ಸ್ಯಾಂಟ್ರೋ ರವಿಯ 20 ವರ್ಷಗಳ ದಂಧೆಯ ಎಲ್ಲಾ ಅಂಶಗಳನ್ನು ತನಿಖೆಗೆ ಒಳಪಡಿಸುತ್ತೇವೆ: ಸಿಎಂ ಬೊಮ್ಮಾಯಿ
ಮೈಸೂರು ಬೆಂಗಳೂರಿನಲ್ಲಿ ವಾಸವಾಗಿರುವ ರೌಡಿಶೀಟರ್ ಸ್ಯಾಂಟ್ರೋ ರವಿಗೆ ಮುಖ್ಯಮಂತ್ರಿ ಸೇರಿದಂತೆ ಪ್ರಭಾವಿ ರಾಜಕೀಯ ನಾಯಕರ ಪರಿಚಯವಿದೆ ಎನ್ನಲಾಗುತ್ತಿದೆ. ಈ ಆರೋಪಗಳನ್ನು ಸಿಎಂ ಬೊಮ್ಮಾಯಿ ಸೇರಿದಂತೆ ಅನೇಕ ಸಚಿವರು ತಳ್ಳಿ ಹಾಕಿದ್ದಾರೆ.

ಮೈಸೂರು: ಮೈಸೂರು ಬೆಂಗಳೂರಿನಲ್ಲಿ ವಾಸವಾಗಿರುವ ರೌಡಿಶೀಟರ್ ಸ್ಯಾಂಟ್ರೋ ರವಿ (Santro Ravi)ಗೆ ಮುಖ್ಯಮಂತ್ರಿ ಸೇರಿದಂತೆ ಪ್ರಭಾವಿ ರಾಜಕೀಯ ನಾಯಕರ ಪರಿಚಯವಿದೆ ಎನ್ನಲಾಗುತ್ತಿದೆ. ಈ ಆರೋಪಗಳನ್ನು ಸಿಎಂ ಬೊಮ್ಮಾಯಿ ಸೇರಿದಂತೆ ಅನೇಕ ಸಚಿವರು ತಳ್ಳಿ ಹಾಕಿದ್ದಾರೆ. ಇದೀಗ ರವಿ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳನ್ನು ಹಾಗೂ ಆತನ ದಂಧೆಯ ಎಲ್ಲಾ ಅಂಶಗಳನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸ್ಯಾಂಟ್ರೋ ರವಿಯ 20 ವರ್ಷಗಳ ದಂಧೆಯ ಎಲ್ಲಾ ಅಂಶಗಳನ್ನು ತನಿಖೆಗೆ ಒಳಪಡಿಸುತ್ತೇವೆ. ಆತ 20 ವರ್ಷದಲ್ಲಿ ಯಾರ ಯಾರ ಸಂಪರ್ಕದಲ್ಲಿದ್ದ, ಆತನ ವ್ಯವಹಾರ ಏನು ಎಂಬುದು ತನಿಖೆ ಮೂಲಕ ಬಯಲಾಗುತ್ತದೆ ಎಂದರು.
ವಿಪಕ್ಷಗಳ ನಾಯಕರ ಜೊತೆಯಲ್ಲೂ ಸ್ಯಾಂಟ್ರೋ ರವಿ ಸಂಪರ್ಕದಲ್ಲಿದ್ದಾನೆ, ಈಗ ಬಿಡುಗಡೆಯಾಗುತ್ತಿರುವ ಫೋಟೋ ಮತ್ತು ಕಾಲ್ ಲಿಸ್ಟ್ಗಳು ಎಲ್ಲವೂ ನಕಲಿಯಾಗಿದೆ. ಅದು ಅವನೇ ತಾಂತ್ರಿಕತೆಯಿಂದ ಮಾಡಿಕೊಂಡಿರುವುದಾಗಿದೆ. ಯಾರ ಜೊತೆ ಏನೋ ಮಾತನಾಡುತ್ತೇವೆ, ಮಾತನಾಡಿದ ತಕ್ಷಣ ಅಪರಾಧಿಯಾಗುತ್ತಿವಾ? ಯಾರು ಯಾರ ಜೊತೆ ಮಾತನಾಡುವಾಗ ಎಲ್ಲಾ ಹಿನ್ನಲೆ ನೋಡಿ ಮಾತನಾಡಲು ಸಾಧ್ಯನಾ? ವಿಪಕ್ಷಗಳು ಸುಮ್ಮನೇ ಆರೋಪಗಳನ್ನ ಮಾಡುತ್ತಿವೆ ಎಂದರು.
ಇದನ್ನೂ ಓದಿ: Santro Ravi: ಸ್ಯಾಂಟ್ರೋ ರವಿಗೆ ಆ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಮಂಡ್ಯ ಡಿವೈಎಸ್ಪಿ ಪುತ್ರನ ಸಂಪೂರ್ಣ ಜಾತಕ
ನಾನು ಈ ವಿಚಾರದಲ್ಲಿ ಸಮಗ್ರ ತನಿಖೆಗೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ಈ ವಿಚಾರದಲ್ಲಿ ಪ್ರಶ್ನೆ ಕೇಳುವವರೆಲ್ಲಾ ತನಿಖಾಧಿಕಾರಿಗಳು ಆಗುವುದು ಬೇಡ. ಇಲ್ಲಿ ಯಾರು ತನಿಖಾಧಿಕಾರಿಗಳು ಅಲ್ಲ. ಪೊಲೀಸರು ಇಲ್ಲಿ ನಿಜವಾದ ತನಿಖೆ ಮಾಡುತ್ತಾರೆ. ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.
ಸ್ಯಾಂಟ್ರೋ ರವಿ ಸಿಎಂ ಮಗನ ಮಾತುಕತೆಯ ಆಡಿಯೋ ಬಿಡುಗಡೆಯ ಸುದ್ದು ಕೇಳಿಬರುತ್ತಿದೆ. ಈ ವಿಚಾರದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಆಡಿಯೋ ಬಗ್ಗೆಯೂ ತನಿಖೆ ಮಾಡಲಾಗುತ್ತದೆ ಎಂದರು. ಸ್ಯಾಂಟ್ರೋ ರವಿಗೆ ಬಿಜೆಪಿ ನಾಯಕರ ಜೊತೆ ಸಂಪರ್ಕ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಇದಕ್ಕೆ ಅಂದು ಪ್ರತಿಕ್ರಿಯಿಸಿದ್ದ ಸಿಎಂ, ಕುಮಾರಸ್ವಾಮಿಯೇ ಸ್ಯಾಂಟ್ರೊ ರವಿ ಯಾರು ಅಂತ ಹೇಳಬೇಕು ಮತ್ತು ವಿವರಗಳನ್ನು ನೀಡಬೇಕು, ಯಾಕೆಂದರೆ ರವಿ ಯಾರು ಅನ್ನೋದು ತನಗೆ ಗೊತ್ತಿಲ್ಲ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Sat, 7 January 23