ಸಿಎಂ ವಿರುದ್ಧ ಇಡಿ ಕೇಸ್ ದಾಖಲಿಸಿದ್ದಕ್ಕೆ ವಕೀಲ ಮನು ಸಿಂಘ್ವಿ ಕೆಂಡಾಮಂಡಲ

| Updated By: ರಮೇಶ್ ಬಿ. ಜವಳಗೇರಾ

Updated on: Oct 01, 2024 | 5:46 PM

ಜಾರಿ ನಿರ್ದೇಶನಾಲಯ (ಇಡಿ) ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಸಿಐಆರ್ ದಾಖಲಿಸಿದ್ದು, ಇದಕ್ಕೆ ಸಿಎಂ ಪರ ವಕೀಲ , ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಕಿರಿಕಾರಿದ್ದಾರೆ. ಇನ್ನು ಸೈಟ್​ಗಳನ್ನು ಮುಡಾಗೆ ವಾಪಸ್ ನೀಡುವ ಬಗ್ಗೆ ಸಿಎಂ ಪತ್ನಿ ಮುಂದಾಗಿರುವ ಬಗ್ಗೆಯೂ ಮಾತನಾಡಿದ್ದಾರೆ. ಹಾಗಾದ್ರೆ, ಅಭಿಷೇಕ್ ಮನು ಸಿಂಘ್ವಿ ಏನೆಲ್ಲಾ ಹೇಳಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಸಿಎಂ ವಿರುದ್ಧ ಇಡಿ ಕೇಸ್ ದಾಖಲಿಸಿದ್ದಕ್ಕೆ ವಕೀಲ ಮನು ಸಿಂಘ್ವಿ ಕೆಂಡಾಮಂಡಲ
ಅಭಿಷೇಕ್ ಮನು ಸಿಂಘ್ವಿ,ಮನು ಸಿಂಘಿ
Follow us on

ನವದೆಹಲಿ, (ಅಕ್ಟೋಬರ್ 01): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಡಿ‌ ಕೇಸ್ ದಾಖಲಿಸಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನವದೆಹಲಿಯಲ್ಲಿಂದು ಅಭಿಷೇಕ್ ಮನು ಸಿಂಘ್ವಿ ಹಾಗೂ ಜೈರಾಮ್ ರಮೇಶ್ ಜಂಟಿ ಸುದ್ದಿಗೋಷ್ಟಿ ನಡೆಸಿದ್ದು, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸಿಎಂ ಅವರನ್ನು ಕೆಳಗಿಳಿಸಲು ಷಡ್ಯಂತ್ರ ನಡೆಯುತ್ತಿದೆ. ಜಾರಿ ನಿರ್ದೇಶನಾಲಯ ಬಿಜೆಪಿಯ ಚುನಾವಣಾ ಅಂಗ ಸಂಸ್ಥೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಮಾತನಾಡಿ, ಸಿದ್ದರಾಮಯ್ಯ ಕೇಸ್​ನಲ್ಲಿ ಅಕ್ರಮ ಹಣವರ್ಗಾವಣೆಯಾಗಿಲ್ಲ. ಒಂದೇ ವಾರದ ಒಳಗೆ ಹೇಗೆ ಪ್ರಕರಣ ದಾಖಲಿಸಲಾಗಿದೆ? ಅಕ್ರಮ ಹಣ ವರ್ಗಾವಣೆ ಎಂಬ ನಿರ್ಧಾರಕ್ಕೆ ಹೇಗೆ ಬಂದ್ರು? 3 ದಿನಗಳಲ್ಲಿ PMLA ಕೇಸ್ ಹೇಗೆ ದಾಖಲು ಮಾಡಿದಿರಿ? ಸಿದ್ದರಾಮಯ್ಯರನ್ನು ಹೆದರಿಸಲು PMLA ಕೇಸ್ ದಾಖಲು ಮಾಡಲಾಗಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಸೈಟ್ ಹಿಂದಿರುಗಿಸಿದ್ರೆ ಮುಡಾ ಕೇಸಿನಿಂದ ಸಿಎಂ ಬಚಾವ್ ಆಗ್ತಾರಾ? ಕಾನೂನು ತಜ್ಞರು ಹೇಳಿದ್ದಿಷ್ಟು

ಸಿಎಂ ಪತ್ನಿ ನಿರ್ಧಾರವನ್ನ ಶ್ಲಾಘಿಸಿದ ಮನು ಸಿಂಘ್ವಿ

ಇನ್ನು ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು ನಿವೇಶನಗಳನ್ನು ಹಿಂದಿರುಗಿಸುವ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿದ ಮನು ಸಿಂಘ್ವಿ, ಸಿದ್ದರಾಮಯ್ಯ ಪತ್ನಿಯವರ ನಿರ್ಧಾರವನ್ನ ಬಿಜೆಪಿ ಶ್ಲಾಘಿಸಬೇಕು. ಶ್ಲಾಘಿಸುವುದನ್ನು ಬಿಟ್ಟು ಬಿಜೆಪಿಯವರು ದ್ವೇಷ ಮಾಡುತ್ತಿದ್ದಾರೆ. ತಮ್ಮ ಪತಿಯ ಸ್ವಚ್ಛ ರಾಜಕೀಯ ಜೀವನಕ್ಕೆ ಅಡ್ಡಿ ಆಗಬಾರದೆಂದು ಮುಡಾಗೆ 14 ಸೈಟ್​ಗಳನ್ನು ಹಿಂದಿರುಗಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅದರೆ ಬಿಜೆಪಿಯವರು ಈ ನಿರ್ಧಾರವನ್ನು ತಮಾಷೆ ಮಾಡುತ್ತಿದ್ದಾರೆ ಎಂದು ಹೇಳಿದರು.

