ನಾಗಮಂಗಲದಲ್ಲಿ ಭಾರೀ ಅಕ್ರಮ: ಲೋಕಾಯುಕ್ತ ದಾಳಿ ವೇಳೆ ಬಯಲು; 11 ಅಧಿಕಾರಿಗಳ ಪೈಕಿ ಐವರು ಜೈಲಿಗೆ
ಮಂಡ್ಯದ ನಾಗಮಂಗಲದಲ್ಲಿ 320 ಎಕರೆ ಬಗರ್ಹುಕುಂ ಜಮೀನು ಹಂಚಿಕೆಯಲ್ಲಿ ಭಾರೀ ಅಕ್ರಮ ಬಯಲಾಗಿದೆ. ಉಪಲೋಕಾಯುಕ್ತರ ಸ್ವಯಂಪ್ರೇರಿತ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ನಕಲಿ ದಾಖಲೆ ಸೃಷ್ಟಿಸಿ ಹಣ ಪಡೆದು ಜಮೀನು ಹಂಚಿಕೆ ಮಾಡಿರುವ 11 ಅಧಿಕಾರಿಗಳ ವಿರುದ್ಧ FIR ದಾಖಲಿಸಿದ್ದಾರೆ. ಈ ಪೈಕಿ ಐವರನ್ನು ಬಂಧಿಸಲಾಗಿದೆ.

ಮಂಡ್ಯ, ಜನವರಿ 14: ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಬಗರ್ಹುಕುಂ (Bagar Hukum) ಅಡಿಯಲ್ಲಿ 320 ಎಕರೆ ಜಮೀನು ಹಂಚಿಕೆಯಲ್ಲಿ (Land Scam) ಭಾರೀ ಅಕ್ರಮ ನಡೆದಿದೆ. ನಾಗಮಂಗಲ ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಒಟ್ಟು 11 ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈಗಾಗಲೇ ಐವರನ್ನು ಬಂಧಿಸಿರುವ ಲೋಕಾಯುಕ್ತ ಅಧಿಕಾರಿಗಳು ಉಳಿದವರಿಗಾಗಿ ಶೋಧ ನಡೆಸಿದ್ದಾರೆ.
ಬಂಧಿತರು
ನಾಗಮಂಗಲ ತಾಲೂಕು ಕಚೇರಿಯ ಎಲ್&ಡಿ ಶಾಖೆಯ ಎಸ್ಡಿಎ ಸತೀಶ್, ಶಿರಸ್ತೇದಾರ್ಗಳಾದ ರವಿಶಂಕರ್, ಉಮೇಶ್, ಯೋಗೇಶ್, ರೆಕಾರ್ಡ್ ರೂಂನ ದ್ವಿತೀಯ ದರ್ಜೆ ಸಹಾಯಕ ಗುರುಮೂರ್ತಿ ಬಂಧಿತರು. ಸದ್ಯ ಬಂಧಿತ ಆರೋಪಿಗಳಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಮತ್ತೆ ಬಂಧನದ ಭೀತಿಯಲ್ಲಿದ್ದ ಕಾಂಗ್ರೆಸ್ ಶಾಸಕ ನಾಗೇಂದ್ರಗೆ ಬಿಗ್ ರಿಲೀಫ್
ಸಾರ್ವಜನಿಕರ ದೂರಿನ ಮೇರೆಗೆ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಈ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ನಾಗಮಂಗಲ ತಾಲೂಕು ಕಚೇರಿ ಮೇಲೆ ದಾಳಿ ಮಾಡಿದ್ದಾರೆ.
ಲಂಚ ನೀಡಿದವರಿಗೆ ಜಮೀನು ಹಂಚಿಕೆ
ನಿನ್ನೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಇಂದು ಸಂಜೆವರೆಗೂ ತಾಲೂಕು ಕಚೇರಿಯಲ್ಲಿ ಕಡತಗಳು ಹಾಗೂ ದಾಖಲೆಗಳನ್ನು ಸುದೀರ್ಘವಾಗಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಲಂಚ ನೀಡಿದವರಿಗೆ ಜಮೀನು ಹಂಚಿಕೆ ಮಾಡಿರುವುದು ಪತ್ತೆಯಾಗಿದೆ. ಅರ್ಹ ಫಲಾನುಭವಿಗಳಿಗೆ ನೀಡದೇ ಹಣ ಕೊಟ್ಟವರಿಗೆ ಜಮೀನು ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಸಚಿವ ಕೃಷ್ಣಭೈರೇಗೌಡ ವಿರುದ್ಧ 21 ಎಕರೆ ಜಮೀನು ಕಬಳಿಕೆ ಆರೋಪ: ಬಿಜೆಪಿಯಿಂದ ದಾಖಲೆ ಬಿಡುಗಡೆ
ಸದ್ಯ 11 ಜನರ ಪೈಕಿ ಐವರ ಬಂಧನವಾಗಿದ್ದು, ಉಳಿದ ಅಧಿಕಾರಿಗಳಿಗಾಗಿ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. 320 ಎಕರೆ ಜಮೀನು ಹಂಚಿಕೆಯಲ್ಲಿ ಅಕ್ರಮ ಎಸಗಿರುವುದು ದೃಢಪಟ್ಟ ಹಿನ್ನೆಲೆ ಪ್ರಕರಣ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:27 pm, Wed, 14 January 26