್ದೇಶದಿಂದ ನಂದಿನಿ ಹಾಲಿನ ದರವನ್ನು ಸುಮಾರು 5 ರೂಪಾಯಿ ಏರಿಕೆ ಮಾಡಿ ಅದನ್ನು ನೇರವಾಗಿ ರೈತರಿಗೆ ಕೊಡುವುದಾಗಿ ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈ ಹೇಳಿಕೆ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿದೆ. ಸರ್ಕಾರ ಈಗಾಗಲೇ ಎರಡು ಬಾರಿ ರೈತರ ಹೆಸರು ಹೇಳಿಕೊಂಡು ಹಾಲಿನ ದರ ಏರಿಕೆ ಮಾಡಿ ರೈತರಿಗೆ ಕೊಟ್ಟಿಲ್ಲ ಎಂದು ಹಾಲು ಉತ್ಪಾದಕರು ಆರೋಪಿಸಿದ್ದಾರೆ. ಜೊತೆಗೆ ಸರ್ಕಾರಕ್ಕೆ ನಿಜವಾಗಿಯೂ ರೈತರ ಮೇಲೆ ಕಾಳಜಿ ಇದ್ದರೆ ಮೊದಲು ಕಳೆದ 5 ತಿಂಗಳಿನಿಂದ ಹಾಲು ಉತ್ಪಾದಕರಿಗೆ ಬಾಕಿ ಇರುವ ಪ್ರೋತ್ಸಾಹ ಧನವನನ್ನು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ್ದಾರೆ.

ರೈತರನ್ನು ನಿರ್ಲಕ್ಷಿಸುತ್ತಿದೆ ಸರ್ಕಾರ: ಹಾಲು ಉತ್ಪಾದಕರ ಆರೋಪ

ಜಿಲ್ಲೆಯಲ್ಲಿ ಮಳೆ ಅಭಾವವಿದೆ, ಕಳೆದ ವರ್ಷದಂತೆ ಈವರ್ಷವೂ ಬರದ ಛಾಯೆ ಗೋಚರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಳದ ಚಿಂತನೆ ನಡೆಸುತ್ತಿದೆ. ಅದರ ಬದಲು ಹಾಲು ಉತ್ಪಾದಕರಿಗೆ ನೀಡಬೇಕಿದ್ದ ಪ್ರೋತ್ಸಾಹಧವನ್ನು ಕೂಡಲೇ ಬಿಡುಗಡೆ ಮಾಡಿ ರೈತರ ಹಾಗೂ ಹಾಲು ಉತ್ಪಾದಕರ ನೆರವಿಗೆ ನಿಲ್ಲಬೇಕಿತ್ತು. ಆದರೆ ಸರ್ಕಾರ ರೈತರನ್ನು ನಿರ್ಲ್ಯಕ್ಷ್ಯ ಮಾಡಿರುವುದಕ್ಕೆ ಇದು ನಿದರ್ಶನ ಎನ್ನುತ್ತಿದ್ದಾರೆ ರೈತರು.

ಬಿಡುಗಡೆಯಾಗಿಲ್ಲ 75 ಕೋಟಿ ರೂ. ಪ್ರೋತ್ಸಾಹ ಧನ

ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಸರಿ ಸುಮಾರು 1800 ಕ್ಕೂ ಹೆಚ್ಚು ಹಾಲು ಉತ್ಪಾದಕರ ಸ್ವಸಹಾಯ ಸಂಘಗಳಿವೆ. ಲಕ್ಷಾಂತರ ಕುಟುಂಬಗಳು ಹೈನೋದ್ಯಮದ ಮೇಲೆ ಅವಲಂಭಿತವಾಗಿದ್ದು ಜಿಲ್ಲೆಯಲ್ಲಿ ನಿತ್ಯ ಸುಮಾರು ಹತ್ತು ಲಕ್ಷ ಲೀಟರ್​ಗೂ ಹೆಚ್ಚು ಹಾಲು ಉತ್ಪಾದನೆ ಯಾಗುತ್ತಿದೆ. ಕಳೆದ ವರ್ಷ ಮಳೆ ಇಲ್ಲದೆ ಬೆಳೆದ ಬೆಳೆಗಳೆಲ್ಲಾ ಕೈಕೊಟ್ಟಿದ್ದವು. ಈ ಬಾರಿಯೂ ಮಳೆಯ ಅಭಾವ ಹೆಚ್ಚಾಗಿ ಮೇವಿನ ಕೊರತೆ ಹೆಚ್ಚಾಗುತ್ತಿದೆ. ಆದರೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರಿಗೆ ಕಳೆದ 5 ತಿಂಗಳಲ್ಲಿ ನೀಡಬೇಕಿದ್ದ 75 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ.

ಸದ್ಯ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಸುಮಾರು 75 ಕೋಟಿ ರೂಪಾಯಿ ಹಣ ಬಾಕಿ ಇದೆ. ಈ ಪೈಕಿ ಸಾಮಾನ್ಯ ವರ್ಗದ ಹಾಲು ಉತ್ಪಾದಕರಿಗೆ 5 ತಿಂಗಳ, ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಹಾಲು ಉತ್ಪಾದಕರಿಗೆ 2 ತಿಂಗಳ ಹಣ ಬಿಡುಗಡೆ ಬಾಕಿ ಇದೆ. ಈ ಕೂಡಲೇ ಸರ್ಕಾರ ಹಾಲು ಉತ್ಪಾದಕರಿಗೆ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನಂದಿನಿ ಹಾಲಿನ ಬೆಲೆ ಏರಿಕೆ ಪ್ರಯೋಜನ ರೈತರಿಗೆ ಸಿಗಲ್ಲ! ಹಾಲು ಉತ್ಪಾದಕರು ಹೇಳುವ ಲೆಕ್ಕಾಚಾರ ಇಲ್ಲಿದೆ

ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷರು ಮಾತ್ರ ಕೇವಲ 2 ತಿಂಗಳು ಹಣ ಬಾಕಿ ಇದೆ ಎಂದು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಸದ್ಯ ಹಲವು ವರ್ಗಗಳ ಅನುದಾನಗಳನ್ನು ನುಂಗಿ ಹಾಕಿದೆ ಎಂಬ ಮಾತು ಕೇಳಿಬಂದಿತ್ತು. ಈಗ ಆ ಪಟ್ಟಿಗೆ ಈಗ ಬಹುಶಃ ಹೈನುಗಾರಿಕೆಯೂ ಸೇರಿದೆ. ನಿಜಕ್ಕೂ ಸರ್ಕಾರಕ್ಕೆ ಗ್ಯಾರಂಟಿಗಳಿಂದ ಆರ್ಥಿಕ ಸಮಸ್ಯೆ ಎದುರಾಗಿಲ್ಲ ಎನ್ನುವುದಾದರೆ ಹಾಲು ಉತ್ಪಾದಕರ ಬಾಕಿ ಇರುವ ಪ್ರೋತ್ಸಾಹಧನ ಹಣ ಕೂಡಲೇ ಬಿಡುಗಡೆ ಮಾಡಲಿ ಎಂಬುದು ರೈತರ ಆಗ್ರಹವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:45 am, Wed, 18 September 24