ಮೈಸೂರು ರಂಗಾಯಣದಲ್ಲಿ ಟಿಪ್ಪು ನಿಜ ಕನಸುಗಳು ನಾಟಕದ ಯಶಸ್ವಿ ಪ್ರಯೋಗ: ಸಾಹಿತಿ ಎಸ್​ಎಲ್​ ಭೈರಪ್ಪ ಉಪಸ್ಥಿತಿ

ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಚಿಸಿ‌ ನಿರ್ದೇಶನ ಮಾಡಿರುವ ಟಿಪ್ಪು ನಿಜ ಕನಸುಗಳು ನಾಟಕ ರಂಗಾಯಣದ ಭೂಮಿ ಗೀತದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ.

ಮೈಸೂರು ರಂಗಾಯಣದಲ್ಲಿ ಟಿಪ್ಪು ನಿಜ ಕನಸುಗಳು ನಾಟಕದ ಯಶಸ್ವಿ ಪ್ರಯೋಗ: ಸಾಹಿತಿ ಎಸ್​ಎಲ್​ ಭೈರಪ್ಪ ಉಪಸ್ಥಿತಿ
ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ
Edited By:

Updated on: Nov 22, 2022 | 3:09 PM

ಮೈಸೂರು: ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಚಿಸಿ‌ ನಿರ್ದೇಶನ ಮಾಡಿರುವ ‘ಟಿಪ್ಪು ನಿಜ ಕನಸುಗಳು  ನಾಟಕದ ಪ್ರದರ್ಶನ ಇತ್ತೀಚೆಗೆ ನಡೆಯಿತು. 25 ಪಾತ್ರಧಾರಿಗಳು, ಐವರ ತಾಂತ್ರಿಕ ವರ್ಗ ಸೇರಿ ಒಟ್ಟು 30 ಜನರ ತಂಡದಿಂದ ನಾಟಕ ಪ್ರದರ್ಶನಗೊಂಡಿತ್ತು. ಒಟ್ಟು 3 ಗಂಟೆ 10 ನಿಮಿಷದ ನಾಟಕ ಇದು. ಈ ನಾಟಕವು ರಂಗಾಯಣದಲ್ಲಿ 15 ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ 85 ಪ್ರದರ್ಶನ ಕಾಣಲಿದೆ. ಸಾಹಿತಿ ಎಸ್ ಎಲ್ ಭೈರಪ್ಪ, ಶಾಸಕ ಕೆ.ಜಿ ಬೋಪಯ್ಯ ಸೇರಿ ಹಲವು ಗಣ್ಯರು ಈ ನಾಟಕವನ್ನು ವೀಕ್ಷಿಸಿದರು. ನಾಟಕದಲ್ಲಿ ಮೇಲುಕೋಟೆ ದುರಂತ, ಮಂಡಿಯಂ ಅಯ್ಯಂಗಾರ್​ರ 700 ಬ್ರಾಹ್ಮಣರ ಹತ್ಯೆ ವಿಚಾರ, ಕೊಡಗಿನಲ್ಲಿ ನಡೆದ ದೊಡ್ಡ ಸಂಖ್ಯೆಯ ಮತಾಂತರ, ಕೊಡವರ ಹತ್ಯೆ, ಟಿಪ್ಪು ಸುಲ್ತಾನ್ ಆಡಳಿತದಲ್ಲಿ ತೆಗೆದುಕೊಂಡ ಇಸ್ಲಾಮಿಕ್ ತೀರ್ಮಾನಗಳು, ಆತ ಬರೆದ ಪತ್ರಗಳ‌ ದೃಶ್ಯಾವಳಿಗಳು, ಟಿಪ್ಪು ತಾಯಿ, ಪತ್ನಿಯಿಂದ ಮತಾಂಧತೆಗೆ ವಿರೋಧದ ದೃಶ್ಯಗಳು ಎಲ್ಲರ ಗಮನ ಸೆಳೆಯಿತು.

