AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆತ್ ನೋಟ್​ನಲ್ಲಿ ಸಚಿವರ ಹೆಸರಿದೆ, ಎಫ್​ಐಆರ್​ನಲ್ಲಿ ಇಲ್ಲ ಯಾಕೆ? ಕಾಂಗ್ರೆಸ್ ವಿರುದ್ಧ ಆರ್ ಅಶೋಕ್ ಕಿಡಿ

ಡೆತ್ ನೋಟ್​ನಲ್ಲಿ ಸಚಿವರ ಹೆಸರಿದೆ. ಆದರೆ ಎಫ್​ಐಆರ್​ನಲ್ಲಿ ಯಾಕೆ ಹೆಸರಿಲ್ಲ? ಅವರನ್ನು ಬಂಧಿಸಿದ್ರೆ ನಿಮ್ಮ ಬಂಡವಾಳ ಹೊರ ಬರುತ್ತಾ? ಎಂದು ಕಾಂಗ್ರೆಸ್ ವಿರುದ್ಧ ಆರ್​.ಅಶೋಕ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮೊದಲು ಮುಖ್ಯಮಂತ್ರಿಗಳ ರಾಜೀನಾಮೆ, ನಂತರ ಸಚಿವರದ್ದು ರಾಜೀನಾಮೆ ಆಗಲೇಬೇಕು. ಜೂನ್ 6 ರೊಳಗೆ‌ ರಾಜೀನಾಮೆ ಕೊಡಬೇಕು. ಇಲ್ಲವಾದಲ್ಲಿ ಇಡೀ ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಡೆತ್ ನೋಟ್​ನಲ್ಲಿ ಸಚಿವರ ಹೆಸರಿದೆ, ಎಫ್​ಐಆರ್​ನಲ್ಲಿ ಇಲ್ಲ ಯಾಕೆ? ಕಾಂಗ್ರೆಸ್ ವಿರುದ್ಧ ಆರ್ ಅಶೋಕ್ ಕಿಡಿ
ಆರ್ ಅಶೋಕ್
ಕಿರಣ್​ ಹನಿಯಡ್ಕ
| Edited By: |

Updated on: May 30, 2024 | 2:10 PM

Share

ಬೆಂಗಳೂರು, ಮೇ.30: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಕೇಸ್ ರಾಜಕೀಯ ತಿರುವು ಪಡೆದುಕೊಂಡಿದೆ. ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನ ಸಿಬಿಐಗೆ (CBI) ನೀಡಬೇಕು, ಸಚಿವ ಸ್ಥಾನಕ್ಕೆ ನಾಗೇಂದ್ರ (B Nagendra) ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಪ್ರತಿಕ್ರಿಯೆ ನೀಡಿದ್ದು ಡೆತ್ ನೋಟ್​ನಲ್ಲಿ ಸಚಿವರ ಹೆಸರಿದೆ. ಆದರೆ ಎಫ್​ಐಆರ್​ನಲ್ಲಿ ಯಾಕೆ ಹೆಸರಿಲ್ಲ? ಅವರನ್ನು ಬಂಧಿಸಿದ್ರೆ ನಿಮ್ಮ ಬಂಡವಾಳ ಹೊರ ಬರುತ್ತಾ? ಎಂದು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಆರ್​.ಅಶೋಕ್, ಎಫ್ಐಆರ್​ನಲ್ಲಿ ಮಂತ್ರಿ ಹೆಸರು ಯಾಕಿಲ್ಲ? ಹಣ ಗುಳುಂ ಮಾಡಿದ್ದ ಅಧಿಕಾರಿಗಳನ್ನು ಏಕೆ ಬಂಧಿಸಿಲ್ಲ? ನಾನು ವರ್ಗಾವಣೆಯಲ್ಲಿ ದುಡ್ಡು ಹೊಡೆದಿಲ್ಲ ಅಂದಿದ್ದರು ಸಿಎಂ, ದುಡ್ಡು ಹೊಡೆದ್ರೆ ರಾಜೀನಾಮೆ ಕೊಡ್ತೀನಿ ಅಂದಿದ್ರು. ಈಗ ಯಾವಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡ್ತೀರಾ? ಮೃತನ ಮನೆಯಲ್ಲಿದ್ದ ಆ ಪೆನ್​​ಡ್ರೈವ್ ಯಾಕೆ ಒಯ್ದರು? ಆ ಪೆನ್​ಡ್ರೈವ್​​ ಸಾರ್ವಜನಿಕರ ಎದುರು ಬಹಿರಂಗಪಡಿಸಿ. ಅಂದು ಈಶ್ವರಪ್ಪರನ್ನ ವಜಾ ಮಾಡಬೇಕು ಅಂದಿದ್ದರಲ್ಲ. ಈಗ ಯಾರ ಮೇಲೆ ಕೇಸ್ ಹಾಕಿದ್ದೀಯಪ್ಪ ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು.

