ಮೈಸೂರು: ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ, ಗಂಗರಾಜು ಗಂಭೀರ ಆರೋಪ

ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪ ಬಂದ ಬೆನ್ನಲ್ಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಒಂದೊಂದೇ ಅಕ್ರಮಗಳು ಬಯಲಿಗೆ ಬರುತ್ತಿವೆ. ಏತನ್ಮಧ್ಯೆ, ಮುಡಾದಲ್ಲಿ 5 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತದ ಹಗರಣ ನಡೆದಿದೆ ಎಂದು ಆರ್​ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ. ಗಂಗರಾಜು ಎನೇನಂದ್ರು ಎಂಬ ಪೂರ್ಣ ವಿವರ ವಿಡಿಯೋ ಸಹಿತ ಇಲ್ಲಿದೆ.

ಮೈಸೂರು, ನವೆಂಬರ್ 21: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ಆರ್​ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ. ಹಗರಣದ ಬಗ್ಗೆ ‘ಟಿವಿ9’ ಜತೆ ಮಾತನಾಡಿದ ಅವರು, 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡುತ್ತೇನೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರದ್ದು 20-30 ಕೋಟಿ ರೂಪಾಯಿ ಹಗರಣ ಇರಬಹುದು ಅಷ್ಟೆ. ಆದರೆ, ಅದನ್ನು ಬಿಟ್ಟು 5 ಸಾವಿರ ಕೋಟಿ ರೂ.ಗೂ ಹೆಚ್ಚು ಅಕ್ರಮ ನಡೆದಿದೆ. ಮುಡಾದ 9 ವಿಭಾಗದ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರದ್ದಾದ ನಿವೇಶನ ಹಂಚಿ ಹಣ ಮಾಡಿದ್ದಾರೆ: ಗಂಗರಾಜು ಆರೋಪ

ಮುಡಾದ 9 ವಿಭಾಗದ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳ ಬ್ಯಾಂಕ್ ಖಾತೆಗಳು, ಆಸ್ತಿ ಬಗ್ಗೆ ತನಿಖೆಯಾಗಬೇಕು. ಕೇವಲ 50:50 ಅನುಪಾತ ಮಾತ್ರವಲ್ಲ, ಇತರ ನಿವೇಶನ ಹಂಚಿಕೆಯಲ್ಲೂ ಅಕ್ರಮವಾಗಿದೆ. ರದ್ದಾದ ನಿವೇಶನಗಳನ್ನು ಹಂಚಿಕೆ ಮಾಡಿ ಹಣ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಡಿ ಗ್ರೂಪ್ ನೌಕರರಿಂದ ತೊಡಗಿ ಹಿರಿಯ ಅಧಿಕಾರಿಗಳವರೆಗೆ ಎಲ್ಲರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಮಿಷನರ್​ಗಳೂ ಶಾಮೀಲಾಗಿದ್ದಾರೆ. ಆದರೆ, ಎಲ್ಲರೂ ಅಂತಲ್ಲ, ಹೆಚ್ಚಿನವರು ಶಾಮೀಲಾಗಿದ್ದಾರೆ. ಕೆಲವೊಬ್ಬರು ಮಾತ್ರ ಅಕ್ರಮದಲ್ಲಿ ಶಾಮೀಲಾಗದೆ ಇರಬಹುದು ಅಷ್ಟೆ ಎಂದು ಅವರು ಹೇಳಿದ್ದಾರೆ.

ಡಿ ಗ್ರೂಪ್ ಸಿಬ್ಬಂದಿ ಬಳಿ 30 ಲಕ್ಷ ರೂ. ಕಾರು!

ಮುಡಾದ ಡಿ ಗ್ರೂಪ್ ನೌಕರರು ಕೂಡ 30 ಲಕ್ಷ ರೂ. ಮೌಲ್ಯದ ಕಾರಿನಲ್ಲಿ ಓಡಾಡುತ್ತಾರೆ. ಈ ಸಂಬಂಧ ನನ್ನ ಬಳಿ ಕೆಲ ದಾಖಲೆಗಳಿವೆ. ತನಿಖೆ ನಡೆದರೆ ಎಲ್ಲವೂ ಹೊರಬರಲಿದೆ ಎಂದು ‘ಟಿವಿ9’ ಮೂಲಕ ಗಂಗರಾಜು ಒತ್ತಾಯಿಸಿದ್ದಾರೆ. ಈ ಬಗ್ಗೆ ತನಿಖೆಗೆ ಎಸ್​​ಐಟಿ ರಚನೆಯಾಗಬೇಕು. ಇ.ಡಿಗೂ ದೂರು ನೀಡುತ್ತೇನೆ ಎಂದು ಅವರು ಆಗ್ರಹಿಸಿದ್ದಾರೆ.

‘ಸಿದ್ದರಾಮಯ್ಯ ಮುಂದಿಟ್ಟು ಬಚಾವಾಗಲು ತಂತ್ರ’

ಸದ್ಯ ಸಿದ್ದರಾಮಯ್ಯ ವಿರುದ್ಧ ಆರೋಪ ಇರುವುದರಿಂದ ಅದನ್ನೇ ಮುಂದಿಟ್ಟುಕೊಂಡು ಉಳಿದವರು ಬಚಾವಾಗಲು ಯತ್ನಿಸುತ್ತಿರಬಹುದು. ಆದರೆ, ಹಾಗಾಗಬಾರದು. ಎಲ್ಲ ಅಕ್ರಮವೂ ಹೊರಬರಬೇಕು. ಉನ್ನತ ಮಟ್ಟದಲ್ಲಿ ತನಿಖೆಯಾದಾಗ ಮಾತ್ರ ಅದು ಸಾಧ್ಯ ಎಂದು ಗಂಗರಾಜು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಚಳಿಗಾಲದ ಅಧಿವೇಶ: ಬಿಜೆಪಿ ಅಸ್ತ್ರಕ್ಕೆ ಪ್ರತ್ಯಾಸ್ತ್ರ ಹೂಡಿದ ಕಾಂಗ್ರೆಸ್, ಎಲ್ಲರ ಚಿತ್ತ ರಾಜ್ಯಪಾಲರತ್ತ

ಏತನ್ಮಧ್ಯೆ ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಳಿಬಂದಿರುವ ಆರೋಪದ ಸಂಬಂಧ ತನಿಖೆ ಚುರುಕುಗೊಂಡಿದೆ. ಲೋಕಾಯುಕ್ತ ಅಧಿಕಾರಿಗಳು ಈಗಾಗಲೇ ಪ್ರಮುಖ ಆರೋಪಿಗಳ ತನಿಖೆ ನಡೆಸಿದ್ದಾರೆ. ಅತ್ತ ಇಡಿ ತನಿಖೆಯೂ ಪ್ರಗತಿಯಲ್ಲಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:35 am, Thu, 21 November 24

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us