ಟಿಪ್ಪು ನಿಜ ಕನಸುಗಳು: ನ. 20ರಂದು ಮೈಸೂರಿನಲ್ಲಿ ನಾಟಕಕ್ಕೆ ಭರ್ಜರಿ ಸಿದ್ದತೆ, ತಡೆಯಾಜ್ಞೆ ಕೋರಿ ಪಿಐಎಲ್ ಸಲ್ಲಿಸುತ್ತೇವೆ ಎಂದ ತನ್ವೀರ್ ಸೇಠ್
ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುತ್ತೇವೆ. ಮೈಸೂರಿನಲ್ಲಿ ಟಿಪ್ಪು ವಿರುದ್ಧದ ನಾಟಕ ಪ್ರದರ್ಶನಕ್ಕೆ ನನ್ನ ವಿರೋಧವಿದೆ. ಇದನ್ನು ತಡೆಯಲು ಕೋರ್ಟ್ ಮೊರೆ ಹೋಗುತ್ತಿದ್ದೇನೆ ಎಂದು ತನ್ವೀರ್ ಸೇಠ್ ತಿಳಿಸಿದರು.

ಮೈಸೂರು: ನವೆಂಬರ್ 13ರಂದು ಅಂದ್ರೆ ನಾಳೆ ಟಿಪ್ಪು ನಿಜ ಕನಸುಗಳು ಎಂಬ ಕೃತಿ ಬಿಡುಗಡೆ ಮಾಡಲು ಹಾಗೂ ನವೆಂಬರ್ 20ರಂದು ನಾಟಕ ಪ್ರದರ್ಶನಕ್ಕೆ ರಂಗಾಯಣ ಭರ್ಜರಿ ಸಿದ್ಧತೆ ನಡೆಸುತ್ತಿದೆ. ರಂಗಾಯಣ ನಿರ್ದೇಶನ ಅಡ್ಡಂಡ ಕಾರ್ಯಪ್ಪ ರಚನೆಯ ಟಿಪ್ಪು ನಿಜ ಕನಸುಗಳು ನಾಟಕದ ರಿಹರ್ಸಲ್ ಶುರುವಾಗಿದ್ದು ರಂಗಾಯಣದ ಭೂಮಿಗೀತಾ ಅಂಗಳದಲ್ಲಿ 25 ಪಾತ್ರಧಾರಿಗಳು, 5 ಜನ ತಾಂತ್ರಿಕ ವರ್ಗ ಸೇರಿ ಒಟ್ಟು 30 ಜನರ ತಂಡ ಭರ್ಜರಿ ತಯಾರಿ ನಡೆಸುತ್ತಿದೆ.
3 ಗಂಟೆ 10 ನಿಮಿಷಗಳ ಅವಧಿಯ ಈ ನಾಟಕ ನವೆಂಬರ್ 20ರಂದು ನಡೆಯಲಿದೆ. ರಂಗಾಯಣದಲ್ಲಿ 15 ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ 85 ಷೋಗೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಚರಿತ್ರೆಯಲ್ಲಿ ಬಚ್ಚಿಡಲಾಗಿದ್ದ ವಿಚಾರಗಳಿಗೆ ಬೆಳಕು ಚೆಲ್ಲುವ ಪ್ರಯತ್ನ ನಡೆಯುತ್ತಿದ್ದು ಮೇಲುಕೋಟೆ ದುರಂತ, ಮಂಡಿಯಂ ಅಯ್ಯಂಗಾರ್ ರ 700 ಬ್ರಾಹ್ಮಣರ ಹತ್ಯೆ ವಿಚಾರ, ಕೊಡಗಿನಲ್ಲಿ ನಡೆದ ದೊಡ್ಡ ಸಂಖ್ಯೆ ಮತಾಂತರ, ಕೊಡಗಿನಲ್ಲಿ ನಡೆದ ಕೊಡವರ ಹತ್ಯೆ, ಟಿಪ್ಪು ಸುಲ್ತಾನ್ ಆಡಳಿತದಲ್ಲಿ ತೆಗೆದುಕೊಂಡ ಇಸ್ಲಾಮಿಕ್ ತೀರ್ಮಾನಗಳು, ಆತ ಬರೆದ ಪತ್ರಗಳ ದೃಶ್ಯಾವಳಿಗಳು, ಟಿಪ್ಪು ತಾಯಿ, ಪತ್ನಿಯಿಂದ ಮತಾಂದತೆಗೆ ವಿರೋಧದ ದೃಶ್ಯಗಳು ನಾಟಕದಲ್ಲಿ ಇರಲಿದೆ. ಹಾಗೂ ಪಾರ್ಸಿ ಭಾಷೆಯನ್ನು ರಾಜ್ಯ ಭಾಷೆ ಮಾಡಿದ್ದು, ಕಂದಾಯ ಇಲಾಖೆ ಹೆಸರುಗಳನ್ನು ಪಾರ್ಸಿ ಭಾಷೆಯಾಗಿ ಬದಲಿಸಿದ್ದು, ಊರುಗಳ ಹೆಸರನ್ನು ಪಾರ್ಸಿ ಭಾಷೆಯಾಗಿ ಬದಲಿಸಿದ್ದು, ಶ್ರೀರಂಗಪಟ್ಟಣದಲ್ಲಿ ಬಹು ಮಹಡಿ ಕಟ್ಟಡದಲ್ಲಿ ಇದ್ದ ತಾಳೆಗರಿ ಗ್ರಂಥಗಳನ್ನು ಸುಟ್ಟಿ ಉರ್ದು ಗ್ರಂಥಗಳನ್ನು ಇರಿಸಿದ್ದು, ಇಸ್ಲಾಂ ನಡೆಗೆ ರಾಜ್ಯವನ್ನು ಬಲವಂತವಾಗಿ ದೂಡಿದ್ದು ಸೇರಿದಂತೆ ಇತರ ಅಂಶಗಳನ್ನು ಒಳಗೊಂಡಂತೆ ರಚನೆಯಾಗಿರುವ ನಾಟಕ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ.
ನಾಟಕಕ್ಕೆ ತಡೆಯಾಜ್ಞೆ ಕೋರಿ ಪಿಐಎಲ್ ಸಲ್ಲಿಸುತ್ತೇವೆ ಎಂದ ತನ್ವೀರ್ ಸೇಠ್
ಇನ್ನು ನಾಟಕ ಸಂಬಂಧ ನಾಟಕಕ್ಕೆ ತಡೆಯಾಜ್ಞೆ ಕೋರಿ ಪಿಐಎಲ್ ಸಲ್ಲಿಸುತ್ತೇವೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.
100 ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಖಚಿತ
ಮೈಸೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಶಾಸಕ ತನ್ವೀರ್ ಸೇಠ್, ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ. ಕಂಚು ಅಥವಾ ಪಂಚಲೋಹ ಪ್ರತಿಮೆ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು. ಇಸ್ಲಾಂ ಧರ್ಮದಲ್ಲಿ ಪ್ರತಿಮೆ ಸ್ಥಾಪನೆ ನಿಷೇಧವಿದೆ. ಇಂದಿನ ಪರಿಸ್ಥಿತಿಯಲ್ಲಿ ಪ್ರತಿಮೆ ನಿರ್ಮಾಣ ಅನಿವಾರ್ಯವಾಗಿದೆ. ಪ್ರತಿಮೆ ಸ್ಥಾಪನೆಗೂ ಮುನ್ನವೇ ಕೆಡವುದಾಗಿ ಮಾತು ಕೇಳಿಬಂದಿವೆ. ಯಾರ ವಿರೋಧಕ್ಕೂ ನಾವು ಬಗ್ಗುವುದಿಲ್ಲ ಎಂದು ತಿಳಿಸಿದ್ದಾರೆ.
ನಮ್ಮ ರಕ್ಷಣೆಗೆ ಸಂವಿಧಾನವಿದೆ. ಟಿಪ್ಪು ವಿರೋಧಿಸಿದರೆ ತಮಗೆ ಲಾಭ ಎಂದು ಟಿಪ್ಪು ಹೆಸರನ್ನು ಬಿಜೆಪಿ ಬಳಸುತ್ತಿದೆ ಅದು ಬಿಜೆಪಿ ಭ್ರಮೆ. ಮೈಸೂರಿನಲ್ಲಿ ಟಿಪ್ಪು ವಿರುದ್ಧದ ನಾಟಕ ಪ್ರದರ್ಶನಕ್ಕೆ ನನ್ನ ವಿರೋಧವಿದೆ. ಇದನ್ನು ತಡೆಯಲು ಕೋರ್ಟ್ ಮೊರೆ ಹೋಗುತ್ತಿದ್ದೇನೆ ಎಂದರು.
Published On - 11:59 am, Sat, 12 November 22