‘ಮುಲ್ಲಾ ಅಂದ್ರೆ ಮುಸ್ಲಿಂ ಅಲ್ಲ ಅಂತಾ ಗೂಗಲ್​ನಲ್ಲಿ ನೋಡಿದ್ದೇನೆ’: ಬಂಧನಕ್ಕೆ ಹೆದರಲ್ಲ ಎಂದ ಸಿಟಿ ರವಿ

BJP MLC CT Ravi Controversy: ಸದ್ಯ ರಾಜ್ಯ ರಾಜಕೀಯದಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಸಿ.ಟಿ ರವಿ ‘ನಾನು ಮುಲ್ಲಾ ಅಂದಿದ್ದೇನೆ, ಮುಲ್ಲಾಗಳು ಅಂತಲ್ಲ’ ಎಂದು ಮತ್ತೊಮ್ಮೆ ಸಮರ್ಥನೆ ನೀಡಿದ್ದಾರೆ.

‘ಮುಲ್ಲಾ ಅಂದ್ರೆ ಮುಸ್ಲಿಂ ಅಲ್ಲ ಅಂತಾ ಗೂಗಲ್​ನಲ್ಲಿ ನೋಡಿದ್ದೇನೆ’: ಬಂಧನಕ್ಕೆ ಹೆದರಲ್ಲ ಎಂದ ಸಿಟಿ ರವಿ
ಸಿಟಿ ರವಿ
Image Credit source: tv9 kannada
Edited By:

Updated on: Jul 27, 2026 | 4:40 PM

ಮುಖ್ಯಾಂಶಗಳು

  • ನಾನು ಮುಲ್ಲಾ ಅಂದಿದ್ದೇನೆ, ಮುಲ್ಲಾಗಳು ಅಂತಲ್ಲ
  • ಮೇಷ್ಟ್ರನ್ನೂ ಕಾಂಗ್ರೆಸ್ಸಿಗರು ಜೈಲಿಗೆ ಹಾಕ್ತಾರಾ? ಸಿ.ಟಿ.ರವಿ ಪ್ರಶ್ನೆ
  • ಒಬ್ಬ ಮುಲ್ಲಾ ಬಗ್ಗೆ ಮಾತನಾಡಿದರೆ ತಕ್ಷಣ ಕೇಸ್ ಹಾಕುತ್ತಾರೆ ಎಂದ ರವಿ

ಕೊಪ್ಫಳ, ಜುಲೈ 27: ನೀಟ್ ಅಕ್ರಮ ಖಂಡಿಸಿ ದೆಹಲಿಯಲ್ಲಿ ನಡೆದಿದ್ದ ಪ್ರತಿಭಟನೆ ವಿರುದ್ಧ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ (BJP MLC CT Ravi) ನೀಡಿದ್ದ ‘ಮುಲ್ಲಾಗಳ ಎದೆ ಸೀಳಿದ್ರೆ 3 ಅಕ್ಷರವಿಲ್ಲ’ ಎಂಬ ವಿವಾದಾತ್ಮಕ ಹೇಳಿಕೆ ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ FIR ಕೂಡ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಎಂಎಲ್​ಸಿ ಸಿ.ಟಿ.ರವಿ, ‘ಮುಲ್ಲಾ ಅಂತಾ ಮಾತನಾಡಿದ್ದೇನೆ, ಮುಲ್ಲಾಗಳು ಅಂತಾ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೇಷ್ಟ್ರನ್ನೂ ಕಾಂಗ್ರೆಸ್ಸಿಗರು ಜೈಲಿಗೆ ಹಾಕ್ತಾರಾ? ಸಿ.ಟಿ.ರವಿ ಪ್ರಶ್ನೆ