2014ರಿಂದ 24ರ ವರಗೆ ಇಡಿ ಕೇಸ್ ಆದವರು 23 ನಾಯಕರು ಬಿಜೆಪಿ ಸೇರಿದ್ದಾರೆ. ಇಡಿ ಬಳಸಿಕೊಂಡು ವಿರೋಧಪಕ್ಷಗಳನ್ನು ನಿಯಂತ್ರಿದಲಾಗುತ್ತಿದೆ. ಬಿಜೆಪಿ ಸೇರುತ್ತೇವೆ ಎಂದವರ ಕೇಸ್ ಕ್ಲೋಸ್ ಮಾಡಲಾಗುತ್ತಿದೆ. ವಾಷಿಂಗ್ ಮಿಷಿನ್ ರೀತಿ ಇಡಿ ಕೆಲಸ ಮಾಡುತ್ತಿದೆ. ಅಜಿತ್ ಪವಾರ್, ಹೇಮಂತ್ ಬಿಸ್ವಾ ಶರ್ಮ ಹೀಗೆ ಅನೇಕ ನಾಯಕರು ಬಿಜೆಪಿ ಜೊತೆ ಕೈಜೋಡಿದ್ದಾರೆ. ಬಿಜೆಪಿ ಜೊತೆ ಕೈ ಜೋಡಿಸಿದ್ರೆ ಕೇಸ್ ಕ್ಲೋಸ್ ಅಥವಾ ಜಾಮೀನಿಗೆ ವಿರೋಧವಿಲ್ಲ. ಇಲ್ಲದಿದ್ದರೆ ನಾಯಕರನ್ನು ಜೈಲಿಗೆ ಹಾಕಲಾಗುತ್ತಿದೆ. ಜಾರ್ಖಂಡ್ ಸಿಎಂ,ದೆಹಲಿ ಸಿಎಂ,‌ ಮಹಾರಾಷ್ಟ್ರದ ನಾಯಕರನ್ನು ಜೈಲಿಗೆ ಹಾಕಲಾಗಿದೆ ಎಂದು ಉದಾಹರಣಗೆ ಕೊಡುತ್ತಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ವಿರುದ್ಧ ಜೈರಾಮ್ ರಮೇಶ್ ಕಿಡಿ

ಇನ್ನು ಜೈರಾಮ್ ರಮೇಶ್ ಮಾತನಾಡಿ, ಬಿಜೆಪಿ ಬಳಿ MLA ಗಳು ಇಲ್ಲ. ಹಾಗಾಗಿ ಸಿಎಂ ವಿರುದ್ಧ PMLA ಕೇಸ್ ದಾಖಲಿಸಲಾಗಿದೆ. ಜನರಿಗೆ ಕಾಂಗ್ರೆಸ್ ಪಕ್ಷ ಜನರಿಗೆ ಗ್ಯಾರಂಟಿಗಳನ್ನು ನೀಡಿದೆ. ಅನ್ನಭಾಗ್ಯಕ್ಕೆ ಅಕ್ಕಿ ಕೇಳಿದರು ಕೇಂದ್ರ ಕೊಡಲಿಲ್ಲ. ಆದರೂ ಅನ್ನಭಾಗ್ಯ ಯೋಜನೆ ನಿಂತಿಲ್ಲ ಅಕ್ಕಿ ಕೊಡುತ್ತಿದ್ದೇವೆ. ಕಾಂಗ್ರೆಸ್ ಸರಕಾರದ ವಿರುದ್ಧ ಧಮ್ಕಿ ರಾಜಕೀಯ ನಡೆಯುತ್ತಿದೆ. ನಾವು ಯಾವುದಕ್ಕೆ ಹೆದರುವುದಿಲ್ಲ. ತನಿಖೆ ಆಗಲಿ ಎಂದು ಸಿಎಂ ಹೇಳಿದ್ದಾರೆ, ಸತ್ಯಹೊರಬರಲಿದೆ. ಕೇಂದ್ರ ಸರಕಾರ ಒರ್ವ ವ್ಯಕ್ತಿಯ ವಿರುದ್ಧ ಸಂಚು ರೂಪಿಸಿಲ್ಲ, ಕರ್ನಾಟಕ ಜನರ ವಿರುದ್ಧ ಷಡ್ಯಂತ್ರ ರೂಪಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:34 pm, Tue, 1 October 24