ಕರ್ನಾಟಕಕ್ಕೆ ಒಳ್ಳೆ ಸುದ್ದಿ; ಬಳ್ಳಾರಿ- ಗುಂತಕಲ್ ನಡುವಿನ 1,264 ಕೋಟಿ ವೆಚ್ಚದ ರೈಲು ಮಾರ್ಗಕ್ಕೆ ಸಂಪುಟ ಒಪ್ಪಿಗೆ

ಕೇಂದ್ರ ಸಂಪುಟ ಸಭೆಯ ನಂತರ ನಿರ್ಧಾರಗಳ ಬಗ್ಗೆ ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಕೇಂದ್ರ ಸಚಿವ ಸಂಪುಟವು ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶದ ನಡುವೆ ಸಂಪರ್ಕ ಕಲ್ಪಿಸುವ 1,264 ಕೋಟಿ ರೂ. ವೆಚ್ಚದ ಬಳ್ಳಾರಿ-ಗುಂತಕಲ್ ನಡುವಿನ ರೈಲು ಮಾರ್ಗಕ್ಕೆ ಅನುಮೋದನೆ ನೀಡಲಾಗಿದೆ. 3 ಮತ್ತು 4ನೇ ಹಂತದ ರೈಲು ಮಾರ್ಗಗಳಿಗೆ ಸಂಪುಟ ಅನುಮೋದನೆ ನೀಡಿದೆ.

ಕರ್ನಾಟಕಕ್ಕೆ ಒಳ್ಳೆ ಸುದ್ದಿ; ಬಳ್ಳಾರಿ- ಗುಂತಕಲ್ ನಡುವಿನ 1,264 ಕೋಟಿ ವೆಚ್ಚದ ರೈಲು ಮಾರ್ಗಕ್ಕೆ ಸಂಪುಟ ಒಪ್ಪಿಗೆ
Ashwini Vaishnaw
Image Credit source: PTI

Updated on: Jul 24, 2026 | 5:06 PM

ನವದೆಹಲಿ, ಜುಲೈ 24: ಕರ್ನಾಟಕದ ರೈಲ್ವೆ ಯೋಜನೆ ಬಗ್ಗೆ ಇಂದು ನಡೆದ ಸಂಪುಟ ಸಭೆಯಲ್ಲಿ (Cabinet Meeting) ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ಸಂಪುಟ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw), ಆಂಧ್ರಪ್ರದೇಶ ಮತ್ತು ಕರ್ನಾಟಕವನ್ನು ಸಂಪರ್ಕಿಸುವ 1,264 ಕೋಟಿ ರೂ. ವೆಚ್ಚದ ಬಳ್ಳಾರಿ-ಗುಂತಕಲ್ (Ballari-Guntakal Railway lines) ರೈಲ್ವೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕರ್ನಾಟಕದ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಗುಂತಕಲ್ ನಡುವೆ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗಗಳನ್ನು ನಿರ್ಮಿಸುವ 1,264 ಕೋಟಿ ವೆಚ್ಚದ ಬೃಹತ್ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿಯು (CCEA) ಅನುಮೋದನೆ ನೀಡಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಒಟ್ಟು ಮೂರು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಈ ಯೋಜನೆಯು ಭಾರತೀಯ ರೈಲ್ವೆ ಜಾಲವನ್ನು ಸುಮಾರು 46 ಕಿ.ಮೀ ನಷ್ಟು ವಿಸ್ತರಿಸಲಿದ್ದು, ಸುಮಾರು 7 ಲಕ್ಷ ಜನಸಂಖ್ಯೆ ಹೊಂದಿರುವ ಸುಮಾರು 99 ಗ್ರಾಮಗಳಿಗೆ ಸಾರಿಗೆ ಸಂಪರ್ಕವನ್ನು ಸುಧಾರಿಸಲಿದೆ.

