ಸಿಕ್ಕ ಹಣ ನಮ್ಮದೇ: 37 ಗಂಟೆಗಳ ಕಾಲ ಇಡಿ ದಾಳಿಯ ಮಾಹಿತಿ ಹಂಚಿಕೊಂಡ ಸತೀಶ್ ಜಾರಕಿಹೊಳಿ

ವಿದೇಶದಲ್ಲಿ ಹೂಡಿಕೆ ಶಂಕೆ ಮೇರೆಗೆ ಇಡಿ ಅಧಿಕಾರಿಗಳು ಸಚಿವ ಸತೀಶ್ ಜಾರಕಿಹೊಳಿಗೆ ಶಾಕ್ ನೀಡಿದ್ದಾರೆ. ನಿನ್ನೆ (ಸೆ,09) ಬೆಳಗ್ಗೆ ದಾಳಿ ನಡೆಸಿದ ಇಡಿ, ಇವತ್ತೂ (ಸೆ.10) ಸಂಜೆ ವರೆಗೂ ಪರಿಶೀಲನೆ ನಡೆಸಿದೆ. ಬರೋಬ್ಬರು ಸತತ 37 ಗಂಟೆಗಳ ಕಾಲ ಬೆಂಗಳೂರು ಹಾಗೂ ಬೆಳಗಾವಿ ನಿವಾಸದಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ಮಾಡಿ ತೆರಳಿದ್ದಾರೆ. ಸತತ 37 ಗಂಟೆಗಳ ಪರಿಶೀಲನೆ ಮುಕ್ತಾಯ ಮಾಡಿ ಇಡಿ ಅಧಿಕಾರಿಗಳು ಮನೆಯಿಂದ ತೆರಳುತ್ತಿದ್ದಂತೆಯೇ ಇತ್ತ ಸಚಿವ ಸತೀಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ದಾಳಿ ಬಗ್ಗೆ ವಿವರಿಸಿದ್ದಾರೆ.

ಸಿಕ್ಕ ಹಣ ನಮ್ಮದೇ: 37 ಗಂಟೆಗಳ ಕಾಲ ಇಡಿ ದಾಳಿಯ ಮಾಹಿತಿ ಹಂಚಿಕೊಂಡ ಸತೀಶ್ ಜಾರಕಿಹೊಳಿ
Satish Jarkiholi
Edited By:

Updated on: Sep 10, 2026 | 10:15 PM

ಬೆಂಗಳೂರು, (ಸೆಪ್ಡೆಂಬರ್ 10): ಸಚಿವ ಸತೀಶ್ ಜಾರಕಿಹೊಳಿ ಅವರ ಬೆಳಗಾವಿ, ಬೆಳಗಾವಿ ನಿವಾಸ ಹಾಗೂ ಕಚೇರಿಗಳ ಮೇಲೆ ನಡೆದಿದ್ದ ಇಡಿ ದಾಳಿ ಅಂತ್ಯವಾಗಿದೆ. ನಿನ್ನೆ ಸೆಪ್ಟೆಂಬರ್ 10 ಬೆಳಗ್ಗೆ ಆರು ಗಂಟೆಗೆ ಮನೆಗೆ ಎಂಟ್ರಿಯಾಗಿದ್ದ ಇಡಿ ಅಧಿಕಾರಿಗಳು ಸತತ ಸತತ 37 ಗಂಟೆಗಳ ಶೋಧ ನಡೆಸಿದ್ದಾರೆ. ಇನ್ನು ದಾಳಿ ವೇಳೆ ಸಿಕ್ಕ ಹಣವನ್ನು ಬ್ಯಾಂಕ್​​ಗೆ ರವಾನಿಸಲಾಗಿದ್ದು, ಕೆಲ ದಾಖಲೆಗಳನ್ನು ತೆಗೆದುಕೊಂಡು ತೆರಳಿದ್ದಾರೆ. ಅಲ್ಲದೇ ವಿಚಾರಣೆಗೆ ಕರೆದಾಗ ಬರುವಂತೆ ಸೂಚನೆ ನೀಡಿದ್ದಾರೆ. ಇನ್ನು ಮನೆಯಿಂದ ಇಡಿ ಅಧಿಕಾರಿಗಳು ತೆರಳುತ್ತಿದ್ದಂತೆಯೇ ಸತೀಶ್ ಜಾರಕಿಹೊಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಡಿ ದಾಳಿಗೆ ಕಾರಣ ಕಂಡು ಹಿಡಿಯೋಕೆ ಆಗಲ್ಲ. ಇಡಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡ್ತೇವೆ. ಇಡಿ ದಾಳಿ ವೇಳೆ ಸಿಕ್ಕ ನಗದು ನಮ್ಮದೇ ಎಂದು ಹೇಳಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಕ್ಕ ಹಣಕ್ಕೆ ದಾಖಲಾತಿ ನೀಡುತ್ತೇವೆ ಎಂದ ಜಾರಕಿಹೊಳಿ

ಇಡಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡ್ತೇವೆ. ಇಡಿ ದಾಳಿ ವೇಳೆ ಸಿಕ್ಕ ನಗದು ನಮ್ಮದೇ ಎಂದು ಹೇಳಿದ್ದೇವೆ. ಮನೆಯಲ್ಲಿ ಸಿಕ್ಕ ನಗದು, ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಮನೆಯಲ್ಲಿ ಸಿಕ್ಕ ನಗದು ಸಂಬಂಧ ದಾಖಲಾತಿ ನೀಡುತ್ತೇವೆ. ದೇಶಾದ್ಯಂತ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪ್ರತಿಭಟನೆ ನಡೆಸುವವರನ್ನು ಬೇಡ ಅಂತಾ ನಾವು ಹೇಳಲು ಆಗಲ್ಲ ಎಂದರು.

