ಮದುವೆಯಾದ ಎರಡೇ ವರ್ಷಕ್ಕೆ ಪತಿಯ ಸ್ನೇಹಿತನ ಜತೆ ಮಹಿಳೆ ಪರಾರಿ! ದೇಗುಲದಲ್ಲಿ ಮದುವೆಯಾಗಿ ಫೋಟೋ ಸ್ಟೇಟಸ್ ಹಾಕಿದ ಕಿಲಾಡಿ
ಮಂಡ್ಯದಲ್ಲಿ ಆಟೋ ಚಾಲಕ ಸಾಗರ್ ಎಂಬುವವರ ಪತ್ನಿ, ಪತಿಯ ಸ್ನೇಹಿತ ಇಂದ್ರನ ಎಂಬಾತನ ಜೊತೆ ಪರಾರಿಯಾದ ವಿಲಕ್ಷಣ ವಿದ್ಯಮಾನ ನಡೆದಿದೆ. ಮನೆಯಿಂದ ಹಣ ಮತ್ತು ಒಡವೆಗಳನ್ನು ಹೊತ್ತೊಯ್ದಿರುವ ಈಕೆ, ದೇವಸ್ಥಾನದಲ್ಲಿ ಮದುವೆಯಾಗಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಸದ್ಯ, ಸಾಗರ್ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮಂಡ್ಯ, ಏಪ್ರಿಲ್ 22: ಪ್ರೀತಿಸಿ ಮದುವೆಯಾದ ಎರಡೇ ವರ್ಷಕ್ಕೆ ಪತ್ನಿಯೊಬ್ಬಳು ಪತಿಯ ಸ್ನೇಹಿತನ ಜೊತೆಯೇ ಓಡಿ ಹೋಗಿ ಮದುವೆಯಾಗಿರುವ ಘಟನೆ ಮಂಡ್ಯ (Mandya) ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬನ್ನಂಗಾಡಿ ಗ್ರಾಮದ ಆಟೋ ಚಾಲಕ ಸಾಗರ್ ಎಂಬುವವರ ಪತ್ನಿ ರಕ್ಷಿತಾ ಎಂಬಾಕೆಯೇ ಈಗ ತನ್ನ ಪತಿಯ ಸ್ನೇಹಿತ ಇಂದ್ರನ ಜೊತೆ ಪರಾರಿಯಾದವಳು. ‘ಪ್ರೀತಿಸಿ ಮದುವೆಯಾದ ಹೆಂಡತಿ ತಂಗಿ ತಂಗಿ ಎನ್ನುತ್ತಿದ್ದವನ ಜತೆಗೇ ಓಡಿಹೋಗಿದ್ದಾಳೆ’ ಎಂದು ಇದೀಗ ಸಾಗರ್ ಮಾಧ್ಯಮಗಳ ಎದುರು ಅಳಲುತೋಡಿಕೊಂಡಿದ್ದಾರೆ.
ಆಟೋದಲ್ಲಿ ಅರಳಿದ ಪ್ರೀತಿ ಮತ್ತು ವಿವಾಹ
ರಕ್ಷಿತಾ ಕಾಲೇಜಿಗೆ ಹೋಗುತ್ತಿದ್ದ ಸಮಯದಲ್ಲಿ ಆಟೋ ಚಾಲಕ ಸಾಗರ್ ಪರಿಚಯವಾಗಿದ್ದ. ಕಾಲಕ್ರಮೇಣ ಇವರ ಪರಿಚಯ ಪ್ರೀತಿಗೆ ತಿರುಗಿ, ಇಬ್ಬರೂ ಮದುವೆಯಾಗಿದ್ದರು. ಮದುವೆಯಾದ ಎರಡು ವರ್ಷಗಳ ಕಾಲ ದಂಪತಿ ಚೆನ್ನಾಗಿಯೇ ಸಂಸಾರ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಸಾಗರ್ ಸ್ನೇಹಿತ ಇಂದ್ರನ ಜೊತೆ ರಕ್ಷಿತಾ ಹತ್ತಿರವಾಗಿದ್ದಳು.
ಹಣ, ಒಡವೆ ಜೊತೆ ಪರಾರಿ: ಸಾಗರ್ ಆರೋಪ
ಮನೆಯಿಂದ ಹೊರಡುವಾಗ ರಕ್ಷಿತಾ ಸುಮ್ಮನೆ ಹೋಗಿಲ್ಲ. ಪತಿಯ ಮನೆಯಲ್ಲಿದ್ದ ಸುಮಾರು ಒಂದು ಲಕ್ಷ ರೂಪಾಯಿ ನಗದು ಮತ್ತು 22 ಗ್ರಾಂ ಚಿನ್ನದ ಒಡವೆಗಳನ್ನು ದೋಚಿಕೊಂಡು ಹೋಗಿದ್ದಾಳೆ ಎಂದು ಸಾಗರ್ ಆರೋಪಿಸಿದ್ದಾರೆ. ಇಂದ್ರನ ಜೊತೆ ದೇವಸ್ಥಾನವೊಂದರಲ್ಲಿ ಮದುವೆಯಾದ ರಕ್ಷಿತಾ, ಆ ಫೋಟೋಗಳನ್ನು ತನ್ನ ವಾಟ್ಸಾಪ್ ಸ್ಟೇಟಸ್ಗೆ ಹಾಕಿಕೊಳ್ಳುವ ಮೂಲಕ ಪತಿಗೆ ಶಾಕ್ ನೀಡಿದ್ದಾಳೆ.
ಇದನ್ನೂ ಓದಿ: ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರಿಯತಮೆಯ ವಿಚಾರಣೆ ವೇಳೆ ಬಯಲಾಯ್ತು ಸ್ಫೋಟಕ ವಿಚಾರ! ಅಸಲಿಗೆ ಆಗಿದ್ದೇನು ಗೊತ್ತೇ?
ಇತ್ತ ಪತ್ನಿಯ ಕೃತ್ಯದಿಂದ ಕಂಗೆಟ್ಟ ಸಾಗರ್ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ‘ಅವರಿಬ್ಬರು ಹೇಗಾದರೂ ಇರಲಿ, ನನಗೆ ತೊಂದರೆಯಿಲ್ಲ. ಆದರೆ ನನಗೆ ಕೂಡಲೇ ವಿಚ್ಛೇದನ (Divorce) ನೀಡಲಿ ಮತ್ತು ಮನೆಯಿಂದ ಕದ್ದೊಯ್ದ ಹಣ ಹಾಗೂ ಒಡವೆಗಳನ್ನು ವಾಪಸ್ ನೀಡಲಿ’ ಎಂದು ಸಾಗರ್ ಆಗ್ರಹಿಸಿದ್ದಾರೆ. ಮಗನ ಪರಿಸ್ಥಿತಿಯನ್ನು ಕಂಡು ಸಾಗರ್ ತಾಯಿ ಕಣ್ಣೀರು ಹಾಕುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