ಇದನ್ನೂ ಓದಿ: ಎಲೆಕ್ಟ್ರಾನಿಕ್ಸ್ ಘಟಕಗಳ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ರೂ. ಅನುದಾನ; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಪಿಎಂ ಗತಿ ಶಕ್ತಿ ರಾಷ್ಟ್ರೀಯ ಬೃಹತ್ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ 46 ಕಿ.ಮೀ ಉದ್ದದ ಮಲ್ಟಿ-ಟ್ರ್ಯಾಕಿಂಗ್ ಯೋಜನೆಯು, ರೈಲು ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸುವುದು, ಸರಕು ಸಾಗಣೆಯನ್ನು ಸುಗಮಗೊಳಿಸುವುದು ಮತ್ತು ಬಹುಮಾದರಿ ಸಂಪರ್ಕವನ್ನು ಬಲಪಡಿಸುವ ಗುರಿಯನ್ನು ಹೊಂದಿದ್ದು, 2028-29ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ರೈಲು ಮಾರ್ಗ ಕರ್ನಾಟಕದ ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಅನಂತಪುರ ಮತ್ತು ಕರ್ನೂಲ್ ಸೇರಿದಂತೆ ಒಟ್ಟು 3 ಜಿಲ್ಲೆಗಳಲ್ಲಿ ಈ ಯೋಜನೆ ಹಾದುಹೋಗಲಿದೆ.


3 ವರ್ಷದಲ್ಲಿ ಯೋಜನೆ ಪೂರ್ಣ:

ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, “ಇಂದು ಅನುಮೋದನೆಯಾಗಿರುವ 46 ಕಿ.ಮೀ ಉದ್ದದ ಯೋಜನೆಯು ಕರ್ನಾಟಕ ಮತ್ತು ಆಂಧ್ರಪ್ರದೇಶವನ್ನು ಒಗ್ಗೂಡಿಸಲಿದೆ. ಈ ಯೋಜನೆಯ ಅವಧಿ 3 ವರ್ಷಗಳು. ಮೊದಲನೆಯದಾಗಿ, ಆಂಧ್ರಪ್ರದೇಶ ಮತ್ತು ಕರ್ನಾಟಕದ ನಡುವಿನ ಪ್ರಮುಖ ಆರ್ಥಿಕ ಕಾರಿಡಾರ್‌ನಲ್ಲಿ ಬರುವ ಬಳ್ಳಾರಿ-ಗುಂತಕಲ್ ರೈಲ್ವೆ ವಿಭಾಗದಲ್ಲಿ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯನ್ನು 1,264 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಹೊಸಪೇಟೆಯಿಂದ ಹುಬ್ಬಳ್ಳಿಯವರೆಗಿನ ರೈಲು ಮಾರ್ಗದ ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿದೆ. ಎರಡನೆಯದಾಗಿ, ದೇಶದಲ್ಲಿ ರಾಸಾಯನಿಕ ವಲಯವನ್ನು ನವೀನ ರೀತಿಯಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸಂಪುಟವು ನೂತನ ಯೋಜನೆಗೆ ಅನುಮೋದನೆ ನೀಡಿದೆ.” ಎಂದು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಬುಲೆಟ್ ರೈಲು ಕಾರಿಡಾರ್ ವೇಗದ ಪ್ರಗತಿ; ಜಪಾನ್​ನಿಂದ ಇ10 ಬರುವಷ್ಟರಲ್ಲೇ ಭಾರತ ನಿರ್ಮಿತ ಟ್ರೈನ್ ಬಳಕೆಗೆ ನಿರ್ಧಾರ

ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ, ಈ ರೈಲು ಮಾರ್ಗವು ಬಳ್ಳಾರಿ ಕೋಟೆ ಮತ್ತು ಕುಮಾರಸ್ವಾಮಿ ದೇವಸ್ಥಾನ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕವನ್ನು ಉತ್ತೇಜಿಸಲಿದೆ. ಅಲ್ಲದೆ ಕಬ್ಬಿಣದ ಅದಿರು, ಡೋಲೋಮೈಟ್, ಸುಣ್ಣದ ಕಲ್ಲು, ಕಬ್ಬಿಣ ಮತ್ತು ಉಕ್ಕು, ಕಲ್ಲಿದ್ದಲು, ರಸಗೊಬ್ಬರಗಳು ಹಾಗೂ ಆಹಾರ ಧಾನ್ಯಗಳಂತಹ ಸರಕುಗಳ ಸಾಗಣೆಗೆ ನೆರವಾಗಲಿದೆ. ಈ ಯೋಜನೆಯಿಂದ ವಾರ್ಷಿಕ 16.22 ಮಿಲಿಯನ್ ಟನ್ ಹೆಚ್ಚುವರಿ ಸರಕು ಸಾಗಣೆ ಸಾಧ್ಯವಾಗಲಿದ್ದು, ಪ್ರಾದೇಶಿಕ ಕೈಗಾರಿಕಾ ವಲಯಗಳಿಗೆ ಅನುಕೂಲವಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:55 pm, Fri, 24 July 26

Follow Us