AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗಸನಪುರ ಸರ್ಕಾರಿ ಶಾಲೆಗೆ ಉಚಿತ ಲ್ಯಾಪ್ ಟಾಪ್, ಪ್ರೊಜೆಕ್ಟರ್ ವಿತರಿಸಿದ ದುಬೈ ಮೂಲದ ಕನ್ನಡಿಗರು

ಕನ್ನಡ ಮಿತ್ರರು ಯು.ಎ.ಇ ಸಂಘಟನೆಯ ದುಬೈ ಕನ್ನಡ ಪಾಠ ಶಾಲೆ ವತಿಯಿಂದ ಮಳವಳ್ಳಿ ತಾಲ್ಲೂಕಿನ "ಅಗಸನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ"ಗೆ ಉಚಿತ ಲ್ಯಾಪ್ ಟಾಪ್, ಪ್ರೊಜೆಕ್ಟರ್ ಮತ್ತು ಯು.ಪಿ.ಎಸ್ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಗಿದೆ.

ಅಗಸನಪುರ ಸರ್ಕಾರಿ ಶಾಲೆಗೆ ಉಚಿತ ಲ್ಯಾಪ್ ಟಾಪ್, ಪ್ರೊಜೆಕ್ಟರ್ ವಿತರಿಸಿದ ದುಬೈ ಮೂಲದ ಕನ್ನಡಿಗರು
ಅಗಸನಪುರ ಸರ್ಕಾರಿ ಶಾಲೆಗೆ ಉಚಿತ ಲ್ಯಾಪ್ ಟಾಪ್, ಪ್ರೊಜೆಕ್ಟರ್ ವಿತರಿಸಿದ ದುಬೈ ಮೂಲದ ಕನ್ನಡಿಗರು
TV9 Web
| Edited By: |

Updated on: Aug 20, 2022 | 1:19 PM

Share

ಮಂಡ್ಯ: ದುಬೈ ಮೂಲದ ಕನ್ನಡಿಗರ ತಂಡ ಮಂಡ್ಯದ ಅಗಸನಹಳ್ಳಿ ಶಾಲೆಗೆ ಸಹಾಯ ಹಸ್ತ ಚಾಚಿದೆ. ಕನ್ನಡ ಮಿತ್ರರು ಯು.ಎ.ಇ ಸಂಘಟನೆಯ ದುಬೈ ಕನ್ನಡ ಪಾಠ ಶಾಲೆ ವತಿಯಿಂದ ಮಳವಳ್ಳಿ ತಾಲ್ಲೂಕಿನ “ಅಗಸನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ”ಗೆ ಉಚಿತ ಲ್ಯಾಪ್ ಟಾಪ್, ಪ್ರೊಜೆಕ್ಟರ್ ಮತ್ತು ಯು.ಪಿ.ಎಸ್ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಗಿದೆ.

ಆಗಸ್ಟ್ 19ರಂದು ಶುಕ್ರವಾರ, ಶಾಲೆಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕನ್ನಡ ಮಿತ್ರರು ಸಂಘಟನೆಯ ಮಾಧ್ಯಮ ಸಂಚಾಲಕ ಶ್ರೀ.ಬಾನುಕುಮಾರ್.ಎ.ಎನ್ ಅವರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ. ಚಿಕ್ಕಸ್ವಾಮಿಯವರಿಗೆ ಎಲ್ಲ ಡಿಜಿಟಲ್ ಪರಿಕರಗಳನ್ನು ಹಸ್ತಾಂತರಿಸಿದರು. ಸಭೆಯಲ್ಲಿ ಶಾಲೆಯ ಎಲ್ಲ ಶಿಕ್ಷಕರು, ಶಾಲಾ ಮೇಲಸ್ತುವಾರಿ ಸಮಿತಿಯ ಸದಸ್ಯರು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರು ಪಾಲ್ಗೊಂಡಿದ್ದರು.