ಇದನ್ನೂ ನೋಡಿ: ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ

ಇಡಿ ದಾಳಿಗೆ ಕಾರಣ ಕಂಡು ಹಿಡಿಯೋಕೆ ಆಗಲ್ಲ

ಇಡಿ ದಾಳಿ ಅಂತ್ಯ ಬೆನ್ನಲ್ಲೇ ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಸತೀಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ದು, ಇಡಿ ದಾಳಿಗೆ ಕಾರಣ ಕಂಡು ಹಿಡಿಯೋಕೆ ಆಗಲ್ಲ. ರಾಜಕೀಯ ಇರಬಹುದು, ಅವರದ್ದೆ ಸೋರ್ಸ್ ಇಂದ ಬಂದಿರಬಹುದು. ನೋಟಿಸ್ ಕೊಟ್ಟು ಮಾಹಿತಿ ಪಡೆಯಬಹುದಿತ್ತು. ಬೇರೆ ಬೇರೆ ಈ ರೀತಿ ಕೆಲಸ ಮಾಡೋರು ತುಂಬಾ ದೊಡ್ಡ ಕುಳ ಇದ್ದಾರೆ. ಅವರನ್ನ ಬಿಟ್ಟು ನಮ್ಮ ಕಡೆ ಬಂದಿದ್ದು ಚರ್ಚೆ ವಿಚಾರ ಎಂದು ಹೇಳಿದರು.

ಇದು ಇಡಿ ದಾಳಿ ಅಲ್ಲ ಪರಿಶೀಲನೆ ಅಷ್ಟೇ

ನಮ್ಮನ್ನ ಏನ್ ಕೇಳಿದ್ದಾರೆ ಅದನ್ನ ಹೇಳಿದ್ದೇನೆ. ಏನಾದ್ರೂ ಅನುಮಾನ ಇದ್ರೆ ನೋಟಿಸ್ ಕೊಡಿ ಮಾಹಿತಿ ಕೊಡ್ತಿನಿ ಅಂದಿದ್ದೇನೆ ಇದು ಇಡಿ ದಾಳಿ ಅಲ್ಲ ಪರಿಶೀಲನೆ ಅಷ್ಟೇ. ನಮ್ಮ ಕಡೆಯಿಂದನೂ ಕೆಲವು ದಾಖಲೆ ಪಡೆದಿದ್ದಾರೆ. ಅವರು ವಿದೇಶದಲ್ಲಿ ಹೂಡಿಕೆ ಮಾಡಿದ್ದೀರಿ ಅಂದಿದ್ದಾರೆ. ನಾವು ಮಾಡುವ ಹಂತದಲ್ಲಿ ಇದೀವಿ ಅಂತ ಹೇಳಿದ್ದೇವೆ ಎಂದು ಸ್ಪಷ್ಟಪಡಿಸಿದರು.ED Raids On Satish Jarkiholi: ಸಿಕ್ಕಿರುವ 2 ಕೋಟಿ ಹಣ ನಮ್ಮದೇ ಇಡಿ ದಾಳಿ ಬಳಿಕ ಸತೀಶ್ ಜಾರಕಿಹೊಳಿ ಸುದ್ದಿಗೋಷ್ಠಿ

ಹೂಡಿಕೆ ವಿಚಾರವಾಗಿ FEMA ಕಾಯ್ದೆ ಅಡಿ ಪರಿಶೀಲನೆ

ಇದರ ಹಿಂದೆ ರಾಜಕೀಯ ಇದ್ಯಾ ಅಂತ ವಾಸನೆ ಬರುತ್ತಿದೆ, ನಗದು ಸಿಕ್ಕಿರೋದು ನಮ್ಮದು ಅಂತೇ ಹೇಳಿದ್ದೇವೆ. ಕಾನೂನಿನ ಪ್ರಕಾರ ಅದನ್ನ ಕ್ಲೈಮ್ ಮಾಡುತ್ತೇನೆ. ಮುಖ್ಯವಾಗಿ ಹೂಡಿಕೆ ವಿಚಾರ FEMA ಕಾಯ್ದೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ನಮ್ಮ ಪಕ್ಷದವರ ಮೇಲೆ ದಾಳಿ ಮಾಡುತ್ತಾರೆ ಅಂತ ಗೊತ್ತಾಗಿತ್ತು. ಆದರೆ ಇಡಿ ನನಗೆ ಮೊದಲು ಬಂದಿದೆ. ಬಿಜೆಪಿಯರ ಮೇಲೆ ದಾಳಿ ಆಗದೇ ಇರೋದು ಪ್ರಶ್ನೆ. ಸಣ್ಣಪುಟ್ಟ ತಪ್ಪು ಮಾಡಿರಬಹುದು ಮಾಡಿಲ್ಲ ಅಂತ ಹೇಳಲ್ಲ. ಇಡಿಯವರು ನ್ಯಾಯಯುತವಾಗಿ ತನಿಖೆ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ನಾಗೇಂದ್ರ ಆಯಿತು ಈಗ ನಮ್ಮದು. ಸಮುದಾಯದ ಟಾರ್ಗೆಟ್ ಆಗಿದ್ಯಾ ಅನ್ನೋ ಆತಂಕವೂ ಜನರಿಗೆ ಇದೆ. ನಾಳೆ ಸಾದ್ಯವಾದ್ರೆ ಸಿಎಂ ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.

Published On - 10:13 pm, Thu, 10 September 26

Loading...
Unable to load recommendations.
Follow Us