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಂಎಲ್​ಸಿ ಸಿ.ಟಿ.ರವಿ, ‘‘ಮುಲ್ಲಾ ಅಂದ್ರೆ ಮುಸ್ಲಿಂ ಸಮುದಾಯ ಅಲ್ಲ. ಮುಲ್ಲಾ ಅಂದ್ರೆ ಮುಸ್ಲಿಂ ಅಲ್ಲ ಅಂತಾ ಗೂಗಲ್​ನಲ್ಲಿ ನೋಡಿದ್ದೇನೆ. ಮುಲ್ಲಾನಿನೂ ನೀಟ್​ಗೂ ಏನ್ ಸಂಬಂಧ ಅಂತಾ ಮಾತನಾಡಿದ್ದೇನೆ.  ಶಾಲೆಯಲ್ಲಿ ಮೇಷ್ಟ್ರು ಕೂಡ ಎದೆ ಸೀಳಿದರೆ ಅಕ್ಷರ ಇಲ್ಲ ಎಂದಿದ್ದಾರೆ‌. ಹಾಗಾದರೆ ಮೇಷ್ಟ್ರನ್ನೂ ಕಾಂಗ್ರೆಸ್ಸಿಗರು ಜೈಲಿಗೆ ಹಾಕ್ತಾರಾ ಎಂದು ಪ್ರಶ್ನಿಸಿದರು.

ಜೈಲಿಗೆ ಹೋಗಲು ಸಿದ್ಧ: ಸುಳ್ಳು ದೂರಿಗೆ ಹೆದರಲ್ಲ

‘‘ನನ್ನ ವಿರುದ್ಧ ಸುಳ್ಳು ದೂರು ಆಧರಿಸಿ ಬಂಧನ ಮಾಡಲು ಹೊರಟರೆ ಅದಕ್ಕೆ ನಾನು ಸಿದ್ಧನಿದ್ದೇನೆ. ನಾನು ಟೆರರಿಸ್ಟ್ ಅಲ್ಲ, ಸಾರ್ವಜನಿಕ ಜೀವನದಲ್ಲಿ ಇರುವವನು. ಸತ್ಯ ಹೇಳುವುದನ್ನು ನಾನು ಎಂದಿಗೂ ನಿಲ್ಲಿಸುವುದಿಲ್ಲ. ಹಿಂದುತ್ವದ ಪರ ಹಾಗೂ ಅನ್ಯಾಯದ ವಿರುದ್ಧ ಹೋರಾಡಿ ಜೈಲಿಗೆ ಹೋಗುವುದಕ್ಕೂ ಸಿದ್ಧ. ನಮಗೆ ಜನತಾ ನ್ಯಾಯಾಲಯ ಹಾಗೂ ಪ್ರಜಾಪ್ರಭುತ್ವದ ನ್ಯಾಯಾಲಯವೇ ಅಂತಿಮ. ಪೊಲೀಸರು ವಿಚಾರಣೆಗೆ ಕರೆದಿದ್ದು, ಪ್ರಸ್ತುತ ಬರಲು ಸಾಧ್ಯವಿಲ್ಲ ಎಂದು ವಕೀಲರ ಮೂಲಕ ತಿಳಿಸಿದ್ದೇನೆ. ನ್ಯಾಯಾಲಯದಲ್ಲೂ ಇದೇ ಮಾತನ್ನು ಹೇಳುತ್ತೇನೆ’’ ಎಂದರು.

