ಯಾರದೋ ಹೆಣ ತಂದು ಹೂತು ನಮ್ಮದು ಎನ್ನುತ್ತಾರೆ: ವಕ್ಫ್ ಆಸ್ತಿ ವಿಚಾರವಾಗಿ ಪ್ರತಾಪ್ ಸಿಂಹ ವಾಗ್ದಾಳಿ

ರೈತರ ಪಿತ್ರಾರ್ಜಿತ ಆಸ್ತಿಗಳಿಗೆ ವಕ್ಫ್ ಮಂಡಳಿಯಿಂದ ನೋಟಿಸ್‌ಗಳು ಬಂದಿರುವ ಬಗ್ಗೆ ಬಿಜೆಪಿ ನಾಯಕ ಪ್ರತಾಪ್ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಕ್ಫ್ ಆಸ್ತಿಯ ಮೂಲ ಮತ್ತು ಅದರ ವಿತರಣೆಯನ್ನು ಪ್ರಶ್ನಿಸಿದ್ದಾರೆ. ಹುಣಸೂರಿನ ಗಣೇಶ ದೇವಾಲಯದ ಭೂಮಿ ವಶಪಡಿಸಿಕೊಳ್ಳುವ ಪ್ರಯತ್ನವನ್ನು ಖಂಡಿಸಿದ್ದಾರೆ.

ಯಾರದೋ ಹೆಣ ತಂದು ಹೂತು ನಮ್ಮದು ಎನ್ನುತ್ತಾರೆ: ವಕ್ಫ್ ಆಸ್ತಿ ವಿಚಾರವಾಗಿ ಪ್ರತಾಪ್ ಸಿಂಹ ವಾಗ್ದಾಳಿ
ಪ್ರತಾಪ್ ಸಿಂಹ
Edited By:

Updated on: Oct 29, 2024 | 10:07 AM

ಮೈಸೂರು, ಅಕ್ಟೋಬರ್ 29: ಉತ್ತರ ಕರ್ನಾಟಕದ ಜಿಲ್ಲೆಗಳ ರೈತರ ಪಿತ್ರಾರ್ಜಿತ ಆಸ್ತಿಗಳಿಗೆ ವಕ್ಫ್ ಮಂಡಳಿಯಿಂದ ನೋಟಿಸ್ ಬಂದಿರುವ ಬಗ್ಗೆ ಬಿಜೆಪಿ ನಾಯಕ, ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮುಸ್ಲಿಮರು ವಕ್ಫ್ ಆಸ್ತಿ ಎನ್ನುತ್ತಾರಲ್ಲ, ಅದು ಅವರಿಗೆ ಯಾರಿಂದ ಬಂತು? ಅಕ್ಬರ್, ಔರಂಗಜೇಬ್, ಜಿನ್ನಾ ಅಥವಾ ಯಾರಾದರೂ ಸೌದಿಯ ಮುಲ್ಲಾಗಳು ಕೊಟ್ಟ ಆಸ್ತಿಯೇ ಇದು? ಪ್ರತ್ಯೇಕ ಆಸ್ತಿ ಮುಸ್ಲಿಮರಿಗೆ ಎಲ್ಲಿಂದ ಬಂತು? ಯಾರಿಂದ ಅವರಿಗೆ ಬಳುವಳಿ ಬಂದಿದ್ದು ಎಂದು ಪ್ರಶ್ನಿಸಿದರು.

ಮೈಸೂರಿನ ಹುಣಸೂರಿನಲ್ಲೂ ಗಣೇಶ ದೇವಾಲಯದ 17 ಎಕರೆ ನಮ್ಮದು ಎಂದು ವಕ್ಫ್ ಬೋರ್ಡ್ ಪಟ್ಟುಹಿಡಿದಿದೆ. ಯಾರದೋ ಹೆಣ ತಂದು ಹೂತು ನಮ್ಮದು ಎನ್ನುತ್ತಿದ್ದಾರೆ. ಚಿಕ್ಕಮಗಳೂರಿನಲ್ಲೂ ಇದೇ ಕಥೆ ಆಗಿದೆ. ಕಂಡವರ ಜಮೀನಿಗೆಲ್ಲಾ ಮುಲ್ಲಾಗಳು ನೋಟಿಸ್ ಕೊಡುತ್ತಾ, ‘ಇದು ನಮ್ಮದು’ ಎನ್ನುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಕಿಡಿಕಾರಿದರು.

ಮಸೀದಿ, ಚರ್ಚ್​ಗಳಲ್ಲಿ ಹಿಡಿ ಅನ್ನ ಹಾಕಿದ್ದೀರಾ: ಪ್ರತಾಪ್ ಪ್ರಶ್ನೆ

ವಕ್ಫ್ ಬೋರ್ಡ್ ಜಮೀನಿನಲ್ಲಿ ಮುಸ್ಲಿಮರಿಗೆ ಉಳುಮೆ ಮಾಡಲು ಅವಕಾಶ ಕೊಟ್ಟಿದ್ದೀರಾ? ನಮ್ಮ ದೇವಾಲಯ, ಮಠಗಳಲ್ಲಿ ಹಾಕುವಂತೆ ಯಾವತ್ತಾದರೂ ಮಸೀದಿ ಚರ್ಚ್​​​ಗಳಲ್ಲಿ ಹಿಡಿ ಅನ್ನವನ್ನು ಯಾರಿಗಾದರೂ ಬಡಿಸಿದ್ದೀರಾ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.

ಸಿದ್ದರಾಮಯ್ಯಗೆ ಈಗ ಹಿಂದೂ ದೇವರ ನೆನಪಾಗಿದೆ: ಸಿಂಹ

ಸಿಎಂ ಸಿದ್ದರಾಮಯ್ಯಗೆ ಮುಡಾ ಕಷ್ಟ ಎದುರಾದಾಗ ಚಾಮುಂಡಿ ತಾಯಿ, ಹಾಸನಾಂಬೆ ತಾಯಿ ನೆನಪಾಗಿದ್ದಾರೆ. ಸಿಎಂಗೆ ಕಷ್ಟ ಬಂದಾಗ ಅವರ ಸಹಾಯಕ್ಕೆ ಬರುವುದು ನಮ್ಮ ದೇವಾನುದೇವತೆಗಳೇ ಹೊರತು ಬೇರೆ ಧರ್ಮದವರಲ್ಲ. ಹೀಗಾಗಿ ಸಿಎಂ ಈಗ ಹಿಂದೂಗಳ ವಿರುದ್ಧ ನಿಲುವು ತೆಗೆದುಕೊಳ್ಳವುದಿಲ್ಲ ಎಂದುಕೊಂಡಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದರು. ಪ್ರಧಾನ ಮಂತ್ರಿಗಳು ವಕ್ಫ್ ಕಾಯ್ದೆ, ವಕ್ಫ್ ಬೋರ್ಡ್‌ ಅನ್ನೇ ರದ್ದು ಮಾಡಬೇಕು ಎಂದೂ ಅವರು ಆಗ್ರಹಿಸಿದರು.

ಮುಡಾ ಹಗರಣ ವಿಚಾರವಾಗಿ ಮಾತನಾಡಿ, ಜಾರಿ ನಿರ್ದೇಶನಾಲಯ ತನಿಖೆ ಶುರು ಮಾಡಿದ ಮೇಲೆ ಮುಡಾ ಕ್ಲೀನ್ ಆಗಬಹುದು ಎಂಬ ನಂಬಿಕೆ ಬಂದಿದೆ. 50:50 ಅನುಪಾತದಲ್ಲಿ ಅಕ್ರಮವಾಗಿ ಸೈಟ್ ಪಡೆದವರ ಎಲ್ಲಾ ಸೈಟ್ ವಾಪಸ್ಸು ಕಿತ್ತುಕೊಳ್ಳಲಿ. ಮೈಸೂರಿಗೆ ಒಳ್ಳೆಯ ನಗರಾಭಿವೃದ್ಧಿ ಪ್ರಾಧಿಕಾರ ಬೇಕು, ಒಳ್ಳೆಯ ಜನಪ್ರತಿನಿಧಿಗಳು ಬೇಕು ಎಂದರು.

ಯತ್ನಾಳ್ ಬಿಜೆಪಿಯ ಜನಪ್ರಿಯ ನೇತಾರ: ಪ್ರತಾಪ್ ಸಿಂಹ

ಬಸನಗೌಡ ಪಾಟೀಲ್ ಯತ್ನಾಳ್ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಬಿಜೆಪಿ ಜನಪ್ರಿಯ ನೇತಾರ. ಯತ್ನಾಳ್ ಅವರೇ ವಕ್ಫ್ ಆಕ್ರಮದ ಬಗ್ಗೆ ಮೊದಲು ಧ್ವನಿ ಎತ್ತಿದ್ದು. ವಕ್ಫ್ ವಿಚಾರದಲ್ಲಿ ಸತ್ಯ ಶೋಧನೆ ಸಮಿತಿಗೆ ಕಣ್ತಪಿನಿಂದ ಯತ್ನಾಳ್ ಕೈ ಬಿಟ್ಟು ಹೋಗಿತ್ತು ಅಷ್ಟೆ ಎಂದರು.

ಇದನ್ನೂ ಓದಿ: ಧಾರವಾಡ ರೈತರಿಗೂ ಶುರುವಾಯ್ತು ವಕ್ಫ್‌ ನಡುಕ: ಪಹಣಿಯಲ್ಲಿ ವಕ್ಫ್‌ ಬೋರ್ಡ್‌ ಹೆಸರು ಉಲ್ಲೇಖ

ಸಿಎಂ ಸಿದ್ದರಾಮಯ್ಯ ಮೊದಲು ಕೇಸರಿ ಶಾಲು ಹಾಕಿದರೆ ಕಿತ್ತು ಬಿಸಾಡುತ್ತಿದ್ದರು. ಮುಡಾ ಪ್ರಕರಣ ನಂತರ ಹಿಂದೂ ಧರ್ಮದ ಮೇಲೆ ಅವರಿಗೆ ನಂಬಿಕೆ ಬಂದಿದೆ. ನಮ್ಮ ದೇವರ ಮೇಲೆ ಶ್ರದ್ಧೆ, ಭಕ್ತಿ ಕೂಡ ಸಿಎಂಗೆ ಬಂದಿದೆ. ಸಿದ್ದರಾಮಯ್ಯ ಅವರನ್ನು ಕಾಪಾಡುವುದು ನಮ್ಮ ಹಿಂದೂಗಳೇ ಎಂದು ಪ್ರತಾಪ್ ಸಿಂಹ ಹೇಳಿದರು.

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us