ಲೋಕಸಭೆ ಚುನಾವಣೆ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್​ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು, ಯತೀಂದ್ರ ಸ್ಪರ್ಧೆಗೆ ಸಿಎಂ ಹಿಂದೇಟು!

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕಗಳು ಕರ್ನಾಟಕದಲ್ಲಿ ಬಿರುಸುಗೊಂಡಿವೆ. ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸುತ್ತಿರುವ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸಭೆಗಳ ಮೇಲೆ ಸಭೆ ನಡೆಸುತ್ತಿವೆ. ಈ ಮಧ್ಯೆ, ಮೈಸೂರಿನಿಂದ ಮಗ ಯತೀಂದ್ರ ಅವರನ್ನು ಕಣಕ್ಕಿಳಿಸಲು ಸಿಎಂ ಸಿದ್ದರಾಮಯ್ಯ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಅದಕ್ಕೆ ಕಾರಣವೇನು ಎಂಬುದು ಇಲ್ಲಿದೆ.

ಲೋಕಸಭೆ ಚುನಾವಣೆ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್​ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು, ಯತೀಂದ್ರ ಸ್ಪರ್ಧೆಗೆ ಸಿಎಂ ಹಿಂದೇಟು!
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on: Feb 21, 2024 | 6:53 AM

ಬೆಂಗಳೂರು, ಫೆಬ್ರವರಿ 21: ಲೋಕಸಭಾ ಚುನಾವಣೆ (Lok Sabha Elections 2024) ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕಾಂಗ್ರೆಸ್, ಬಿಜೆಪಿ (BJP) ಹಾಗೂ ಜೆಡಿಎಸ್​ನಲ್ಲಿ (JDS) ಭಾರೀ ಕಸರತ್ತು ನಡೆಯುತ್ತಿದೆ. ಈ ಬಾರಿ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಭಾರೀ ಹಣಾಹಣಿ ನಡೆಯಲಿದ್ದು, ಗೆಲ್ಲುವ ಕುದುರೆಗಾಗಿ ಮೂರೂ ಪಕ್ಷಗಳು ಹುಡುಕಾಟ ನಡೆಸುತ್ತಿವೆ. 28 ಕ್ಷೇತ್ರಗಳ ಪೈಕಿ ಅತಿಹೆಚ್ಚು ಕ್ಷೇತ್ರ ಗೆಲ್ಲಲು ತಂತ್ರಗಾರಿಕೆ ರೂಪಿತ್ತಿವೆ. ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್ (Congress) ಕಳೆದ ಬಾರಿ ಆದ ಹೀನಾಯ ಸೋಲಿನಿಂದ ಪುಟಿದೇಳುವ ನಿಟ್ಟಿನಲ್ಲಿ ಅಳೆದು ತೂಗಿ ಅಭ್ಯರ್ಥಿ ಆಯ್ಕೆಗೆ ಸಭೆಗಳನ್ನು ನಡೆಸುತ್ತಿದೆ.

ಮೈಸೂರು ಕ್ಷೇತ್ರದಿಂದ ಯತೀಂದ್ರ ಸ್ಪರ್ಧೆಗೆ ಸಿಎಂ ಹಿಂದೇಟು!

ಮೈಸೂರು ಲೋಕಸಭಾ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಕಣಕ್ಕಿಳಿಯುವುದಾಗಿ ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿತ್ತು. ಆದರೆ ಯತೀಂದ್ರ ಸ್ಪರ್ಧೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಿಂದೇಟು ಹಾಕಿದ್ದಾರೆ. ಆಪ್ತರ ಜೊತೆ ಈ ಬಗ್ಗೆ ಚರ್ಚೆ ಮಾಡಿದ ಸಿಎಂ, ನಾವು ಅಂದುಕೊಂಡಂತೆ ಪರಿಸ್ಥಿತಿ ಇಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಯತೀಂದ್ರ ಪಾಲಿಗೆ ಮುಳ್ಳಾಗಬಹುದು. ಹೀಗಾಗಿ ಈ ರಿಸ್ಕ್ ಬೇಡ. ನಿಖಿಲ್ ಕುಮಾರಸ್ವಾಮಿಗೆ ಆದ ಸ್ಥಿತಿ ಮಗನಿಗೂ ಸೃಷ್ಟಿ ಆಗುವ ಅಪಾಯವಿದೆ. ಯತೀಂದ್ರ ಟಾರ್ಗೆಟ್ ಆಗಿಬಿಡುತ್ತಾನೆ ಅಂತಾ ಹೇಳಿಕೊಂಡಿದ್ದಾರಂತೆ.