ಲ್ಯಾಪ್ ಟಾಪ್ ಮತ್ತು ಇತರ ಪರಿಕರಗಳನ್ನು ಶಾಲಾ ಪರವಾಗಿ ಸ್ವೀಕರಿಸಿ ಮಾತನಾಡಿದ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ. ಚಿಕ್ಕಸ್ವಾಮಿಯವರು, ದೂರದ ದೇಶದಲ್ಲಿ ನೆಲೆಸಿದ್ದರೂ, ಜನ್ಮ ಭೂಮಿಯ ಮೇಲಿನ ಕನ್ನಡ ಮಿತ್ರರ, ಭಾಷಾ ಪ್ರೇಮ ಮತ್ತು ಕಾಳಜಿಯನ್ನು ಶ್ಲಾಘಿಸುತ್ತ, ದುಬೈ ಕನ್ನಡ ಪಾಠ ಶಾಲೆಯ ಚಟುವಟಕೆಗಳನ್ನು ಪ್ರಶಂಸಿಸಿದರು. ಹಾಗೂ ಇಂದಿನ ಸ್ವರ್ಧಾತ್ಮಕ ಜಗತ್ತಿನಲ್ಲಿ ಡಿಜಿಟಲ್ ಶಿಕ್ಷಣದ ಅವಶ್ಯಕತೆ ಇದ್ದು, ಈ ಎಲ್ಲ ಪರಿಕರಗಳ ಉಪಯೋಗ ಪಡೆದುಕೊಳ್ಳಲು ಎಲ್ಲ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.

ಇದೆ ಸಂದರ್ಭದಲ್ಲಿ ಸ್ಥಳೀಯ ಖಾಸಗಿ ಸಂಸ್ಥೆಯ ಸಹಕಾರದಿಂದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಗಳನ್ನು ವಿತರಣೆ ಮಾಡಲಾಯಿತು. ಇದೆ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಮಿತ್ರರು ಸಂಘಟನೆ, ದುಬೈನ ಮಾಧ್ಯಮ ಸಂಚಾಲಕರಾದ ಶ್ರೀ.ಬಾನುಕುಮಾರ್.ಎ.ಎನ್ ಅವರು ಮಾತನಾಡಿ ದುಬೈ ಕನ್ನಡ ಪಾಠ ಶಾಲೆ ನಡೆದು ಬಂದ ಹಾದಿ ಹಾಗೂ ಅಲ್ಲಿನ ನಿಸ್ವಾರ್ಥ ಶಿಕ್ಷಕಿಯರ ಸೇವೆಯನ್ನು ವಿವರಿಸಿದರು. ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಡಿಜಿಟಲ್ ಶಿಕ್ಷಣ ಸಿಕ್ಕು ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ದುಬೈ ಕನ್ನಡ ಮಿತ್ರರು ಸಂಘಟನೆಯ ಮಾಧ್ಯಮ ಸಂಚಾಲಕ ಶ್ರೀ.ಬಾನುಕುಮಾರ್.ಎ.ಎನ್ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ.ಚಿಕ್ಕ ಸ್ವಾಮಿಯವರು ವಹಿಸಿದ್ದರು. ಎಲ್ಲ ಅತಿಥಿಗಳನ್ನು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ. ಶಂಕರ್ ಅವರು ಸ್ವಾಗತಿಸಿದರು. ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ. ದೇವರಾಜು. ಎ.ಬಿ ಅವರು ನೆರೆದ ಎಲ್ಲ ಅತಿಥಿಗಳಿಗೆ ಶಾಲಾ ಪರವಾಗಿ ವಂದನಾರ್ಪಣೆ ನೆರವೇರಿಸಿದರು.

ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಮನೋರಂಜನಾ ಕಾರ್ಯಕ್ರಮಗಳಾದ ನಾಟಕ ಮತ್ತು ನೃತ್ಯಗಳು ನೋಡುಗರ ಮನಸೂರೆಗೊಂಡವು. ದೂರದ ದುಬೈನಲ್ಲಿ ನೆಲೆಸಿದ್ದರೂ, ಮಾತೃಭಾಷೆ ಮೇಲೆ ಅಪಾರ ಪ್ರೀತಿ ಮತ್ತು ಕಾಳಜಿ ಹೊಂದಿರುವ ಕನ್ನಡ ಮಿತ್ರರು ದುಬೈ ಸಂಘಟನೆ ಹಾಗೂ ಕನ್ನಡ ಪಾಠ ಶಾಲೆ ದುಬೈ ನಿಜಕ್ಕೂ ಎಲ್ಲರಿಗೂ ಮಾದರಿ ಎಂದರೆ ತಪ್ಪಿಲ್ಲ.

ವರದಿ: ಸೂರಜ್ ಪ್ರಸಾದ್, ಟಿವಿ9 ಮಂಡ್ಯ