ಕೊಪ್ಪಳ, ಜೂನ್ 21: ಇತ್ತೀಚೆಗೆ ಯಾವುದೇ ಕೆಲಸವಾಗಬೇಕಾದರೆ ಕೂಡಾ ಆಧಾರ್ (Aadhaar) ಅಗತ್ಯ. ಆದರೆ ಇದೇ ಆಧಾರ್ ಮಾಡಿಸಲು ಜನರು ಇದೀಗ ಮತ್ತೆ ಪರದಾಡುವಂತಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ವರಗೆ ಹೊಸದಾಗಿ ಆಧಾರ್ ಮಾಡಿಸಲು, ತಿದ್ದುಪಡಿ ಮಾಡಲು ದಿನಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೊಪ್ಪಳ (Koppal) ಜಿಲ್ಲೆಯ ಹಲವಡೆ ಜನರ ಪಾಡು ದೇವರಿಗೇ ಪ್ರೀತಿ ಅನ್ನುವಂತಹ ಸ್ಥಿತಿಯಿದೆ.
ಸರದಿ ಸಾಲಿನಲ್ಲಿ ನಿಂತು, ತಮ್ಮ ಸರದಿ ಯಾವಾಗ ಬರುತ್ತೋ, ಯಾವಾಗ ಮನೆಗೆ ಹೋಗುತ್ತೇವೋ, ಶಾಲೆಗೆ ಯಾವಾಗ ಹೋಗುವುದೋ ಎಂಬ ಆತಂಕದಲ್ಲಿ ಮಕ್ಕಳಿದ್ದರೆ, ಇನ್ನೊಂದಡೆ ಹೆತ್ತವರು ಕೂಡಾ ಒಂದು ದಿನದ ದುಡಿಮೆ ಬಿಟ್ಟು ಬಂದಿದ್ದೇವೆ. ಯಾವಾಗ ನಮ್ಮ ಸರದಿ ಬರುತ್ತೋ ಅಂತ ಕಾಯುತ್ತಿದ್ದರು. ಪುಟ್ಟ ಪುಟ್ಟ ಮಕ್ಕಳು ನಿಂತು ನಿಂತು ಸುಸ್ತಾಗಿ ಅಲ್ಲಿಯೇ ಮಲಗಿ ಬಿಟ್ಟಿದ್ದರು. ಇಂತಹದೊಂದು ದೃಶ್ಯಗಳು ಪ್ರತಿನಿತ್ಯ ಕಾಣ್ತಿರೋದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ. ಇನ್ನು ಇವರೆಲ್ಲಾ ಮುಂಜಾನೆಯಿಂದ ಸಂಜೆವರಗೆ ಕಾಯುತ್ತಿರುವುದು ಆಧಾರ್ಗಾಗಿ.
ಇದೀಗ ಶಾಲೆಗೆ ಅಡ್ಮಿಶಶ್ನಿಂದ ಹಿಡಿದು ವೃದ್ಧರ ಪಿಂಚಣಿ ಪಡೆಯಬೇಕಾದರೂ ಕೂಡಾ ಆಧಾರ ಕಾರ್ಡ್ ಬೇಕೇಬೇಕು. ಆಧಾರ ಇದ್ದರೆ ಮಾತ್ರ ಮುಂದಿನ ಕೆಲಸ ಎಂಬ ಸ್ಥಿತಿ ಎಲ್ಲೆಡೆ ಇದೆ. ಆದರೆ ಇದೇ ಆಧಾರ ಕಾರ್ಡ್ ಮಾಡಿಸಬೇಕಾದರೆ, ಆಧಾರ್ ತಿದ್ದುಪಡಿ ಮಾಡಬೇಕಾದರೆ ಜನರು ಸಾಕಷ್ಟು ಪಡಿಪಾಟಲು ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಜನರು ಆಧಾರಗಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಡೀ ಯಲಬುರ್ಗಾ ತಾಲೂಕಿನಲ್ಲಿ ಆಧಾರ ಸೇವೆ ಇರುವುದು, ಯಲಬುರ್ಗಾ ತಹಶೀಲ್ದಾರ್ ಕಚೇರಿಯಲ್ಲಿರುವ ಒಂದೇ ಕೇಂದ್ರದಲ್ಲಿ. ಈ ಹಿಂದೆ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಹೋಬಳಿಯಲ್ಲಿ ಕೇಂದ್ರವಿತ್ತು. ಆದ್ರೆ ಕಳೆದ ಕೆಲ ದಿನಗಳಿಂದ ಆ ಕೇಂದ್ರ ಬಂದ್ ಆಗಿರೋದರಿಂದ, ಇಡೀ ತಾಲೂಕಿನ ಜನರು, ತಹಶೀಲ್ದಾರ್ ಕಚೇರಿಗೆ ಬಂದು ಆಧಾರ್ ಸೇವೆ ಪಡೆಯುತ್ತಿದ್ದಾರೆ.
