ಹೈಕೋರ್ಟ್‌ ಛೀಮಾರಿ ಬೆನ್ನಲ್ಲೇ ರಸ್ತೆಗಿಳಿದ ಸಾರಿಗೆ ಬಸ್​ಗಳು, ಪ್ರಯಾಣಿಕರು ಖುಷ್​

ಕರ್ನಾಟಕದ ಸಾರಿಗೆ ನೌಕರರ ಮುಷ್ಕರವು ಹೈಕೋರ್ಟ್‌ನ ಖಡಕ್ ಎಚ್ಚರಿಕೆಯ ನಂತರ ಅಂತ್ಯಗೊಂಡಿದೆ. ನಾಲ್ಕೂ ಸಾರಿಗೆ ನಿಗಮಗಳ ಬಸ್​ಗಳ ಸಂಚಾರವು ಪುನರಾರಂಭಗೊಂಡಿದೆ. ಪ್ರಯಾಣಿಕರು ಖುಷಿಪಟ್ಟಿದ್ದಾರೆ. ಜೊತೆಗೆ ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ. ಸಾರಿಗೆ ನೌಕರರ ಮುಷ್ಕರ ಮುಂದೂಡಿದ್ದೇವೆ ಎಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್​ ಅನಂತ್ ಸುಬ್ಬರಾವ್​ ಘೋಷಿಸಿದ್ದಾರೆ.

ಹೈಕೋರ್ಟ್‌ ಛೀಮಾರಿ ಬೆನ್ನಲ್ಲೇ ರಸ್ತೆಗಿಳಿದ ಸಾರಿಗೆ ಬಸ್​ಗಳು, ಪ್ರಯಾಣಿಕರು ಖುಷ್​
ಕೆಎಸ್​ಆರ್​ಟಿಸಿ ಬಸ್​
Updated By: ವಿವೇಕ ಬಿರಾದಾರ

Updated on: Aug 05, 2025 | 6:02 PM

ಬೆಂಗಳೂರು, ಆಗಸ್ಟ್​ 05: ಕರ್ನಾಟಕ ಹೈಕೋರ್ಟ್ (High Court) ಖಡಕ್​ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮುಷ್ಕರ ಕೈಬಿಟ್ಟ ಸಾರಿಗೆ ನೌಕರರು ಮತ್ತೆ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದು, ರಾಜ್ಯಾದ್ಯಂತ ನಾಲ್ಕೂ ನಿಗಮಗಳ (KSRTC, NWKRTC, KKRTC, BMTC) ಬಸ್​ ಸಂಚಾರ ಆರಂಭವಾಗಿವೆ. ಬೆಂಗಳೂರಿನ ಕೆಂಪೇಗೌಡ ಬಸ್​ ನಿಲ್ದಾಣ (ಮೆಜೆಸ್ಟಿಕ್​) ಬಸ್​ ನಿಲ್ದಾಣದಿಂದ ಬಸ್‌ಗಳ ಸಂಚಾರ ಶುರುಮಾಡಿವೆ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಓಡಾಟ ನಡೆಸಿದೆ. ಬಸ್​ ಸಂಚಾರ ಆರಂಭವಾಗಿದ್ದರಿಂದ ಪ್ರಯಾಣಿಕರು ಖುಷ್​ ಆಗಿದ್ದಾರೆ. ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಕೂಡ ಬಿಎಂಟಿಸಿ ಬಸ್​ಗಳು ಸಂಚಾರ ಆರಂಭಿಸಿವೆ.

