ಆಪರೇಷನ್ ಹಸ್ತದ ಜತೆಗೆ ಆಪರೇಷನ್ ಬಿಬಿಎಂಪಿ ಶುರು, ಸಾಲು-ಸಾಲು ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ

ಬಿಬಿಎಂಪಿ ಹಾಗೂ ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ಸಿದ್ಧತೆ ನಡೆಸಿದ್ದು, ಕಾಂಗ್ರೆಸ್ ಆಪರೇಷನ್ ಹಸ್ತದ ಜತೆಗೆ ಆಪರೇಷನ್ ಬಿಬಿಎಂಪಿ ಶುರು ಮಾಡಿಕೊಂಡಿದೆ. ಹೀಗಾಗಿ ಬೇರೆ ಬೇರೆ ಪಕ್ಷಗಳ ನಾಯಕರಿಗೆ ಗಾಳ ಹಾಕಿದೆ. ಆರ್​​ಆರ್​ ನಗರ ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೆ ಇದೀಗ ಕೆಆರ್​ ಪುರ ಬಿಜೆಪಿ ಮಾಜಿ ಕಾರ್ಪೋರೇಟರ್​ಗಳು ಕೈ ಹಿಡಿದಿದ್ದಾರೆ. ಇದರಿಂದ ಬಿಜೆಪಿಗೆ ದಿಕ್ಕುತೋಚದಂತಾಗಿದೆ.

ಆಪರೇಷನ್ ಹಸ್ತದ ಜತೆಗೆ ಆಪರೇಷನ್ ಬಿಬಿಎಂಪಿ ಶುರು, ಸಾಲು-ಸಾಲು ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ
ಕಾಂಗ್ರೆಸ್ ಸೇರ್ಪಡೆಯಾದ ಬಿಜೆಪಿ ಮಾಜಿ ಕಾರ್ಪೋರೇಟರ್​ಗಳು
Edited By:

Updated on: Aug 21, 2023 | 1:29 PM

ಬೆಂಗಳೂರು, (ಆಗಸ್ಟ್ 21): ಮುಂಬರುವ ಲೋಕಸಭಾ (Loksabha Elctions 2024) ಹಾಗೂ ಬಿಬಿಎಂಪಿ ಚುನಾವಣೆಗೆ (BBMP Elections ) ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ (Congress)​, ಸದ್ದಿಲ್ಲದೇ ಬೇರೆ ಪಕ್ಷದ ನಾಯಕರಿಗೆ ಗಾಳ ಹಾಕಿದ್ದು,ಇದೀಗ ಆಪರೇಷನ್​​​ ಹಸ್ತದ (Opeation Hasta) ಜೊತೆ ಆಪರೇಷನ್ ಬಿಬಿಎಂಪಿ ಶುರು ಮಾಡಿಕೊಂಡಿದೆ. ಮತ್ತೊಂದೆಡೆ ಕಾಂಗ್ರೆಸ್​ನ ಅಸ್ತ್ರದಿಂದ ತಮ್ಮ ನಾಯಕರನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಆದರೂ ಸಹ ಇಂದು (ಆಗಸ್ಟ್ 21) ಹಲವು ಮಾಜಿ ಕಾರ್ಪೊರೇಟರ್​ಗಳು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. KR ಪುರ ಕ್ಷೇತ್ರದ ಮಾಜಿ ಕಾರ್ಪೊರೇಟರ್‌ಗಳಾದ ವೀರಣ್ಣ, ಶ್ರೀನಿವಾಸ ಅವರು ಇಂದು (ಆಗಸ್ಟ್ 21) ಕುಮಾರಕೃಪಾ ಗೆಸ್ಟ್​​​ಹೌಸ್​​​ನಲ್ಲಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಆರ್.ಆರ್ ನಗರದ ಕ್ಷೇತ್ರದ ಬಿಜೆಪಿ ಮಾಜಿ ಕಾರ್ಪೊರೇಟರ್‌ಗಳು ಕಾಂಗ್ರೆಸ್​ ಸೇರ್ಪಡೆಯಾದ ಬಳಿಕ ಇದೀಗ ಕೆ.ಆರ್ ಪುರ ಕ್ಷೇತ್ರದ ಮಾಜಿ ಕಾರ್ಪೋರೇಟ್​ಗಳು ಕೈ ಹಿಡಿದರು.

