
ಮೈಸೂರು, ಜೂನ್ 26: ಚಾಮುಂಡಿ ಬೆಟ್ಟದಲ್ಲಿ (Chamundi Hills) ಆಷಾಢ ಮಾಸದ ಸಿದ್ಧತೆ ಜೋರಾಗಿ ಸಾಗುತ್ತಿದೆ. ಈ ಮಾಸದಲ್ಲಿ ಶುಕ್ರವಾರ ಶನಿವಾರ ಮತ್ತು ಭಾನುವಾರಗಳಂದು ಚಾಮುಂಡೇಶ್ವರಿ (Chamundeshwari) ಬೆಟ್ಟಕ್ಕೆ ಯಾವುದೇ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ. ಪ್ರತಿ ಆಷಾಢ ಶುಕ್ರವಾರದಂದು (Ashada Friday) ಮಾತ್ರ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಇನ್ನುಳಿದಂತೆ ಲಲಿತ ಮಹಲ್ ಆವರಣದಿಂದ ಸಾರಿಗೆ ಬಸ್ ಸೇವೆ ಇರಲಿದೆ. ಉಳಿದ ಎರಡು ದಿನಗಳಲ್ಲಿ ಲಲಿತ ಮಹಲ್ ಆವರಣದಿಂದ ಚಾಮುಂಡೇಶ್ವರಿ ಬೆಟ್ಟಕ್ಕೆ ಶುಲ್ಕ ಪಾವತಿಸಿ ಬಸ್ನಲ್ಲಿ ತೆರಳಬೇಕಾಗುತ್ತದೆ.
ಚಾಮುಂಡಿ ಬೆಟ್ಟದ ಮೇಲೆ ದರ್ಶನದ ಯಾವುದೇ ಟಿಕೆಟ್ ನೀಡಲಾಗುವುದಿಲ್ಲ. ಬದಲಿಗೆ ಎಲ್ಲಾ ವಿಶೇಷ ದರ್ಶನದ ಟಿಕೆಟ್ಗಳನ್ನು ಲಲಿತ ಮಹಲ್ ಆವರಣದಲ್ಲಿ ಹಾಗೂ ನಗರ ಬಸ್ ನಿಲ್ದಾಣದಲ್ಲಿ ನೀಡಲಾಗುತ್ತಿದೆ.
ಧರ್ಮ ದರ್ಶನಕ್ಕೆ 300 ರೂ. ಹಾಗೂ 2000 ರೂಪಾಯಿಗಳ ಪ್ರತ್ಯೇಕವಾಗಿ ದರ್ಶನದ ವ್ಯವಸ್ಥೆಗಳಿವೆ. ಇದಕ್ಕೆ ಅನುಗುಣವಾಗಿ ಪ್ರತ್ಯೇಕ ಬಸ್ಗಳ ವ್ಯವಸ್ಥೆ ಕೂಡ ಇರುತ್ತದೆ.
ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಉತ್ಸವ ಮೂರ್ತಿ, ಗರ್ಭಗುಡಿ ಮತ್ತು ಪ್ರಾಂಗಣದಲ್ಲಿ ಮೊಬೈಲ್ ಹಾಗೂ ಕ್ಯಾಮೆರಾಗಳಲ್ಲಿ ಛಾಯಾ ಚಿತ್ರ ಮಾಡುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ವಿಡಿಯೋ ಮಾಡಿದ್ದಲ್ಲಿ ಅಥವಾ ಫೋಟೋ ತೆಗೆದಿದ್ದಲ್ಲಿ ಶಾಶ್ವತವಾಗಿ ಮೊಬೈಲ್ ಹಾಗೂ ಕ್ಯಾಮರಾಗಳನ್ನು ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಪ್ರಾಧಿಕಾರದ ವತಿಯಿಂದ ಉತ್ಸವ ಮೂರ್ತಿಯ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿ ನೇರ ಪ್ರಸಾರ ಮಾಡಲಾಗುತ್ತದೆ. ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವನ್ನು ನೋಡಬಹುದಾಗಿದೆ.
ಧರ್ಮ ದರ್ಶನದ ಸಾಲಿನಲ್ಲಿ ಬರುವಂತಹ ಭಕ್ತಾದಿಗಳಿಗೆ ಉಚಿತ ಡ್ರೈಫ್ರೂಟ್ಸ್ ಹಾಗೆ ಬಾದಾಮಿ ಹಾಲು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಧರ್ಮ ದರ್ಶನದ ಸರದಿ ಸಾಲಿನಲ್ಲಿ ಮಾರಾಟದ ಮಳಿಗೆಗಳನ್ನ ತೆರೆದು ಮಳಿಗೆಗಳಲ್ಲಿ ನಂದಿನಿ ಉತ್ಪನ್ನಗಳು ಹಾಗೂ ಗಾಜಿನ ನೀರಿನ ಬಾಟಲ್, ಕಾಫಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ಭಕ್ತರಿಗೆ ಕುಂಕುಮ ಪ್ರಸಾದ, ಮುತ್ತೈದೆರಿಗೆ ಮಡಿಲಕ್ಕಿ ವಿತರಣೆ ಪ್ರಾಧಿಕಾರದ ವತಿಯಿಂದ ಇರಲಿದೆ.
