ಸಿದ್ದರಾಮಯ್ಯ ವಿರುದ್ಧ ECIR ದಾಖಲು, ಏನಿದು ECIR? ಇಡಿ ಏನೇನು ಮಾಡಬಹುದು?

MUDA Scam Case: ಮುಡಾ ಹಗರಣ ಪ್ರಕರಣದಲ್ಲಿ ಇದೀಗ ಇಡಿ ಪ್ರವೇಶ ಮಾಡಿದೆ. ಹೀಗಾಗಿ ಸಿಎಂ ಸಿದ್ದರಾಂಯ್ಯ ಸಿದ್ದರಾಮಯ್ಯ ಮತ್ತಷ್ಟು ಸಂಕಷ್ಟ ಎದುರಾಗಿದೆ. ಹೌದು..ಸಿಎಂ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯ ಇಸಿಐಆರ್‌ ದಾಖಲಿಸಿದೆ. ಹಾಗಾದ್ರೆ, ಇಸಿಐಆರ್‌ ಅಂದ್ರೇನು? ಇಸಿಐಆರ್‌ ಅಡಿಯಲ್ಲಿ ಇಡಿ ಅಧಿಕಾರಿಗಳು ಏನೇನು ಮಾಡಬಹುದು? ಸಿಎಂಗೆ ಯಾವ ರೀತಿ ಸಂಕಷ್ಟ? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿದ್ದರಾಮಯ್ಯ ವಿರುದ್ಧ ECIR ದಾಖಲು, ಏನಿದು ECIR? ಇಡಿ ಏನೇನು ಮಾಡಬಹುದು?
ಸಿದ್ದರಾಮಯ್ಯ, ಇಡಿ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Sep 30, 2024 | 8:19 PM

ಬೆಂಗಳೂರು (ಸೆಪ್ಟೆಂಬರ್ .30): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ಹಗರಣ ಮಾಡಿದ್ದಾರೆಂಬ ಆರೋಪದಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಮೈಸೂರು ಲೋಕಾಯುಕ್ತ ಪೊಲೀಸರಿಂದ ಎಫ್‌ಐಆರ್ ದಾಖಲಿಸಲಾಗಿದೆ. ಇದರ ಬೆನ್ನಲ್ಲಿಯೇ ಸ್ನೇಹಮಯಿ ಕೃಷ್ಣ ಅವರು ಜಾರಿ ನಿರ್ದೇಶನಾಲಯಕ್ಕೂ (ಇಡಿ) ದೂರು ನೀಡಿದ್ದರು. ಮೈಸೂರು ಲೋಕಾಯುಕ್ತದಲ್ಲಿ ದಾಖಲಾದ ಎಫ್‌ಐಆರ್ ಆಧರಿಸಿ ಇದೀಗ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಇಡಿ ಸಂಸ್ಥೆಯಿಂದಲೂ ಜಾರಿ ಪ್ರಕರಣದ ಮಾಹಿತಿ ವರದಿ (ಇಸಿಐಆರ್) ದಾಖಲಿಸಿಕೊಂಡಿದೆ.

ಲೋಕಾಯುಕ್ತ ಎಫ್‌ಐಆರ್‌ನಲ್ಲಿ ಉಲ್ಲೇಖವಾದ ಹೆಸರುಗಳ ಮೇಲೆ ಇ.ಡಿ (Enforcement Directorate) ಇಸಿಐಆರ್ ದಾಖಲಿಸಿದೆ.  ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯದ (ಇಡಿ) ಕೇಸಿನಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿ ನಂಬರ್ 1 (ಎ1 ಆರೋಪಿ) ಆಗಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ, ಅವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾರಾಟ ಮಾಡಿದ್ದ ದೇವರಾಜು ಅವರ ವಿರುದ್ಧವೂ ಇಸಿಐಆರ್‌ನಲ್ಲಿ ಆರೋಪಿಗಳೆಂದು ಉಲ್ಲೇಖ ಮಾಡಲಾಗಿದೆ. ಇನ್ನು ಜಾರಿ ನಿರ್ದೇಶನಾಲಯದ ಕೇಸಿನಲ್ಲಿ ಸಿಎಂ ವಿರುದ್ಧ ಮುಡಾ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತಂತೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮುಡಾ ಹಗರಣ ಕೇಸ್: ಸಿದ್ದರಾಮಯ್ಯ ವಿರುದ್ಧ ECIR ದಾಖಲು, ಸಿಎಂಗೆ ಶುರುವಾಯ್ತು ಇಡಿ ಸಂಕಷ್ಟ!

