ಮುಡಾ ಪ್ರಕರಣದಲ್ಲಿ ಅಧಿಕೃತವಾಗಿ ಇಡಿ ಎಂಟ್ರಿ: ಮೊದಲ ಸಮನ್ಸ್​ ಜಾರಿ, ಯಾರಿಗೆ ಗೊತ್ತಾ?

| Updated By: ರಮೇಶ್ ಬಿ. ಜವಳಗೇರಾ

Updated on: Oct 01, 2024 | 10:08 PM

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮೈಸೂರು ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮತ್ತೊಂದೆಡೆ ಈ ಮುಡಾ ಕೇಸ್​​ನಲ್ಲಿ ಇಡಿ ಅಧಿಕೃತವಾಗಿ ಪ್ರವೇಶ ಮಾಡಿದ್ದು, ಸಿಎಂ ವಿರುದ್ಧದ ದೂರುದಾರ ಸ್ನೇಹಮಯಿ ಕೃಷ್ಣಗೆ ಇಡಿ ಸಮನ್ಸ್ ನೀಡಿದೆ.

ಮುಡಾ ಪ್ರಕರಣದಲ್ಲಿ ಅಧಿಕೃತವಾಗಿ ಇಡಿ ಎಂಟ್ರಿ: ಮೊದಲ ಸಮನ್ಸ್​ ಜಾರಿ, ಯಾರಿಗೆ ಗೊತ್ತಾ?
ದೂರುದಾರ ಸ್ನೇಹಮಯಿ ಕೃಷ್ಣ
Follow us on

ಬೆಂಗಳೂರು/ಮೈಸೂರು, (ಅಕ್ಟೋಬರ್ 01): ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗಳು ನಡೆಯುತ್ತಿವೆ. ತಮ್ಮಗೆ ಮಂಜೂರಾಗಿದ್ದ 14 ಸೈಟ್​ಗಳನ್ನು ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು ವಾಪಸ್ ಮುಡಾಗೆ ಹಿಂದುರಿಗಿಸಿದ್ದಾರೆ. ಆದರೂ ಸಹ ಜಾರಿ ನಿರ್ದೇಶನಾಲಯ(ಇಡಿ) ಮುಡಾ ಪ್ರಕರಣದಲ್ಲಿ ಪ್ರವೇಶ ಮಾಡಿದ್ದು, ಮೊದಲ ಬಾರಿಗೆ ಅಧಿಕೃತವಾಗಿ ಸಿಎಂ ವಿರುದ್ಧದ ದೂರುದಾರ ಸ್ನೇಹಮಯಿ ಕೃಷ್ಣಗೆ ಪ್ರಕರಣದ ಸಾಕ್ಷ್ಯಾಧಾರ, ದಾಖಲೆ ಸಲ್ಲಿಸುವಂತೆ ಸಮನ್ಸ್ ನೀಡಿದೆ.

ಅಕ್ಟೋಬರ್ 3ರ ಬೆಳಗ್ಗೆ 11 ಗಂಟೆಯೊಳಗೆ ಇ-ಮೇಲ್ ಮೂಲಕ ಮುಡಾ ಪ್ರಕರಣದ ಸಂಬಂಧಿಸಿದಂತೆ ಸಾಕ್ಷ್ಯಾಧಾರ, ದಾಖಲೆ ಸಲ್ಲಿಸುವಂತೆ ಸಿಎಂ ವಿರುದ್ಧ ದೂರುದಾರ ಸ್ನೇಹಮಯಿ ಕೃಷ್ಣಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಈ ಮೂಲಕ ಇಡಿ ಅಧಿಕೃತವಾಗಿ ಮುಡಾ ಪ್ರಕರಣದಲ್ಲಿ ಪ್ರವೇಶ ಮಾಡಿದಂತಾಗಿದೆ.

ಇದನ್ನೂ ಓದಿ: ಮುಡಾ ಹಗರಣ ಕೇಸ್​: ಸಿಎಂ ಪತ್ನಿ ವಾಪಸ್​ ನೀಡಿದ್ದ 14 ನಿವೇಶನಗಳ ಖಾತೆ ರದ್ದು!

ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಇಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿನ್ನೆ(ಸೆ.30) ಅಷ್ಟೇ ಇಸಿಐಆರ್ ದಾಖಲಿಸಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ಇಡೀ ಮುಡಾ ಪ್ರಕರಣದಲ್ಲಿ ಪ್ರವೇಶ ಮಾಡಿದ್ದು, ಮೊದಲಿಗೆ ದೂರಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ, ದಾಖಲೆ ಸಲ್ಲಿಸುವಂತೆ ದೂರುದಾರ ಸ್ನೇಹಮಯಿ ಕೃಷ್ಣಗೆ ಇಡಿ ಸಮನ್ಸ್ ನೀಡಿದೆ.

PMLA ಕಾಯ್ದೆಯಡಿ ECIR ದಾಖಲಾಗಿದ್ದು, ಈ ECIR ಪೊಲೀಸರ FIRಗೆ ಸರಿ ಸಮಾನವಾಗಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ವಿಶೇಷಾಧಿಕಾರವಿದೆ. ಸಮನ್ಸ್ ನೀಡಿ ವಿಚಾರಣೆಗೆ ಕರೆಯಬಲ್ಲ ಅಧಿಕಾರ ಇಡಿಗಿದೆ. ಅಲ್ಲದೇ ತನಿಖೆ ಹಂತದಲ್ಲಿ ಆಸ್ತಿಗಳನ್ನ ಸೀಜ್ ಮಾಡುವ ಅಧಿಕಾರವಿದೆ.

ಇನ್ನು ಯಾವ ಹಂತಗಳಲ್ಲಿ ಏನೇನು ಆಗಿದೆ. ಹಂತಗಳಲ್ಲಿ ಇದ್ದ ಅಧಿಕಾರಿಗಳು ಜನ ಪ್ರತಿನಿಧಿಯಾರು ಎಂಬ ಮಾಹಿತಿ ಕಲೆಹಾಕಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ವಿಚಾರಣೆ ನಡೆಸಲಿದೆ. ಅಲ್ಲದೇ ಪ್ರಕರಣದ ನಾಲ್ವರು ಆರೋಪಿಗಳಿಗೆ ಸಮನ್ಸ್ ನೀಡಿ ವಿಚಾರಣೆಗೊಳಪಡಿಸಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