ಅನೇಕರು ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಲು ಬಂದರೆ, ಇನ್ನು ಅನೇಕರು ಹೆಸರು, ವಿಳಾಸ ತಿದ್ದುಪಡಿಗಾಗಿ ಬರ್ತಿದ್ದಾರೆ. ಆದ್ರೆ ಯಲಬುರ್ಗಾದಲ್ಲಿ ಇರೋದು ಒಂದೇ ಕೇಂದ್ರ, ಒಬ್ಬನೇ ಸಿಬ್ಬಂದಿ. ಹೀಗಾಗಿ ಜನರು ಆಧಾರ ಕೇಂದ್ರದಲ್ಲಿ ಮುಗಿಬೀಳುತ್ತಿದ್ದಾರೆ. ಮುಂಜಾನೆ ಆರು ಗಂಟೆಗೆ ಬಂದು ಸರದಿ ಸಾಲಿನಲ್ಲಿ ಮಕ್ಕಳನ್ನು ಕರೆದುಕೊಂಡು ಬಂದು ನಿಲ್ಲೋ ಪಾಲಕರು, ಸಂಜೆವರಗೆ ಅಲ್ಲಿಯೇ ಕಾಯುತ್ತಿದ್ದಾರೆ. ಅನೇಕರಿಗೆ ಒಂದೇ ದಿನದಲ್ಲಿ ಅವಕಾಶ ಸಿಕ್ಕರೆ, ಇನ್ನು ಅನೇಕರು ಎರಡ್ಮೂರು ದಿನ ಕಾದ ಮೇಲೆ ಅವಕಾಶ ಸಿಗುತ್ತಿದೆ. ಹೀಗಾಗಿ ಸಾಕಷ್ಟು ತೊಂದರೆಯಾಗ್ತಿದೆ ಅಂತಿದ್ದಾರೆ ಸಾರ್ವಜನಿಕರು.
ಯಲಬುರ್ಗಾ ಮಾತ್ರವಲ್ಲ, ಕೊಪ್ಪಳ ಸೇರಿದಂತೆ ರಾಜ್ಯದ ಹಲವಡೆ ಆಧಾರ ಸೇವೆ ಪಡೆಯಲು ಜನರು ಪರದಾಡುತ್ತಿದ್ದಾರೆ. ಜನರ ಪರದಾಟಕ್ಕೆ ಪ್ರಮುಖ ಕಾರಣ, ಆಧಾರ್ ಸೇವೆ ನೀಡುತ್ತಿದ್ದ ಕೆಲ ಕೇಂದ್ರಗಳನ್ನು ಬಂದ್ ಮಾಡಿರುವುದು. ಕಂದಾಯ ಇಲಾಖೆಯಡಿ ಕೆಲಸ ನಿರ್ವಹಿಸುತ್ತಿರುವ ರಾಜ್ಯ ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯ, ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಆಧಾರ ಆಪರೇಟರ್ ಗಳ ಸಂಖ್ಯೆಯನ್ನು ಕಳೆದ ಎಪ್ರಿಲ್ 30 ರಿಂದ ದಿಡೀರನೆ ಕಡಿಮೆ ಮಾಡಲಾಗಿದೆ. ಅದರ ಪರಿಣಾಮ, ರಾಜ್ಯದ 416 ಆಧಾರ ಕೇಂದ್ರಗಳ ಪೈಕಿ, 116 ಕೇಂದ್ರಗಳನ್ನು ಬಂದ್ ಮಾಡಲಾಗಿದೆ.
ಸದ್ಯ ರಾಜ್ಯದಲ್ಲಿ ಮುನ್ನೂರು ಕೇಂದ್ರಗಳಲ್ಲಿ ಮಾತ್ರ ಆಧಾರ ಸೇವೆ ಲಭ್ಯವಾಗುತ್ತಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿರುವ 116 ಕೇಂದ್ರಗಳು ಇದೀಗ ಬಂದ್ ಆಗಿದ್ದು, ಆ ಪೈಕಿ ಕೊಪ್ಪಳ ಜಿಲ್ಲೆಯಲ್ಲಿ ಕೂಡಾ ಆರು ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಜಿಲ್ಲೆಯ ಪ್ರತಿ ತಾಲೂಕಿಗೆ ಒಂದೊಂದು ಕೇಂದ್ರವನ್ನು ಬಂದ್ ಮಾಡಲಾಗಿದೆ. ಹೀಗಾಗಿ ಹೋಬಳಿ ಮಟ್ಟದಲ್ಲಿ ಇದ್ದ ಆಧಾರ್ ಕೇಂದ್ರಗಳು ಬಂದಾಗಿದ್ದು, ತಾಲೂಕಿಗೆ ಇರೋ ಒಂದೇ ಆಧಾರ್ ಕೇಂದ್ರಕ್ಕೆ ಜನರು ಮುಗಿಬೀಳುತ್ತಿದ್ದಾರೆ. ಇನ್ನು ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ಅಟಲಜೀ ನಿರ್ದೇಶನಾಲಯದ ಸೂಚನೆ ಮೇರೆಗೆ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಆಗುತ್ತಿರುವ ಸಮಸ್ಯೆಯನ್ನು ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ ಅಂತ ಹೇಳ್ತಿದ್ದಾರೆ.
ಇದನ್ನೂ ಓದಿ: ಟಿವಿ9 ಬಿಗ್ ಇಂಪ್ಯಾಕ್ಟ್: ಕೊಪ್ಪಳ ಜಿಲ್ಲಾಸ್ಪತ್ರೆ ಅವ್ಯವಸ್ಥೆ, ಅಧಿಕಾರಿಗಳಿಗೆ ಸಚಿವ ತಂಗಡಗಿ ಫುಲ್ ಕ್ಲಾಸ್
ಸದ್ಯ ಕೊಪ್ಪಳ ಜಿಲ್ಲೆಯಲ್ಲಿ ಆಧಾರ ಕೇಂದ್ರದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಜಿಲ್ಲಾಡಳಿತ ಮತ್ತು ಸರ್ಕಾರ ಮಾಡಬೇಕಿದೆ. ಹೆಚ್ಚುವರಿ ಕೇಂದ್ರಗಳಲ್ಲಿ ಅಧಾರ ಸೇವೆ ನೀಡಿದರೆ ಜನರಿಗೆ ತೊಂದರೆ ನಿವಾರಣೆಯಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