ವಿಜಿನಾಪುರ ವಾರ್ಡ್ ಮಾಜಿ ಕಾರ್ಪೋರೇಟರ್​ ರಾಜಣ್ಣ (ಬಂಡೆ) , ಕೆ.ಆರ್ ಪುರ ವಾರ್ಡ್ ಮಾಜಿ ಕಾರ್ಪೋರೇಟರ್​ ವೀರಣ್ಣ ಅವರು ಕಾಂಗ್ರೆಸ್​ ಸೇರ್ಪಡೆಯಾಗಿದ್ದು, ಈ ವೇಳೆ ಸಚಿವ ಬೈರತಿ ಸುರೇಶ್ ಕೂಡ ಉಪಸ್ಥಿತರಿದ್ದರು. ಕೆಲ ದಿನಗಳಿಂದ ಅಷ್ಟೇ ಆರ್​ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ಬೆಂಬಲಿಗರ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಕೆಆರ್ ಪುರಂ ಕ್ಷೇತ್ರದಲ್ಲೂ ಸದ್ದಿಲ್ಲದೇ ಬಿಜೆಪಿ ಶಾಸಕರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಬಿಜೆಪಿಗೆ ಆತಂಕ ಶುರುವಾಗಿದೆ.

ಇದನ್ನೂ ಓದಿ: ಬಿಜೆಪಿಯತ್ತ ಮುಖ ಮಾಡಿದ ಅಖಂಡ ಶ್ರೀನಿವಾಸ್ ಮೂರ್ತಿ, ಇತ್ತ ಡಿಕೆ ಶಿವಕುಮಾರ್​ ಭೇಟಿಯಾದ ಬಿಜೆಪಿ ಹಿರಿಯ ನಾಯಕ

ಇನ್ನು ಇಂದು ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಜೆಡಿಎಸ್​, ಬಿಜೆಪಿ ಮುಖಂಡರು ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಆಯನೂರು ಮಂಜುನಾಥ್, ಶಿಕಾರಿಪುರ ನಾಗರಾಜ್ ಗೌಡ ಅಧಿಕೃತವಾಗಿ ಕೈ ಹಿಡಿಯಲಿದ್ದಾರೆ. ಇನ್ನು ಆಪರೇಷನ್​ ಹಸ್ತದಲ್ಲಿ ಭಾರೀ ಸುದ್ದಿಯಾಗಿರುವ ಯಶವಂತಪುರ ಬಿಜೆಪಿ ಶಾಸಕ ಎಸ್​.ಟಿ.ಸೋಮಶೇಖರ್​ ಬೆಂಬಲಿಗರು ಕೂಡ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೊದಲು ತಮ್ಮ ಬೆಂಬಲಿಗರನ್ನು ಕಾಂಗ್ರೆಸ್​​ ಪಕ್ಷಕ್ಕೆ ಕಳಿಸುವುದು. ಬಳಿಕ ಕಾಂಗ್ರೆಸ್ ಸೇರುವ ಲೆಕ್ಕಾಚಾರದಲ್ಲಿ ಎಸ್​.ಟಿ.ಸೋಮಶೇಖರ್​ ಇದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಎಸ್​.ಟಿ.ಸೋಮಶೇಖರ್​ ನಡೆ ನಿಗೂಢವಾಗಿದ್ದು, ಅವರ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ.

ಸದ್ಯ ಆರ್​ಆರ್​ ನಗರ, ಕೆಆರ್​ ಪುರ ಕ್ಷೇತ್ರದಲ್ಲಿ ಆಪರೇಷನ್ ಸಕ್ಸಸ್ ಆಗಿದೆ. ಇದೀಗ ಎಸ್​​ಟಿ ಸೋಮಶೇಖರ್​ ಅವರ ಯಶವಂತಪುರ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಗಾಳ ಹಾಕಿದೆ.  ಹೀಗೆ ಬೆಂಗಳೂರು ನಗರದಲ್ಲಿ ಒಂದೊಂದೇ ಏರಿಯಾದ ಬಿಜೆಪಿ ನಾಯಕರನ್ನು ಕಾಂಗ್ರೆಸ್​ ಸರಳೆಯುತ್ತಿದ್ದು, ಬಿಜೆಪಿಗೆ ದಿಕ್ಕುತೋಚದಂತಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 1:20 pm, Mon, 21 August 23

Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Follow Us