ಸಿಎಂ ವಿರುದ್ಧ ದಾಖಲಾದ ECIR ಅಂದ್ರೇನು?

PMLA ಕಾಯ್ದೆಯಡಿ ECIR ದಾಖಲಾಗಿದ್ದು, ಈ ECIR ಪೊಲೀಸರ FIRಗೆ ಸರಿ ಸಮಾನವಾಗಿದೆ.  ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ವಿಶೇಷಾಧಿಕಾರವಿದೆ. ಸಮನ್ಸ್ ನೀಡಿ ವಿಚಾರಣೆಗೆ ಕರೆಯಬಲ್ಲ ಅಧಿಕಾರ ಇಡಿಗಿದೆ. ಅಲ್ಲದೇ ತನಿಖೆ ಹಂತದಲ್ಲಿ ಆಸ್ತಿಗಳನ್ನ ಸೀಜ್ ಮಾಡುವ ಅಧಿಕಾರವಿದೆ.

ಇಡಿ ಮುಂದಿನ ಪ್ರಕ್ರಿಯೆ ಏನು?

ನಾಲ್ವರನ್ನು ಆರೋಪಿಗಳನ್ನಾಗಿಸಿ ಜಾರಿ ನಿರ್ದೇಶನಾಲಯ ಇಸಿಐಆರ್ ದಾಖಲು ಮಾಡಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ವಿಶೇಷಾಧಿಕಾರವಿದೆ. ಹೀಗಾಗಿ ಇಡಿ ಮುಂದಿನ ಪ್ರಕ್ರಿಯೆ ಏನು ಎನ್ನುವುದನ್ನು ನೋಡುವುದಾದರೆ, ಪ್ರಕರಣ ದಾಖಲು ಆಗುತ್ತಿದ್ದಂತೆ ದಾಖಲೆಗಳನ್ನ ಕಳೆಹಾಕಲಿದ್ದು, ಪ್ರಕರಣದ ದಾಖಲೆಗಳನ್ನೆ ಇಡಿ ವಶಕ್ಕೆ ಪಡೆಯಲಿದೆ. ಅಲ್ಲದೇ ಮುಡಾ ಕಚೇರಿ ಮೇಲೆ ದಾಳಿ ಮಾಡಲಿದ್ದು, ಸಂಬಂಧ ಪಟ್ಟ ಇಲಾಖೆಗಳ ಮೇಲೆ ದಾಳಿ ಮಾಡಬಹುದು.

ಇನ್ನು ಯಾವ ಹಂತಗಳಲ್ಲಿ ಏನೇನು ಆಗಿದೆ| ಹಂತಗಳಲ್ಲಿ ಇದ್ದ ಅಧಿಕಾರಿಗಳು ಜನ ಪ್ರತಿನಿಧಿಯಾರು ಎಂಬ ಮಾಹಿತಿ ಕಲೆಹಾಕಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ವಿಚಾರಣೆ ನಡೆಸಲಿದೆ. ಅಲ್ಲದೇ ಪ್ರಕರಣದ ನಾಲ್ವರು ಆರೋಪಿಗಳಿಗೆ ಸಮನ್ಸ್ ನೀಡಿ ವಿಚಾರಣೆಗೊಳಪಡಿಸಬಹುದು. ಜೊತೆಗೆ ಆರೋಪಿಗಳ ಮನೆಯ ಮೇಲೆ ದಾಳಿ ಮಾಡಲಿದೆ.  ಕೊನೆಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರೆ ಆರೋಪಿಗಳ ಬಂಧನವಾದರೂ ಅಚ್ಚರಿಪಡಬೇಕಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.