ತುಮಕೂರು ಟಿಕೆಟ್​ಗಾಗಿ ಮುದ್ದಹನುಮೇಗೌಡ ಲಾಬಿ

ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಬಿಜೆಪಿ ಮಾಜಿ ಸಂಸದ ಮುದ್ದಹನುಮೇಗೌಡ ಲಾಬಿ ಮಾಡ್ತಿದ್ದಾರೆ. ಆದ್ರೆ ತುಮಕೂರು ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಬಣದ ಗೌರಿಶಂಕರ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ನೇರವಾಗಿ ವಿಧಾನಸೌಧಕ್ಕೆ ತೆರಳಿದ್ದ ಮುದ್ದಹನುಮೇಗೌಡ, ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಸಂಧಾನ ಮಾತುಕತೆ ನಡೆಸಿದ್ದಾರೆ. ಈ ವೇಳೆ ಗುಬ್ಬಿ ಶಾಸಕ ಶ್ರೀನಿವಾಸ್ ಕೂಡ ಹಾಜರಿದ್ದರು. ಆದ್ರೆ ಡಿಕೆ ಹಾಗೂ ಮುದ್ದಹನುಮೇಗೌಡರ ನಡುವಿನ ಮಾತುಕತೆ ಅಪೂರ್ಣವಾಗಿದೆ.

ಮತ್ತೊಂದೆಡೆ ಮಂಡ್ಯ ಲೋಕಸಭಾ ಕ್ಷೇತ್ರವೂ ಭಾರೀ ಸದ್ದು ಮಾಡ್ತಿದೆ. ಇಷ್ಟು ದಿನ ಸುಮಲತಾ ಸ್ಪರ್ಧೆ ವಿಚಾರ ಚರ್ಚೆಯಲ್ಲಿತ್ತು. ಇದೀಗ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೆಸರು ಕೇಳಿಬರ್ತಿದೆ. ಮಂಡ್ಯದಿಂದ ಡಾ. ಸಿ.ಎನ್. ಮಂಜುನಾಥ್ ಜೆಡಿಎಸ್ ಅಭ್ಯರ್ಥಿ ಆಗ್ತಾರಾ ಅನ್ನೋ ಚರ್ಚೆ ಶುರುವಾಗಿದೆ.

ಮಂಡ್ಯದಿಂದ ಡಾ. ಮಂಜುನಾಥ್ ಅಭ್ಯರ್ಥಿ ಆಗಲು ನಿರ್ಮಲಾನಂದನಾಥ ಶ್ರೀಗಳು ಆಶೀರ್ವಾದ ಮಾಡಬೇಕು ಅಂತಾ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮನವಿ ಮಾಡಿದ್ದಾರೆ. ಆದಿಚುಂಚನಗಿರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪುಟ್ಟರಾಜು ಡಾ. ಮಂಜುನಾಥ್ ಪರ ಮನವಿ ಮಾಡಿದ್ದಾರೆ.

ಜಯದೇವ ಆಸ್ಪತ್ರೆ ಕಾಮಗಾರಿಗಳ ತನಿಖೆಗೆ ಸರ್ಕಾರದ ಚಿಂತನೆ

ಜಯದೇವ ಹೃದ್ರೋಗ ಆಸ್ಪತ್ರೆ ಕಾಮಗಾರಿಗಳ ತನಿಖೆಗೆ ಸರ್ಕಾರದ ಚಿಂತನೆ ಮಾಡಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಬೆಂಗಳೂರು, ಹುಬ್ಬಳ್ಳಿ, ಕಲಬುರ್ಗಿಯಲ್ಲಿ ನಡೆಯುತ್ತಿರುವ ಹಾಗೂ ನಡೆದಿರುವ ಕಾಮಗಾರಿಗಳ ಪರಿಶೀಲನೆಗೆ ಸರ್ಕಾರದ ಪ್ಲ್ಯಾನ್ ಮಾಡಿದೆ. ಕಾಮಗಾರಿಗಳ ಬಗ್ಗೆ ದೂರುಗಳು ಸಲ್ಲಿಕೆಯಾಗಿರುವ ಹಿನ್ನೆಲೆ ತನಿಖೆಗೆ ಒಪ್ಪಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ಕೂಡಲೇ ಕ್ಷಮೆ ಕೇಳಲಿ ಅಂತಾ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನಿಯಮ ಉಲ್ಲಂಘನೆ: ವೀರಪ್ಪ ಮೊಯ್ಲಿ, ನಲಪಾಡ್​ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ಹೀಗೆ ಲೋಕಸಭಾ ಚುನಾವಣೆ ಕದನಕ್ಕೆ ಮೂರೂ ಪಕ್ಷಗಳು ತಮ್ಮದೇ ತಂತ್ರಗಾರಿಕೆ ರೂಪಿಸ್ತಿವೆ. 28 ಕ್ಷೇತ್ರಗಳ ಗೆಲುವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರೋ ಕಾಂಗ್ರೆಸ್ ಹಾಗೂ ಬಿಜೆಪಿ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿವೆ. ಇತ್ತ ಜೆಡಿಎಸ್ ತನ್ನ ಕೋಟೆ ಭದ್ರಗೊಳಿಸಲು ದೋಸ್ತಿ ಅಸ್ತ್ರದೊಂದಿಗೆ ರಣತಂತ್ರ ಮಾಡುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