ಜಾಮೀಯಾ ಮಸೀದಿ ಅಧ್ಯಕ್ಷನ ವಿರುದ್ಧ ದೂರು ನೀಡಿದ ಸಿಟಿ ರವಿ

ಜಾಮೀಯಾ ಮಸೀದಿ ಅಧ್ಯಕ್ಷ ಮುದಾಸೀರ್ ಪಾಷಾ ವಿರುದ್ಧ ದೂರು ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ‘‘ವಿಡಿಯೋಗಳಲ್ಲಿ ಒಬ್ಬ ಮುಲ್ಲಾ ನಡೆದುಕೊಂಡ ರೀತಿಯನ್ನು ನಾನು ಟೀಕಿಸಿದ್ದೆ. ಆದರೆ, ಅವರು ಇದನ್ನು ಇಡೀ ಮುಸ್ಲಿಂ ಸಮುದಾಯಕ್ಕೆ ಹೇಳಿದ್ದು ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು, ಮುಸ್ಲಿಮರನ್ನು ನನ್ನ ವಿರುದ್ಧ ಎತ್ತಿಕಟ್ಟುವ ಯತ್ನ ಮಾಡಿದ್ದಾರೆ. ಈ ಕುರಿತು ನಾನು ದೂರು ನೀಡಿದ್ದೇನೆ. ಸಿನಿಮಾಗಳಲ್ಲಿ ಪಂಡಿತರನ್ನು, ಅರ್ಚಕರನ್ನು ಅಪಮಾನಿಸಿದಾಗ ನಾವು ಇಡೀ ಹಿಂದೂ ಸಮಾಜಕ್ಕೆ ಅಪಮಾನ ಎಂದು ಭಾವಿಸಿಲ್ಲ. ಆದರೆ, ಇವರು ಒಬ್ಬ ಮುಲ್ಲಾನನ್ನು ಟೀಕಿಸಿದರೆ ತಮ್ಮ ಸಮುದಾಯಕ್ಕೆ ಅಂದುಕೊಳ್ಳುತ್ತಾರೆ’’ ಎಂದು ವಾಗ್ದಾಳಿ ಮಾಡಿದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ ಸಿಟಿ ರವಿ ‘‘ರಾಜ್ಯದಲ್ಲಿ ಕೆಪಿಎಸ್‌ಸಿ ಬಹುತೇಕ ಹುದ್ದೆಗಳಲ್ಲಿ ವ್ಯಾಪಾರ ನಡೆದಿದೆ. ಒಎಂಆರ್ ಶೀಟ್ ತಿದ್ದುವುದು ಮತ್ತು ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಕೆಲಸಗಳಾಗಿವೆ. ಕೇಂದ್ರದಲ್ಲಿ ತಮ್ಮದಲ್ಲದ ತಪ್ಪಿಗೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟರು. ಆದರೆ, ಇಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರೂ ಯಾರೂ ರಾಜೀನಾಮೆ ನೀಡುತ್ತಿಲ್ಲ. ಕಾಂಗ್ರೆಸ್‌ನವರು ಎರಡು ನಾಲಿಗೆಯಂತೆ ವರ್ತಿಸಬಾರದು’’ ಎಂದು ಕಿಡಿಕಾರಿದರು.

ಒಬ್ಬ ಮುಲ್ಲಾ ಬಗ್ಗೆ ಮಾತನಾಡಿದರೆ ತಕ್ಷಣ ಕೇಸ್ ಹಾಕುತ್ತಾರೆ ಎಂದ ರವಿ

ಇನ್ನು ನಿನ್ನೆ ಅರೆಸ್ಟ್ ಮಾಡುವ ರೀತಿ ಸ್ಥಿತಿ ಇತ್ತಾ ಎಂಬ ವಿಚಾರವಾಗಿ ಮಾತನಾಡಿದ ಅವರು, ‘‘ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ವಿರುದ್ಧ ಯೂಟ್ಯೂಬರ್ ಒಬ್ಬ ಅಪಪ್ರಚಾರ ಮಾಡಿದಾಗ ಯಾವುದೇ ಕೇಸ್ ದಾಖಲಾಗಲಿಲ್ಲ. ಭಗವದ್ಗೀತೆ, ರಾಮನ ಬಗ್ಗೆ ಮತ್ತು ಸನಾತನ ಧರ್ಮದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವವರ ಮೇಲೆ, ಹಿಂದೂ ಎಂದರೆ ಹಿಂಸೆ ಎಂದು ಲೋಕಸಭೆ ವಿಪಕ್ಷ ನಾಯಕರು ಹೇಳಿದಾಗ ಕೇಸ್ ಹಾಕುವ ಧೈರ್ಯ ಈ ಸರ್ಕಾರಕ್ಕಿದೆಯೇ? ಒಬ್ಬ ಮುಲ್ಲಾ ಬಗ್ಗೆ ಮಾತನಾಡಿದರೆ ತಕ್ಷಣ ಕೇಸ್ ಹಾಕುತ್ತಾರೆ. ತಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನನ್ನನ್ನು ಬಂಧಿಸಲು ಸಂಚು ರೂಪಿಸಿದ್ದಾರೆ. ಆದರೆ, ಬಡವರ, ರೈತರ ಮತ್ತು ಹಿಂದೂಗಳ ಧ್ವನಿಯಾಗಿ ಬಂದಿರುವ ನನ್ನ ಬಾಯನ್ನು ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ’’ ಎಂದು ಸಿಟಿ ರವಿ ಗುಡುಗಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:38 pm, Mon, 27 July 26

Follow Us