ಪರಿಶಿಷ್ಟ ವರ್ಗದ 187 ಕೋಟಿ ರೂ. ಹಣ ಗುಳುಂ ಆಗಿದೆ. ಇದೇ ಈ ಸರ್ಕಾರದ ಸಾಧನೆ ಎಂದು R​.ಅಶೋಕ್​ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್​​ಗೆ ಅಧಿಕಾರ ಸಿಕ್ಕಿದ್ಮೇಲೆ ದಲಿತರ ಉದ್ಧಾರ ಆಗಿಲ್ಲ. ಕಾಂಗ್ರೆಸ್​ಗೆ ಶ್ರೀರಾಮನನ್ನ ಕಂಡರೆ ಆಗಲ್ಲವೆಂದು ಗೊತ್ತಿದೆ. ಆದ್ರೆ, ವಾಲ್ಮೀಕಿ ಕಂಡರೂ ಆಗಲ್ಲ ಎಂದು ಈಗ ಗೊತ್ತಾಯ್ತು. ಇದು ಕೊಲೆಗಡುಕರ ಸರ್ಕಾರ ಎಂದು ಸಾಬೀತಾಗಿದೆ. ರಾಜ್ಯದಲ್ಲಿ ಈವರೆಗೆ ಹೆಣ್ಣುಮಕ್ಕಳಿಗೆ ಗ್ಯಾರಂಟಿ ಇರಲಿಲ್ಲ. ಇದೀಗ ರಾಜ್ಯದಲ್ಲಿ ಅಧಿಕಾರಿಗಳಿಗೂ ಗ್ಯಾರಂಟಿ ಇಲ್ಲ. ಸಚಿವರ ಮೌಖಿಕ ಆದೇಶದಿಂದ ಹಣ ವರ್ಗಾವಣೆ ಬಗ್ಗೆ ಡೆತ್​​ನೋಟ್​​ನಲ್ಲಿ ಅವರು ಬರೆದಿದ್ದಾರೆ.

ಇದನ್ನೂ ಓದಿ: ಚಂದ್ರಶೇಖರನ್ ಸಾವು: ಸಚಿವ ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಸಿಎಂ ನಿವಾಸ ಬಳಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಇಷ್ಟು ಕ್ಲಿಯರ್ ಆಗಿ ಡೆತ್ ನೋಟ್ ಬರೆದಿರುವ ಅಧಿಕಾರಿಯನ್ನು ನಾನು‌ ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ಅವರು ಕಂಪ್ಲೀಟ್ ಡೀಟೈಲ್ಸ್ ಬರೆದಿದ್ದಾರೆ. ಲೂಟಿ ಮಾಡಿರುವುದು ಕಂಡು ಬಂದಿದೆ, ಇದರಲ್ಲಿ ನನ್ನ ತಪ್ಪೇನು ಇಲ್ಲ. ಮತ್ತೊಮ್ಮೆ ನನ್ನ ಪರಿಸ್ಥಿತಿಗೆ ಇವರು ಎಲ್ಲರೂ ಕಾರಣ. ಈ ನಿಗಮಕ್ಕೆ ನಾನು ಏನು ವಂಚನೆ ಮಾಡಿರುವುದಿಲ್ಲ ಎಂದು ಬರೆದಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಸಚಿವರ ರಾಜೀನಾಮೆ ಪಡೆಯುವ ತನಕ‌ ನಾವು ವಿಶ್ರಮಿಸುವುದಿಲ್ಲ

