
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸ ಕಾವೇರಿಯಲ್ಲಿ ಗುರುವಾರ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಾಲ್ನಡಿಗೆಯಲ್ಲಿ ಬಂದಿದ್ದ 250ಕ್ಕೂ ಹೆಚ್ಚು ಮಠಾಧೀಶರು ಕೆಲ ಸಮಯ ಚರ್ಚೆ ನಡೆಸಿದರು. ಕುಮಾರಕೃಪಾ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆದ ನಂತರ ಮುಖ್ಯಮಂತ್ರಿ ನಿವಾಸ ಕಾವೇರಿಗೆ ಭೇಟಿ ನೀಡಿದ್ದರು.
ಯಡಿಯೂರಪ್ಪ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಗಿಗೆ ಮಾತನಾಡಿದ ಶ್ರೀಕಂಠ ಮುಡಿಗುಂಡಶ್ರೀ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2 ವರ್ಷ ಉತ್ತಮ ಆಡಳಿತ ಕೊಟ್ಟಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಎಂಬ ಕಾರಣಕ್ಕೇ ನಾವೆಲ್ಲರೂ ಬಿಜೆಪಿಗೆ ಮತ ಹಾಕಿದ್ದೆವು. ಬಿಜೆಪಿ ಹೈಕಮಾಂಡ್ ಕೂಡ ಜಾಣ ನಡೆ ನಡೆಸುತ್ತಿದೆ. ರಾಜ್ಯದಲ್ಲಿ ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಯಡಿಯೂರಪ್ಪರಿಗೆ ಶಕ್ತಿ ಇಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎಲ್ಲ ಮಠಾಧೀಶರ ಬೆಂಬಲವಿದೆ ಎಂದು ಘೋಷಿಸಿದರು.
ಯಡಿಯೂರಪ್ಪ ಪರ ಮಠಾಧೀಶರ ಬ್ಯಾಟಿಂಗ್
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರ ರಾಜ್ಯದ ವಿವಿಧ ಮಠಾಧೀಶರು ಬ್ಯಾಟಿಂಗ್ ಮುಂದುವರೆಸಿದ್ದಾರೆ. ಸಿಎಂ ಸ್ಥಾನದಿಂದ ಯಡಿಯೂರಪ್ಪ (CM BS Yediyurappa) ಅವರನ್ನು ತೆರವುಗೊಳಿಸುತ್ತಾರೆ ಎಂದ ಮಾತು ಬಲಗೊಳ್ಳೊತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ‘ರಾಜ್ಯದ ಈ ಪರಿಸ್ಥಿತಿಯಲ್ಲಿ (Karnataka Politics) ಸಿಎಂ ಬದಲಾವಣೆ ಮಾಡಬಾರದು. ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಪರಿಸ್ಥಿತಿ ಅನುಕೂಲಕರವಾಗಿಲ್ಲ. ನಾಯಕತ್ವ ಬದಲಾವಣೆ ಈಗ ಸೂಕ್ತವಲ್ಲ. ಇಷ್ಟು ಸಮಯ ಯಡಿಯೂರಪ್ಪ ಚೆನ್ನಾಗಿ ನಾಯಕತ್ವ ಮಾಡಿದ್ದಾರೆ. ಕೊವಿಡ್ ಸಂದರ್ಭವನ್ನು ಚೆನ್ನಾಗಿ ನಿಭಾಯಿಸಿದ್ದಾರೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿಎಂ ಯಡಿಯೂರಪ್ಪಗೆ ಬೆಂಬಲ ವ್ಯಕ್ತಪಡಿಸಿರುವ ವಿವಿಧ ಜಿಲ್ಲೆಗಳ ಮಠಾಧೀಶರು ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಭೇಟಿ ಬಳಿಕ ಪ್ರತಿಕ್ರಿಯಿಸಿರುವ ದಿಂಗಾಲೇಶ್ವರ ಸ್ವಾಮೀಜಿ, ಸಿಎಂ ಯಡಿಯೂರಪ್ಪ ನನ್ನ ಕೈಯಲ್ಲಿ ಏನೂ ಇಲ್ಲ ಎಲ್ಲ ಹೈಕಮಾಂಡ್ ನಿರ್ಧಾರ ಎಂದರು. ಒಂದೊಮ್ಮೆ ಯಡಿಯೂರಪ್ಪರನ್ನು ಬದಲಿಸಿದರೆ ಬಿಜೆಪಿ ಸರ್ವನಾಶವಾಗಲಿದೆ. ಯಾವುದೇ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಬದಲಿಸಿದರೆ ಬಿಜೆಪಿ ನಾಯಕರು ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ನಮ್ಮ ಎಲ್ಲರ ಅಭಿಪ್ರಾಯವನ್ನು ಒಟ್ಟಿಗೆ ಹೇಳುತ್ತಿದ್ದೇವೆ. ಉಳಿದ ಅವಧಿ ಯಡಿಯೂರಪ್ಪರನ್ನು ಮುಂದುವರಿಸಬೇಕು ಬಿಜೆಪಿ ಹೈಕಮಾಂಡ್ಗೆ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು. ಯಡಿಯೂರಪ್ಪ ಕೇವಲ ಲಿಂಗಾಯತ ನಾಯಕರಲ್ಲ. ಅವರು ಅಗ್ರಗಣ್ಯ ನಾಯಕ. 2-3 ದಿನದಲ್ಲಿ 500ಕ್ಕೂ ಹೆಚ್ಚು ಮಠಾಧೀಶರು ಸೇರುತ್ತೇವೆ. ಬೆಂಗಳೂರಿನಲ್ಲೇ ಸಭೆ ಸೇರಿ ಮಠಾಧೀಶರು ನಿರ್ಣಯಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
(More than 250 swamijis visit Karnataka Chief Minister BS Yediyurappa House)
ಇದನ್ನೂ ಓದಿ: ಯಡಿಯೂರಪ್ಪ ಕೈಬಿಟ್ಟರೆ 6 ತಿಂಗಳಲ್ಲಿ ಸರ್ಕಾರ ಪತನ ಗ್ಯಾರಂಟಿ, ಬಿಜೆಪಿಗೆ ದೊಡ್ಡ ಪೆಟ್ಟು: ಮುರುಘಾ ಮಠದ ಸ್ವಾಮೀಜಿ ಎಚ್ಚರಿಕೆ