ತುಂಗಭದ್ರಾ ಡ್ಯಾಂ ಬಗ್ಗೆ ಸರ್ಕಾರದಿಂದ ಬಿಗ್ ಅಪ್​ಡೇಟ್: ರೈತರು ಫುಲ್ ಖುಷ್

ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್ ಗೇಟ್ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ, ಈಗ 33 ಗೇಟ್‌ಗಳ ಜೊತೆಗೆ ಹಳೆಯ ಚೈನ್‌ಗಳನ್ನೂ ಬದಲಾಯಿಸಲು ನಿರ್ಧರಿಸಿದೆ. ರೈತರ ಒತ್ತಾಯಕ್ಕೆ ಮಣಿದು 5.5 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಮೇ ಅಂತ್ಯದೊಳಗೆ ಹೊಸ ಗೇಟ್ ಮತ್ತು ಚೈನ್ ಅಳವಡಿಕೆ ಪೂರ್ಣಗೊಳ್ಳಲಿದೆ.

ತುಂಗಭದ್ರಾ ಡ್ಯಾಂ ಬಗ್ಗೆ ಸರ್ಕಾರದಿಂದ ಬಿಗ್ ಅಪ್​ಡೇಟ್: ರೈತರು ಫುಲ್ ಖುಷ್
ತುಂಗಭದ್ರಾ ಡ್ಯಾಂ
Image Credit source: tv9
Edited By:

Updated on: Mar 26, 2026 | 11:45 AM

ಕೊಪ್ಪಳ, ಮಾರ್ಚ್ 26: ತುಂಗಭದ್ರಾ ಜಲಾಶಯದ (Tungabhadra Dam) ಕ್ರೆಸ್ಟ್ ಗೇಟ್ ಸಂಖ್ಯೆ 19 ಕಿತ್ತುಹೋದ ಘಟನೆ ಬಳಿಕ ಎರಡು ವರ್ಷಗಳಿಂದ ನಾಲ್ಕು ಜಿಲ್ಲೆಗಳ ರೈತರು ಎದುರಿಸುತ್ತಿದ್ದ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಗೇಟ್‌ಗಳ ಬದಲಾವಣೆಯ ಜೊತೆಗೆ ಇದೀಗ ಅವುಗಳನ್ನು ಕಾರ್ಯನಿರ್ವಹಿಸಲು ಅಗತ್ಯವಾದ ಚೈನ್‌ಗಳನ್ನೂ ಬದಲಾಯಿಸಲು ನಿರ್ಧರಿಸಲಾಗಿದೆ. 2024ರ ಆಗಸ್ಟ್ 10ರಂದು ರಾತ್ರಿ ಕ್ರೆಸ್ಟ್ ಗೇಟ್ ಸಂಖ್ಯೆ 19 ಕಿತ್ತುಹೋಗಿದ್ದು, ಇದಕ್ಕೆ ಮೂಲ ಕಾರಣ ಗೇಟ್‌ಗಳ ಅವಧಿ ಮೀರಿದ್ದರೂ ಅವುಗಳನ್ನು ಬದಲಾಯಿಸದಿರುವುದು ಹಾಗೂ ಚೈನ್ ಡಿಲಿಂಕ್ ಆಗಿರುವುದು ಎಂದು ತಜ್ಞರು ತಿಳಿಸಿದ್ದರು. ಈ ಘಟನೆ ನಂತರ ಸರ್ಕಾರ ಎಚ್ಚೆತ್ತುಕೊಂಡು ಸಂಪೂರ್ಣ ಗೇಟ್‌ಗಳ ಬದಲಾವಣೆಗೆ ಮುಂದಾಯಿತು.

ಸುಮಾರು 42 ಕೋಟಿ ರೂ. ವೆಚ್ಚದಲ್ಲಿ 33 ಗೇಟ್‌ಗಳನ್ನು ಬದಲಾಯಿಸುವ ಕಾಮಗಾರಿ ಆರಂಭವಾದರೂ, ಆರಂಭದಲ್ಲಿ ಚೈನ್‌ಗಳನ್ನು ಬದಲಾಯಿಸದೇ ಹಳೆಯ ಚೈನ್‌ಗಳನ್ನೇ ಮುಂದುವರಿಸಲು ನಿರ್ಧರಿಸಲಾಗಿತ್ತು. ಇದಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಸರ್ಕಾರ ತನ್ನ ನಿರ್ಧಾರವನ್ನು ಪರಿಷ್ಕರಿಸಿದೆ.

ತುಂಗಭದ್ರಾ ಡ್ಯಾಂ ಎಲ್ಲ ಗೇಟ್​ಗಳಿಗೆ ಹೊಸ ಚೈನ್

ಇದೀಗ ಎಲ್ಲಾ 33 ಗೇಟ್‌ಗಳಿಗೆ ಹೊಸ ಚೈನ್‌ಗಳನ್ನು ಅಳವಡಿಸಲು ಸುಮಾರು 5.5 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಗೇಟ್‌ಗಳ ಜೊತೆಗೆ ಚೈನ್‌ಗಳನ್ನೂ ಬದಲಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಇದೀಗ ಕಾಮಗಾರಿ ವೇಗ ಪಡೆದುಕೊಂಡಿದ್ದು, ಈಗಾಗಲೇ 18 ಗೇಟ್‌ಗಳ ಡಿಮೆಟಲಿಂಗ್ ಕಾರ್ಯ ಪೂರ್ಣಗೊಂಡಿದೆ. ಐದು ಹೊಸ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಉಳಿದ ಗೇಟ್‌ಗಳ ಕಾರ್ಯವೂ ನಿರಂತರವಾಗಿ ಸಾಗುತ್ತಿದೆ. ಗುತ್ತಿಗೆ ಪಡೆದ ಕಂಪನಿಗೆ ಮೇ ಅಂತ್ಯದೊಳಗೆ ಎಲ್ಲ ಗೇಟ್‌ಗಳನ್ನು ಅಳವಡಿಸಲು ಸರ್ಕಾರ ಗಡುವು ನೀಡಿದೆ.

ಸಚಿವ ಬೋಸರಾಜು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ, ಮೇ ಅಂತ್ಯ ಅಥವಾ ಜೂನ್ ಮೊದಲ ವಾರದೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಮೊದಲ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿ: ಅದರ ಭಾರ, ಅಗಲ-ಉದ್ದ ಎಷ್ಟು ಗೊತ್ತಾ?

ಇನ್ನೊಂದೆಡೆ, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ಆತಂಕವೂ ವ್ಯಕ್ತವಾಗುತ್ತಿದೆ. ಗೇಟ್ ಬದಲಾವಣೆ ವಿಳಂಬವಾದರೆ ಮುಂದಿನ ವರ್ಷವೂ ಬೇಸಿಗೆ ಬೆಳೆಗಾಗಿ ನೀರಿನ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಮನ್ವಯದಿಂದ ಕೆಲಸ ಮಾಡಿ, ರೈತರ ಸಮಸ್ಯೆ ಶೀಘ್ರದಲ್ಲೇ ಪರಿಹರಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಒಟ್ಟಾರೆ, ತುಂಗಭದ್ರಾ ಜಲಾಶಯದ ಗೇಟ್ ಬದಲಾವಣೆ ಕಾರ್ಯ ಈಗ ನಿರ್ಣಾಯಕ ಹಂತ ತಲುಪಿದ್ದು, ಸಮಯಕ್ಕೆ ಸರಿಯಾಗಿ ಪೂರ್ಣಗೊಂಡರೆ ಸಾವಿರಾರು ರೈತರು ನಿರಾಳರಾಗಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us