ಇದರ ಜೊತೆಗೆ ಟಿಪ್ಪು ಪಾರ್ಸಿ ಭಾಷೆಯನ್ನು ರಾಜ್ಯ ಭಾಷೆ ಮಾಡಿದ್ದು, ಕಂದಾಯ ಇಲಾಖೆ ಹೆಸರುಗಳನ್ನು ಹಾಗೂ ಊರುಗಳ ಹೆಸರನ್ನು ಪಾರ್ಸಿ ಭಾಷೆಯಾಗಿ ಬದಲಿಸಿದ್ದು, ಶ್ರೀರಂಗಪಟ್ಟಣದಲ್ಲಿ ಬಹು ಮಹಡಿ ಕಟ್ಟಡದಲ್ಲಿ ಇದ್ದ ತಾಳೆಗರಿ ಗ್ರಂಥಗಳನ್ನು ಸುಟ್ಟು ಉರ್ದು ಗ್ರಂಥಗಳನ್ನು ಇಟ್ಟಿದ್ದು. ಇಸ್ಲಾಂಮಿನೆಡೆಗೆ ರಾಜ್ಯವನ್ನು ಬಲವಂತವಾಗಿ ದೂಡಿರುವ ಕುರಿತು ಎಲ್ಲವನ್ನು ನಾಟಕದಲ್ಲಿ ತೋರಿಸಲಾಯಿತು. ಎಲ್ಲಾ ಕಲಾವಿದರು ಕೂಡ ಅದ್ಬುತವಾಗಿ ಅಭಿನಯಿಸಿದರು.

ನಾಟಕಕ್ಕೆ ಶಾಸಕ ತನ್ವೀರ್ ಸೇಠ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರಂಗಾಯಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಡಿಸಿಪಿ ಪ್ರದೀಪ್ ಗುಂಟಿ ಹಾಗೂ ಗೀತಾ ಪ್ರಸನ್ನ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಎಲ್ಲರನ್ನೂ ಪರಿಶೀಲನೆ ಮಾಡಿಯೇ ಒಳಗೆ ಕಳುಹಿಸಲಾಯಿತು. ಟಿಪ್ಪು ನಿಜ ಕನಸು ನಾಟಕದ ವಿರುದ್ದ ಪತ್ರ ಬರೆದಿದ್ದ ರಂಗಾಯಣದ ಮಾಜಿ ನಿರ್ದೇಶಕ ಬಸವಲಿಂಗಯ್ಯ ಅವರು ಸಹ ನಾಟಕ‌ ನೋಡಲು ಬಂದಿದ್ದು ವಿಶೇಷವಾಗಿತ್ತು.

ಟಿಪ್ಪು ಪುಸ್ತಕದ ಲೇಖಕ ಟಿ.ಗುರುರಾಜ್ ಜೊತೆ ಬಂದಿದ್ದ ಬಸವಲಿಂಗಯ್ಯ ಅವರನ್ನು ಒಳಗೆ ಬಿಡಲು ಪೊಲೀಸರು ನಿರಾಕರಿಸಿದರು. ಈ ವೇಳೆ ಬಸವಲಿಂಗಯ್ಯ ರಂಗಾಯಣದ ಮುಂಭಾಗದಲ್ಲಿ ಧರಣಿ ಕುಳಿತರು. ಟಿಕೆಟ್ ಖರೀದಿ ಮಾಡಿ ಬಂದಿದ್ದೇನೆ ಏಕೆ ಬಿಡುವುದಿಲ್ಲ ಎಂದು ಪೊಲೀಸರ ಜೊತೆ ವಾದ ಮಾಡಿದರರು. ಈ ವೇಳೆ ಮಧ್ಯ ಪ್ರವೇಶಿಸಿದ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಬಸವಲಿಂಗಯ್ಯ ಹಾಗೂ ಟಿ ಗುರುರಾಜ್‌ ಅವರಿಗೆ ಸ್ವಾಗತ ಕೋರಿ ಒಳಗೆ ಕರೆದುಕೊಂಡು ಹೋದರು. ಸದ್ಯ ಟಿಪ್ಪು ನಿಜ ಕನಸುಗಳು ನಾಟಕದ ಕುತೂಹಲಕ್ಕೆ ತೆರೆ ಬಿದ್ದಿದ್ದು. ಇನ್ನು ನಾಳೆಯೂ ನಾಟಕ ಪ್ರದರ್ಶನ ಕಾಣಲಿದೆ. ಮುಂದೆ ಇನ್ಯಾವ ಘಟನೆಗೆ ಈ ಟಿಪ್ಪು ನಿಜ ಕನಸು ನಾಟಕ ಕಾರಣವಾಗುತ್ತದೆ ಕಾದು ನೋಡಬೇಕಿದೆ.

ವರದಿ: ರಾಮ್ ಟಿವಿ9 ಮೈಸೂರು

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿ ದುರಸ್ತಿ ಮಾಡುವಂತೆ ಸಂಸದ ಪ್ರತಾಪ್ ಸಿಂಹಗೆ ಗಡುವು

Published On - 3:06 pm, Tue, 22 November 22