
ಮೈಸೂರು, ಸೆಪ್ಟೆಂಬರ್ 14: ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ತಿ. ನರಸೀಪುರ ಠಾಣೆಯ ಪೊಲೀಸ್ ಇನ್ಸೆಪೆಕ್ಟರ್ ಹೇಳಿಕೆ ಖಂಡಿಸಿ ನಿನ್ನೆ (ಸೆ.13) ವಿಪಕ್ಷ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಬಿಜೆಪಿಗರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನಾ ನಿರತ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆ ಸಂದರ್ಭ ಪೊಲೀಸ್ ಬಸ್ನಲ್ಲಿ ಕೂತ ಮೈಸೂರು ಮಹಾರಾಜ ಮತ್ತು ಸಂಸದ ಯದುವೀರ್ ಒಡೆಯರ್ ಅವರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಯದುವೀರ್ ಅವರನ್ನು ಈ ಸ್ಥಿತಿಯಲ್ಲಿ ಕಂಡ ನೆಟ್ಟಿಗರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ತಾವು ಪೊಲೀಸ್ ಬಸ್ನಲ್ಲಿ ಕೂತ ಫೋಟೋವನ್ನು ಸ್ವತಃ ಯದುವೀರ್ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ನಾನಾ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ರಾಜ ವಂಶಕ್ಕೆ ಹೇಗೆ ಗೌರವ ಕೊಡಬೇಕು ಎಂಬ ಸಾಮಾನ್ಯ ಪ್ರಜ್ಞೆಯೂ ಸರ್ಕಾರಕ್ಕೆ ಇಲ್ಲವಾ ಎಂದು ಒಬ್ಬರು ಪ್ರಶ್ನಿಸಿದ್ದರೆ, ರಾಜರನ್ನು ಈ ರೀತಿ ನೋಡಲು ತುಂಬಾನೇ ಬೇಜಾರಾಗುತ್ತೆ ಎಂದು ಮತ್ತೊಬ್ಬರು ಅನಿಸಿಕೆ ಹಂಚಿಕೊಂಡಿದ್ದಾರೆ. ಮಹಾರಾಜರೇ ನಿಮ್ಮ ಘನೆತೆ ಉಳಿಸಿಕೊಳ್ಳಿ ಎಂದು ಇನ್ನೋರ್ವರು ಹೇಳಿದ್ದರೆ, ರಾಜರು ರಾಜರಂತೆ ಇರಬೇಕು. ರಾಜಕೀಯ ಮಾಡಬಾರದು ಎಂದು ಮಗದೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಟಿ.ನರಸೀಪುರ ಗಣೇಶ ಗಲಾಟೆ: ಇನ್ಸ್ಪೆಕ್ಟರ್ ವಿರುದ್ಧದ ಹಳೆ ಪ್ರಕರಣಗಳು ಮುನ್ನೆಲೆಗೆ
ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ತಿ. ನರಸೀಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ ಅವರು ಷರತ್ತು ಹಾಗೂ ನಿಬಂಧನೆಗಳನ್ನು ಹಾಕುವುದರ ಜೊತೆಗೆ ಯುವಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಪೊಲೀಸ್ ಅಧಿಕಾರಿಯನ್ನು ರಾಜ್ಯ ಸರ್ಕಾರ ಅಮಾನತುಗೊಳಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ, ಮೈಸೂರು ಗ್ರಾಮಾಂತರ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ಸುಬ್ಬಣ್ಣ, ಮೈಸೂರು ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.