Paperless Smart Hospital: ನಾರಾಯಣ ಹೆಲ್ತ್‌ನಿಂದ ದೇಶದ ಮೊದಲ ‘ಸ್ಮಾರ್ಟ್ ಆಸ್ಪತ್ರೆ’; ಪ್ರಮುಖ ನಾಯಕತ್ವ ಹುದ್ದೆಗಳಿಗೆ ನರ್ಸ್‌ಗಳಿಂದ ಅರ್ಜಿ ಆಹ್ವಾನ!

ಬೆಂಗಳೂರಿನಲ್ಲಿ ನಾರಾಯಣ ಹೆಲ್ತ್ ಸಂಸ್ಥೆಯು ಭಾರತದ ಮೊದಲ ಪೇಪರ್‌ಲೆಸ್, ನರ್ಸ್‌‌-ನಿರ್ವಹಣೆಯ ಸ್ಮಾರ್ಟ್ ಆಸ್ಪತ್ರೆ ಆರಂಭಿಸುತ್ತಿದೆ. ಡಾ. ದೇವಿ ಶೆಟ್ಟಿ ನೇತೃತ್ವದಲ್ಲಿ, ಈ ನವೀನ ಆಸ್ಪತ್ರೆಗೆ ದೇಶಾದ್ಯಂತ ನರ್ಸ್‌ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದವರಿಗೆ IIM ಬೆಂಗಳೂರಿನಲ್ಲಿ ಉನ್ನತ ತರಬೇತಿ ಮತ್ತು ಆಡಳಿತ ನಿರ್ವಹಣೆಗೆ ವಿಶೇಷ ಪ್ರೋತ್ಸಾಹಧನ ನೀಡಲಾಗುವುದು. ಇದು ನರ್ಸ್‌ಗಳಿಗೆ ಮಹತ್ವದ ವೃತ್ತಿ ಬೆಳವಣಿಗೆಯ ಅವಕಾಶವಾಗಿದೆ.

Paperless Smart Hospital: ನಾರಾಯಣ ಹೆಲ್ತ್‌ನಿಂದ ದೇಶದ ಮೊದಲ ಸ್ಮಾರ್ಟ್ ಆಸ್ಪತ್ರೆ; ಪ್ರಮುಖ ನಾಯಕತ್ವ ಹುದ್ದೆಗಳಿಗೆ ನರ್ಸ್‌ಗಳಿಂದ ಅರ್ಜಿ ಆಹ್ವಾನ!
ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ
Image Credit source: x.com/kiranshaw

Updated on: Jul 05, 2026 | 3:50 PM

ಮುಖ್ಯಾಂಶಗಳು

  • ಭಾರತದ ಮೊದಲ ಪೇಪರ್‌ಲೆಸ್, ನರ್ಸ್‌‌-ನಿರ್ವಹಣೆಯ ಸ್ಮಾರ್ಟ್ ಆಸ್ಪತ್ರೆ ಆರಂಭ
  • ಡಾ. ದೇವಿ ಶೆಟ್ಟಿ ನೇತೃತ್ವದಲ್ಲಿ, ಈ ನವೀನ ಆಸ್ಪತ್ರೆಗೆ ದೇಶಾದ್ಯಂತ ನರ್ಸ್‌ಗಳಿಂದ ಅರ್ಜಿ ಆಹ್ವಾನ
  • ಆಯ್ಕೆಯಾದವರಿಗೆ IIM ಬೆಂಗಳೂರಿನಲ್ಲಿ ಉನ್ನತ ತರಬೇತಿ ಮತ್ತು ಆಡಳಿತ ನಿರ್ವಹಣೆಗೆ ವಿಶೇಷ ಪ್ರೋತ್ಸಾಹಧನ

ಬೆಂಗಳೂರು: ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ನೇತೃತ್ವದ ನಾರಾಯಣ ಹೆಲ್ತ್ ಸಂಸ್ಥೆಯು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಸಜ್ಜಾಗಿದೆ. ಬೆಂಗಳೂರಿನ ಬನಶಂಕರಿಯಲ್ಲಿ ಭಾರತದ ಮೊದಲ ಸಂಪೂರ್ಣ ಕಾಗದ ರಹಿತ (Paperless) ಹಾಗೂ ಅತ್ಯಾಧುನಿಕ ‘ಸ್ಮಾರ್ಟ್ ಆಸ್ಪತ್ರೆ’ಯನ್ನು ಪ್ರಾರಂಭಿಸಲಾಗುತ್ತಿದೆ. ಈ ಆಸ್ಪತ್ರೆಯ ಸಂಪೂರ್ಣ ಆಡಳಿತ ಮತ್ತು ನಿರ್ವಹಣೆಯನ್ನು ನರ್ಸಿಂಗ್ ಸಿಬ್ಬಂದಿಯೇ ವಹಿಸಿಕೊಳ್ಳಲಿದ್ದಾರೆ ಎಂಬುದು ಇದರ ವಿಶೇಷತೆ. ಈ ಮಹತ್ವದ ಯೋಜನೆಗಾಗಿ ದೇಶಾದ್ಯಂತ ಇರುವ ಅರ್ಹ ನರ್ಸ್‌ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸ್ಪತ್ರೆಯ ವಿಶೇಷತೆಗಳೇನು?

