ಗೇಲೆ ಮಾಡಿದ್ದಕ್ಕೆ ಕೊಲೆ: ರೀಲ್ಸ್ ನೋಡಿಕೊಂಡು ಗೆಳೆಯನಿಗೆ ಕೀಟಲೆ ಮಾಡಿದವನ ಹೆಣ ಬಿತ್ತು!
ಅವರಿಬ್ಬರ ಸ್ನೇಹ ಮೂರು ವರ್ಷದಿಂದಿತ್ತು. ಜೊತೆಗಾರರ ಮೂಲಕ ಪರಿಚಯವಾದ ಯುವಕರು ಕಾಲ ಕ್ರಮೇಣ ಹತ್ತಿರವಾಗಿದ್ದರು.. ಒಟ್ಟಿಗೆ ಓಡಾಡಿಕೊಂಡಿದ್ರು. ಒಟ್ಟಿಗೆ ಹರಟೆ ಹೊಡೆಯುತಿದ್ದರು. ಆದರೇ ಅದೊಂದು ರಾತ್ರಿ ರೀಲ್ಸ್ ನೊಡುವಾಗ ಗೆಳೆಯ ಮಾಡಿದ ಕೀಟಲೆ ಯುವಕನಿಗೆ ಸಿಟ್ಟು ತರಿಸಿತ್ತು. ಬುದ್ದಿ ಮಾತು ಹೇಳಿದರೂ ಕೇಳದ ಗೆಳೆಯನಿಗೆ ಗೇಲಿ ಮಾಡಿದ ಒಂದೇ ಕಾರಣಕ್ಕೆ ಚಾಕು ಹಾಕಿ ಕೊಲೆಗೈದ ಯುವಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ತುಮಕೂರು, (ಆಗಸ್ಟ್ 15): ಕಳೆದ ಕೆಲ ದಿನಗಳ ಹಿಂದೆ ತುಮಕೂರಿನಲ್ಲಿ (Tumakuru) ನಡೆದಿದ್ದ ಸುಹೇಲ್ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆರಂಭದಲ್ಲಿ ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಆದ್ರೆ ತಿಲಕ್ ಪಾರ್ಕ್ ಪೊಲೀಸರ ತನಿಖೆಯಲ್ಲಿ ಬಯಲಾದ ಸಂಗತಿಯೇ ಬೇರೆ ಕಥೆ. ಹೌದು, ತುಮಕೂರಿನ ಹೆಗಡೆ ಕಾಲೋನಿಯಲ್ಲಿ ಇದೇ ತಿಂಗಳ 11ರ ರಾತ್ರಿ ಗೆಳೆಯರ ಜೊತೆ ಕುಳಿತಿದ್ದ ಸುಹೇಲ್ ಚಾಕು ಇರಿತಕ್ಕೊಳಗಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಸುಹೇಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದ.. ಘಟನೆ ಬಳಿಕ ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಮೃತನ ಕುಟುಂಬ ಆರೋಪಿಸಿದ್ದರು.. ಪ್ರಕರಣ ದಾಖಲಿಸಿಕೊಂಡ ತಿಲಕ್ ಪಾರ್ಕ್ ಪೊಲೀಸರು ತನಿಖೆ ಆರಂಭಿಸಿದ್ದು, ರೀಲ್ಸ್ ನೋಡಿ ಗೇಲಿ ಮಾಡಿದ ಕಥೆಯೊಂದು ಬಯಲಾಗಿದೆ.
ಕೊಲೆಗೀಡಾದ ಸುಹೇಲ್ ಮತ್ತು ಆರೋಪಿ ರಬ್ಬಾನ್ ಇಬ್ಬರೂ ಸ್ನೇಹಿತರೇ ಆಗಿದ್ದರು. ಬರೋಬ್ಬರಿ ಮೂರು ವರ್ಷದಿಂದ ಇಬ್ಬರೂ ಒಟ್ಟಿಗೆ ಓಡಾಡಿಕೊಂಡಿದ್ದರು. ಮಂಗಳವಾರ ರಾತ್ರಿ ಕೂಡ ಇಬ್ಬರು ಕೆಲ ಸ್ನೇಹಿತರ ಜೊತೆ ಸೇರಿ ಹೆಗಡೆ ಕಾಲೋನಿಯ ಅಂಗಡಿಯೊಂದರ ಬಳಿ ಕುಳಿತು ಹರಟೆ ಹೊಡೆಯುತ್ತಿದ್ದರು. ಇದೇ ವೇಳೆ ರೀಲ್ಸ್ ನೋಡುತ್ತಿದ್ದ ಸುಹೇಲ್, ರಬ್ಬಾನ್ನನ್ನು ಗೇಲಿ ಮಾಡಿದ್ದಾನೆ ಎಂದು ತನಿಖೆಯಲ್ಲಿ ಬಯಲಾಗಿದೆ. ಆರಂಭದಲ್ಲಿ ಸುಮ್ಮನಿದ್ದ ರಬ್ಬಾನ್ ನಂತರದಲ್ಲಿ ಸ್ನೇಹಿತನ ಗೇಲಿಗೆ ಕೋಪಗೊಂಡಿದ್ದ. ನಂತರ ಇಬ್ಬರ ನಡುವೆ ಜಗಳ ಶುರುವಾಗಿದೆ. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ತನ್ನ ಬಳಿ ಇದ್ದ ಚಾಕುವಿನಿಂದ ಸುಹೇಲ್ ಮೇಲೆ ರಬ್ಬಾನ್ ಹಲ್ಲೆ ಮಾಡಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದ.ಅಸಲಿಗೆ ಕೊಲೆ ನಡೆದ ವೇಳೆ ಜೊತೆಯಲ್ಲಿದ್ದ ಇತರೆ ಸ್ನೇಹಿತರ ಮಾಹಿತಿ ಆಧರಿಸಿ ಬಲೆ ಬೀಸಿದ್ದ ತಿಲಕ್ ಪಾರ್ಕ್ ಪೊಲೀಸರು ಆರೋಪಿ ರಬ್ಬಾನ್ ಬಂಧಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:01 pm, Sat, 15 August 26