ವರ್ಗಾವಣೆ ಮಾಡಿರುವ ದುಡ್ಡು ವಾಪಸ್ ತರುತ್ತೇನೆ ಅಂದ್ರಲ್ಲಾ ಹಾಗೆ ಆ ಅಧಿಕಾರಿ ಜೀವ ವಾಪಸ್ ತರುತ್ತೀರಾ?ಅವರಿಗೆ ಹೋದ ಮರ್ಯಾದೆ ವಾಪಸ್ ತರುತ್ತೀರಾ? ಅಧಿಕಾರಿಯ ಸಾವಿಗೆ ಬೆಲೆ ಇಲ್ಲವೇ? ಇದರ ಹಿಂದೆ ದೊಡ್ಡ ಜಾಲವೇ ಇದೆ, ಇದು ಆಂಧ್ರ, ತಮಿಳುನಾಡಿಗೆ ಹೋಗಿದೆ. ಅದಕ್ಕಾಗಿ ಇದನ್ನು ಸಿಬಿಐಗೆ ವಹಿಸಬೇಕು. ಈ ವಿಷಯವನ್ನು ಸುಮ್ಮನೆ ಬಿಡಬಾರದು ಎಂದು ಪಾರ್ಟಿಯಲ್ಲಿ ತೀರ್ಮಾನ ಆಗಿದೆ. ದಲಿತರ ಹಣವನ್ನು ಲೂಟಿ ಆಗಿರುವುದನ್ನು ಸುಮ್ಮನೆ ಬಿಡಲ್ಲ. ಮೊದಲು ಮುಖ್ಯಮಂತ್ರಿಗಳ ರಾಜೀನಾಮೆ, ನಂತರ ಸಚಿವರದ್ದು ರಾಜೀನಾಮೆ ಆಗಲೇಬೇಕು. ಜೂನ್ 6 ರೊಳಗೆ‌ ರಾಜೀನಾಮೆ ಕೊಡಬೇಕು. ಇಲ್ಲವಾದಲ್ಲಿ ಇಡೀ ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ. ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯವ ತನಕ ಬಿಡುವುದಿಲ್ಲ. ರಾಜೀನಾಮೆ ಹೇಗೆ ಪಡೆಯಬೇಕು ಎಂದು ನಾವು ನಮ್ಮ ಸ್ಟ್ರಾಟಜಿ ಮಾಡಿದ್ದೇವೆ. ಮಂತ್ರಿ ರಾಜೀನಾಮೆ ಪಡೆಯುವ ತನಕ‌ ನಾವು ವಿಶ್ರಮಿಸುವುದಿಲ್ಲ. ಇದನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ಟಕಾ ಟಕ್ ಅಂತಾ ಅಧಿಕಾರಿಗಳು ಸಾಯುತ್ತಿದ್ದಾರೆ

ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ನಮ್ಮ ಸರ್ಕಾರ ಬಂದರೆ ಟಕಾ ಟಕ್ ಅಂತಾ ಹಣ ಹಾಕುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅದೇ ರೀತಿ ಸರ್ಕಾರದಿಂದ ಈ ಹಣವನ್ನು ಕಾಂಗ್ರೆಸ್ ನ ಲೂಟಿ ಅಕೌಂಟ್ ಗೆ ಟಕಾ ಟಕ್ ಅಂತಾ ವರ್ಗಾವಣೆ ಮಾಡಿದ್ದಾರೆ. 180 ಕೋಟಿ ನುಂಗಬೇಕು ಅಂದರೆ ಒಬ್ಬ ಮಂತ್ರಿ ಭಾಗಿಯಾಗಿರುವುದಿಲ್ಲ. ಇಡೀ ಕ್ಯಾಬಿನೆಟ್ ಸೇರಿ ಸರ್ಕಾರವೇ ಭಾಗಿಯಾಗಿದೆ. ಇಡೀ ಅವರ ವಂಶವೇ ಕುಳಿತು ತಿನ್ನುವಂತಹ ಹಣ ಇದು. ಟಕಾ ಟಕ್ ಅಂತಾ ಅಧಿಕಾರಿಗಳು ಸಾಯುತ್ತಿದ್ದಾರೆ. ಟಕಾ ಟಕ್ ಅಂತಾ ಬಿತ್ತನೆ ಬೀಜದ ದರ ಜಾಸ್ತಿ ಆಗಿದೆ. ಟಕಾ ಟಕ್ ಅಂತಾ ಕೋಮುವಾದ, ಬಾಂಬ್ ಬೀಳುವುದು, ಕಾನೂನು ವ್ಯವಸ್ಥೆ ಹದಗೆಟ್ಟಿದ್ದು ಕಾಂಗ್ರೆಸ್ ನ ಕೊಡುಗೆ ಎಂದು ಆರ್. ಅಶೋಕ್ ಕಿಡಿಕಾರಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