ಬಸ್​ ಸಂಚಾರ ಆರಂಭವಾಗಿದ್ದರಿಂದ ಪ್ರಯಾಣಿಕರು ಖುಷಿಯಾಗಿದ್ದಾರೆ. “ನಾವು ಬೆಳಗ್ಗೆ ನಿಮಾನ್ಸ್ ಆಸ್ಪತ್ರೆಗೆ ಖಾಸಗಿ ವಾಹನ ಮಡಿಕೊಂಡು ಬಂದಿದ್ದೇವೆ. ವಾಪಸ್​ ಹೋಗುವುದು ಹೇಗೆ? ಖಾಸಗಿ ವಾಹನದ ಬಾಡಿಗೆ ದುಬಾರಿ ಎಂಬ ಚಿಂತೆಯಲ್ಲಿದ್ವಿ. ಈಗ ಬಸ್​ ಸಂಚಾರ ಆರಂಭವಾಗಿದ್ದು, ನಿರಾಳರಾಗಿದ್ದೇವೆ. ಕೋರ್ಟ್ ಆದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕು ಸರ್ಕಾರವು ನೌಕರರ ಬೇಡಿಕೆಗಳನ್ನು ಪೂರೈಸಬೇಕು ಎಂದು ಪ್ರಯಾಣಿಕರು ಹೇಳಿದರು.

ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ಕೂಡ ಬಸ್ ಸಂಚಾರ ಎಂದಿನಂತೆ ಆರಂಭವಾಗಿದೆ. ಕಲಬುರಗಿಯ ಮೂರು ಡಿಪೋಗಳಿಂದ ಬಸ್‌ಗಳ ಬಸ್ ನಿಲ್ದಾಣದತ್ತ ಆಗಮಿಸುತ್ತಿವೆ.

ಇದನ್ನೂ ಓದಿ: ಮುಷ್ಕರ ನಡೆಸಿದ ಸಾರಿಗೆ ಸಂಘಟನೆಗೆ ಹೈಕೋರ್ಟ್ ತರಾಟೆ, ಅರೆಸ್ಟ್ ಎಚ್ಚರಿಕೆಗೆ ಅಧ್ಯಕ್ಷರು ಥಂಡಾ!

ಬಸ್​ ಸಂಚಾರ ಬಂದ್​ ಏಕೆ?

ತಮ್ಮ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಸಾರಿಗೆ ಇಲಾಖೆ ನೌಕರರು ಮಂಗಳವಾರ ಮುಷ್ಕರ ನಡೆಸಿದರು. ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗಿಲ್ಲ. ಇದರಿಂದ ನಾಲ್ಕೂ ನಿಗಮಗಳ ಬಸ್​ ಸಂಚಾರ ಸ್ಥಗಿತಗೊಂಡಿದ್ದವು.

ಕೋರ್ಟ್​ ಸೂಚನೆ ಬೆನ್ನಲ್ಲೇ ಬಸ್ ಸಂಚಾರ ಆರಂಭ

ನಿಮ್ಮ ಸಮಸ್ಯೆ ಇದ್ದರೆ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಜನಸಾಮಾನ್ಯರನ್ನು ಒತ್ತೆಯಾಗಿರಿಸುವುದನ್ನು ಸಹಿಸುವುದಿಲ್ಲ. ಹೈಕೋರ್ಟ್ ಆದೇಶವಿದ್ದರೂ ನೀವು ಅದನ್ನು ಪಾಲಿಸಿಲ್ಲ. ಎಸ್ಮಾ ಕಾಯ್ದೆಯಡಿ ಸಂಘಟನೆಯ ಪದಾಧಿಕಾರಿಗಳನ್ನು ಬಂಧಿಸಬಹುದು ಎಂದು ಸಾರಿಗೆ ಸಂಘಟನೆಗೆ ತರಾಟೆಗೆ ತೆಗೆದುಕೊಂಡಿತು. ಹೈಕೋರ್ಟ್​ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಸಾರಿಗೆ ನೌಕರರು ಮುಷ್ಕರವನ್ನು ಮುಂದೂಡಿ, ಕೆಲಸಕ್ಕೆ ಹಾಜರಾಗಿದ್ದಾರೆ. ಎಂದಿನಂತೆ ನಾಲ್ಕೂ ನಿಗಮಗಳ ಬಸ್​ ಸಂಚಾರ ಆರಂಭವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:01 pm, Tue, 5 August 25