ಪ್ಲಾಸ್ಟಿಕ್ ಮುಕ್ತ ವಲಯಕ್ಕೆ ಆದ್ಯತೆಯನ್ನು ನೀಡಲಾಗಿದ್ದು, ಬಟ್ಟೆ ಬ್ಯಾಗ್ಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 2000 ರೂ. ಟಿಕೆಟ್ ಪಡೆಯುವಂತಹ ಭಕ್ತರಿಗೆ ವಿಶೇಷವಾಗಿ ಒಂದು ವಿಗ್ರಹ ಒಂದು ಲಾಡು ಪ್ರಸಾದ ಮತ್ತು 500 ಎಂಎಲ್ ನೀರಿನ ಗಾಜಿನ ಬಾಟಲ್ ಒಳಗೊಂಡಂತೆ ವಿಶೇಷ ಬ್ಯಾಗ್ ನೀಡಲಾಗುತ್ತದೆ. ಈ ವಿಶೇಷ ಗಿಫ್ಟ್ ಬ್ಯಾಗ್ನಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹ, ಗಂಡಬೇರುಂಢ ವಿಗ್ರಹ, ಅಂಬಾರಿ ಹೊತ್ತಿರುವಂತಹ ಆನೆಯ ವಿಗ್ರಹ, ಕುಂಕುಮ ಭರಣಿ, ಕೈಗೆ ಕಟ್ಟುವಂತಹ ದಾರ ಸೇರಿದಂತೆ ಶ್ರೀ ಚಕ್ರವಿರುವಂತಹ ಮರದ ಬಾಕ್ಸ್ ನೀಡಲಾಗುತ್ತದೆ.
ಚಾಮುಂಡೇಶ್ವರಿ ಬೆಟ್ಟದ ಬುಡದಿಂದ ಸಾವಿರ ಮೆಟ್ಟಿಲುಗಳಿಗೆ, ಚಾಮುಂಡೇಶ್ವರಿ ಬೆಟ್ಟದ ಮೇಲ್ಭಾಗ ಸೇರಿದಂತೆ ಲಲಿತ ಮಹಲ್ ಆವರಣದಲ್ಲಿ ನೂರಕ್ಕೂ ಹೆಚ್ಚು ಎಐ ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ದರ್ಶನಕ್ಕೆ ಬರುವಂತಹ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಜೊತೆಗೆ ಶೌಚಾಲಯಗಳ ವ್ಯವಸ್ಥೆ ಹಾಗೂ ಇತರೆ ಸೌಕರ್ಯಗಳನ್ನ ಸಹ ಮಾಡಲಾಗಿದೆ.
ಈ ಬಾರಿ ವಿಶೇಷವಾಗಿ, ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆಯಲ್ಲಿ ನೀರನ್ನು ಗಾಜಿನ ಬಾಟಲ್ಗಳ ಮೂಲಕ ಮಾರಾಟ ಮಾಡಲಾಗುತ್ತದೆ. 500 ಎಂಎಲ್ ಗಾಜಿನ ನೀರಿನ ಬಾಟಲಿಗೆ 50 ರೂ. ಇದ್ದು, ಬಾಟಲ್ ವಾಪಸ್ ನೀಡಿದರೆ 30 ರೂ. ವಾಪಸ್ ನೀಡುವ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: 11 ದಿನಗಳ ದಸರಾ ಆಚರಣೆ ಅಪಶಕುನವಾ? ಡಾ. ಶೆಲ್ವ ಪಿಳೈ ಅಯ್ಯಂಗಾರ್ ವಿವರಣೆ ಇಲ್ಲಿದೆ
ಈ ಬಾರಿಯೂ ನಾಲ್ಕು ಶುಕ್ರವಾರ ಮತ್ತು ಒಂದು ವರ್ಧಂತಿ ದಿನ ದಾಸೋಹದ , ಹೂವಿನ ಅಲಂಕಾರ ಮತ್ತು ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಉತ್ತಮ ಗುಣಮಟ್ಟದ ಬ್ಯಾರಿಕೇಡಗಳು ಹಾಗೆಯೇ ಜರ್ಮನ್ ಟೆಂಟ್ಗಳ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ.