ಮೈಸೂರಲ್ಲೊಂದು ಮನಕಲಕುವ ಘಟನೆ: ಇರುವೆ ಕಚ್ಚಿ ಐಸಿಯುವಿನಲ್ಲಿದ್ದ ಹಸುಳೆ ಸಾವು?

ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವಜಾತ ಶಿಶುವೊಂದು ಇರುವೆ ಕಚ್ಚಿ ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣವೆಂದು ಪೋಷಕರು ದೂರುತ್ತಿದ್ದಾರೆ. ಆದರೆ ಆಸ್ಪತ್ರೆ ಆಡಳಿತ ಮಂಡಳಿ ಈ ಆರೋಪವನ್ನು ತಳ್ಳಿಹಾಕಿದ್ದು, ಮಗು ಅಕಾಲಿಕ ಜನನದಿಂದಾಗಿ ಸಾವನ್ನಪ್ಪಿದೆ ಎಂದು ಸ್ಪಷ್ಟಪಡಿಸಿದೆ.

ಮೈಸೂರಲ್ಲೊಂದು ಮನಕಲಕುವ ಘಟನೆ: ಇರುವೆ ಕಚ್ಚಿ ಐಸಿಯುವಿನಲ್ಲಿದ್ದ ಹಸುಳೆ ಸಾವು?
ಸಾಂದರ್ಭಿಕ ಚಿತ್ರ
Image Credit source: shutterstock.com
Edited By:

Updated on: Apr 23, 2026 | 3:25 PM

ಮೈಸೂರು, ಏಪ್ರಿಲ್​​ 23: ವೈದ್ಯರ ನಿರ್ಲಕ್ಷ್ಯಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್​​ ಆಗಿದ್ದ ರೋಗಿಯೋರ್ವ ನರಳಿ ನರಳಿ ಪ್ರಾಣಬಿಟ್ಟಿರುವ ಆರೋಪ ನಿನ್ನೆಯಷ್ಟೇ ಕೇಳಿಬಂದಿತ್ತು. ಅದು ಮಾಸುವ ಮುನ್ನವೇ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವಜಾತ ಶಿಶುವೊಂದು ಇರುವೆ ಕಚ್ಚಿ ಮೃತಪಟ್ಟಿರುವ ಬಗ್ಗೆ ಮೈಸೂರಿನಲ್ಲಿ (Mysuru) ದೂರು ಕೇಳಿಬಂದಿದೆ. ಚೆಲುವಾಂಬ ಆಸ್ಪತ್ರೆವಿರುದ್ಧ ಮೃತ ಮಗುವಿನ ಪೋಷಕರು ದೂರಿದ್ದು, ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಹಸುಳೆಯ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 15ರಂದು ಅವಧಿ ಪೂರ್ವ ಗಂಡು ಮಗುವಿನ ಜನನವಾಗಿತ್ತು. ಕೇವಲ 7 ತಿಂಗಳಿಗೆ ಹುಟ್ಟಿದ್ದ ಮಗು 1 ಕೆಜಿ 40 ಗ್ರಾಂ ಮಾತ್ರ ತೂಕ ಹೊಂದಿತ್ತು. ಈ ಹಿನ್ನೆಲೆ ಚೆಲುವಾಂಬ ಆಸ್ಪತ್ರೆಯ ಐಸಿಯುನಲ್ಲಿ ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಮಗುವಿಗೆ ಇರುವೆ ಕಚ್ಚಿರುವ ಆರೋಪ ಕೇಳಿಬಂದಿದೆ. ತುಂಬಾ ಇರುವೆಗಳಿದ್ದ ಬಗ್ಗೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಈ ಮೊದಲೇ ತಿಳಿಸಿದ್ದೆವು. ಆದರೆ ಸಿಹಿ ಕಾರಣಕ್ಕೆ ಒಂದೆರಡು ಇರುವೆಗಳು ಬಂದಿವೆ ಎಂಬ ಸಮಜಾಯಿಷಿಯನ್ನು ಅವರು ನೀಡಿದ್ದರು. ಈಗ ನೋಡಿದರೆ ಮಗುವೇ ತೀರಿಕೊಂಡಿದೆ ಎಂದು ಪೋಷಕರು ಅಲವತ್ತುಕೊಂಡಿದ್ದಾರೆ. ಅಲ್ಲದೆ, ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ಜಲಸಮಾಧಿ; ಮೂರೇ ದಿನದಲ್ಲಿ 10 ಮಂದಿ ಕಾವೇರಿ ಪಾಲು!

ಆರೋಪ ಅಲ್ಲಗಳೆದ ಆಸ್ಪತ್ರೆ

ಇನ್ನು ಮೃತ ಮಗುವಿನ ಪೋಷಕರ ಆರೋಪಗಳನ್ನು ಆಸ್ಪತ್ರೆಯ ಪ್ರಭಾರ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್ ಅಲ್ಲಗಳೆದಿದ್ದಾರೆ. 21 ವಾರಕ್ಕೆ ಮಗು ಹುಟ್ಟಿದ್ದು, ಜನನದ ಸಂದರ್ಭ ಶಿಶು ಕೇವಲ 1 ಕೆಜಿ ಇತ್ತು. ಮಗು ಅಳುತ್ತಿಲ್ಲ ಎನ್ನುವ ಕಾರಣಕ್ಕೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದೆವು. ಐಸಿಯುನಲ್ಲಿ ಚಿಕಿತ್ಸೆ ಹಿನ್ನೆಲೆ ಮಗುವಿನ ಕೈ ಮತ್ತು ಬಾಯಿಗೆ ಪ್ಲಾಸ್ಟರ್ ಹಾಕಿದ್ದೆವು. ಹೀಗಾಗಿ ಆ ಭಾಗದಲ್ಲಿ ಮಾರ್ಕ್​​ಗಳು ಉಂಟಾಗಿವೆ. ಕಳೆದ ಒಂದು ವಾರದಿಂದ ಮಗುವಿನ ಜೀವ ಉಳಿಸಲು ಪ್ರಯತ್ನ ಮಾಡಲಾಗಿದೆ. ನಮ್ಮ ಸಿಬ್ಬಂದಿಗಳಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ. ಐಸಿಯುನಲ್ಲಿ ಗ್ಲೂಕೊಸ್ ಇರುವುದರಿಂದ ಒಂದೊಂದು ಇರುವೆ ಇರಬಹುದು. ಆದರೆ ಮಗುವಿನ ಪೋಷಕರು ಹೇಳುವಂತೆ ಇರುವೆ ಕಚ್ಚಿ ಸಾವು ಉಂಟಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us