ಮೈಸೂರು ದಸರಾವನ್ನು ವ್ಯವಸ್ಥಿತವಾಗಿ ನೆರವೇರಿಸುವಂತೆ ಅಧಿಕಾರಿಗಳಿಗೆ ಸಚಿವ ಮಹದೇವಪ್ಪ ಸೂಚನೆ

ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ಮೈಸೂರು ಅರಮನೆ ಮಂಡಳಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ, ನಮ್ಮ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಸಾರುವ ದಸರಾವನ್ನು ಜನರ ಉತ್ಸವವನ್ನಾಗಿ ಅಚ್ಚುಕಟ್ಟಾಗಿ ನೆರವೇರಿಸಬೇಕು ಎಂದು ಸಚಿವ ಡಾ.ಹೆಚ್​.ಸಿ.ಮಹದೇವಪ್ಪ ಅವರು ಸೂಚನೆ ನೀಡಿದ್ದಾರೆ.

ಮೈಸೂರು ದಸರಾವನ್ನು ವ್ಯವಸ್ಥಿತವಾಗಿ ನೆರವೇರಿಸುವಂತೆ ಅಧಿಕಾರಿಗಳಿಗೆ ಸಚಿವ ಮಹದೇವಪ್ಪ ಸೂಚನೆ
ಮೈಸೂರು ದಸರಾ ಮಹೋತ್ಸವದ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ
Follow us
| Updated By: ಗಣಪತಿ ಶರ್ಮ

Updated on:Sep 06, 2023 | 5:32 PM

ಮೈಸೂರು, ಸೆ.5: ದಸರಾ ಮಹೋತ್ಸವವನ್ನು (Mysuru Dasara 2023) ಅಚ್ಚುಕಟ್ಟಾಗಿ ನೆರವೇರಿಸುವಂತೆ ಸಚಿವ ಡಾ. ಹೆಚ್.ಸಿ.ಮಹದೇವಪ್ಪ (Dr.H.C. Mahadevappa) ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅರಮನೆ ಮಂಡಳಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಸಾರುವ ದಸರಾವನ್ನು ಜನರ ಉತ್ಸವವನ್ನಾಗಿ ಅಚ್ಚುಕಟ್ಟಾಗಿ ನೆರವೇರಿಸಬೇಕು ಎಂದರು.

ಎಲ್ಲಾ ಉಪಸಮಿತಿಗಳು ಸಮನ್ವಯ ಸಾಧಿಸಿ ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖೇನ ನಾಡಹಬ್ಬವನ್ನು ಯಶಸ್ವಿಯಾಗಿಸಬೇಕು. ದೇಶ, ವಿದೇಶದಿಂದಲೂ ದಸರಾ ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಎಲ್ಲರಿಗೂ ನಾಡಿನ ಪರಂಪರೆ, ಕಲಾ ವೈಶಿಷ್ಟ್ಯ, ಸಂವಿಧಾನದ ಆಶಯ, ಪ್ರತಿಯೊಬ್ಬರಿಗೂ ನಾಡಿನ ಪರಂಪರೆ, ಕಲಾ ವೈಶಿಷ್ಟ್ಯ, ಸಂವಿಧಾನದ ಆಶಯ, ಸರ್ಕಾರದ ಐತಿಹಾಸಿಕ ಯೋಜನೆಗಳು ತಿಳಿಸಿಕೊಡುವ ಕೆಲಸ ಮಾಡಿ ಎಂದರು.

ದಸರಾ ಉತ್ಸವದಲ್ಲಿ ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಿಗೆ ಅಳವಡಿಸುವ ದೀಪಾಲಾಂಕಾರದಿಂದ ಪ್ರವಾಸಿಗರಿಗೆ ಅತ್ಯತ್ತಮವಾದ ಸಂದೇಶ ನೀಡಬೇಕು. ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳು ಮತ್ತು ಮಹಾನ್ ವ್ಯಕ್ತಿಗಳ ಪ್ರತಿಕೃತಿಗಳನ್ನು ಪ್ರಮುಖ ವೃತ್ತದಲ್ಲಿ ಅಳವಡಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಸ್ಥಳೀಯ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಅವರಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರೋತ್ಸಾಹಿಸಬೇಕು ಎಂದರು.

ಇದನ್ನೂ ಓದಿ: ಮೈಸೂರು ದಸರಾ 2023: ಅರಮನೆಗೆ ಎಂಟ್ರಿ ಕೊಟ್ಟ ಗಜಪಡೆಗೆ ಅದ್ಧೂರಿ ಸ್ವಾಗತ, ಮೆರವಣಿಗೆ; ಫೋಟೋಗಳಲ್ಲಿ ನೋಡಿ

ನಾಡಿನ ಎಲ್ಲಾ ಕಲಾ ಪ್ರಕಾರಗಳನ್ನು ಜನರಿಗೆ ಪರಿಚಯ ಮಾಡಿಕೊಡುವ ಕಾರ್ಯಕ್ರಮ ಒಳಗೊಂಡಿರಬೇಕು ಸಂಗೀತ, ನಾಟಕ, ನೃತ್ಯ ಇನ್ನಿತರ ಕಲಾ ಪ್ರಕಾರಗಳನ್ನು ನೋಡಿ ಕಲಾರಸಿಕರು ಆಸ್ವಾದಿಸುವಂತಹ ಕಾರ್ಯಕ್ರಮ ರೂಪಿಸಬೇಕು. ಯುವ ಜನರನ್ನು ಹೆಚ್ಚು ಆಕರ್ಷಿಸುವ ಹಾಗೂ ಅವರು ಅಧಿಕವಾಗಿ ಭಾಗವಹಿಸುವ ಯುವ ಸಂಭ್ರಮ, ಯುವ ದಸರಾ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಮಾಡಿ ಎಂದು ಸಲಹೆ ನೀಡಿದರು.

ಆಹಾರ ಮೇಳದಲ್ಲಿ ಶುಚಿ ಹಾಗೂ ರುಚಿಯಿಂದ ಉತ್ತಮವಾಗಿ ಆಹಾರ ತಯಾರಿಸುವವರಿಗೆ ಪ್ರಾಮುಖ್ಯತೆ ನೀಡಿ ಮಳಿಗೆಗಳನ್ನು ನೀಡಬೇಕು. ಫಲಪುಷ್ಪ ಪ್ರದರ್ಶನವು ಪ್ರತಿಯೊಬ್ಬರನ್ನೂ ಆಕರ್ಷಿಸುವ ಕಾರ್ಯಕ್ರಮವಾಗಿದೆ. ಪ್ರದರ್ಶನವು ಹೆಚ್ಚಿನ ಮಟ್ಟದಲ್ಲಿ ಕಲಾತ್ಮಕತೆ ಹಾಗೂ ಸೃಜನಶೀಲತೆಯಿಂದ ಕೂಡಿರಲಿ. ಲಕ್ಷಾಂತರ ವಿವಿಧ ಕುಸುಮಗಳಿಂದ ಅರಳಿದ ಕಲಾಕೃತಿಗಳಿರಲಿ. ದಸರಾಗೆ ಬರುವ ಪ್ರವಾಸಿಗರು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸುವಷ್ಟು ಸುಂದರವಾಗಿ ಮೂಡಿಬರಲಿ ಎಂದರು.

ನಗರವನ್ನು ಸ್ವಚ್ಚವಾಗಿಡುವಂತೆ ಅಧಿಕಾರಿಗಳಿಗೆ ಸೂಚನೆ

ದಸರಾ ಸಂದರ್ಭದಲ್ಲಿ ಪ್ರಮುಖವಾಗಿ ನಗರವನ್ನು ಸ್ವಚ್ಚವಾಗಿಡಿ. ನಗರ ಪಾಲಿಕೆಯು ಹೆಚ್ಚಿನ ಶ್ರಮವಹಿಸಬೇಕು. ರಸ್ತೆ ಇಕ್ಕೆಲಗಳಲ್ಲಿ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಆ ದಿನವೇ ತ್ವರಿತವಾಗಿ ಸ್ವಚ್ಚಗೊಳಿಸಬೇಕು. ಬೆಳಗ್ಗೆ ಹಾಗೂ ರಾತ್ರಿ ಎರಡೂ ಪಾಳಿಯಲ್ಲಿ ಕೆಲಸ ನಿರ್ವಹಿಸಲು ತಂಡವನ್ನು ರಚಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:47 pm, Tue, 5 September 23