ಈ ಆಸ್ಪತ್ರೆಯಲ್ಲಿ ರಿಸೆಪ್ಷನಿಸ್ಟ್‌ಗಳು, ಸೆಕ್ರೆಟರಿಗಳು ಅಥವಾ ಪ್ರತ್ಯೇಕ ಎಚ್‌ಆರ್ ಮತ್ತು ಫೈನಾನ್ಸ್ ವಿಭಾಗಗಳಿರುವುದಿಲ್ಲ ಅಂದರೆ ಸಂಪೂರ್ಣ ಡಿಜಿಟಲ್ ಮತ್ತು ಪೇಪರ್‌ಲೆಸ್ ಆಗಿರುತ್ತದೆ.ಇದಲ್ಲದೇ ಕೇವಲ ವೈದ್ಯರು, ನರ್ಸ್‌ಗಳು ಮತ್ತು ತಂತ್ರಜ್ಞರು ಮಾತ್ರ ಇಲ್ಲಿ ಕಾರ್ಯನಿರ್ವಹಿಸಲಿದ್ದು, ಇಡೀ ಆಸ್ಪತ್ರೆಯ ಆಡಳಿತವನ್ನು ನರ್ಸ್‌ಗಳೇ ಮುನ್ನಡೆಸಲಿದ್ದಾರೆ.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಭವಿಷ್ಯದಲ್ಲಿ ದೊಡ್ಡ ಆಸ್ಪತ್ರೆಗಳ ಸಿಇಒ (CEO) ಆಗುವ ಮಹತ್ವಾಕಾಂಕ್ಷೆ ಹೊಂದಿರುವ ನರ್ಸ್‌ಗಳು ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಬಿ.ಎಸ್ಸಿ (B.Sc) ಅಥವಾ ಜಿಎನ್‌ಎಂ (GNM) ಮುಗಿಸಿ ಕೇವಲ 1 ಅಥವಾ 2 ವರ್ಷಗಳ ಅನುಭವ ಹೊಂದಿರುವ ಯುವ ನರ್ಸ್‌ಗಳಿಗೂ ಇಲ್ಲಿ ಮುಕ್ತ ಅವಕಾಶವಿದೆ. ನಾರಾಯಣ ಹೆಲ್ತ್‌ನಲ್ಲಿ ಕೆಲಸ ಮಾಡುತ್ತಿರುವವರು ಮಾತ್ರವಲ್ಲದೆ, ದೇಶದ ಯಾವುದೇ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ನರ್ಸ್‌ಗಳು ಸಹ ಅರ್ಜಿ ಹಾಕಬಹುದು. ಈ ಪ್ರಕ್ರಿಯೆಯ ಮೂಲಕ ದೇಶಾದ್ಯಂತ ಕೇವಲ 25 ಅತ್ಯುತ್ತಮ ನರ್ಸ್‌ಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ರಾತ್ರಿ ಮಲಗುವಾಗ ಅತಿಯಾಗಿ ಯೋಚಿಸುವುದರಿಂದ ಉಂಟಾಗುವ ಸಮಸ್ಯೆಗಳೇನು?

ಆಯ್ಕೆಯಾದವರಿಗೆ ಸಿಗುವ ಬಂಪರ್ ಆಫರ್‌ಗಳು:

ಆಯ್ಕೆಯಾದ ನರ್ಸ್‌ಗಳಿಗೆ ಅವರ ಕ್ಲಿನಿಕಲ್ ಸಂಬಳದ ಜೊತೆಗೆ, ಆಡಳಿತ ನಿರ್ವಹಣೆಗಾಗಿ ಪ್ರತಿ ತಿಂಗಳು ಭಾರಿ ಮ್ಯಾನೇಜ್‌ಮೆಂಟ್ ಇನ್ಸೆಂಟಿವ್ಸ್ (Management Incentives) ನೀಡಲಾಗುತ್ತದೆ. ಆಯ್ಕೆಯಾದ ಸಿಬ್ಬಂದಿಗೆ ಐಐಎಂ ಬೆಂಗಳೂರಿನಲ್ಲಿ (IIM Bangalore) ‘ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್’ ಕಾರ್ಯಕ್ರಮದಡಿ ಉನ್ನತ ತರಬೇತಿ ನೀಡಲಾಗುತ್ತದೆ. ಇದರ ಸಂಪೂರ್ಣ ವೆಚ್ಚವನ್ನು ನಾರಾಯಣ ಹೆಲ್ತ್ ಸಂಸ್ಥೆಯೇ ಭರಿಸಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು ತಮ್ಮ ನವೀಕರಿಸಿದ ರೆಸ್ಯೂಮ್ (Resume) ಅನ್ನು ಕೆಳಗಿನ ಇಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ:
ಇಮೇಲ್ ಐಡಿ: pani.nagaraja@narayanahealth.org

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Sun, 5 July 26

Follow Us