
ಬೆಂಗಳೂರು, ಜುಲೈ 10: ‘‘ಮೈಸೂರು ದಸರಾ (Mysuru Dasara) ನಮ್ಮ ರಾಜ್ಯದ ಹೆಮ್ಮೆ. ಈ ವರ್ಷ ರಾಜ್ಯದಲ್ಲಿ ಬರಗಾಲದ ಛಾಯೆ ಕಾಣಿಸುತ್ತಿದ್ದರು ಸಹ, ಆ ನೆಪದಲ್ಲಿ ಆಚರಣೆ ನಿಲ್ಲಿಸೋಕೆ ಆಗುವುದಿಲ್ಲ. ದುಂದು ವೆಚ್ಚವಿಲ್ಲದೆ, ಸಾಂಸ್ಕೃತಿಕ ವೈಭವವನ್ನು ನೆನಪಿಸುವ ರೀತಿಯಲ್ಲಿ ಈ ಬಾರಿಯ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ʻನಾಡಹಬ್ಬ ದಸರಾ – 2026ʼ ಆಚರಿಸುವ ಸಂಬಂಧ ಉನ್ನತ ಮಟ್ಟದ ಪೂರ್ವಭಾವಿ ಸಭೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘‘ನಾಡಹಬ್ಬ ದಸರಾ ಆಚರಣೆಗೆ ಸರ್ಕಾರ ಸಿದ್ಧತೆ ಆರಂಭಿಸಿದೆ. ಬಹುತೇಕ ಶಾಸಕರು, ಮಂತ್ರಿಗಳು ಪಕ್ಷಾತೀತವಾಗಿ ಸಭೆಯಲ್ಲಿ ಭಾಗವಹಿಸಿದ್ದರು. ಮೈಸೂರು ದಸರಾ ರಾಜ್ಯದ ಹೆಮ್ಮೆ. ಪ್ರತಿವರ್ಷ ನಾಡಹಬ್ಬ ದಸರಾ ಉತ್ಸವದ ವ್ಯಾಪ್ತಿ ಬದಲಾಗುತ್ತಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕಾರ್ಯಕ್ರಮ ಮುಂದುವರಿಸಬೇಕು. ನಾಡಹಬ್ಬ ಆಚರಣೆಯ ವಿಚಾರದಲ್ಲಿ ಸರ್ಕಾರ ಯಾವುದೇ ರಾಜಕಾರಣ ಮಾಡುವುದಿಲ್ಲ. ಎಲ್ಲರನ್ನೂ ಒಳಗೊಂಡು ಒಟ್ಟಾಗಿ ಹಬ್ಬ ಆಚರಿಸಲಾಗುವುದು’’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ನಿಗದಿ: ಅ 11ಕ್ಕೆ ಉದ್ಘಾಟನೆ, 21ಕ್ಕೆ ಜಂಬೂಸವಾರಿ
‘‘ಆಗಸ್ಟ್ 26ರ ಬೆಳಗ್ಗೆ 10 ಗಂಟೆಗೆ ದಸರಾ ಗಜಪಡೆ ಪೂಜೆ ನಡೆಯಲಿದೆ. ಅಕ್ಟೋಬರ್ 21ರಂದು ಜಂಬೂಸವಾರಿ ನಡೆಯಲಿದೆ. ಆದಷ್ಟು ಬೇಗ ಕಾರ್ಯಕಾರಿ ಸಮಿತಿ ರಚನೆ ಮಾಡಲಿದ್ದೇವೆ. ಯಾರು ಉದ್ಘಾಟಿಸಬೇಕು ಅನ್ನೋದು ಸಿಎಂ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಇನ್ನು ಏರ್ಶೋ ಆಯೋಜಿಸಲು ಪ್ರಸ್ತಾಪ ಬಂದಿದೆ’’ ಎಂದು ತಿಳಿಸಿದರು.
‘‘ಸಿದ್ದರಾಮಯ್ಯನವರು ಬಹಳ ಚೆನ್ನಾಗಿ ದಸರಾ ಆಚರಿಸಿದ್ದರು. ವಿಜೃಂಭಣೆಯಿಂದ ನಾಡಹಬ್ಬ ದಸರಾ ಆಚರಣೆ ಮಾಡುತ್ತೇವೆ. ವಿಜೃಂಭಣೆ ಎಂದರೆ ಬರೀ ಹಣ ಖರ್ಚು ಮಾಡುವುದಲ್ಲ. ಸಾಂಸ್ಕೃತಿಕ ವೈಭವವನ್ನು ನೆನಪಿಸುವ ರೀತಿ ಮಾಡುತ್ತೇವೆ. ಸಭೆಯಲ್ಲಿ ದಸರಾ ಪಾಸ್ಗಳ ಬಗ್ಗೆಯೂ ಚರ್ಚೆ ಆಗಿದೆ. ಕೆಲವು ಶಾಸಕರು ಸಲಹೆ ಕೊಟ್ಟಿದ್ದಾರೆ. ಇನ್ನು ಹೊರಗಡೆಯಿಂದ ಬರುವವರನ್ನು ಗೌರವದಿಂದ ನಡೆಸಿಕೊಳ್ಳಬೇಕು’’ ಎಂದು ಹೇಳಿದರು.
‘‘ಶಕ್ತಿ ಯೋಜನೆ ಜಾರಿ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು,ಈ ಹಿನ್ನೆಲೆಯಲ್ಲಿ ಅಗತ್ಯ ಮೂಲಸೌಕರ್ಯ ಮತ್ತು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ರಾಷ್ಟ್ರಮಟ್ಟದ ಖ್ಯಾತಿಯ ಗಾಯಕರು, ಸಂಗೀತಗಾರರು ಹಾಗೂ ಕಲಾವಿದರನ್ನು ಆಹ್ವಾನಿಸಿ ಜನರಿಗೆ ಗುಣಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಾಗಿದ್ದು, ಈ ಪರಂಪರೆಯನ್ನು ಮುಂದುವರಿಸಬೇಕು. ದಸರಾ ಆಯೋಜನಾ ಸಮಿತಿಗಳು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಉತ್ಸವದ ಯಶಸ್ಸನ್ನೇ ಮುಖ್ಯ ಗುರಿಯನ್ನಾಗಿ ಮಾಡಿಕೊಂಡು ಕೆಲಸ ಮಾಡಬೇಕು. ದಸರಾ ಕುರಿತು ಟೀಕೆ-ವಿಮರ್ಶೆಗಳು ಸಹಜ. ಅವುಗಳಿಗೆ ಅತಿಯಾದ ಮಹತ್ವ ನೀಡದೆ, ಜನರ ನಿರೀಕ್ಷೆಗೆ ತಕ್ಕಂತೆ ಅತ್ಯುತ್ತಮ ಉತ್ಸವ ಆಯೋಜಿಸುವುದರತ್ತ ಸಂಪೂರ್ಣ ಗಮನಹರಿಸುವಂತೆ ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:26 pm, Fri, 10 July 26